ಚಂಪಾ ಷಷ್ಠಿಯ ವಿಶೇಷತೆ : ಶಿವ , ಸುಬ್ರಮಣ್ಯರ ಆರಾಧಾನ ದಿನ
ಚಂಪಾ ಷಷ್ಠಿ ಇದು ಶಿವ ಹಾಗೂ ಸುಬ್ರಮಣ್ಯನನ್ನು ಪೂಜಿಸುವ ಉತ್ಸವ . ಈ ಉತ್ಸವ ಆರು ದಿನಗಳ ಕಾಲ ನಡೆಯುತ್ತದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ಶಿವನು ಖಂಡೋಬ ರೂಪದಲ್ಲಿ ನೆಲೆಸಿದ್ದು ಚಂಪಾ ಷಷ್ಠಿಯಂದು ಈ ಭಾಗಗಳಲ್ಲಿ ಉತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಈ ಉತ್ಸವ ಮಾರ್ಗಶಿರ ಮಾಸದ ಶುಕ್ಲಪಕ್ಷದಂದು ನಡೆಯುತ್ತದೆ. ಕರ್ನಾಟಕದ ದಕ್ಷಿಣ ಭಾಗದಲ್ಲಿ ಸುಬ್ರಮಣ್ಯನನ್ನು ಈ ದಿನ ಆರಾಧಿಸುತ್ತಾರೆ. ಈ ಹಬ್ಬದ ಆಚರಣೆಯ ಮುಖ್ಯ ಉದ್ದೇಶ ಸಂತೋಷ, ನೆಮ್ಮದಿ , ಸುಖ, ಶಾಂತಿ ಆರೋಗ್ಯ , ಧನ್ಯಾತ್ಮಕ ಭಾವನೆಗಳು ಮನದಲ್ಲಿ ಉಂಟುಮಾಡಲಿವೆ ಎಂದು ಹೇಳುತ್ತಾರೆ.
ಮಹಾರಾಷ್ಟ್ರದ ಪೂನಾದ ಜೆಜುರಿ ಎಂಬ ಸ್ಥಳದಲ್ಲಿ ಖಂಡೋಬ ದೇವಾಲಯವಿದೆ. ಇಲ್ಲಿ ಆರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ.
ಈ ಹಬ್ಬದಲ್ಲಿ ಎಲ್ಲ ರೀತಿಯ ಜನಗಳು ಸೇರುತ್ತಾರೆ. ಈ ದೇವಾಲಯದಲ್ಲಿ ಖಂಡೋಬಗೆ ತರಕಾರಿ, ಹಣ್ಣು, ಮರ ಸೇಬು ಹಾಗು ಅರಶಿನ ಹುಡಿಯಿಂದ ದೇವರನ್ನು ಪೂಜಿಸುತ್ತಾರೆ. ಈ ಆರು ದಿನಗಳ ಕಾಲ ವೃತವನ್ನು ಮಾಡುತ್ತಾರೆ.
ಮುಂಜಾನೆ ಬೇಗ ಎದ್ದು ದೇವಾಲಯಕ್ಕೆ ತೆರಳಿ ದೀಪಹಚ್ಚುತ್ತಾರೆ. ಕೊನೆಯದಿನ ವಿಶೇಷವಾದ ನೈವೇದ್ಯ ಮಾಡಿ ಆರತಿ ಮಾಡುತ್ತಾರೆ.
ಒಮ್ಮೆ ಇಬ್ಬರು ರಾಕ್ಷಸರು ಮಲ್ಲ ಮತ್ತು ಮಣಿ ಇವರ ಹಾವಳಿ ಸಹಿಸಲಾರದೆ ದೇವತೆಗಳು ಋಷಿಮುನಿಗಳು ಜನರು ಶಿವನ ಮೊರೆ ಹೋಗಲು ಶಿವನು ಖಂಡೋಬ ರೂಪದಲ್ಲಿ ಬಂದು ಇಬ್ಬರು ರಾಕ್ಷಸರನ್ನು ಸೋಲಿಸಿದಾಗ ಇಬ್ಬರು ಶರಣಾಗುತ್ತಾರೆ.
