RCB ಎದುರಿಸುತ್ತಿರುವ ಪ್ರಮುಖ ಸಮಸ್ಯೆ ಏನು ಎನ್ನುವ ಗುಟ್ಟು ಬಿಚ್ಚಿಟ್ಟ ಯುಜುವೇಂದ್ರ ಚಹಲ್..!
ಬೆಂಗಳೂರು: ಕಳೆದ 12 ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಇದೀಗ ದುಬೈನಲ್ಲಿ ಆರಂಭವಾಗಲಿರುವ 13ನೇ ಆವೃತ್ತಿಯಲ್ಲಿ ಪ್ರಶಸ್ತಿಯ ಬರ ನೀಗಿಸಿಕೊಳ್ಳಲು ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ಪಡೆ ಚಿತ್ತ ನೆಟ್ಟಿದೆ. ಟೂರ್ನಿ ಆರಂಭಕ್ಕೂ ಮುನ್ನವೇ ತಂಡದ ಸ್ಟಾರ್ ಸ್ಪಿನ್ನರ್ ಯುಜುವೇಂದ್ರ ಚಹಲ್ ಈ ಹಿಂದೆ ಆರ್ಸಿಬಿ ಎದುರಿಸುತ್ತಿದ್ದ ಸಮಸ್ಯೆಗಳೇನು ಎನ್ನುವ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೂರು ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದ್ದರೂ ಇದುವರೆಗೂ ಕಪ್ ಗೆಲ್ಲಲು ಮಾತ್ರ ಸಾಧ್ಯವಾಗಿಲ್ಲ.
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಜತೆಗಿನ ಫೇಸ್ಬುಕ್ ಸಂದರ್ಶನದಲ್ಲಿ ಆರ್ಸಿಬಿ ತಂಡವು ಕಳೆದ ಆರು ವರ್ಷಗಳಿಂದ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆ ಏನು ಎನ್ನುವ ರಹಸ್ಯವನ್ನು ಹೊರಹಾಕಿದ್ದಾರೆ.
ನಾನು ಕಳೆದ 6 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದೇನೆ. ಆದರೆ ಆ ಒಂದು ಸಮಸ್ಯೆ ನಮ್ಮನ್ನು ಬಿಟ್ಟೂ ಬಿಡದಂತೆ ಕಾಡುತ್ತಿದೆ ಎಂದು ಚಹಲ್
ನಾವು 16-17 ಓವರ್ವರೆಗೂ ಶಿಸ್ತುಬದ್ಧ ಬೌಲಿಂಗ್ ದಾಳಿ ನಡೆಸುತ್ತೇವೆ. ನಾವು ಕನಿಷ್ಠ 30% ಪಂದ್ಯಗಳನ್ನು ಕೊನೆಯ ಮೂರು ಓವರ್ನಲ್ಲಿ ಕೈಚೆಲ್ಲಿದ್ದೇವೆ.
ಕೊನೆಯ ಮೂರು ಓವರ್ನಲ್ಲಿ ಎದುರಾಳಿ ತಂಡ 190-200 ರನ್ ಸಮೀಪ ಹೋಗಿ ಬಿಡುತ್ತದೆ. ಅದು ಇಡೀ ಪಂದ್ಯದ ಫಲಿತಾಂಶವನ್ನು ಏಕಾಏಕಿ ಅದಲು ಬದಲು ಮಾಡಿ ಬಿಡುತ್ತದೆ ಎಂದು ಚಹಲ್ ಅಭಿಪ್ರಾಯಪಟ್ಟಿದ್ದಾರೆ.
ಆದರೆ ಈ ಬಾರಿ ಸಮಾಧಾನಕರ ಸಂಗತಿಯೆಂದರೆ ನಮಗೆ ಡೆತ್ ಓವರ್ ಬೌಲಿಂಗ್ ನಡೆಸಲು ಸಾಕಷ್ಟು ಆಯ್ಕೆಗಳಿವೆ ಎಂದು ಚಹಲ್ ಹೇಳಿದ್ದಾರೆ.
ನವದೀಪ್ ಸೈನಿ ಪರಿಪಕ್ವವಾಗಿದ್ದಾರೆ. ಡೇಲ್ ಸ್ಟೇನ್, ಕ್ರಿಸ್ ಮೋರಿಸ್ ಕೂಡ ನಮ್ಮ ಡೆತ್ ಓವರ್ ಬೌಲಿಂಗ್ ಬಲ ಹೆಚ್ಚಿಸಲಿದ್ದಾರೆ. ಉಮೇಶ್ ಯಾದವ್ ಕೂಡಾ ಮಿಂಚಿನ ದಾಳಿ ನಡೆಸಬಲ್ಲರು ಎಂದು ಲೆಗ್ಸ್ಪಿನ್ನರ್ ಹೇಳಿದ್ದಾರೆ.
ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಆರ್ಸಿಬಿ ತಂಡಕ್ಕೆ ಡೆತ್ ಓವರ್ ಬೌಲಿಂಗ್ನಲ್ಲೀಗ ಸಾಕಷ್ಟು ಆಯ್ಕೆಗಳಿವೆ. 16 ಓವರ್ಗಳ ಬಳಿಕ ನಾನು ಅಗತ್ಯವಿದ್ದರೆ 17ನೇ ಓವರ್ ಬೌಲಿಂಗ್ ಮಾಡುತ್ತಿದ್ದೆ.
ಆದರೆ ಈಗ ಕೊನೆಯ ನಾಲ್ಕು ಓವರ್ ಬೌಲಿಂಗ್ ಮಾಡಲು ಮೂರರಿಂದ ನಾಲ್ಕು ಆಯ್ಕೆಗಳಿವೆ. ಈ ಹಿಂದೆ ಅನುಭವಿಸಿದ್ದ ಸಮಸ್ಯೆಗೆ ಈ ಸಲ ಪರಿಹಾರ ಸಿಕ್ಕಿದಂತಾಗಿದೆ ಎಂದು ಚಹಲ್ ಹೇಳಿದ್ದಾರೆ.
3ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಸೆಪ್ಟೆಂಬರ್ 19ರಿಂದ ಆರಂಭವಾಗಿ ನವೆಂಬರ್ 10ರವರೆಗೆ ನಡೆಯಲಿದೆ. ಯುಎಇ ಟೂರ್ನಿಗೆ ಆತಿಥ್ಯ ವಹಿಸಲಿದ್ದು ಶಾರ್ಜಾ, ಅಬುದಾಬಿ ಹಾಗೂ ದುಬೈನಲ್ಲಿ ಚುಟುಕು ಕ್ರಿಕೆಟ್ ಟೂರ್ನಿ ಜರುಗಲಿದೆ.
ಕಳೆದ 12 ಆವೃತ್ತಿಗಳಲ್ಲಿ ಕಪ್ ಗೆಲ್ಲಲು ವಿಫಲವಾಗಿರುವ ಬೆಂಗಳೂರು ಮೂಲದ ಫ್ರಾಂಚೈಸಿ ಈ ಬಾರಿ ವಿಭಿನ್ನ ತಂತ್ರಗಾರಿಕೆಯೊಂದಿಗೆ ದುಬೈ ವಿಮಾನ ಹತ್ತಲಿದೆ.