ಸಂಕಷ್ಟದಲ್ಲಿ ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ, ತಂಡದ ಆಯ್ಕೆಯಲ್ಲಿ ಗೋಲ್ಮಾಲ್ ಆರೋಪ
ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಅಗರ್ಕರ್ ವಿರುದ್ದ ಗಂಭೀರ ಆರೋಪ ಕೇಳಿಬಂದಿದೆ. ಐರ್ಲೆಂಡ್, ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡ ಆಯ್ಕೆಯಲ್ಲಿ ಅಚ್ಚರಿ ನೀಡಿದ್ದ ಸಮಿತಿಗೆ ಇದೀಗ ಸಂಕಷ್ಟ ಎದುರಾಗಿದೆ. ಒಬ್ಬ ಆಟಗಾರನ ಆಯ್ಕೆ ಸಮಸ್ಯೆಯಾಗಿದೆ.

ಟೀಂ ಇಂಡಿಯಾ ಆಯ್ಕೆ ಸಮಿತಿಗೆ ಸಂಕಷ್ಟ
ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸ, ಏಷ್ಯನ್ ಗೇಮ್ಸ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡ ಆಯ್ಕೆ ಮಾಡಲಾಗಿದೆ. ವೈಭವ್ ಸೂರ್ಯವಂಶಿ ಆಯ್ಕೆಗೆ ದೇಶದೆಲ್ಲೆಡೆ ಸಂಭ್ರಮ ವ್ಯಕ್ತವಾಗಿದೆ. ಉತ್ತಮ ಆಯ್ಕೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಆಯ್ಕೆ ಸಮಿತಿ ಸದಸ್ಯರು ಹಾಗೂ ಮುಖ್ಯಸ್ಥರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದೆ. ಒರ್ವ ಸದಸ್ಯನ ಆಯ್ಕೆ ಹಿಂದೆ ಗೋಲ್ಮಾಲ್ ನಡೆದಿದೆ ಅನ್ನೋ ಆರೋಪ ಕೇಳಿ ಬಂದಿದೆ.
ದೇಶಿ ಕ್ರಿಕೆಟ್ ಆಡದೇ ಹೇಗೆ ಸೆಲೆಕ್ಟ್ ಮಾಡಿದ್ದೀರೀ?
ಐರ್ಲಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸ, ಏಷ್ಯನ್ ಗೇಮ್ಸ್ ಟೂರ್ನಿಗೆ ಆಯ್ಕೆ ಮಾಡಿದ ತಂಡಗಳಲ್ಲಿ ಹರ್ಷಿತ್ ರಾಣಾ ಸ್ಥಾನ ಪಡೆದಿದ್ದಾರೆ. ಈ ಆಯ್ಕೆಯನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಶಡಗೋಪನ್ ರಮೇಶನ್ ಪ್ರಶ್ನಿಸಿದ್ದಾರೆ. ಎಲ್ಲರೂ ದೇಶಿ ಕ್ರಿಕೆಟ್ನಲ್ಲಿ ಫಿಟ್ನೆಸ್ ಪ್ರೂವ್ ಮಾಡಿದರೆ ಆಯ್ಕೆಯಲ್ಲಿ ಪರಿಗಣಿಸಲಾಗುತ್ತೆ ಅನ್ನೋ ನಿಯಮ ಇದ್ದರೂ ಹರ್ಷಿತ್ ರಾಣಾ ಆಯ್ಕೆ ಹೇಗಾಯಿತು ಎಂದು ಶಡಗೋಪನ್ ರಮೇಶ್ ಪ್ರಶ್ನಿಸಿದ್ದಾರೆ.
ಇಂಜುರಿ ಬಳಿಕ ಯಾವ ಟೂರ್ನಿ ಆಡಿದ್ದಾರೆ
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಯಾರೆ ಆದರೂ ಇಂಜುರಿ ಬಳಿಕ ಫಿಟ್ನೆಸ್ ಸಾಬೀತು ಪಡಿಸಿ ಬನ್ನಿ ಎಂದ ಆಯ್ಕೆ ಸಮಿತಿ, ಇತ್ತೀಚೆಗೆ ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿಗೆ ದೇಶಿ ಟೂರ್ನಿ ಆಡಿ ಪ್ರೂವ್ ಮಾಡಲು ಸೂಚಿಸಿದೆ. ಆದರೆ ಹರ್ಷಿತ್ ರಾಣಾ ಮೊಣಕಾಲಿನ ಗಾಯದ ಬಳಿಕ ಯಾವುದೇ ದೇಶಿ ಟೂರ್ನಿ ಆಡಿಲ್ಲ. ಆದರೆ ಎಲ್ಲಾ ತಂಡಕ್ಕೂ ಆಯ್ಕೆ ಮಾಡಲಾಗಿದೆ ಇದು ಹೇಗೆ ಸಾಧ್ಯ ಎಂದು ಶಡಗೋಪನ್ ರಮೇಶ್ ಪ್ರಶ್ನಿಸಿದ್ದಾರೆ.
