ಸಿಎಂ ನಿತೀಶ್ ಕುಮಾರ್ ಗೆದ್ದ ಖುಷಿಗೆ ಬೆರಳನ್ನೇ ಕತ್ತರಿಸಿ ಬಲಿ ಅರ್ಪಿಸಿದ ವ್ಯಕ್ತಿ!
ನಿತೀಶ್ ಕುಮಾರ್ ಅಭಿಮಾನಿಯೊಬ್ಬ ತನ್ನ ನಾಯಕ ಗೆದ್ದ ಖುಷಿಗೆ ತನ್ನ ಕೈಗಳ ಬೆರಳುಗಳನ್ನು ಒಂದೊಂದಾಗೇ ಗೌರೆಯಾ ಬಾಬಾಗೆ ಬಲಿ ನೀಡಿದ್ದಾನೆ. ಇಂತಹ ಅಭಿಮಾನ ನೋಡಲು ಸಿಗುವುದು ಬಹಳ ಅಪರೂಪ. ಮಾಧ್ಯಮ ವರದಿಗಳನ್ವಯ ಆ ವ್ಯಕ್ತಿ ನವೆಂಬರ್ 16ರಂದು ತನ್ನ ನಾಲ್ಕನೇ ಬೆರಳನ್ನೂ ಅರ್ಪಿಸಿದ್ದಾನೆ. ಇಲ್ಲಿದೆ ನೋಡಿ ಈ ಹುಚ್ಚು ಅಭಿಮಾನಿಯ ಕತೆ.
ಅನಿಲ್ ಕುಮಾರ್ ಶರ್ಮಾ(ಅಲಿ ಬಾಬಾ ಜಹಾನಾಬಾದ್) ಘೋಸಿ ಠಾಣಾ ವ್ಯಾಪ್ತಿಯ ವೈನಾ ಹಳ್ಳಿಯ ನಿವಾಸಿ. 45 ವರ್ಷದ ಈತ 2005 ರಲ್ಲಿ ಮೊದಲ ಬಾರಿ ತನ್ನ ಬೆರಳು ಕತ್ತರಿಸಿ ಗೌರೆಯಾ ಬಾಬಾಗೆ ಅರ್ಪಿಸಿದ್ದಾನೆ. ಇದಾದ ಬಳಿಕದಿಂದ ಇದು ಮುಂದುವರೆದುಕೊಂಡೇ ಬಂದಿದೆ.
ಮಾಧ್ಯಮಗಳ ವರದಿಯನ್ವಯ ಅನಿಲ್ ಕುಮಾರ್ ಶರ್ಮಾ ಗೌರೆಯಾ ಬಾಬಾ ಬಳಿ ನಿತೀಶ್ ಕುಮಾರ್ ಗೆದ್ದು ಮುಖ್ಯಮಂತ್ರಿಯಾದರೆ ತನ್ನ ಒಂದು ಬೆರಳು ಬಲಿಯಾಗಿ ನೀಡುತ್ತೇನೆಂದು ಹರಕೆ ಹೊತ್ತುಕೊಂಡಿದ್ದ. ಹೀಗಿರುವಾಗ ನಿತೀಶ್ ಕುಮಾರ್ ಸಿಎಂ ಆದಾಗೆಲ್ಲಾ ಈ ವ್ಯಕ್ತಿ ತನ್ನ ಒಂದು ಬೆರಳನ್ನು ಗೌರೆಯಾ ಬಾಬಾಗೆ ಅರ್ಪಿಸುತ್ತಾ ಬಂದಿದ್ದಾನೆ.
ಬೆರಳು ಕತ್ತರಿಸಿಕೊಂಡ ಮಾಹಿತಿ ತಿಳಿದು ತಲುಪಿದ ಮಾಧ್ಯಮ ಮಂದಿ ಬಳಿ ಮಾತನಾಡಿದ ಅನಿಲ್ ಕುಮಾರ್ ಒಂದು ವೇಳೆ ನಿತೀಶ್ ಕುಮಾರ್ ಈ ಬಾರಿ ಸಿಎಂ ಆಗದಿದ್ದರೆ, ತಾನು ಕತ್ತನ್ನೇ ಕುಯ್ದುಕೊಳ್ಳುತ್ತಿದ್ದೆ ಎಂದಿದ್ದಾರೆ.
ಇನ್ನು ಮತದಾನೋತ್ತರ ಸಮೀಕ್ಷೆಗಳಲ್ಲಿ ಬಿಹಾರದಲ್ಲಿ ನಿತೀಶ್ ಕುಮಾರ್ ಸೋಲುತ್ತಾರೆಂದು ಯಾವ ರೀತಿ ಸುದ್ದಿ ನೀಡುತ್ತಿದ್ದರೋ ಅದನ್ನು ನೋಡಿದ ಬಳಿಕ ಅನಿಲ್ ಕುಮಾರ್ ನಾಲ್ಕು ದಿನ ಊಟ ತಿಂಡಿ ಬಿಟ್ಟಿದ್ದರಂತೆ.
ಇನ್ನು ಯಾವಾಗದವರೆಗೆ ಸಿಎಂ ನಿತೀಶ್ ಕುಮಾರ್ರನ್ನು ಖುದ್ದು ಭೇಟಿಯಾಗುವ ಅವಕಾಶ ಸಿಗುವುದಿಲ್ಲವೋ ಅಲ್ಲಿಯವರೆಗೆ ತಾನು ಚಿಕಿತ್ಸೆ ಪಡೆಯುವುದಿಲ್ಲ ಎಂದಿದ್ದಾರೆ. ಇನ್ನು ಆತ ಬೇರೆ ಕಡೆ ಕೆಲಸ ಮಾಡುತ್ತಿದ್ದ, ಆದರೆ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಆತ ಮರಳಿ ಬಂದು ತನ್ನೆಲ್ಲಾ ಸಂಪತ್ತನ್ನು ಮಾರಿ ನಿತೀಶ್ ಕುಮಾರ್ ಪರ ಪ್ರಚಾರ ಆರಂಭಿಸಿದ ಎಂಬುವುದು ಗ್ರಾಮಸ್ಥರ ಮಾತಾಗಿದೆ.