ದ್ವಾರಕ ಎಕ್ಸ್ಪ್ರೆಸ್ವೇ ಸೇರಿ 112 ರಾಷ್ಟ್ರೀಯ ಹೆದ್ದಾರಿ ಯೋಜನೆ ಉದ್ಘಾಟಿಸಿದ ಪ್ರಧಾನಿ ಮೋದಿ!
ದೇಶದ ಸಾರಿಗೆ ಸಂಪರ್ಕದಲ್ಲಿ ಮಹತ್ತರ ಬದಲಾವಣೆ ತಂದಿರುವ ಮೋದಿ ಸರ್ಕಾರ ಇದೀಗ ದ್ವಾರಕ ಎಕ್ಸ್ಪ್ರೆಸ್ ವೇ ಲೋಕಾರ್ಪಣೆಗೊಳಿಸಿದ್ದಾರೆ. ದ್ವಾರಕ ಸೇರಿದಂತೆ ಇತರ 112 ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ದೇಶದ ಮೂಲಭೂತ ಸೌಕರ್ಯಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತಿರುವ ಕೇಂದ್ರ ಸರ್ಕಾರ ಸಾರಿಗೆ ಸಂಪರ್ಕದಲ್ಲಿ ಮಹತ್ತರ ಬದಲಾವಣೆ ತಂದಿದೆ. ದೇಶದ ಹೆದ್ದಾರಿಗಳನ್ನು ಅಭಿವೃದ್ಧಿಪಡಿ ಲಾಸ್ಟ್ ಮೈಲ್ ಕನೆಕ್ಟಿವಿಟಿಗೆ ಒತ್ತು ನೀಡಿರುವ ಪ್ರಧಾನಿ ಮೋದಿ ಇಂದು ಹರ್ಯಾಣದಲ್ಲಿ ದ್ವಾರಕ ಎಕ್ಸ್ಪ್ರೆಸ್ವೇ ಉದ್ಘಾಟಿಸಿದ್ದಾರೆ.
1 ಲಕ್ಷ ಕೋಟಿ ಮೌಲ್ಯದ ಒಟ್ಟು 112 ಹೆದ್ದಾರಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಮೋದಿ ಮಾಡಿದ್ದಾರೆ. ಗುರುಗ್ರಾಂಗೆ ಭೇಟಿ ನೀಡಿದ ಮೋದಿ ದ್ವಾರಕ ಎಕ್ಸ್ಪ್ರೆಸ್ವೇ ಲೋಕಾರ್ಪಣೆ ಜೊತೆಗೆ ಇತರ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಸಂಚಾರ ಹರಿವನ್ನು ಸುಧಾರಿಸಲು ಮತ್ತು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ದೆಹಲಿ ಮತ್ತು ಗುರುಗ್ರಾಮ್ ನಡುವಿನ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ನಿಟ್ಟಿನಲ್ಲಿ ದ್ವಾರಕಾ ಎಕ್ಸ್ ಪ್ರೆಸ್ ವೇ ಪ್ರಮುಖ ಪಾತ್ರ ನಿರ್ವಹಿಸಲಿದೆ. ಇದರ ಹರಿಯಾಣ ವಿಭಾಗವನ್ನು ಉದ್ಘಾಟಿಸಿದ್ದಾರೆ.
8 ಪಥದ ದ್ವಾರಕಾ ಎಕ್ಸ್ ಪ್ರೆಸ್ವೇ 19 ಕಿ.ಮೀ ಉದ್ದದ ಹರಿಯಾಣ ವಿಭಾಗವನ್ನು ಸುಮಾರು 4,100 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. 10.2 ಕಿ.ಮೀ ಉದ್ದದ ದೆಹಲಿ-ಹರಿಯಾಣ ಗಡಿಯಿಂದ ಬಸಾಯಿ ರೈಲ್-ಓವರ್ ಬ್ರಿಡ್ಜ್ (ಆರ್ ಒಬಿ) ಮತ್ತು 8.7 ಕಿ.ಮೀ ಉದ್ದದ ಬಸಾಯಿ ಆರ್ ಒಬಿಯಿಂದ ಖೇರ್ಕಿ ದೌಲಾವರೆಗಿನ ಎರಡು ಪ್ಯಾಕೇಜ್ ಗಳನ್ನು ಒಳಗೊಂಡಿದೆ. ಇದು ದೆಹಲಿಯ ಐಜಿಐ ವಿಮಾನ ನಿಲ್ದಾಣ ಮತ್ತು ಗುರುಗ್ರಾಮ್ ಬೈಪಾಸ್ ಗೆ ನೇರ ಸಂಪರ್ಕವನ್ನು ಒದಗಿಸುತ್ತದೆ.