ಶ್ರೇಯಸ್ ಅಯ್ಯರ್ಗೂ ಹಾಕಿದ್ದ ರೂಲ್ಸ್ ಈಗ ಇಲ್ಲವೆ?
ಟೀಂ ಇಂಡಿಯಾ ನಾಯಕನಾಗಿರುವ ಶ್ರೇಯಸ್ ಅಯ್ಯರ್ ನ್ಯೂಜಿಲೆಂಡ್ ವಿರುದ್ದ ಸರಣಿಗೂ ಮೊದಲು ಇಂಜುರಿ ಕಾರಣದಿಂದ ಫಿಟ್ನೆಸ್ ಪ್ರೂವ್ ಮಾಡಲು ಹೇಳಿದ್ದರು. ಶ್ರೇಯಸ್ ಅಯ್ಯರ್ ವಿಜಯ್ ಹಜಾರೆ ಟೂರ್ನಿ ಆಡಿ ಸಾಬೀತು ಪಡಿಸಿದ್ದರು. ಆದರೆ ಹರ್ಷಿತ್ ರಾಣಾ ಇಂಜುರಿ ಬಳಿಕ ಯಾವುದೇ ದೇಶಿ ಟೂರ್ನಿ ಆಡಿಲ್ಲ. ನೇರವಾಗಿ ಫಿಟ್ನೆಸ್ ಸಾಬೀತುಪಡಿಸದೇ ನೇರವಾಗಿ ಆಯ್ಕೆಯಾಗಿದ್ದು ಯಾಕೆ? ಎಂದು ಶಡಗೋಪನ್ ರಮೇಶ್ ಪ್ರಶ್ನಿಸಿದ್ದಾರೆ.
ಶಮಿಗೆ ಅವಕಾಶ ಯಾಕಿಲ್ಲ
ಇಂಜುರಿ ಕಾರಣದಿಂದ ಹರ್ಷಿತ್ ರಾಣಾ ಐಪಿಎಲ್ ಕೂಡ ಆಡಿಲ್ಲ. ಅತ್ತ ಮೊಹಮ್ಮದ್ ಶಮಿ ರಣಜಿ, ಐಪಿಎಲ್ ಸೇರಿದಂತೆ ಎಲ್ಲಾ ಟೂರ್ನಿ ಆಡುತ್ತಿದ್ದಾರೆ. ತಾನೂ ಈಗಲೂ ಫಿಟ್ ಹಾಗೂ ಮಾರಕ ವೇಗಿ ಅನ್ನೋದು ಸಾಬೀತುಪಡಿಸುತ್ತಲೇ ಇದ್ದಾರೆ. ಆದರೂ ಬಿಸಿಸಿಐ ಕಣ್ಣೆತ್ತಿ ನೋಡುತ್ತಿಲ್ಲ. ಈ ರೀತಿಯ ಧೋರಣೆ ಯಾಕೆ ಎಂದು ಶಡಗೋಪನ್ ಪ್ರಶ್ನಿಸಿದ್ದಾರೆ.
ವೈಭವ್ ಆಯ್ಕೆ ಮಾಡಿ ಗಮನ ಬೇರೆಡೆ ಸೆಳೆಯಿತಾ ಆಯ್ಕೆ ಸಮಿತಿ
ವೈಭವ್ ಸೂರ್ಯವಂಶಿಯನ್ನು ಟಿ20 ತಂಡಕ್ಕೆ ಆಯ್ಕೆ ಮಾಡೋ ಮೂಲಕ ಬಿಸಿಸಿಐ, ಆಟಗಾರರು ಹಾಗೂ ದೇಶದ ಗಮನವನ್ನು ಬೇರೆಗೆ ಸೆಳೆಯಲಾಯಿತು? ಟೀಂ ಇಂಡಿಯಾ ಆಯ್ಕೆ ಹಿಂದೆ ಗೋಲ್ಮಾಲ್ ನಡೆದಿದೆಯಾ ಅನ್ನೋ ಪ್ರಶ್ನೆಗಳು ಇದೀಗ ಸೋಶಿಯಲ್ ಮೀಡಿಯಾಲ್ಲಿ ಕೇಳಿ ಬರುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

