ಸೂರ್ಯ-ರಾಹು ಷಡಾಷ್ಟಕ ಯೋಗ: 4 ರಾಶಿಯವರೇ ಮುಂದಿನ 30 ದಿನ ಬಿ ಅಲರ್ಟ್, ಎಚ್ಚರಿಕೆ ಗಂಟೆ
ಸೂರ್ಯನು ಕರ್ಕಾಟಕ ರಾಶಿಯನ್ನು ಪ್ರವೇಶಿಸಿದಾಗ ರಾಹುವಿನೊಂದಿಗೆ ಉಂಟಾಗುವ ಷಡಾಷ್ಟಕ ಯೋಗವು ಕೆಲವು ರಾಶಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಈ ಯೋಗದಿಂದಾಗಿ 4 ರಾಶಿಯವರು ಮುಂದಿನ 30 ದಿನಗಳ ಕಾಲ ವೃತ್ತಿ, ಆರ್ಥಿಕ ಮತ್ತು ಕೌಟುಂಬಿಕ ಜೀವನದಲ್ಲಿ ಎದುರಿಸಬಹುದಾದ ಸವಾಲುಗಳ ಬಗ್ಗೆ ಈ ಲೇಖನ ವಿವರಿಸುತ್ತದೆ.

ಷಡಾಷ್ಟಕ ಯೋಗ
ಗ್ರಹಗಳ ಚಲನೆ ಎಲ್ಲಾ 12 ರಾಶಿಚಕ್ರಗಳ ಮೇಲೆ ಸಕಾರಾತ್ಮಕ ಮತ್ತು ನಕರಾತ್ಮಕ ಪರಿಣಾಮ ಬೀರುತ್ತವೆ. ಸೂರ್ಯನು ಕರ್ಕಾಟಕ ರಾಶಿಯನ್ನು ಪ್ರವೇಶಿಸಿದ ನಂತರ, ರಾಹುವಿನೊಂದಿಗೆ ಷಡಾಷ್ಟಕ ಯೋಗ ರಚನೆಯಾಗುತ್ತದೆ. ಈ ಯೋಗ ಕೆಲವು ರಾಶಿಗಳ ಮೇಲೆ ಏರಿಳಿತವನ್ನು ಸೃಷ್ಟಿಸಬಹುದು ಎಂದು ವೈದಿಕ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಯಾವ ರಾಶಿಯವರ ವೃತ್ತಿ, ಆರ್ಥಿಕ ಪರಿಸ್ಥಿತಿ ಮತ್ತು ಕುಟುಂಬ ಜೀವನದ ಮೇಲೆ ಮುಂದಿನ 30 ದಿನಗಳ ಕಾಲ ಸೂರ್ಯ-ರಾಹು ಷಡಕ್ಷ ಯೋಗ ಸಮಸ್ಯೆಯನ್ನುಂಟು ಮಾಡಲಿದೆ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
ವೃಷಭ ರಾಶಿ
ಮುಂದಿನ 30 ದಿನಗಳ ಕಾಲ ಮನಸ್ಸಿನಲ್ಲಿ ಚಂಚಲನೆ, ಅಸ್ಥಿರತೆ ಈ ರಾಶಿಯವರನ್ನು ಸುತ್ತುವರಿಯಲಿದೆ. ಈ ಕಾರಣದಿಂದ ನಾಲಿಗೆ ಮೇಲೆ ಹಿಡಿತ ಕಾಪಾಡಿಕೊಂಡು ವೃತ್ತಿ ಮತ್ತು ವೈಯಕ್ತಿಕ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಿ ಅಥವಾ ಕೆಲವು ಸಮಯದವರೆಗೆ ಮುಂದೂಡಿಕೆ ಮಾಡೋದು ಉತ್ತಮ. ತಪ್ಪು ತಿಳುವಳಿಕೆಯಿಂದ ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮನ್ನು ಸಾಲಗಾರರನ್ನಾಗಿ ಮಾಡುವ ಅಪಾಯ ಅಧಿಕವಾಗಿದೆ. ವ್ಯಾಪಾರಿಗಳು ಪಾಲುದಾರಿಕೆ ವ್ಯವಹಾರಗಳನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡೋದು ಒಳ್ಳೆಯದು.