ಶಿವನಲ್ಲಿ ವರಕೇಳಿದ ಮಲ್ಲ ತಮ್ಮಜೊತೆ ಖಂಡೋಬ ರೂಪದಲ್ಲಿ ಇದ್ದು ಜನರಮನೋಕಾಮನೆಗಳ್ಳನ್ನು ಈಡೇರುವಂತೆ ಮಾಡಿ ಎಂದು ಕೇಳಿದಾಗ ಆಗಲಿ ಎಂದ ಶಿವನು ಖಂಡೋಬ ರೂಪದಲ್ಲಿ ನೆಲೆಸಿದರು .
ಈ ದೇವಾಲಯಗಳಲ್ಲಿ ಖಂಡೋಬ ಮೂರ್ತಿ ಜೊತೆ ಮಲ್ಲ, ಮಣಿಗಳ ಮೂರ್ತಿಗಳನ್ನು ಇಡುತ್ತಾರೆ. ಹಾಗಾಗಿ ಇಲ್ಲಿ ಈ ದಿನ ಚಂಪಾ ಷಷ್ಠಿ ವಿಜೃಂಭಣೆ ಯಿಂದ ಆಚರಿಸುತ್ತಾರೆ.
ಇತ್ತ ಕರ್ನಾಟಕದ ದಕ್ಷಿಣ ಭಾಗದಲ್ಲಿ ಸುಬ್ರಮಣ್ಯ ದೇವಾಲಯ ಗಳಲ್ಲಿ ಚಂಪಾ ಷಷ್ಠಿ ಯಂದು ವಿಶೇಷ ಪೂಜೆ ಹಾಗೂ ರಥೊತ್ಸವ ವಿಜೃಂಭಣೆಯಿಂದ ನಡೆಯುತ್ತದೆ.
ಆಶ್ಲೇಷ ಬಲಿ , ಸರ್ಪಸಂಸ್ಕಾರ ನಾಗಪ್ರತಿಷ್ಠೆ , ಅಲ್ಲದೆ ವಿಶೇಷ ಸೇವೆಗಳಾದ ಮಡೆ ಮಡಸ್ತಾನ , ಮಡಸ್ತಾನ ನಡೆಯುತ್ತದೆ. ಈ ಸೇವೆಗಳಿಂದ ಸರ್ವರೋಗ ಗುಣವಾಗಿ ಮನೋಭಿಲಾಶೆಗಳು ಪೂರ್ಣಗೊಳ್ಳುತ್ತದೆ ಎಂಬ ನಂಬಿಕೆ ಈಗಲೂ ಇದೆ.
ಜೊತೆಗೆ ಮಹಿಳೆಯರು ಈ ದಿನ ಉಪವಾಸ ಇರುತ್ತಾರೆ. ಮದ್ಯಾಹ್ನ ಮಡಿಯಾಗಿ ಅನ್ನ, ಸಾರು ತಯಾರಿಸಿ ಬಾಳೆ ಎಲೆ ಊಟ ಮಾಡುತ್ತಾರೆ. ನಂತರ ಎಲೆಯನ್ನು ಮರದ ಗೆಲ್ಲುಗಳ ನಡುವೆ ಸಿಕ್ಕಿಸುತ್ತಾರೆ, ಹೀಗೆ ಮಾಡಿದರೆ ಐಶ್ವರ್ಯ ವೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದೆ.
ಈ ದಿನ ಕುಕ್ಕೆ ಸುಬ್ರಹ್ಮಣ್ಯ ದೇಗುಲ ಸೇರಿ ಕರ್ನಾಟಕ ಎಲ್ಲಾ ಸುಬ್ರಹ್ಮಣ್ಯ ದೇಗುಲಗಳಲ್ಲಿ ವಿಶೇಷ ರಥೋತ್ಸವ, ಪೂಜೆ ನಡೆಯುತ್ತದೆ.