- Home
- News
- India News
- ಸ್ಟೇಟ್ ಬ್ಯಾಂಕ್ನಲ್ಲಿದ್ದ 2 ಕೋಟಿ ಮೌಲ್ಯದ ಚಿನ್ನ- ಬೆಳ್ಳಿ ಗಾಯಬ್: ಸಿಬ್ಬಂದಿ ಕೈವಾಡ? ಹೌಹಾರಿದ ಗ್ರಾಹಕರು
ಸ್ಟೇಟ್ ಬ್ಯಾಂಕ್ನಲ್ಲಿದ್ದ 2 ಕೋಟಿ ಮೌಲ್ಯದ ಚಿನ್ನ- ಬೆಳ್ಳಿ ಗಾಯಬ್: ಸಿಬ್ಬಂದಿ ಕೈವಾಡ? ಹೌಹಾರಿದ ಗ್ರಾಹಕರು
ಎಸ್ಬಿಐ ಶಾಖೆಯಲ್ಲಿ ಗ್ರಾಹಕರೊಬ್ಬರ 2 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಂಕ್ ಲಾಕರ್ ನಿಗೂಢವಾಗಿ ಕಣ್ಮರೆಯಾಗಿದೆ. ಲಾಕರ್ಗೆ ಬಾಡಿಗೆ ಕಡಿತವಾಗುತ್ತಿದ್ದರೂ, ಬ್ಯಾಂಕ್ ಅದನ್ನು ಬೇರೆಯವರಿಗೆ ಹಂಚಿಕೆ ಮಾಡಿರುವುದಾಗಿ ಹೇಳಿದ್ದು, ಇದು ಬ್ಯಾಂಕ್ ಸಿಬ್ಬಂದಿಯ ಕೈವಾಡದ ಶಂಕೆಗೆ ಕಾರಣವಾಗಿದೆ.

ಬ್ಯಾಂಕೂ ಸೇಫಲ್ಲ?
ಮನೆಯಲ್ಲಿ ಚಿನ್ನ- ಬೆಳ್ಳಿ ಇಟ್ಟುಕೊಂಡರೆ ಕಳ್ಳಕಾಕರ ಭಯವೆಂದು ಬ್ಯಾಂಕ್ ಲಾಕರ್ಗಳಲ್ಲಿ ಇವುಗಳನ್ನು ಇಡುವವರೇ ಬಹುತೇಕ ಎಲ್ಲರೂ. ಆದರೆ ಬ್ಯಾಂಕ್ನಲ್ಲಿ ಅದರಲ್ಲಿಯೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಯಂಥ ರಾಷ್ಟ್ರೀಕೃತ ಬ್ಯಾಂಕ್ಗಳ ಲಾಕರ್ನಲ್ಲಿ ಇಟ್ಟ ಚಿನ್ನ ಬೆಳ್ಳಿ ಗಾಯಬ್ ಆದರೆ ಕಥೆ ಏನಾಗಬೇಡ? ಅದೂ ಎರಡು ಕೋಟಿ ಮೌಲ್ಯದ ಚಿನ್ನ, ಬೆಳ್ಳಿ! ಇಂಥದ್ದೊಂದು ಘಟನೆ ನಡೆದಿದ್ದು, ಗ್ರಾಹಕರು ಬೆಚ್ಚಿ ಬಿದ್ದಿದ್ದಾರೆ. ಲಾಕರ್ ತಮ್ಮ ಹೆಸರಿನಲ್ಲಿಯೇ ಇರುವಾಗ, ನಕಲಿ ಕೀಯನ್ನು ಬೇರೆಯವರಿಗೆ ನೀಡಿ 2 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ಗಾಯಬ್ ಮಾಡಲಾಗಿದೆ ಎನ್ನುವ ಗಂಭೀರ ಘಟನೆ ಇದಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಇಂಥ ಬ್ಯಾಂಕ್ ಮೇಲೆಯೂ ನಂಬಿಕೆ ಕಳೆದುಕೊಳ್ಳುವಂತಾಗಿದ್ದು, ಈ ಸುದ್ದಿ ಗ್ರಾಹಕರಲ್ಲಿ ಭಾರಿ ಚಿಂತೆಯನ್ನು ಉಂಟು ಮಾಡಿದೆ.
ಎಲ್ಲಿ ನಡೆದ ಘಟನೆ?
ಅಂದಹಾಗೆ ಈ ಘಟನೆ ನಡೆದಿರುವುದು ಫರಿದಾಬಾದ್ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ. ಸುಮಾರು 2 ಕೋಟಿ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ಬೆಲೆಬಾಳುವ ವಸ್ತುಗಳು ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಚಾರ್ಟರ್ಡ್ ಅಕೌಂಟೆಂಟ್ ಒಬ್ಬರ ಲಾಕರ್ ಬ್ಯಾಂಕಿನಿಂದ ನಾಪತ್ತೆಯಾಗಿದೆ ಎಂದು ವರದಿಯಾಗಿದೆ. ಫರಿದಾಬಾದ್ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸೆಕ್ಟರ್ 15 ಮಾರುಕಟ್ಟೆ ಶಾಖೆಯಲ್ಲಿ ಈ ಘಟನೆ ನಡೆದಿದೆ. ದೂರಿನ ಪ್ರಕಾರ, ಲಾಕರ್ ಚಾರ್ಟರ್ಡ್ ಅಕೌಂಟೆಂಟ್ ಡಿ.ಸಿ. ಗಾರ್ಗ್ ಅವರಿಗೆ ಸೇರಿದ್ದು, ಕಳೆದ 12 ವರ್ಷಗಳಿಂದ ಅವರು ಈ ಬ್ಯಾಂಕ್ನ ಲಾಕರ್ನಲ್ಲಿ ಇವುಗಳನ್ನು ಇಟ್ಟಿದ್ದರು.
ಬೇರೆಯವರ ಹೆಸರಿಗೆ ಲಾಕರ್!
ಎರಡು ದಿನಗಳ ಹಿಂದೆ, ಗಾರ್ಗ್ ಅವರ ಪತ್ನಿ ಲಾಕರ್ ಅನ್ನು ನಿರ್ವಹಿಸಲು ಬ್ಯಾಂಕಿಗೆ ಭೇಟಿ ನೀಡಿದಾಗ, ಲಾಕರ್ ಶಾಖೆಯಲ್ಲಿ ಅಸ್ತಿತ್ವದಲ್ಲಿಲ್ಲ ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದಾಗ ಅವರು ಹೌಹಾರಿ ಹೋದರು. ಒಂದು ವರ್ಷದಿಂದ ಇದು ಅಸ್ತಿತ್ವದಲ್ಲಿಯೇ ಇಲ್ಲ ಎಂದಿದ್ದಾರೆ. ವಿಚಿತ್ರ ಎಂದರೆ ಈ ಲಾಕರ್ಗಾಗಿ ನಿಯಮದ ಪ್ರಕಾರ ಅವರ ಬ್ಯಾಂಕ್ ಅಕೌಂಟ್ನಿಂದ ಹಣವನ್ನು ಕಟ್ ಮಾಡಲಾಗುತ್ತಿದೆ. ಆದರೆ ಲಾಕರ್ ಮಾತ್ರ ಇಲ್ಲ ಎಂದಾಗ ಡಿ.ಸಿ. ಗಾರ್ಗ್ ಮತ್ತು ಅವರ ಕುಟುಂಬವು ಬ್ಯಾಂಕ್ ಅಧಿಕಾರಿಗಳನ್ನು ಪ್ರಶ್ನಿಸಿದರು. ಆಗ ಅವರ ಉತ್ತರ ಕೇಳಿ ತಲೆ ಸುತ್ತಿ ಬಂದಿದೆ. ಅವರು ಹೇಳಿದ್ದೇನೆಂದರೆ, ನಿಮ್ಮ ಹೆಸರಿನಲ್ಲಿ ಅಂತಹ ಯಾವುದೇ ಲಾಕರ್ ನೋಂದಾಯಿಸಲಾಗಿಲ್ಲ ಎಂದು! ಗಾರ್ಗ್ ಅವರು ಲಾಕರ್ನ ಒರಿಜಿನಲ್ ಕೀ ಹೊಂದಿರುವ ಬಗ್ಗೆ ತಿಳಿಸಿದಾಗ, ಬ್ಯಾಂಕ್ ಅಧಿಕಾರಿಗಳು ಆ ಲಾಕರ್ ಅನ್ನು ಇನ್ನೊಬ್ಬ ವ್ಯಕ್ತಿಗೆ ನೀಡಲಾಗಿದೆ ಎಂದಿದ್ದಾರೆ!
