ಹಳಿಯಾಳ ತಾಲೂಕಿನ ಗ್ರಾಮವನ್ನೇ ನಡುಗಿಸಿದ ಸ್ಪೋಟ: ಮನೆಯಲ್ಲಿ ನಾಡಬಾಂಬ್ ಬ್ಲಾಸ್ಟ್?
ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ಗ್ರಾಮದಲ್ಲಿ ಮನೆಯೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟದಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ಸ್ಫೋಟದ ತೀವ್ರತೆಗೆ ಹಲವು ಮನೆಗಳಿಗೆ ಹಾನಿಯಾಗಿದ್ದು, ಕಾಡುಪ್ರಾಣಿಗಳ ಬೇಟೆಗಾಗಿ ಸಂಗ್ರಹಿಸಿಟ್ಟಿದ್ದ ನಾಡಬಾಂಬ್ ಸ್ಫೋಟಗೊಂಡಿರಬಹುದೆಂದು ಶಂಕಿಸಲಾಗಿದೆ.

ಕಾಳಗಿನಕೊಪ್ಪ ಗ್ರಾಮದಲ್ಲಿ ಸ್ಪೋಟ
ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ಗ್ರಾಮದಲ್ಲಿ ಮನೆಯೊಂದರಲ್ಲಿ ಇಟ್ಟಿದ್ದ ನಾಡಬಾಂಬ್ ಎನ್ನಲಾದ ಸ್ಪೋಟಕ ವಸ್ತುವೊಂದು ಭೀಕರವಾಗಿ ಸ್ಫೋಟಗೊಂಡಿರುವ ಘಟನೆ ನಡೆದಿದೆ. ಕಾಳಗಿನಕೊಪ್ಪ ಗ್ರಾಮದ ನಿವಾಸಿ ವಾಸುದೇವ ಎಂಬುವವರ ಮನೆಯಲ್ಲಿ ಈ ಸ್ಫೋಟ ಸಂಭವಿಸಿದೆ.
ಅಕ್ಕಪಕ್ಕದ ಮನೆಗಳಿಗೆ ಹಾನಿ
ಸ್ಫೋಟದ ತೀವ್ರತೆಗೆ ವಾಸುದೇವ ಅವರ ಮನೆ ಮಾತ್ರವಲ್ಲದೆ, ಅಕ್ಕಪಕ್ಕದ ಸುಮಾರು ಎಂಟು ಮನೆಗಳಿಗೂ ಭಾಗಶಃ ಹಾನಿಯಾಗಿದೆ. ಏಕಾಏಕಿ ಸಂಭವಿಸಿದ ಈ ಭೀಕರ ಸ್ಫೋಟದ ಶಬ್ದಕ್ಕೆ ಇಡೀ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಸದ್ಯ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಮನೆ ಮಾಲೀಕ ಪರಾರಿ
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಮನೆಯಲ್ಲಿ ನಾಡಬಾಂಬ್ ಸ್ಫೋಟಗೊಳ್ಳುತ್ತಿದ್ದಂತೆ ಮನೆ ಮಾಲೀಕ ವಾಸುದೇವ ಸ್ಥಳದಿಂದ ಪರಾರಿಯಾಗಿದ್ದಾನೆ. ಕಾಡುಪ್ರಾಣಿಗಳ ಬೇಟೆಯಾಡುವ ಉದ್ದೇಶದಿಂದಲೇ ಮನೆಯಲ್ಲಿ ಈ ನಾಡಬಾಂಬ್ಗಳನ್ನು ಸಂಗ್ರಹಿಸಿಟ್ಟಿರಬಹುದು ಎಂದು ಶಂಕಿಸಲಾಗಿದೆ.
ನಾಡಬಾಂಬ್ ಅಥವಾ ಜಿಲೆಟಿನ್ ಕಡ್ಡಿಗಳಾ ?
ಪ್ರಸ್ತುತ ಘಟನಾ ಸ್ಥಳಕ್ಕೆ ಹಳಿಯಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ತನಿಖೆ ಚುರುಕುಗೊಳಿಸಿದ್ದಾರೆ. ಸ್ಪೋಟಗೊಂಡಿರೋದು ನಾಡಬಾಂಬ್ ಅಥವಾ ಜಿಲೆಟಿನ್ ಕಡ್ಡಿಗಳಾ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ

