ಪತ್ನಿ ಜೀವವಿರುವಾಗಲೇ ಅಂತಿಮ ಕ್ರಿಯೆಗೆ ಸಿದ್ಧತೆ ನಡೆಸುತ್ತಿರುವ ಅಸಹಾಯಕ ಗಂಡ!
ಕೊರೋನಾ ಮಹಾಮಾರಿ ಇಡೀ ವಿಶ್ವಾದ್ಯಂತ ಆತಂಕ ಸೃಷ್ಟಿಸಿದೆ. ಲಾಕ್ಡೌನ್ನಿಂದ ಜನರು ಸಮಸ್ಯೆಗಳನ್ನೆದುರಿಸುತ್ತಿದ್ದಾರೆ. ಅಂದರೆ ಮಾರ್ಚ್ 20ಕ್ಕೂ ಮೊದಲು ಯಾವ ವ್ಯಕ್ತಿ ಎಲ್ಲಿದ್ದರೋ ಅಲ್ಲೇ ಸಿಲುಕಿಕೊಂಡಿದ್ದಾರೆ. ಸಂಕಟದ ಈ ಸಮಯದಲ್ಲಿ ದೇಶದ ವಿಭಿನ್ನ ಭಾಗಗಳಿಂದ ಮಾರ್ಮಿಕ ಸುದ್ದಿಗಳು ಬೆಳಕಿಗೆ ಬರಲಾರಂಭಿಸಿವೆ. ಇಂತಹುದೇ ಒಂದ ಅಸಹಾಯಕ ಸ್ಥಿತಿಯಲ್ಲಿರುವ ವ್ಯಕ್ತಿಯೊಬ್ಬರ ಕತೆ ಬೆಳಕಿಗೆ ಬಂದಿದೆ. ಇದನ್ನು ಕೇಳಿ, ನೋಡಿದವರ ಕಣ್ಣಂಚಿನಲ್ಲೂ ಕಣ್ಣೀರು ಜಿನುಗಿದೆ. ಪತಿಯೊಬ್ಬ ಅದೆಷ್ಟು ಹತಾಶನಾಗಿದ್ದಾನೆಂದರೆ ತನ್ನ ಹೆಂಡತಿ ಜೀವವಿರುವಾಗಲೇ ಬೇರೆ ದಾರಿ ಕಾಣದೆ ಅಂತಿಮ ಸಂಸ್ಕಾರಕ್ಕೆ ತಯಾರಿ ನಡೆಸಲಾರಂಭಿಸಿದ್ದಾನೆ.
ಈ ಅಸಹಾಯಕ ಪರಿಸ್ಥಿತಿಯಲ್ಲಿರುವ ವ್ಯಕ್ತಿ ಬೇರಾರೂ ಅಲ್ಲ ಬಿಹಾರ ನಿವಾಸಿ ಅತುಲ್ ಶ್ರೀವಾತ್ಸವ್. ಇವರು ಲಾಕ್ಡೌನ್ಗೂ ಮೊದಲು ತನ್ನ ಪತ್ನಿ ಬಂದನಾರ ಚಿಕಿತ್ಸೆಗಾಗಿ ತನ್ನ ಸಹೋದರಿಯಯೊಂದಿಗೆ ಮುಂಬೈಗೆ ಬಂದಿದ್ದರು. 35 ವರ್ಷದ ಬಂಧನಾ ದೀರ್ಘ ಸಮಯದಿಂದ ಕಿಡ್ನಿ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಹೀಗಾಗಿ ಅತುಲ್ ಆಕೆಯನ್ನು ಮಾರ್ಚ್ 9 ರಂದು ಮುಂಬೈಗೆ ಕರೆ ತಂದಿದ್ದರು.
ಸುಮಾರು ಒಂದು ತಿಂಗಳವರೆಗೆ ಅತುಲ್ ಮುಂಬೈನ ಪರೇಲ್ನಲ್ಲಿರುವ ಕೆಇಎಂ ಆಸ್ಪತ್ರೆಯಲ್ಲಿ ಬಂಧನಾರಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಹೀಗಿರುವಾಗ ಹೆಂಡತಿಯನ್ನು ದಿನ ನಿತ್ಯ ವೈದ್ಯರ ಬಳಿ ಕರೆದೊಯ್ಯಲು ಅತುಲ್ ಆಸ್ಪತ್ರೆ ಪಕ್ಕದಲ್ಲೇ ಕೋಣೆಯೊಂದನ್ನು ಬಾಡಿಗೆಗೆ ಪಡೆದಿದ್ದರು. ಆದರೆ ಬಂಧನಾ ಆರೋಗ್ಯ ಸುಧಾರಿಸುವ ಬದಲು ಹದಗೆಡುತ್ತಾ ಹೋಗಿದೆ.