ಹಣ ಕಡಿತವಾಗಿದ್ದರೂ ಉತ್ತರವಿಲ್ಲ
ಗಾರ್ಗ್ ಅವರು 2014 ರಲ್ಲಿ ಲಾಕರ್ ಅನ್ನು ತೆಗೆದುಕೊಂಡಿದ್ದಾಗಿ ಮತ್ತು ಅವರ ಖಾತೆಯಿಂದ ನಿಯಮಿತವಾಗಿ 2,360 ರೂ.ಗಳ ವಾರ್ಷಿಕ ಶುಲ್ಕವನ್ನು ಕಡಿತಗೊಳಿಸಲಾಗುತ್ತಿತ್ತು ಎಂದು ಹೇಳಿದರು. ಬ್ಯಾಂಕ್ ತನ್ನ ಲಾಕರ್ನ ನಕಲಿ ಕೀಲಿಯನ್ನು ಪ್ರಸ್ತುತ ಲಾಕರ್ ಹೊಂದಿರುವ ವ್ಯಕ್ತಿಗೆ ಹಸ್ತಾಂತರಿಸಿದೆ ಎಂದು ಅವರು ಆರೋಪಿಸಿದರು. ಆದರೆ ಬ್ಯಾಂಕ್ನವರು ಮಾತ್ರ ಗಾರ್ಗ್ ಅವರ ಕುಟುಂಬ ಲಾಕರ್ ಖಾಲಿ ಮಾಡಿಕೊಂಡು ಹೋಗಿದೆ ಎಂದಿದ್ದಾರೆ. ಆದರೆ, ಖಾಲಿ ಮಾಡಿಕೊಂಡು ಹೋಗಿದ್ದೇ ಆದರೆ, ಅದರ ಮೂಲ ಕೀ ಮತ್ತು ಲಾಕರ್ ಹೊಂದಿರುವ ದಾಖಲೆ ಪತ್ರಗಳು ತಮ್ಮ ಬಳಿ ಇರುತ್ತಿರಲಿಲ್ಲ ಎಂದೆಲ್ಲಾ ವಾದಿಸುವಷ್ಟರಲ್ಲಿ ಅವರಿಗೆ ಸುಸ್ತಾಗಿ ಹೋಗಿದೆ.
ಬ್ಯಾಂಕ್ ಸಿಬ್ಬಂದಿ ಕೈವಾಡ?
ಲಾಕರ್ ಅನ್ನು ಮುರಿದು ಬ್ಯಾಂಕ್ ಅಧಿಕಾರಿಗಳ ಒಪ್ಪಿಗೆಯೊಂದಿಗೆ ವಿಕಾಸ್ ಚೌಹಾಣ್ ಎಂಬವರಿಗೆ ಮರು ಹಂಚಿಕೆ ಮಾಡಲಾಗಿದೆ ಎಂದು ಗಾರ್ಗ್ ಆರೋಪಿಸಿದರು ಮತ್ತು ನಕಲಿ ಕೀಲಿಯನ್ನು ನೀಡಲಾಗಿದೆ. ಲಾಕರ್ನಲ್ಲಿ ಸುಮಾರು 1.25 ಕೆಜಿ ಚಿನ್ನದ ಬಾರ್ಗಳು, ಸುಮಾರು 3 ಕೆಜಿ ಬೆಳ್ಳಿ ಮತ್ತು ಇತರ ಬೆಲೆಬಾಳುವ ವಸ್ತುಗಳು ಇದ್ದವು ಎಂದು ಅವರು ಹೇಳಿದರು. ಲಾಕರ್ ಯಾವಾಗ ಮುರಿದಿದೆ ಅಥವಾ ಬೆಲೆಬಾಳುವ ವಸ್ತುಗಳು ಯಾವಾಗ ಕಾಣೆಯಾಗಿವೆ ಎಂದು ತನಗೆ ತಿಳಿದಿಲ್ಲ ಎಂದು ಗಾರ್ಗ್ ಹೇಳಿದರು. ಎಸ್ಬಿಐ ಪ್ರಧಾನ ಕಚೇರಿ ಮತ್ತು ಅಧ್ಯಕ್ಷರಿಗೆ ದೂರು ನೀಡಿದ್ದೇನೆ, ಅದರ ನಂತರ ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.
ಪೊಲೀಸರಿಗೆ ದೂರು
ಗಾರ್ಗ್ ಅವರ ಸಹವರ್ತಿ ಮತ್ತು ಜಿಲ್ಲಾ ಗ್ರಾಹಕ ವೇದಿಕೆಯ ಮಾಜಿ ಸದಸ್ಯ ಸತೀಶ್ ಮಿತ್ತಲ್, ಬ್ಯಾಂಕ್ ಅಧಿಕಾರಿಗಳ ಪಿತೂರಿ ಇದೆ ಎಂದು ಆರೋಪಿಸಿದರು. ಬ್ಯಾಂಕ್ ನೌಕರರು ತಪ್ಪಿಲ್ಲದಿದ್ದರೆ, ಪಾರದರ್ಶಕವಾಗಿ ತನಿಖೆ ಮಾಡುವ ಬದಲು ವಿಷಯವನ್ನು ಮುಚ್ಚಿಡಲು ಯಾವುದೇ ಕಾರಣವಿಲ್ಲ ಎಂದು ಅವರು ಹೇಳಿದರು. ಪೊಲೀಸ್ ದೂರು ಕೂಡ ದಾಖಲಾಗಿದೆ, ಆದರೆ ಇಲ್ಲಿಯವರೆಗೆ ಯಾವುದೇ ತೃಪ್ತಿದಾಯಕ ಪ್ರತಿಕ್ರಿಯೆ ಬಂದಿಲ್ಲ ಎಂದು ಮಿತ್ತಲ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

