'ನನ್ನ ರಾಷ್ಟ್ರೀಯ ಶಿಕ್ಷಣ ನೀತಿ’ ಸ್ಪರ್ಧೆಗೆ ಸಚಿವ ಅಶ್ವತ್ಥ ನಾರಾಯಣ ಚಾಲನೆ
ಬೆಂಗಳೂರು(ಸೆ.12): ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮತ್ತಷ್ಟುಜನಪ್ರಿಯಗೊಳಿಸುವ ಉದ್ದೇಶದಿಂದ ವಿದ್ಯಾಭಾರತಿ ರಾಷ್ಟ್ರೀಯ ಸಂಘಟನೆಯು ಆಯೋಜಿಸಿರುವ ‘ಮೈ ಎನ್ಇಪಿ’ (ನನ್ನ ರಾಷ್ಟ್ರೀಯ ಶಿಕ್ಷಣ ನೀತಿ) ಎಂಬ ರಾಷ್ಟ್ರೀಯ ಸ್ಪರ್ಧೆಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಶುಕ್ರವಾರ ಚಾಲನೆ ನೀಡಿದ್ದಾರೆ.
ವಿದ್ಯಾಭಾರತಿ ಸಂಸ್ಥೆ ನಗರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮೈಎನ್ಇಪಿ ವೆಬ್ಸೈಟ್ ಹಾಗೂ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಎನ್ಇಪಿ ಕುರಿತ ರಾಷ್ಟ್ರೀಯ ಸ್ಪರ್ಧೆಯಲ್ಲಿ ಹೆಚ್ಚು ಮಂದಿ ಭಾಗವಹಿಸಿ ಜನರಿಗೆ ತಲುಪುವಂತೆ ಮಾಡಬೇಕಿದೆ. ಜಗತ್ತಿಗೆ ವಿಶ್ವ ಗುರು ಭಾರತವಾಗಬೇಕಾದರೆ ಶಿಕ್ಷಣ ನೀತಿ ಉತ್ತಮವಾಗಿರಬೇಕು. ಅಂತಹ ನೀತಿಯನ್ನು 34 ವರ್ಷಗಳ ಬಳಿಕ ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿದೆ. ನೀತಿ ಜಾರಿ ಸಂಬಂಧ ಇನ್ನೊಂದು ವರ್ಷ ಕಾಲ ನಿರಂತರವಾಗಿ ಸಭೆಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ಕುಮಾರ್ ಮಾತನಾಡಿ, ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿ ಮಾಡಲು ಎಲ್ಲ ರೀತಿಯ ತಯಾರಿ ನಡೆದಿದೆ. ‘ಮೈ ಎನ್ಇಪಿ’ ಸ್ಪರ್ಧೆಯಲ್ಲಿ ಹೆಚ್ಚಿನ ಜನರು ಭಾಗವಹಿಸುವುದರಿಂದ ಜನಪ್ರಿಯತೆ ಜೊತೆಗೆ ಯಶಸ್ವಿಯೂ ಆಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಅರುಣ್ ಶಹಪೂರ ಮಾತನಾಡಿದರು. ಎನ್ಇಪಿ ಕರಡು ಸಮಿತಿ ಅಧ್ಯಕ್ಷ ಪ್ರೊ.ಕಸ್ತೂರಿರಂಗನ್ ಅವರು ವರ್ಚುಯಲ್ ವೇದಿಕೆಯಲ್ಲಿ ಭಾಗವಹಿಸಿದ್ದರು. ಬಯೋಕಾನ್ ಸಂಸ್ಥೆ ಮುಖ್ಯಸ್ಥರಾದ ಕಿರಣ್ ಮಜುಂದಾರ್ ಷಾ, ಬೆಂಗಳೂರು ವಿವಿ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್, ವಿದ್ಯಾಭಾರತಿ ಕರ್ನಾಟಕ ಶಾಖೆಯ ಉಪಾಧ್ಯಕ್ಷ ರಾಜಶೇಖರರೆಡ್ಡಿ ಉಪಸ್ಥಿತರಿದ್ದರು.
ಈ ಸ್ಪರ್ಧೆಯು 13 ಭಾಷೆ ಮತ್ತು ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. 9ರಿಂದ 12ನೇ ತರಗತಿ ಮಕ್ಕಳಿಗಾಗಿ ಎರಡು ನಿಮಿಷದ ಭಾಷಣ ಸ್ಪರ್ಧೆ, ಕೈಬರಹದ ಭಿತ್ತಪತ್ರ ಸ್ಪರ್ಧೆ, ಪ್ರಧಾನಿಗೆ ಪತ್ರ ಬರೆಯುವ ಸ್ಪರ್ಧೆ, 300 ಪದಗಳ ಪ್ರಬಂಧ ಸ್ಪರ್ಧೆ ಇರುತ್ತದೆ. ಪದವಿ ಹಂತದವರಿಗಾಗಿ ಹಾಗೂ ಸಾರ್ವಜನಿಕರಿಗಾಗಿ ಎರಡು ಪ್ರತ್ಯೇಕ ಸ್ಪರ್ಧೆಗಳು ಇರುತ್ತವೆ. ಕಿರುಚಿತ್ರ (2.20 ನಿಮಿಷ), ಡಿಜಿಟಲ್ ಪೋಸ್ಟರ್, ಪ್ರಿಂಟಿಂಗ್ ಮತ್ತು ಹ್ಯಾಂಡ್ಮೇಡ್ ಪೋಸ್ಟರ್, 8 ಟ್ವೀಟ್ಗಳ ಥ್ರೇಡ್ ಸ್ಪರ್ಧೆಗಳು ನಡೆಯಲಿವೆ. ಸೆ.25ರಿಂದ ಅ.2ರ ವರೆಗೆ ನಡೆಯಲಿದೆ.
ಪ್ರತಿ ವಿಭಾಗದಲ್ಲಿಯೂ ಪ್ರಥಮ ಬಹುಮಾನಕ್ಕೆ 10 ಸಾವಿರ, ದ್ವಿತೀಯ ಬಹುಮಾನಕ್ಕೆ 5 ಸಾವಿರ ಮತ್ತು ತೃತೀಯ ಬಹುಮಾನಕ್ಕೆ 3 ಸಾವಿರ ಹಾಗೂ ಸಮಾಧಾನಕರ ಬಹುಮಾನಗಳು ಮತ್ತು ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ ಎಂದು ವಿದ್ಯಾಭಾರತಿಯ ನಾಗರಾಜ ರೆಡ್ಡಿ ಮಾಹಿತಿ ನೀಡಿದರು.