'ಹಿಂಗೆಲ್ಲಾ ಆಡೋದಾದ್ರೆ IPL ಆಡೋಕೆ ಬರ್ಬೇಡ': ಸೆಹ್ವಾಗ್ ಹೀಗಂದಿದ್ದು ಯಾರಿಗೆ? ಯಾಕೆ?
ಗುವಾಹಟಿ(ಏ.09): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಭರ್ಜರಿ ಚಾಲನೆ ಸಿಕ್ಕಿದ್ದು, ಕ್ರಿಕೆಟ್ ಅಭಿಮಾನಿಗಳು ಹೊಡಿಬಡಿ ಕ್ರಿಕೆಟ್ ಆಟವನ್ನು ಎಂಜಾಯ್ ಮಾಡುತ್ತಿದ್ದಾರೆ. ಕೆಲವು ತಂಡಗಳು ಗೆಲುವಿನ ನಾಗಾಲೋಟ ಮುಂದುವರೆಸಿದ್ದರೆ, ಮತ್ತೆ ಕೆಲವು ತಂಡಗಳು ಇನ್ನೂ ಗೆಲುವಿನ ಖಾತೆ ತೆರೆಯಲು ಪರದಾಡುತ್ತಿವೆ. ಹೀಗಿರುವಾಗಲೇ ಓರ್ವ ಕ್ರಿಕೆಟಿಗನ ಮೇಲೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಅಷ್ಟಕ್ಕೂ ಯಾರು ಆ ಕ್ರಿಕೆಟಿಗ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನವರಿಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಭಾರೀ ನಿರಾಸೆ ಎದುರಾಗಿದ್ದು, ಮೊದಲ ಗೆಲುವಿಗಾಗಿ ಪರಿತಪಿಸುತ್ತಿದೆ.
ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ದ ನಡೆದ ಪಂದ್ಯದಲ್ಲಿ ಡೇವಿಡ್ ವಾರ್ನರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 57 ರನ್ ಹೀನಾಯ ಸೋಲು ಅನುಭವಿಸಿತು. ಈ ಮೂಲಕ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಕಂಡ ಮೊದಲ ತಂಡ ಎನ್ನುವ ಕುಖ್ಯಾತಿಗೆ ಡೆಲ್ಲಿ ಗುರಿಯಾಗಿದೆ.
ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿಕೊಂಡಿರುವ ಆಸ್ಟ್ರೇಲಿಯಾದ ಎಡಗೈ ಬ್ಯಾಟರ್ ಡೇವಿಡ್ ವಾರ್ನರ್, ರಾಯಲ್ಸ್ ಎದುರು ಅರ್ಧಶತಕ ಸಿಡಿಸಿದರಾದರೂ, ತಂಡವನ್ನು ಸೋಲಿನಿಂದ ಪಾರು ಮಾಡಲು ಯಶಸ್ವಿಯಾಗಲಿಲ್ಲ.
ರಾಯಲ್ಸ್ ನೀಡಿದ್ದ 200 ರನ್ಗಳ ಕಠಿಣ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 1 ರನ್ಗೆ 2 ವಿಕೆಟ್ ಕಳೆದುಕೊಂಡಿತ್ತು. ಇನ್ನು ನಾಯಕ ಡೇವಿಡ್ ವಾರ್ನರ್ 55 ಎಸೆತಗಳನ್ನು ಎದುರಿಸಿ ಕೇವಲ 65 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು.
ವಾರ್ನರ್ ಮಂದಗತಿಯ ಬ್ಯಾಟಿಂಗ್, ಡೆಲ್ಲಿ ಮಾಜಿ ನಾಯಕ ಸೆಹ್ವಾಗ್ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಹೀಗೆಲ್ಲಾ ಆಡುವುದಾದರೇ, ನೀನು ಐಪಿಎಲ್ ಆಡುವುದೇ ಬೇಡ ಎಂದು ವೀರೂ, ಆಸೀಸ್ ಬ್ಯಾಟರ್ ಮೇಲೆ ಕಿಡಿಕಾರಿದ್ದಾರೆ.
