ಶ್ರೀನಗರದ ಸೌಂದರ್ಯಕ್ಕೆ ಕಳಶವಿಟ್ಟ ಟುಲಿಪ್ ಹೂಗಳು: ಈ ಬಾರಿಗೆ ಅತೀ ಹೆಚ್ಚು ಪ್ರವಾಸಿಗರ ನಿರೀಕ್ಷೆ
ಶ್ರೀನಗರದ ಜಬರ್ವಾನ್ ಪರ್ವತಗಳ ತಪ್ಪಲಿನಲ್ಲಿರುವ ಏಷ್ಯಾದ ಅತಿದೊಡ್ಡ ಟುಲಿಪ್ ಗಾರ್ಡನ್ನಲ್ಲಿ ಟುಲಿಪ್ ಹೂವುಗಳು ಅರಳಿ ನಿಂತಿದ್ದು ಪ್ರವಾಸಿಗರನ್ನು ಸೆಳೆಯುತ್ತಿವೆ.
ನಿನ್ನೆಯಿಂದ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುವ ಈ ಗಾರ್ಡನ್ನಲ್ಲಿ ಒಟ್ಟು 68 ವಿಧದ 15 ಲಕ್ಷ ಹೂಗಳು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದೆ. ಏಷ್ಯಾದ ಅತಿದೊಡ್ಡ ಟುಲಿಪ್ ಉದ್ಯಾನವನವಾಗಿರುವ ಈ ಇಂದಿರಾಗಾಂಧಿ ಟುಲಿಪ್ ಉದ್ಯಾನವೂ ದಾಲ್ ಸರೋವರ ಮತ್ತು ಇಲ್ಲಿನ ಜಬರ್ವಾನ್ ಬೆಟ್ಟಗಳ ನಡುವೆ ಇದೆ.
ಈ ಗಾರ್ಡನ್ ಪುಷ್ಪ ಮೇಳ ಉದ್ಘಾಟನಾ ಸಮಾರಂಭದಲ್ಲಿ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮಾತನಾಡಿ, ಈ ವರ್ಷ ಉದ್ಯಾನದಲ್ಲಿ ಸುಮಾರು 68 ವಿಧದ ಟುಲಿಪ್ಗಳು ಅರಳುತ್ತವೆ ಎಂದರು.
ವಿವಿಧ ಬಣ್ಣಗಳು 15 ಲಕ್ಷ ಟುಲಿಪ್ಗಳ ಜೊತೆಗೆ, ಸಿರಾಜ್ ಬಾಗ್ ಎಂದೂ ಕರೆಯಲ್ಪಡುವ ಉದ್ಯಾನದಲ್ಲಿ ಇತರ ವಸಂತ ಹೂವುಗಳಾದ ಹಯಸಿಂತ್, ಡ್ಯಾಫಡಿಲ್, ಮಸ್ಕರಿ ಮತ್ತು ಸೈಕ್ಲಾಮೆನ್ಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ ಎಂದು ಉದ್ಯಾನದ ಉಸ್ತುವಾರಿ ಇನಾಮ್-ಉಲ್-ರೆಹಮಾನ್ ಹೇಳಿದ್ದಾರೆ.
ಪ್ರತಿ ವರ್ಷ ನಾವು ಈ ಉದ್ಯಾನವನ್ನು ವಿಸ್ತರಿಸುತ್ತೇವೆ ಮತ್ತು ಹೊಸ ತಳಿಗಳನ್ನು ಇಲ್ಲಿ ಪ್ರದರ್ಶಿಸುತ್ತೇವೆ, ಈ ವರ್ಷ ನಾವು ಕಾರಂಜಿ ಚಾನೆಲ್ ಅನ್ನು ವಿಸ್ತರಿಸಿದ್ದೇವೆ. ಉದ್ಯಾನವು ಸಂಪೂರ್ಣವಾಗಿ ಅರಳಿದಾಗ, ಟುಲಿಪ್ಗಳ ಕಾಮನಬಿಲ್ಲಿನಂತೆ ಇರುತ್ತದೆ ಎಂದು ಅವರು ಹೇಳಿದರು.
ತೋಟಗಾರಿಕೆ ಇಲಾಖೆಯು ಟುಲಿಪ್ ಗಿಡಗಳನ್ನು ಹಂತ ಹಂತವಾಗಿ ನೆಡುತ್ತದೆ ಇದರಿಂದ ಹೂವುಗಳು ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಉದ್ಯಾನದಲ್ಲಿ ಉಳಿಯುತ್ತವೆ. ಕಳೆದ ವರ್ಷ ಉದ್ಯಾನವನಕ್ಕೆ 3.60 ಲಕ್ಷ ಪ್ರವಾಸಿಗರು ಆಗಮಿಸಿದ್ದರು. ಗಾರ್ಡನ್ ಉದ್ಘಾಟನೆಯಾದ ನಂತರ ಇಷ್ಟೊಂದು ಜನ ಸೇರಿದ್ದು ಇದೇ ಮೊದಲು ಎಂದು ಗವರ್ನರ್ ಹೇಳಿದರು.
ಈ ವರ್ಷದ ಪ್ರವಾಸಿಗರ ಸಂಖ್ಯೆ ಕಳೆದ ವರ್ಷದ ಸಂಖ್ಯೆಯನ್ನು ಮೀರಿಸುತ್ತದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ ಸಿನ್ಹಾ, ಜಮ್ಮು ಪ್ರದೇಶದ ಸನಾಸರ್ ಪ್ರದೇಶದಲ್ಲಿ ಏಪ್ರಿಲ್ನಲ್ಲಿ ಹೊಸ ಟುಲಿಪ್ ಉದ್ಯಾನವನ್ನು ತೆರೆಯಲಾಗುವುದು, ಇದರಲ್ಲಿ 25 ಪ್ರಭೇದಗಳ 2.75 ಲಕ್ಷ ಟುಲಿಪ್ಗಳು ಅರಳುತ್ತವೆ ಎಂದರು.