ದಿನೇಶ್ ಕಲ್ಲಹಳ್ಳಿ ದೂರು ವಾಪಸ್, ಒಪ್ಪಿತ ಸೆಕ್ಸ್ ಮತ್ತು ಆ 5 ಕಾರಣ!
ಇಡೀ ರಾಜ್ಯ ಮತ್ತು ದೇಶದಲ್ಲಿ ಸಂಚಲನ ಮೂಡಿಸಿದ್ದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಈಗ ಹಲವು ತಿರುವು ಪಡೆದುಕೊಂಡಿದೆ. ಪೊಲೀಸ್ ವಿಚಾರಣೆ ವೇಳೆ ವರಸೆ ಬದಲಿಸಿದ್ದ ದಿನೇಶ್ ಕಲ್ಲಹಳ್ಳಿ ದೂರನ್ನೇ ವಾಪಸ್ ಪಡೆದುಕೊಂಡಿದ್ದಾರೆ. ಹಾಗಾದರೆ ದಿನೇಶ್ ಕಲ್ಲಹಳ್ಳಿ ದೂರು ವಾಪಸ್ ಪಡೆದುಕೊಳ್ಳಲು ಏನು ಕಾರಣ?
ಮಾಜಿ ಸಿಎಂ ಕುಮಾರಸ್ವಾಮಿ ಮಾಡಿದ್ದ ಡೀಲ್ ಆರೋಪಕ್ಕೆ ನೊಂದು ದೂರು ವಾಪಸ್ ಪಡೆದುಕೊಂಡಿದ್ದೇನೆ ಎಂದು ದಿನೇಶ್ ಹೇಳುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಮೇಲೆ ಲೈಂಗಿಕ ದೌರ್ಜನ್ಯ ದೂರು ನೀಡಿದ್ದೆ. ಆದರೆ ಪ್ರಕರಣ ಬೇರೆಯದೆ ತಿರುವು ಪಡೆದುಕೊಳ್ಳುತ್ತಿದೆ. ದೂರು ಹಿಂದಕ್ಕೆ ಪಡೆದುಕೊಳ್ಳಲು ದಿನೇಶ್ ಕಲ್ಲಹಳ್ಳಿಯವರೇ ಕೆಲವೊಂದು ಕಾರಣ ಕೊಟ್ಟಿದ್ದಾರೆ.
ಮಹಿಳೆಯರ ತೇಜೋವಧೆ ಆಗುತ್ತಿದೆ; ನ್ಯಾಯ ಕೊಡಿಸಬೇಕು ಎಂದು ಸಿಡಿ ಬಿಡುಗಡೆ ಮಾಡಿ ಅದನ್ನು ಪೊಲೀಸರ ಗಮನಕ್ಕೆ ತಂದಿದ್ದೆ. ಆದರೆ ಸಾಮಾಜಿಕ ತಾಣಗಳಲ್ಲಿ ಮಹಿಳೆಯರ ತೇಜೋವಧೆಯಾಗುತ್ತಿದ್ದು ದೂರು ಹಿಂಪಡೆಯುವ ನಿರ್ಧಾರ ಮಾಡಿದ್ದೇನೆ.
ಟೆಕ್ನಿಕಲ್ ಎವಿಡೆನ್ಸ್ ಇಲ್ಲ: ನಮ್ಮ ಬಳಿ ಇನ್ನು ಸಾಕಷ್ಟು ಟೆಕ್ನಿಕಲ್ ಎವಿಡೆನ್ಸ್ ಇಲ್ಲ. ಅಪರಿಚಿತರು ಕೊಟ್ಟ ಸಿಡಿಯನ್ನೇ ನ್ಯಾಯ ಸಿಗಲಿ ಎಂಬ ಉದ್ದೇಶದಿಂದ ಕೊಟ್ಟಿದ್ದೆ ಎಂದು ಕಲ್ಲಹಳ್ಳಿ ಹೇಳ್ತಾರೆ.
ಒತ್ತಡ ಬಂತಾ? ಸಹಜವಾಗಿಯೇ ಪ್ರಭಾವಿಗಳಿಗೆ ಸಂಬಂಧಿಸಿದ ಇಂಥ ವಿಚಾರಗಳು ಹೊರಗೆ ಬಂದಾಗ ಬೆದರಿಕೆ ಕರೆಗಳು ಮತ್ತು ಒತ್ತಡ ಬರುವುದು ಸಾಮಾನ್ಯ. ಇದೇ ಒತ್ತಡದ ಕಾರಣಕ್ಕೆ ದಿನೇಶ್ ಸಿಡಿ ದೂರು ಹಿಂದಕ್ಕೆ ಪಡೆದ್ರಾ?
ಕುಮಾರಸ್ವಾಮಿ ಹೇಳಿದಂತೆ ಆಗಿದೆಯಾ? ಪ್ರಕರಣದಲ್ಲಿ ಡೀಲ್ ಆಗಿದೆ. ಇಂಥ ಸಿಡಿ ಇದೆ ಎನ್ನುವವವರನ್ನು ಮೊದಲು ಒಳಗೆ ಹಾಕಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹ ಮಾಡಿದ್ದರು. ಅಂಥ ಸಂಗತಿಗಳು ಯಾವುದಾದರೂ ಜರುಗಿತಾ?
ಭದ್ರತೆ ಕೊರತೆ; ನನ್ನ ಪ್ರಾಣಕ್ಕೆ ಬೆದರಿಕೆ ಇದ್ದು ಭದ್ರತೆ ಬೇಕು ಎಂದು ದಿನೇಶ್ ಹೇಳಿದ್ದರು. ಸರ್ಕಾರದ ಆಯಕಟ್ಟಿನ ಸ್ಥಾನದಲ್ಲಿ ಇದ್ದವರ ಮೇಲೆ ಆರೋಪ ಮಾಡಿದ್ದು ದಿನೇಶ್ ಅವರಿಗೆ ಭದ್ರತೆ ಸರಿಯಾಗಿ ಸಿಗಲಿಲ್ಲವಾ?
ಒಪ್ಪಿತ ಸೆಕ್ಸ್; ವಿಡಿಯೋ ದೃಶ್ಯಾವಳಿಗಳು ಪ್ರಕರಣವನ್ನು ಒಪ್ಪಿತ ಸೆಕ್ಸ್ ಎಂದೇ ತೋರಿಸುವಂತೆ ಮಾಡಿದ್ದವು. ಆಡಿಯೋ ಸಾಕ್ಷಿ ಸಹ ಹಾಗೇ ಇತ್ತು. ಕಾನೂನು ಕುಣಿಕೆ ಬಿಗಿಯಾಗುವುದು ಕಷ್ಟ ಸಾಧ್ಯ ಎಂಬ ವಿಚಾರವೂ ಕಲ್ಲಹಳ್ಳಿಗೆ ಮನವರಿಕೆ ಆಯಿತಾ?