ಬಟ್ಟೆ ವ್ಯಾಪಾರಿಯಾಗಿರುವ ಅತುಲ್ ತನ್ನ ಹೆಂಡತಿಯ ಚಿಕಿತ್ಸೆಗೆ ಬರೋಬ್ಬರಿ 10 ಲಕ್ಷಕ್ಕೂ ಅಧಿಕ ಮೊತ್ತ ವ್ಯಯಿಸಿದ್ದಾರೆ. ಆದರೆ ಆಕೆ ಆರೋಗ್ಯ ಸುಧಾರಿಸಿಲ್ಲ. ಅಲ್ಲದೇ ವೈದ್ಯರು ಕೂಡಾ ಅತುಲ್ಗೆ ಪತ್ನಿ ಬಂಧನಾರನ್ನು ಮನೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದಾರೆ. ಆಕೆ ಗುಣಮುಖರಾಗುವ ಯಾವುದೇ ಭರವಸೆ ಇಲ್ಲ, ಯಾವ ಕ್ಷಣದಲ್ಲಾದರೂ ಸಾವನ್ನಪ್ಪಬಹುದು ಎಂದೂ ತಿಳಿಸಿದ್ದಾರೆ.
ಆರೋಗ್ಯ ಹದಗೆಡುತ್ತಿದ್ದಂತೆಯೇ ಇತ್ತ ಬಂಧನಾ ತನ್ನ ಗಂಡನಲಲ್ಲಿ ಕೊನೆ ಆಸೆಯನ್ನೂ ಹೇಳಿಕೊಂಡಿದ್ದಾರೆ. ಮಕ್ಕಳನ್ನು ಕೊನೆಯ ಬಾರಿ ನೋಡಬೇಕು, ಮಾತನಾಡಬೇಕು ಎಂದು ಆಸೆಯಿಂದ ಪತಿಯ ಕಿವಿಯಲ್ಲಿ ಹೇಳಿದ್ದಾಳೆ. ಅತುಲ್ ಹಾಗೂ ಬಂಧನಾ ದಂಪತಿಗೆ ಹತ್ತು ಹಾಗೂ ಹನ್ನೊಂದು ವರ್ಷದ ಇಬ್ಬರು ಗಂಡು ಮಕ್ಕಳಿದ್ದು, ಸದ್ಯ ಇಬ್ಬರೂ ತಮ್ಮ ಅಜ್ಜ ಅಜ್ಜಿಯೊಂದಿಗೆ ಬಿಹಾರದಲ್ಲಿದ್ದಾರೆ. ಆದರೀಗ ಅಸಹಾಯಕ ಪತಿ ಇಷ್ಟವಿದ್ದರೂ, ಪತ್ನಿಯ ಅಂತಿಮ ಆಸೆ ಪೂರೈಸಲಾಗದೆ ಸಂಕಟ ಪಡುತ್ತಿದ್ದಾರೆ.
ಇನ್ನು ಅತುಲ್ ಇಲ್ಲಿಯವರೆಗೆ ಕೂಡಿಟ್ಟ ಹಣವನ್ನು ಪತ್ನಿಯ ಚಿಕಿತ್ಸೆಗೆ ವ್ಯಯಿಸಿದ್ದು, ಸದ್ಯ ಆಕೆಯನ್ನು ಮರಳಿ ಬಿಹಾರಕ್ಕೆ ಕರೆದೊಯ್ಯಲು ಹಣವಿಲ್ಲದೆ ಪರದಾಡುತ್ತಿದ್ದಾರೆ. ಅತುಲ್ ಬಳಿಈಗ ಕೇವಲ ಮೂರು ಸಾವಿರ ರೂಪಾಯಿ ಉಳಿದುಕೊಂಡಿದೆ. ಆದರೆ ಮುಂಬೈನಿಂದ ಬಿಹಾರಕ್ಕೆ ಆಂಬುಲೆನ್ಸ್ನಲ್ಲಿ ಕರೆದೊಯ್ಯಲು ಕಡಿಮೆ ಎಂದರೂ 70 ಸಾವಿರ ಮೊತ್ತ ತಗುಲುತ್ತದೆ. ಹೀಗಾಗಿ ಬಿಹಾರಕ್ಕೆ ತೆರಳುವ ಧೈರ್ಯ ಮಾಡಿಲ್ಲ. ಇಷ್ಟೇ ಅಲ್ಲ ಪರಿಸ್ಥಿತಿಯ ಗಮಭೀರತೆ ಅರಿತ ಅತುಲ್ ತನ್ನನ್ನು ಕೋಣೆಯಲ್ಲೇ ಬಂಧಿಸಿಕೊಂಡಿದ್ದು, ಪತ್ನಿಯ ಅಂತಿಮ ಕ್ರಿಯೆಗೆ ತಯಾರಿ ನಡೆಸುತ್ತಿದ್ದಾರೆ.
ಸದ್ಯ ಬಂಧನಾ ಊಟ ನೀರು ಸೇವಿಸುವುದನ್ನೂ ನಿಲ್ಲಿಸಿದ್ದಾರೆ. ಆರೋಗ್ಯ ಮತ್ತಷ್ಟು ಹದಗೆಟ್ಟಿದೆ. ಆಕೆ ಮನಸ್ಸಿನಲ್ಲಿ ಹೇಗಾದರೂ ಮಾಡಿ ತನ್ನ ಮಕ್ಕಳನ್ನು ನೋಡಬೇಕೆಂಬ ಒಂದೇ ಆಸೆ ಉಳಿದುಕೊಂಡಿದೆ. ಪರಿಸ್ಥಿತಿ ನೋಡಿದ್ರೆ ಆಕೆ ಕೊನೆ ಇಚ್ಛೆ ನೆರವೇರುತ್ತದೆ ಎಂಬುವುದು ಅನುಮಾನ.