ನೆಲಮಂಗಲ ತಾಲೂಕಿನಲ್ಲಿ ಅರ್ಹರ ಬಿಪಿಎಲ್ ಪಡಿತರ ಚೀಟಿಗಳನ್ನು ಅನರ್ಹಗೊಳಿಸದಂತೆ ಅಧಿಕಾರಿಗಳಿಗೆ ತಿಳಿಸಿದ್ದು ಅದರಂತೆ ಸೋಲೂರು ಹೋಬಳಿಯ ರದ್ದುಗೊಳಿಸುವ ಪಟ್ಟಿಯಲ್ಲಿರುವ ಸುಮಾರು 470ಕ್ಕೂ ಹೆಚ್ಚು ಪಡಿತರ ಚೀಟಿಗಳನ್ನು ಪರಿಶೀಲಿಸಿ ಕ್ರಮ ವಹಿಸಬೇಕೆಂದು ಶಾಸಕ ಶ್ರೀನಿವಾಸ್ ಅಧಿಕಾರಿಗಳಿಗೆ ತಾಕೀತು

ದಾಬಸ್‍ಪೇಟೆ: ನೆಲಮಂಗಲ ತಾಲೂಕಿನಲ್ಲಿ ಅರ್ಹರ ಬಿಪಿಎಲ್ ಪಡಿತರ ಚೀಟಿಗಳನ್ನು ಅನರ್ಹಗೊಳಿಸದಂತೆ ಅಧಿಕಾರಿಗಳಿಗೆ ತಿಳಿಸಿದ್ದು ಅದರಂತೆ ಸೋಲೂರು ಹೋಬಳಿಯ ರದ್ದುಗೊಳಿಸುವ ಪಟ್ಟಿಯಲ್ಲಿರುವ ಸುಮಾರು 470ಕ್ಕೂ ಹೆಚ್ಚು ಪಡಿತರ ಚೀಟಿಗಳನ್ನು ಪರಿಶೀಲಿಸಿ ಕ್ರಮ ವಹಿಸಬೇಕೆಂದು ಶಾಸಕ ಶ್ರೀನಿವಾಸ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜನಸಂಪರ್ಕ ಸಭೆ

ನೆಲಮಂಗಲ ವಿಧಾನಸಭಾ ಕ್ಷೇತ್ರದ ಬಿಟ್ಟಸಂದ್ರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಶಾಸಕರು, ಖುದ್ದು ನಾನೇ ಸ್ಥಳಕ್ಕೆ ಆಹಾರ ಇಲಾಖೆ ಅಧಿಕಾರಿಗಳನ್ನು ಕರೆಯಿಸಿ ಜನರ ಸಮಸ್ಯೆಯನ್ನು ಪರಿಹರಿಸುತ್ತೇನೆ. ಪಡಿತರ ಚೀಟಿ ರದ್ದಾಗಲಿದೆ ಎಂಬ ಆತಂಕ ಬೇಡ, ಪರಿಶೀಲನೆ ಸಂದರ್ಭದಲ್ಲಿ ಬಿಪಿಎಲ್ ಪಡಿತರ ಚೀಟಿ ಪಡೆದಿರುವುದು ಅಕ್ರಮ ಎಂದು ಕಂಡು ಬಂದರೆ ಪಡಿತರ ಚೀಟಿಯನ್ನು ಅನರ್ಹಗೊಳಿಸಿ, ನಿಜವಾದ ಅರ್ಹರನ್ನು ಹಾಗೆಯೇ ಉಳಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ಮತ್ತೊಮ್ಮ ಬಿಪಿಎಲ್ ಕಾರ್ಡ್ ಪಡೆಯಲಿಕ್ಕೆ ಅವಕಾಶ

ಈಗಾಗಲೇ ಈ ಬಗ್ಗೆ ತಹಸೀಲ್ದಾರ್ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಜೊತೆ ಮಾತನಾಡಿದ್ದೇನೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆಹಾರ ಇಲಾಖೆಯ ಉಪನಿರ್ದೇಶಕರಿಗೆ ಈ ಬಗ್ಗೆ ತಿಳಿಸಿ ಜನತೆಗೆ ಅನುಕೂಲ ಮಾಡಿಕೊಡುತ್ತೇನೆ. ಪಡಿತರ ಚೀಟಿ ರದ್ದತಿ ಮಾಡಬಾರದೆಂದು ದಾಖಲಾತಿಗಳೊಂದಿಗೆ ನನಗೆ ಮನವಿ ನೀಡಿದರೆ ನಾನೇ ನನ್ನ ಪತ್ರದಲ್ಲಿ ಮನವಿ ಮಾಡಿ ಸಂಬಂಧಪಟ್ಟ ಇಲಾಖೆಗೆ ತಲುಪಿಸುತ್ತೇನೆ. ಒಂದು ವೇಳೆ ಅರ್ಹ ಫಲಾನುಭವಿಗಳ ಪಡಿತರ ಚೀಟಿ ರದ್ದಾದರೆ ಮತ್ತೊಮ್ಮ ಅದನ್ನು ಬಿಪಿಎಲ್ ಕಾರ್ಡ್ ಪಡೆಯಲಿಕ್ಕೆ ಅವಕಾಶವಿದ್ದು, ಯಾರೂ ಸಹ ಆತಂಕಕ್ಕೆ ಒಳಗಾಗುವುದು ಬೇಡ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸೋಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರುದ್ರಶರ್ಮಾ, ಗ್ರಾಪಂ ಮಾಜಿ ಅಧ್ಯಕ್ಷ ಗಂಗರೇವಯ್ಯ, ಎನ್ಡಿಎ ಮಾಜಿ ಸದಸ್ಯ ರಂಗಸ್ವಾಮಿ, ಗ್ರಾಪಂ ಮಾಜಿ ಸದಸ್ಯ ಹನುಮಂತರಾಜು, ಪ್ರಸಾದ್, ಆಹಾರ ಇಲಾಖೆ ಅಧಿಕಾರಿಗಳು, ಗ್ರಾಪಂ ಸಿಬ್ಬಂದಿ ವರ್ಗ, ಸಾರ್ವಜನಿಕರು ಉಪಸ್ಥಿತರಿದ್ದರು.

ಪೋಟೋ 4 : ನೆಲಮಂಗಲ ವಿಧಾನಸಭಾ ಕ್ಷೇತ್ರದ ಬಿಟ್ಟಸಂದ್ರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಶಾಸಕ ಶ್ರೀನಿವಾಸ್‌ಗೆ ಸಾರ್ವಜನಿಕರು ಪಡಿತರ ಚೀಟಿ ರದ್ದು ಮಾಡದಂತೆ ಮನವಿ ಸಲ್ಲಿಸಿದರು.