Chamarajanagar: ದಾಳಿ ಮಾಡಿದರೂ ಜಗ್ಗದೆ ಕಿರುಚಿ ಹುಲಿ ಓಡಿಸಿದ ಕುರಿಗಾಹಿ ನೂರಾಳು
ಚಾಮರಾಜನಗರದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಳಿ ಕುರಿ ಮೇಯಿಸುತ್ತಿದ್ದ ನೂರಾಳು ಎಂಬುವರ ಮೇಲೆ ಹುಲಿ ದಾಳಿ ಮಾಡಿದೆ. ಆದರೆ, ಅವರು ಕಿರುಚಿಕೊಂಡಾಗ ಹುಲಿ ಹೆದರಿ ಓಡಿಹೋಗಿದ್ದು, ಕುರಿಗಾಹಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾಮರಾಜನಗರ: ಹುಲಿ ದಾಳಿಯಿಂದ ಕುರಿಗಾಹಿಯೊಬ್ಬ ಪವಾಡಸದೃಶ್ಯ ರೀತಿ ಪರಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ ವಲಯದಂಚಿನ ಕುಣಗಳ್ಳಿ ಕಾಲೋನಿಯಲ್ಲಿ ನಡೆದಿದೆ.
ಹುಲಿ ದಾಳಿ ಮಾಡಿದಾಗ ತಕ್ಷಣ ಕುರಿಗಾಹಿ ಕೂಗಾಡಿದ್ದಾನೆ. ಕೂಗಿದ ಸದ್ದಿಗೆ ಚಿರತೆ ಕಾಲ್ಕಿತ್ತಿದೆ. ಇದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುರಿಗಾಹಿ ನೂರಾಳು (52) ಪಾರಾದ ವ್ಯಕ್ತಿ. ವಿಷಯ ತಿಳಿದು ಗೋಪಾಲಸ್ವಾಮಿ ಬೆಟ್ಟದ ವಲಯ ಅರಣ್ಯಾಧಿಕಾರಿ ಬಿ.ಎಂ.ಮಲ್ಲೇಶ್ ಸೂಚನೆ ಮೇರೆಗೆ ಅರಣ್ಯ ಸಿಬ್ಬಂದಿ ಗಾಯಾಳುವನ್ನು ಗುಂಡ್ಲುಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಮೈಸೂರು ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ನೂರಾಳು ಅವರು ಕುರಿಗಳನ್ನು ಮೇಯಿಸುತ್ತಿದ್ದರು. ಈ ವೇಳೆ ಹುಲಿಯು ಅವರ ಮೇಲೆ ದಾಳಿ ಮಾಡಿದೆ. ಈ ವೇಳೆ ಅವರು ಗಾಯಗೊಂಡಿದ್ದಾರೆ. ಆದರೂ ಜಗ್ಗದೆ ಅವರು ಕಿರುಚಾಡಿದ್ದಾರೆ. ಇದರಿಂದ ಹುಲಿಯು ಸ್ಥಳದಿಂದ ಓಡಿ ಹೋಗಿದೆ. ಸದ್ಯ ಕುರಿಗಾಹಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವಲಯ ಅರಣ್ಯಾಧಿಕಾರಿ ಬಿ.ಎಂ.ಮಲ್ಲೇಶ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ದಾಳಿಯನ್ನು ಖಂಡಿಸಿ ಜನರು ಮತ್ತು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