ಪ್ರಧಾನಮಂತ್ರಿಯವರು ಉದ್ಘಾಟಿಸಿದ ಇತರ ಪ್ರಮುಖ ಯೋಜನೆಗಳಲ್ಲಿ 9.6 ಕಿ.ಮೀ ಉದ್ದದ ಆರು ಪಥದ ನಗರ ವಿಸ್ತರಣಾ ರಸ್ತೆ -2 (ಯುಇಆರ್ -2) - ಪ್ಯಾಕೇಜ್ 3 ನಂಗ್ಲೋಯಿ - ನಜಾಫ್ ಘರ್ ರಸ್ತೆಯಿಂದ ದೆಹಲಿಯ ಸೆಕ್ಟರ್ 24 ದ್ವಾರಕಾ ವಿಭಾಗದವರೆಗೆ ಯೋಜನೆಯೂ ಸೇರಿದೆ.
ಉತ್ತರ ಪ್ರದೇಶದಲ್ಲಿ ಸುಮಾರು 4,600 ಕೋಟಿ ರೂ.ಗಳ ವೆಚ್ಚದಲ್ಲಿ ಲಕ್ನೋ ರಿಂಗ್ ರಸ್ತೆಯ ಮೂರು ಪ್ಯಾಕೇಜ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 16 ರ ಆನಂದಪುರಂ - ಪೆಂಡುರ್ತಿ - ಅನಕಪಲ್ಲಿ ವಿಭಾಗವನ್ನು ಆಂಧ್ರಪ್ರದೇಶದಲ್ಲಿ ಸುಮಾರು 2,950 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಹಿಮಾಚಲ ಪ್ರದೇಶದಲ್ಲಿ ಸುಮಾರು 3,400 ಕೋಟಿ ರೂ.ಗಳ ಮೌಲ್ಯದ ಎನ್ಎಚ್ -21 ರ ಕಿರಾತ್ಪುರದಿಂದ ನೆರ್ಚೌಕ್ ವಿಭಾಗ (2 ಪ್ಯಾಕೇಜ್ಗಳು); ಕರ್ನಾಟಕದಲ್ಲಿ 2,750 ಕೋಟಿ ರೂ.ಗಳ ದೋಬಾಸ್ ಪೇಟೆ - ಹೊಸಕೋಟೆ ವಿಭಾಗ (ಎರಡು ಪ್ಯಾಕೇಜ್ ಗಳು) ಮತ್ತು ದೇಶದ ವಿವಿಧ ರಾಜ್ಯಗಳಲ್ಲಿ 20,500 ಕೋಟಿ ರೂ.ಗಳ 42 ಇತರ ಯೋಜನೆಗಳು ಉದ್ಘಾಟನೆಗೊಂಡಿದೆ.
ಪ್ರಧಾನಮಂತ್ರಿಯವರು ದೇಶಾದ್ಯಂತ ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಮುಖ ಯೋಜನೆಗಳಲ್ಲಿ ಆಂಧ್ರಪ್ರದೇಶದಲ್ಲಿ 14,000 ಕೋಟಿ ರೂ.ಗಳ ಮೌಲ್ಯದ ಬೆಂಗಳೂರು - ಕಡಪ್ಪ - ವಿಜಯವಾಡ ಎಕ್ಸ್ ಪ್ರೆಸ್ ವೇಯ 14 ಪ್ಯಾಕೇಜ್ ಗಳು ಸೇರಿವೆ. ಕರ್ನಾಟಕದಲ್ಲಿ 8,000 ಕೋಟಿ ರೂ.ಗಳ ರಾಷ್ಟ್ರೀಯ ಹೆದ್ದಾರಿ 748 ಎ ಯ ಬೆಳಗಾವಿ - ಹುನಗುಂದ - ರಾಯಚೂರು ವಿಭಾಗದ ಆರು ಪ್ಯಾಕೇಜ್ ಗಳು ಸೇರಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