ನಾವೀಗ ಅವರಿಗೆ ಇಂಗ್ಲೀಷ್ನಲ್ಲಿಯೇ ಹೇಳಬೇಕು, ಅದನ್ನು ಕೇಳಿದರೆ ವಾರ್ನರ್ಗೆ ಕೊಂಚ ನೋವಾಗಬಹುದು. ಡೇವಿಡ್ ನೀನು ಕೇಳುತ್ತೀಯಾ ಎನ್ನುವುದಾದರೆ, ಚೆನ್ನಾಗಿ ಆಡು. 25 ಎಸೆತಗಳಲ್ಲಿ 50 ರನ್ ಬಾರಿಸು. ಜೈಸ್ವಾಲ್ ಅವರನ್ನು ನೋಡಿ ಕಲಿ. ಆತ 25 ಬಾಲ್ಗಳಲ್ಲಿ ಫಿಫ್ಟಿ ಬಾರಿಸಿದ. ಒಂದು ವೇಳೆ ಹಾಗೆ ಆಡಲು ಸಾಧ್ಯವಿಲ್ಲ ಎನ್ನುವುದಾದರೇ, ದಯವಿಟ್ಟು ಐಪಿಎಲ್ ಆಡಲು ಬರಬೇಡ ಎಂದು ಸೆಹ್ವಾಗ್, Cricbuzz ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಡೇವಿಡ್ ವಾರ್ನರ್ 55 ರಿಂದ 60 ರನ್ ಬಾರಿಸುವುದಕ್ಕಿಂತ 30 ರನ್ ಬಾರಿಸಿ ಔಟಾಗುವುದೇ ಒಳ್ಳೆಯದೆನಿಸುತ್ತದೆ. ಯಾಕೆಂದರೆ ಕೊನೆಯಲ್ಲಿ ರೋವ್ಮನ್ ಪೋವೆಲ್, ಇಶಾನ್ ಪೋರೆಲ್ ಅವರಂತಹ ಬ್ಯಾಟರ್ಗಳಿಗೆ ಹೆಚ್ಚಿನ ಬಾಲ್ ಎದುರಿಸಲು ಅವಕಾಶ ಸಿಗುತ್ತದೆ. ವಾರ್ನರ್ ಹೆಚ್ಚು ಬಾಲ್ ವ್ಯರ್ಥ ಮಾಡುವುದರಿಂದ ಇಂತಹ ಆಟಗಾರರಿಗೆ ಸ್ಪೋಟಕ ಆಟವಾಡಲು ಹೆಚ್ಚು ಬಾಲ್ ಸಿಗುವುದಿಲ್ಲ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಸುನಿಲ್ ಗವಾಸ್ಕರ್ ಕೂಡಾ, ಸೆಹ್ವಾಗ್ ಅವರಂತೆಯೇ ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್ನಲ್ಲಿ 6 ಸಾವಿರಕ್ಕೂ ಅಧಿಕ ರನ್ ಬಾರಿಸಿದ ಅನುಭವವಿರುವ ಬ್ಯಾಟರ್ನಿಂದ ಈ ರೀತಿಯ ಬ್ಯಾಟಿಂಗ್ ನಿರೀಕ್ಷಿಸಲಿಲ್ಲ. ನೀವೊಬ್ಬರು ನಾಯಕರಾಗಿ ಜವಾಬ್ದಾರಿಯುತ ಆಟವಾಡಬೇಕಿದೆ. ಈ ಸೋಲಿಗೆ ನೀವೇ ಹೊರೆ ಹೊರಬೇಕಿದೆ ಎಂದು ಗವಾಸ್ಕರ್ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸದ್ಯ ಟೂರ್ನಿಯಲ್ಲಿ ಸತತ ಮೂರು ಸೋಲು ಕಂಡಿದ್ದು, ತಮ್ಮ ಮುಂದಿನ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಏಪ್ರಿಲ್ 11ರಂದು ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಾದರೂ ಡೆಲ್ಲಿ ಗೆಲುವಿನ ಖಾತೆ ತೆರೆಯುತ್ತಾ ಕಾದು ನೋಡಬೇಕಿದೆ.