ಮಿಥುನ ರಾಶಿ
ಷಡಾಷ್ಟಕ ಯೋಗ ಈ ರಾಶಿಯವರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಸೇವಿಸುವ ಆಹಾರದ ಬಗ್ಗೆ ಎಚ್ಚರಿಕೆ ಜೊತೆ ಯೋಗ, ವ್ಯಾಯಾಮದಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ಅನಿರೀಕ್ಷಿತ ವೆಚ್ಚಗಳು ಹೆಚ್ಚಾಗಿ ಆರ್ಥಿಕ ಕುಸಿತಕ್ಕೆ ಕಾರಣವಾಗಹುದು. ಮನೆ ದುರಸ್ತಿ, ವೈದ್ಯಕೀಯ ವೆಚ್ಚಗಳು ಹೆಚ್ಚಾಗಬಹುದು. ಈ ಸಂದರ್ಭದಲ್ಲಿ ಯಾರಿಗಾದ್ರೂ ಸಾಲ ನೀಡಬೇಕಾದ್ರೆ ನೂರು ಬಾರಿ ಯೋಚಿಸಿ. ಬರಬೇಕಾಗಿರುವ ಹಣ ನಿಮ್ಮ ಕೈ ಸೇರೋದು ವಿಳಂಬವಾಗಲಿದೆ.
ತುಲಾ ರಾಶಿ
ಈ ರಾಶಿಯವರು ಷಡಾಷ್ಟಕ ಯೋಗದಿಂದ ವೃತ್ತಿ ಜೀವನದಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಾರೆ. ಕೆಲಸದ ಒತ್ತಡದಿಂದ ನೆಮ್ಮದಿ ಇಲ್ಲದಂತಾಗುತ್ತದೆ. ಆದ್ರೆ ನಿಮ್ಮ ನಿರಂತರ ಶ್ರಮ ಮನಸ್ಸನ್ನು ಸದೃಢವಾಗಿಸುತ್ತದೆ. ಮೇಲಾಧಿಕಾರಿಗಳೊಂದಿಗೆ ಅನಗತ್ಯ ವಾದ ಮಾಡೋದನ್ನು ತಪ್ಪಿಸಿ. ನಿಮ್ಮ ಕೈಲಾದಷ್ಟು ಕೆಲಸವನ್ನು ಮಾಡಿ. ಕೆಲಸದ ಒತ್ತಡ ಹೆಚ್ಚಾಗಿ ನಿಮ್ಮ ಇಮೇಜ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇನ್ನು ಹೊಸ ವ್ಯವಹಾರ ಆರಂಭಿಸಲು ಅಥವಾ ವಿಸ್ತರಣೆಗೆ ಇದು ಸೂಕ್ತ ಸಮಯವಲ್ಲ. ಹಾಗೆಯೇ ಯಾವುದೇ ಶುಭಕಾರ್ಯಗಳನ್ನು ಮಾಡಲು ಹೋಗಬೇಡಿ.
ಕುಂಭ ರಾಶಿ
ಕುಂಭ ರಾಶಿಯವರ ಮೇಲೆ ಷಡಾಷ್ಟಕ ಯೋಗ ನಕಾರಾತ್ಮಕ ಪರಿಣಾಮ ಬೀರಲಿದೆ. ಸಣ್ಣ ವಿಷಯಗಳು ಸಹ ನಿಮ್ಮ ಒತ್ತಡವನ್ನು ಹೆಚ್ಚಳ ಮಾಡಿ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತವೆ. ಕುಟುಂಬದಲ್ಲಿ ಮನಸ್ತಾಪ ಉಂಟಾಗಿ ಜಗಳ ಸಂಭವಿಸಬಹುದು. ಅನಗತ್ಯ ವಿಷಯಗಳಲ್ಲಿ ಆಪ್ತರು, ಸಹೋದ್ಯೋಗಿಗಳೊಂದಿಗೆ ಚರ್ಚೆಗಳನ್ನು ಮಾಡಬೇಡಿ. ಈ ಚರ್ಚೆಗಳು ಭವಿಷ್ಯದಲ್ಲಿ ಮನಸ್ತಾಪಕ್ಕೆ ಕಾರಣವಾಗಬಹುದು. ಈ ಸಮಯದಲ್ಲಿ ತಾಳ್ಮೆ ಮತ್ತು ಸಂಯಮವನ್ನು ಕಾಪಾಡಿಕೊಳ್ಳುವುದು ಬುದ್ಧಿವಂತರ ಲಕ್ಷಣವಾಗಿದೆ.
ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

