ಬಾಗಲಕೋಟೆ ಕೈ ಅಭ್ಯರ್ಥಿ ವೀಣಾ ಕಾಶಪ್ಪನವರ್ಗೆ ಇದ್ಯಾ ರಾಜಕೀಯ ಅನುಭವ?
ರಾಜ್ಯದಲ್ಲಿರುವ 28 ಲೋಕಸಭಾ ಕ್ಷೇತ್ರಗಳ ಪೈಕಿ ಕೆಲವೇ ಕೆಲವು ಮಹಿಳೆಯರು ಸ್ಪರ್ಧಿಸಿದ್ದಾರೆ. ಅದರಲ್ಲಿಯೂ ಸುಮಲತಾ, ಶೋಭಾ ಕರಂದ್ಲಾಜೆ ಹಾಗೂ ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ್ ಸುದ್ದಿಯಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ವೀಣಾ ಬಗ್ಗೆ ಇಲ್ಲಿದೆ ಕಿರು ಪರಿಚಯ.
ಮಾವ ದಿ.ಎಸ್.ಆರ್. ಕಾಶಪ್ಪನವರ, ಅತ್ತೆ ಗೌರಮ್ಮ ಪತಿ ವಿಜಯಾನಂದರ ಪ್ರತಿ ಚುನಾವಣೆಯಲ್ಲೂ ಬೆನ್ನಿಗೆ ನಿಂತು ಚುನಾವಣೆ ಎದುರಿಸುವ ಮೂಲಕ ರಾಜಕೀಯ ಅನುಭವ ಪಡೆದುಕೊಂಡರು. ಅದೇ ಅವರನ್ನು ಜಿಲ್ಲಾ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೂ ಏರಿಸಿತು.
ದಾವಣಗೆರೆ ಪ್ರಸಿದ್ಧ ವ್ಯಾಪಾರಸ್ಥ ಜಿ.ಕೆ. ಕರಿಬಸಪ್ಪ ಮತ್ತು ಲತಾ ದಂಪತಿಯ ಪುತ್ರಿಯಾಗಿ 1981 ಆಗಸ್ಟ್ 21ಕ್ಕೆ ಜನಿಸಿದ ವೀಣಾ ಕಾಶಪ್ಪನವರ ಬಿಕಾಂ ಪದವೀಧರೆ.
ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಪತ್ನಿ ವೀಣಾ ಕಾಶಪ್ಪನವರ್.
ಬಾಗಲಕೋಟೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾಗಿರುವ ವೀಣಾ ಅವರಿಗೆ ಆರು ವರ್ಷದ ಅವಳಿ ಮಕ್ಕಳಿವೆ.
ನಲವತ್ತಕ್ಕೂ ಹೆಚ್ಚು ವರ್ಷ ಸಕ್ರಿಯ ರಾಜಕಾರಣದಲ್ಲಿ ತೊಡಗಿದ ಕಾಶಪ್ಪನವರ ಕುಟುಂಬದ ಸೊಸೆಯಾಗಿ ಹದಿನೈದು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ವೀಣಾ.
ಸರ್ಕಾರಿ ಅಧಿಕಾರಿಯಾಗಿ ಜನಸೇವೆ ಮಾಡಬೇಕೆಂದು ಕನಸು ಹೊತ್ತಿದ್ದ ವೀಣಾ, ಕಾಶಪ್ಪನವರ ಕುಟುಂಬದ ಸೊಸೆಯಾಗಿ ಬಂದಿದ್ದರಿಂದ ಜನಸೇವೆ ಮಾಡಲು ಅವಕಾಶ ಸಿಕ್ಕಂತಾಗಿದೆ.
ಮಾಜಿ ಸಚಿವ ದಿ. ಎಸ್.ಆರ್. ಕಾಶಪ್ಪನವರ ಹೆಸರಿನಲ್ಲಿ ಪ್ರತಿಷ್ಠಾಪನೆಗೊಂಡ ಎಸ್ಆರ್ಕೆ ಪ್ರತಿಷ್ಠಾನದ ಮೂಲಕ ಕಾಶಪ್ಪನವರ ಕುಟುಂಬ ವರ್ಷವಿಡಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ.
ವೀಣಾ ಕಾಶಪ್ಪನವರ್ ತಮ್ಮ ಅವಳಿ ಮಕ್ಕಳಾದ ಶಿವಶಂಕ್ರಪ್ಪ ಮತ್ತು ಶರಣಮ್ಮನ ಹುಟ್ಟು ಹಬ್ಬವನ್ನು ಉಚಿತ ಆರೋಗ್ಯ ತಪಾಸಣೆ, ಔಷಧ ವಿತರಿಸುವ ಮೂಲಕ ಆಚರಿಸುತ್ತಾರೆ.
ಪ್ರತಿ ವರ್ಷ ಜರುಗುವ ದಿ. ಎಸ್.ಆರ್. ಕಾಶಪ್ಪನವರ ಪುಣ್ಯಸ್ಮರಣೆಯಂದು ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಜೊತೆಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ.
ಸಾವಯವ ಕೃಷಿಯನ್ನು ರೈತರಿಗೆ ಪರಿಚಯಿಸಿ, ಅದರತ್ತ ರೈತರು ವಾಲುವಂತೆ ಮಾಡುವುದು ಕಾಶಪ್ಪನವರ ಕುಟುಂಬದ ಮೂಲ ಉದ್ದೇಶ. ಇದಕ್ಕಾಗಿ ಕೃಷಿ ಮೇಳ ಆಯೋಜಿಸುತ್ತಾರೆ.
ಉದ್ಯೋಗ ಮೇಳವನ್ನು ಆಯೋಜಿಸಿರುವ ಮೂಲಕ ತಮ್ಮ ಕ್ಷೇತ್ರದ ಯುವಕ, ಯುವತಿಯರಿಗೆ ಉದ್ಯೋಗ ಹುಡುಕಿಕೊಡಲು ನೆರವಾಗಿದ್ದಾರೆ.
ಯುವ ಜನಾಂಗವನ್ನು ಆಕರ್ಷಿಸಲು ಡಿಜಿಟಲ್ ಮಾಧ್ಯಮವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ವೀಣಾ.
ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
2019ರ ಲೋಕಸಭಾ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್ನಿಂದ ಟಿಕೆಟ್ ಪಡೆದ ಏಕೈಕ ಮಹಿಳೆ ಇವರು.
ಕ್ಷೇತ್ರದ ಹಾಲಿ ಸಂಸದ, ಬಿಜೆಪಿ ನಾಯಕ ಪಿ.ಸಿ.ಗದ್ದಿಗೌಡರ್ ಅವರು ಚುನಾವಣೆಯಲ್ಲಿ ಎದುರಾಳಿಯಾಗಿದ್ದಾರೆ.