ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಆಂಗ್ಲರ ನೆಲದಿಂದಲೇ ವಾರ್ನಿಂಗ್ ಕೊಟ್ಟ ರವಿಚಂದ್ರನ್ ಅಶ್ವಿನ್..!
ಲಂಡನ್: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಬಳಿಕ ಇಂಗ್ಲೆಂಡ್ನಲ್ಲೇ ಬೀಡುಬಿಟ್ಟಿದೆ. ಆಗಸ್ಟ್ ತಿಂಗಳಾರಂಭದಿಂದಲೇ ಟೀಂ ಇಂಡಿಯಾ ಆತಿಥೇಯ ಇಂಗ್ಲೆಂಡ್ ಎದುರು 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಹೀಗಿರುವಾಗಲೇ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್ ತಂಡಕ್ಕೆ ಇಂಗ್ಲೆಂಡ್ ನೆಲದಿಂದಲೇ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸೌಥಾಂಪ್ಟನ್ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರು ವಿಶ್ರಾಂತಿಗೆ ಜಾರಿದ್ದಾರೆ.
ಇಂಗ್ಲೆಂಡ್ ವಿರುದ್ದ 5 ಪಂದ್ಯಗಳ ದೀರ್ಘಕಾಲಿಕ ಟೆಸ್ಟ್ ಸರಣಿಗೂ ಮುನ್ನ ಟೀಂ ಇಂಡಿಯಾ ಆಟಗಾರರಿಗೆ 20 ದಿನಗಳ ಕಾಲ ವಿಶ್ರಾಂತಿ ನೀಡಲಾಗಿದೆ.
ಎಲ್ಲಾ ಕ್ರಿಕೆಟಿಗರು ತಮ್ಮ ಕುಟುಂಬ ಹಾಗೂ ಸ್ನೇಹಿತರೊಟ್ಟಿಗೆ ಬಿಡುವಿನ ಸಮಯವನ್ನು ಎಂಜಾಯ್ ಮಾಡುತ್ತಿದ್ದರೆ, ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮದೇ ಆದ ಗೇಮ್ ಪ್ಲಾನ್ ರೂಪಿಸುತ್ತಿದ್ದಾರೆ.
ಹೌದು, ಅಶ್ವಿನ್ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಸರ್ರೆ ತಂಡದ ಪರ ಕಣಕ್ಕಿಳಿಯುವ ಮೂಲಕ 4 ದಿನಗಳ ಪಂದ್ಯದಲ್ಲಿ ಸೋಮರ್ಸೆಟ್ ತಂಡದ ಬ್ಯಾಟ್ಸ್ಮನ್ಗಳನ್ನು ಸಿಂಹಸ್ವಪ್ನದಂತೆ ಕಾಡಿದ್ದಾರೆ.
ಸರ್ರೆ ತಂಡದ ಪರ ಎರಡನೇ ಇನಿಂಗ್ಸ್ನಲ್ಲಿ ಅಶ್ವಿನ್ 15 ಓವರ್ ಬೌಲಿಂಗ್ ಮಾಡಿ ಕೇವಲ 27 ರನ್ ನೀಡಿ 6 ವಿಕೆಟ್ ಕಬಳಿಸುವ ಮೂಲಕ ಸೋಮರ್ಸೆಟ್ ತಂಡವು ಕೇವಲ 69 ರನ್ಗಳಿಗೆ ಆಲೌಟ್ ಮಾಡುವಲ್ಲಿ ಅಶ್ವಿನ್ ಪ್ರಮುಖ ಪಾತ್ರ ವಹಿಸಿದ್ದಾರೆ.
ಮೊದಲ ಇನಿಂಗ್ಸ್ನಲ್ಲಿ ಒಂದು ವಿಕೆಟ್ ಕಬಳಿಸಿದ್ದ ಅಶ್ವಿನ್, ಎರಡನೇ ಇನಿಂಗ್ಸ್ನಲ್ಲಿ 6 ವಿಕೆಟ್ ಕಬಳಿಸಿ, ಮುಂಬರುವ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ತಾನೆಷ್ಟು ಅಪಾಯಕಾರಿ ಬೌಲರ್ ಆಗಬಲ್ಲೆ ಎನ್ನುವ ಎಚ್ಚರಿಕೆಯನ್ನು ಅಶ್ವಿನ್ ರವಾನಿಸಿದ್ದಾರೆ.
ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟೆಸ್ಟ್ ಸರಣಿಯು ಆಗಸ್ಟ್ 04ರಿಂದ ಆರಂಭವಾಗಲಿದ್ದು, ವೇಗಿಗಳ ಸ್ವರ್ಗ ಎನಿಸಿರುವ ಪಿಚ್ನಲ್ಲಿ ಅಶ್ವಿನ್ ಮತ್ತೊಮ್ಮೆ ಕಮಾಲ್ ಮಾಡ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.