IPL 2020: ಈ ಬಾರಿ ಪ್ರಶಸ್ತಿ ರೇಸಿನಿಂದ ಸನ್ರೈಸರ್ಸ್ ಹೈದರಾಬಾದ್ ಮುಗ್ಗರಿಸಿದ್ದೆಲ್ಲಿ..?
ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು 17 ರನ್ಗಳ ಸೋಲು ಕಾಣುವುದರ ಮೂಲಕ ಸನ್ರೈಸರ್ಸ್ ಹೈದರಾಬಾದ್ ತಂಡ ಟೂರ್ನಿಯಿಂದ ಹೊರಬಿದ್ದಿದೆ.
ಡೇವಿಡ್ ವಾರ್ನರ್ ನೇತೃತ್ವದ ಸನ್ರೈಸರ್ಸ್ ಹೈದರಬಾದ್ ತಂಡ ಸಾಕಷ್ಟು ಅಡೆತಡೆಗಳ ನಡುವೆ ಪ್ಲೇ ಆಫ್ ಪ್ರವೇಶಿಸಿ ಎದುರಾಳಿ ತಂಡಗಳ ಪಾಲಿಗೆ ಎಚ್ಚರಿಕೆಯನ್ನು ರವಾನಿಸಿತ್ತು. ಆದರೆ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ರೈಸರ್ಸ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಬೀಳುವಂತೆ ಮಾಡಿತು. 2020ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸನ್ರೈಸರ್ಸ್ ಮುಗ್ಗರಿಸಿದ್ದೆಲ್ಲಿ ಎನ್ನವುದನ್ನು ನೋಡುವುದಾದರೇ...
ಮೊದಲ 11 ಪಂದ್ಯಗಳ ಪೈಕಿ ಕೇವಲ 4 ಪಂದ್ಯಗಳನ್ನು ಗೆದ್ದಿದ್ದ ಸನ್ರೈಸರ್ಸ್ ಹೈದರಾಬಾದ್ ಆ ಬಳಿಕ ಸತತ 3 ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಪ್ರವೇಶಿಸಿ ಎಲ್ಲರ ಹುಬ್ಬೇರುವಂತೆ ಮಾಡಿತ್ತು.
ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿ, ಆ ಬಳಿಕ ಸನ್ರೈಸರ್ಸ್ ಹೈದರಾಬಾದ್ ತಂಡ 6 ವಿಕೆಟ್ಗಳ ರೋಚಕ ಜಯ ಸಾಧಿಸಿ ಎರಡನೇ ಕ್ವಾಲಿಫೈಯರ್ಗೂ ಅರ್ಹತೆಗಿಟ್ಟಿಸಿಕೊಂಡಿತ್ತು.
ಆದರೆ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 190 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತುವಲ್ಲಿ ವಾರ್ನರ್ ಎಡವಿದ್ದರಿಂದ 2ನೇ ಬಾರಿಗೆ ಐಪಿಎಲ್ ಟ್ರೋಫಿ ಜಯಿಸುವ ಕನಸು ನುಚ್ಚುನೂರಾಯಿತು.
ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಯಾಕೆ ಫೈನಲ್ಗೆ ಏರಲಿಲ್ಲ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಹೈದರಾಬಾದ್ ತಂಡಕ್ಕೆ ಅನನುಭವಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಪೆಟ್ಟು
ಹೌದು, ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹೈದರಾಬಾದ್ ತಂಡಕ್ಕೆ ಜಾನಿ ಬೇರ್ಸ್ಟೋವ್ ಹಾಗೂ ಡೇವಿಡ್ ವಾರ್ನರ್ ಬಹುತೇಕ ರನ್ ಕಲೆಹಾಕಿದ್ದರು. ಆದರೆ ಈ ಬಾರಿ ಅಗ್ರಕ್ರಮಾಂಕದ ಬ್ಯಾಟ್ಸ್ಮನ್ಗಳು ಕೆಲವೊಮ್ಮೆ ವಿಫಲವಾದ ತಂಡದ ಭಾರ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳ ಮೇಲೆ ಬಿದ್ದಿತ್ತು.
ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ಅನನುಭವಿ ಆಟಗಾರರಾದ ಪ್ರಿಯಂ ಗರ್ಗ್, ವಿಜಯ್ ಶಂಕರ್ ಹಾಗೂ ಅಬ್ದುಲ್ ಸಮದ್ ಮ್ಯಾಚ್ ಫಿನಿಶರ್ ಆಗಿ ಯಶಸ್ವಿಯಾಗಲು ವಿಫಲರಾದರು.
ಒತ್ತಡದ ಸಂದರ್ಭದಲ್ಲಿ ಮಹತ್ವದ ಪಂದ್ಯವನ್ನು ಕೈಚೆಲ್ಲಿದ್ದು ಹೈದರಾಬಾದ್ಗೆ ಹಿನ್ನಡೆಯಾಗಿದ್ದು.
ಸನ್ರೈಸರ್ಸ್ ಹೈದರಾಬಾದ್ ತಂಡ ಲೀಗ್ ಹಂತದ ಕೊನೆಯ ಮೂರು ಪಂದ್ಯಗಳನ್ನು ಗೆದ್ದು ಪ್ಲೇ ಆಫ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದು ಎಷ್ಟು ಸತ್ಯವೋ, ಟೂರ್ನಿಯ 43ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಆಘಾತಕಾರಿ ಸೋಲು ಕಂಡಿದ್ದು ಅಷ್ಟೇ ಸತ್ಯ.
ಹೌದು, ಕಿಂಗ್ಸ್ ಇಲೆವನ್ ಪಂಜಾಬ್ ನೀಡಿದ್ದ ಕೇವಲ 127 ರನ್ಗಳ ಗುರಿ ಬೆನ್ನತ್ತಿದ ಸನ್ರೈಸರ್ಸ್ ಹೈದರಾಬಾದ್ ಒಂದು ಹಂತದಲ್ಲಿ ಪವರ್ ಪ್ಲೇನಲ್ಲಿ ವಿಕೆಟ್ ನಷ್ಟವಿಲ್ಲದೇ 52 ರನ್ ಗಳಿಸಿತ್ತು. ಆದರೆ ಆ ಬಳಿಕ ನಿರಂತರ ವಿಕೆಟ್ ಕಳೆದುಕೊಂಡು 114 ರನ್ಗಳಿಗೆ ಆಲೌಟ್ ಆಗುವ ಮೂಲಕ 12 ರನ್ಗಳ ಆಘಾತಕಾರಿ ಸೋಲು ಕಂಡಿತು.
ಸನ್ರೈಸರ್ಸ್ ಹೈದರಾಬಾದ್ಗೆ ಅತಿದೊಡ್ಡ ಹೊಡೆತ ಕೊಟ್ಟ ಗಾಯದ ಸಮಸ್ಯೆ..!
ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಇನ್ನಿಲ್ಲದಂತೆ ಕಾಡಿದ ಸಮಸ್ಯೆಯೆಂದರೆ ಅದು ಗಾಯದ ಸಮಸ್ಯೆ. ಮಿಚೆಲ್ ಮಾರ್ಷ್ ಹಾಗೂ ಭುವನೇಶ್ವರ್ ಕುಮಾರ್ ಟೂರ್ನಿಯಿಂದಲೇ ಹೊರಬಿದ್ದರೆ, ವೃದ್ದಿಮಾನ್ ಸಾಹ ಮಹತ್ವದ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದು ಹೈದರಾಬಾದ್ ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು.
ಒಂದು ವೇಳೆ ಗಾಯದ ಸಮಸ್ಯೆ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆ ತಂಡವನ್ನು ಕಾಡದೇ ಇದ್ದಿದ್ದರೆ, ಬಹುಷಃ ಸನ್ರೈಸರ್ಸ್ ಹೈದರಾಬಾದ್ ತಂಡ ಎರಡನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಜಯಿಸುತ್ತಿತ್ತೇನೋ. ನೀವೇನಂತೀರಾ..?