ಬಂಡಾಯ ನಾಯಕ ಪೈಲಟ್ ಮೆತ್ತಗಾಗಿದ್ದರ ಅಸಲಿಯತ್ತು: ತೆರೆ ಹಿಂದಿನ ರಹಸ್ಯವಿದು!
ರಾಜಸ್ಥಾನ ರಾಜಕೀಯದಲ್ಲಿ ಭುಗಿಲಲೆದ್ದ ಭಿನ್ನಮತ ಶಮನವಾಗಿ ಸದ್ಯ ಬಹುತೇಕ ಎಲ್ಲವೂ ಶಾಂತವಾಗಿದೆ, ಗೆಹ್ಲೋಟ್ ಕುರ್ಚಿಯೂ ಉಳಿದಿದೆ. ಬಬಂಡಾಯ ನಡೆ ಅನುಸರಿಸಿದ್ದ ಪೈಲಟ್ ಮನಸ್ಸು ಬದಲಾಯಿಸಿ ಕಾಂಗ್ರೆಸ್ನಲ್ಲೇ ಉಳಿದುಕೊಂಡಿದ್ದಾರೆ. ಆದರೆ ರೆಬೆಲ್ ಆಗಿದ್ದ ಸಚಿನ್ ಪೈಲಟ್ ಇದ್ದಕ್ಕಿದ್ದಂತೆ ಸಮಾಧಾನಗೊಂಡಿದ್ದು ಹೇಗೆ? ಇಲ್ಲಿದೆ ನೋಡಿ ತೆರೆ ಹಿಂದಿನ ರಹಸ್ಯ!
ರಾಜಸ್ಥಾನದ ಪದಚ್ಯುತ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಪುನಃ ಕಾಂಗ್ರೆಸ್ ತೆಕ್ಕೆಗೆ ಮರಳಲು ಪ್ರಿಯಾಂಕಾ ವಾದ್ರಾ ಹಾಗೂ ರಾಹುಲ್ ಗಾಂಧಿ ಅವರ ಅವಿರತ ಮಧ್ಯಸ್ಥಿಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಜ್ಯೋತಿರಾದಿತ್ಯ ಸಿಂಧಿಯಾ ರೀತಿಯಲ್ಲೇ ಸಚಿನ್ ಪೈಲಟ್ ಅವರಿಗೆ ರಾಹುಲ್ ಗಾಂಧಿ ಅವರನ್ನು ನೇರವಾಗಿ ಭೇಟಿ ಮಾಡುವ ಸಲುಗೆತನವಿತ್ತು.
ಸಚಿನ್, ರಾಹುಲ್ ಹಾಗೂ ಪ್ರಿಯಾಂಕಾ ಅವರ ಅಪ್ಪಂದಿರು ದೊಡ್ಡ ರಾಜಕೀಯ ನಾಯಕರು. ಹೀಗಾಗಿಯೇ ಪೈಲಟ್ ಹಾಗೂ ಗಾಂಧಿ ಕುಟುಂಬಕ್ಕೆ ಮೊದಲಿನಿಂದಲೂ ಅನ್ಯೋನ್ಯತೆ ಇತ್ತು. ಆದರೆ ಪೈಲಟ್ ಮುನಿದಿದ್ದು ಗಾಂಧಿ ಕುಟುಂಬದ ಮೇಲಾಗಿರಲಿಲ್ಲ. ಬದಲಾಗಿ ಸಿಎಂ ಅಶೋಕ್ ಗೆಹ್ಲೋಟ್ ಕಾರ್ಯವೈಖರಿ ವಿರುದ್ಧ.
ಹೀಗಾಗಿ ಕೌಟುಂಬಿಕ ಗೆಳೆತನವನ್ನೇ ಬಳಕೆ ಮಾಡಿಕೊಂಡ ಪ್ರಿಯಾಂಕಾ ಹಾಗೂ ರಾಹುಲ್, ‘ಫೀಲ್ಡ್’ಗೆ ಇಳಿದು ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನಡುವೆ ಸಂಧಾನ ನಡೆಸಿದರು ಎಂದು ಮೂಲಗಳು ಹೇಳಿವೆ.
ಪೈಲಟ್ ಮನವೊಲಿಕೆಗೆ ಪ್ರಿಯಾಂಕಾ ಯತ್ನಿಸಿದ್ದಕ್ಕೆ ಅನ್ಯ ಕಾರಣಗಳೂ ಇವೆ. ಪೈಲಟ್ ಅವರು ಪ್ರಬಲ ಗುಜ್ಜರ್ ಸಮುದಾಯಕ್ಕೆ ಸೇರಿದ್ದು, ಸಾಕಷ್ಟುಪ್ರಭಾವ ಹೊಂದಿದ್ದಾರೆ.
ಮುಂದಿನ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಹರ್ಯಾಣ, ದಿಲ್ಲಿಯಲ್ಲಿ ಗುಜ್ಜರ್ ಕೂಡ ಒಂದು ನಿರ್ಣಾಯಕ ಸಮುದಾಯ. ಹೀಗಾಗಿ ಆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಪ್ರಿಯಾಂಕಾ, ಶತಾಯ-ಗತಾಯ ಪೈಲಟ್ ಮನವೊಲಿಸಿದ್ದಾರೆ.
ಇದೇ ವೇಳೆ, ಪೈಲಟ್ ಅವರು ಕಾಶ್ಮೀರದ ಫಾರೂಖ್ ಅಬ್ದುಲ್ಲಾ ಹಾಗೂ ಒಮರ್ ಅಬ್ದುಲ್ಲಾ ಅವರ ಬೀಗರಾದ ಕಾರಣ, ಅಬ್ದುಲ್ಲಾಗಳು ಕೂಡ ತಮ್ಮ ಪ್ರಭಾವ ಬಳಸಿ ಸಚಿನ್ರನ್ನು ವಾಪಸು ಕರೆತಂದರು.
ಪೈಲಟ್ ನಿರ್ಗಮಿಸಿದ್ದರೆ ಕಾಂಗ್ರೆಸ್ಸಲ್ಲಿ ಯುವಕರಿಗೆ ಉಳಿಗಾಲವಿಲ್ಲ ಎಂದು ಭಾಸವಾಗುತ್ತಿತ್ತು. ಹೀಗಾಗೇ ಪ್ರಿಯಾಂಕಾ ಹಾಗೂ ರಾಹುಲ್ ಅವರು ಪೈಲಟ್ ‘ಘರ್ ವಾಪಸಿ’ ಮಾಡಿಸಿದರು ಎಂದು ವರದಿಯಾಗಿದೆ.
ಈ ನಡುವೆ, ಪೈಲಟ್ ಮೇಲೆ ಹರಿಹಾಯುತ್ತಿದ್ದ ಸಿಎಂ ಅಶೋಕ್ ಗೆಹ್ಲೋಟ್ ಈತ ತಣ್ಣಗಾಗಿದ್ದು, ‘ಮರೆಯೋಣ-ಕ್ಷಮಿಸೋಣ’ ಎಂಬ ಸಂಧಾನದ ಮಾತು ಆಡಿದ್ದಾರೆ. ಈ ನಡುವೆ, ರಾಜಸ್ಥಾನ ತೊರೆದು ದಿಲ್ಲಿ ಸೇರಿದ್ದ ಪೈಲಟ್ ಬಣದ ಶಾಸಕರು ರಾಜ್ಯಕ್ಕೆ ಮರಳಿದ್ದಾರೆ.