ಶಬರಿಮಲೆ ಯಾತ್ರೆ ವೇಳೆ ಹೃದಯಾಘಾತಕ್ಕೆ ಬಲಿಯಾದ ಅಯ್ಯಪ್ಪಸ್ವಾಮಿ ಭಕ್ತ!
ಶಬರಿಮಲೆ ಯಾತ್ರೆಯ ವೇಳೆ ಯುವಕ ಪ್ರಜ್ವಲ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಘಟನೆ ಕುಟುಂಬ ಮತ್ತು ಸ್ನೇಹಿತರಿಗೆ ಆಘಾತ ತಂದಿದೆ. ಯಾತ್ರಾ ಸ್ಥಳದಲ್ಲಿ ಸಾವನ್ನಪ್ಪಿದ ಭಕ್ತನ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು ದಕ್ಷಿಣ (ಜೂ.16): ಶ್ರದ್ಧಾ, ಭಕ್ತಿ ಹಾಗೂ ನಂಬಿಕೆಯಿಂದ ಶಬರಿಮಲೆ ಯಾತ್ರೆಗೆ ತೆರಳಿದ್ದ ಅಯ್ಯಪ್ಪ ಭಕ್ತ ಪ್ರಜ್ವಲ್ ಅವರ ಅಮಾಯಕ ಸಾವು ಕುಟುಂಬ ಹಾಗೂ ಸ್ನೇಹಿತರಿಗೆ ಆಘಾತ ತರುವಂತಹ ಘಟನೆ ನಡೆದಿದೆ.
ಮೂಲತಃ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದ ನಿವಾಸಿಯಾಗಿರುವ ಪ್ರಜ್ವಲ್ ಅವರು ತಮ್ಮ ತಂದೆ ಹಾಗೂ ಸ್ನೇಹಿತರ ಜೊತೆ ಶಬರಿಮಲೆ ಯಾತ್ರೆಗೆ ತೆರಳಿದ್ದರು.
ಬೆಂಗಳೂರಿನ ವಿಜಯನಗರದಲ್ಲಿ ವಾಸವಿದ್ದ ಅವರು ಕಳೆದ ಎರಡು ದಿನಗಳ ಹಿಂದೆ ಭಕ್ತಿಭಾವದಿಂದ ಅಯ್ಯಪ್ಪನ ದರ್ಶನಕ್ಕಾಗಿ ಸ್ನೇಹಿತರೊಂದಿಗೆ ಪ್ರಯಾಣಿಸಿದ್ದರು.
ಶಬರಿಮಲೆ ದರ್ಶನ ಪೂರ್ಣಗೊಂಡ ಬಳಿಕ ವಾಪಸ್ಸು ಪ್ರಯಾಣದ ವೇಳೆ ಬೆಟ್ಟ ಇಳಿಯುವಾಗ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಪ್ರಜ್ವಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಅಘಾತಕಾರಿ ಬೆಳವಣಿಗೆಗೆ ಸ್ಥಳೀಯ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಪ್ರಜ್ವಲ್ ಅವರ ನಿಧನದಿಂದ ಅವರ ಕುಟುಂಬದವರು ಹಾಗೂ ಸ್ನೇಹಿತರು ದುಃಖದ ಸನ್ನಿವೇಶದಲ್ಲಿದ್ದಾರೆ. ಶಬರಿಮಲೆ ಯಾತ್ರೆಯ ನಡುವೆಯೇ ಸಂಭವಿಸಿದ ಈ ದುರಂತ ಘಟನೆ ಎಲ್ಲರ ಮನಸ್ಸನ್ನು ಘಾಸಿಗೊಳಿಸಿದೆ.
ಪ್ರಜ್ವಲ್ ಅವರ ಸಾವಿನಿಂದ ಶಬರಿಮಲೆ ಯಾತ್ರೆಗೆ ತೆರಳುವ ಭಕ್ತರಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಭಕ್ತಿಯ ಹೆಸರಿನಲ್ಲಿ ಮುಂದುವರಿಯುವ ಇಂಥ ಯಾತ್ರೆಗಳಲ್ಲಿ ಆರೋಗ್ಯದ ಮೇಲ್ವಿಚಾರಣೆ, ಅಗತ್ಯ ವೈದ್ಯಕೀಯ ನೆರವಿನ ಸೌಲಭ್ಯ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಮನವರಿಕೆ ಆಗುತ್ತಿದೆ.