ವಿಂಡೀಸ್ ಎದುರಿನ 3ನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಮಹತ್ವದ ಬದಲಾವಣೆ?
ಪೋರ್ಟ್ ಆಫ್ ಸ್ಪೇನ್: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ, ಏಕದಿನ ಸರಣಿ ಕ್ಲೀನ್ಸ್ವೀಪ್ ಮಾಡಲು ಎದುರು ನೋಡುತ್ತಿದೆ. ಈಗಾಗಲೇ ಮೊದಲೆರಡು ಪಂದ್ಯಗಳನ್ನು ಗೆದ್ದು ಏಕದಿನ ಸರಣಿ ಕೈವಶ ಮಾಡಿಕೊಂಡಿರುವ ಟೀಂ ಇಂಡಿಯಾ, ಎರಡು ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ವಿಂಡೀಸ್ ಎದುರಿನ ಮೂರನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಇಲ್ಲಿದೆ ನೋಡಿ

Image credit: Getty
1. ಶಿಖರ್ ಧವನ್
ಟೀಂ ಇಂಡಿಯಾ ನಾಯಕ ಶಿಖರ್ ಧವನ್, ಮೊದಲ ಏಕದಿನ ಪಂದ್ಯದಲ್ಲಿ ಆಕರ್ಷಕ 97 ರನ್ ಚಚ್ಚಿದ್ದರು. ಎರಡನೇ ಪಂದ್ಯದಲ್ಲಿ ಧವನ್ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರು. ಹೀಗಾಗಿ ಮೂರನೇ ಪಂದ್ಯದಲ್ಲಿ ನಾಯಕನಾಗಿ ಹಾಗೂ ಬ್ಯಾಟರ್ ಆಗಿ ಯಶಸ್ವಿಯಾಗಲು ಎದುರು ನೋಡುತ್ತಿದ್ದಾರೆ.
2. ಶುಭ್ಮನ್ ಗಿಲ್
ಶಿಖರ್ ಧವನ್ ಜತೆಗೆ ಯುವ ಬ್ಯಾಟರ್ ಶುಭ್ಮನ್ ಗಿಲ್, ಭಾರತ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಡುತ್ತಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ಉತ್ತಮ ಆರಂಭ ಪಡೆದಿದ್ದ ಗಿಲ್, ಇದೀಗ ಕೊನೆಯ ಪಂದ್ಯದಲ್ಲಿ ದೊಡ್ಡ ಮೊತ್ತ ಕಲೆಹಾಕಲು ಎದುರು ನೋಡುತ್ತಿದ್ದಾರೆ
Image credit: PTI
3. ಶ್ರೇಯಸ್ ಅಯ್ಯರ್
ಹಂಗಾಮಿ ಉಪನಾಯಕ ಶ್ರೇಯಸ್ ಅಯ್ಯರ್, ಮೊದಲೆರಡು ಏಕದಿನ ಪಂದ್ಯಗಳಲ್ಲೂ ಆಕರ್ಷಕ ಅರ್ಧಶತಕ ಸಿಡಿಸಿದ್ದು, ಮೂರನೇ ಪಂದ್ಯದಲ್ಲಿ ಶತಕ ಸಿಡಿಸುವ ಯತ್ನ ನಡೆಸುವುದಾಗಿ ತಿಳಿಸಿದ್ದಾರೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಶ್ರೇಯಸ್ ಅಯ್ಯರ್ ಮೂರನೇ ಕ್ರಮಾಂಕದಲ್ಲಿ ಸ್ಥಿರ ಪ್ರದರ್ಶನ ತೋರುತ್ತಿದ್ದಾರೆ.
4. ಸೂರ್ಯಕುಮಾರ್ ಯಾದವ್
ಟೀಂ ಇಂಡಿಯಾ ಪ್ರತಿಭಾನ್ವಿತ ಬ್ಯಾಟರ್ ಸೂರ್ಯಕುಮಾರ್ ಯಾದವ್, ಮೊದಲೆರಡು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದರು. ಮೊದಲೆರಡು ಪಂದ್ಯಗಳಿಂದ ಸೂರ್ಯ ಕೇವಲ 22 ರನ್ ಬಾರಿಸಿದ್ದರು. ಕೊನೆಯ ಪಂದ್ಯದಲ್ಲಿ ಫಾರ್ಮ್ಗೆ ಮರಳಲು ಸೂರ್ಯಕುಮಾರ್ ಯಾದವ್ ಚಿತ್ತ ನೆಟ್ಟಿದ್ದಾರೆ.
Sanju Samson
5. ಸಂಜು ಸ್ಯಾಮ್ಸನ್
ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಕಳೆದ ಪಂದ್ಯದಲ್ಲಿ ಸಮಯೋಚಿತ ಅರ್ಧಶತಕ ಬಾರಿಸಿದ್ದರು. ಇದೀಗ ಸಂಜು ಮತ್ತೊಮ್ಮೆ ವಿಕೆಟ್ ಕೀಪಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಗಮನಾರ್ಹ ಪ್ರದರ್ಶನ ತೋರಲು ಎದುರು ನೋಡುತ್ತಿದ್ದಾರೆ.
6. ದೀಪಕ್ ಹೂಡಾ
ಪ್ರತಿಭಾನ್ವಿತ ಬ್ಯಾಟರ್ ಹೂಡಾ ಕೂಡಾ ಮೊದಲೆರಡು ಪಂದ್ಯಗಳಲ್ಲಿ ಉತ್ತಮ ಆರಂಭ ಪಡೆದರಾದರೂ, ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲವಾಗಿದ್ದಾರೆ. ಮೂರನೇ ಏಕದಿನ ಪಂದ್ಯದಲ್ಲಿ ದೀಪಕ್ ಹೂಡಾ ಯಾವ ರೀತಿ ಪ್ರದರ್ಶನ ತೋರಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ
7. ರವೀಂದ್ರ ಜಡೇಜಾ
ಅನುಭವಿ ಆಲ್ರೌಂಡರ್ ಜಡೇಜಾ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಮೂರನೇ ಪಂದ್ಯಕ್ಕೆ ಸಂಪೂರ್ಣ ಫಿಟ್ ಆದರೆ ಯುಜುವೇಂದ್ರ ಚಹಲ್ಗೆ ವಿಶ್ರಾಂತಿ ಸಿಗಲಿದ್ದು, ಜಡ್ಡು ತಂಡ ಕೂಡಿಕೊಳ್ಳಲಿದ್ದಾರೆ.
8. ಅಕ್ಷರ್ ಪಟೇಲ್
ಕಳೆದ ಏಕದಿನ ಪಂದ್ಯದಲ್ಲಿ ಅಜೇಯ ಅರ್ಧಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದ ಅಕ್ಷರ್ ಪಟೇಲ್ ಇಂದು ಕೂಡಾ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
9. ಶಾರ್ದೂಲ್ ಠಾಕೂರ್
ಅನುಭವಿ ವೇಗಿ ಮೊಹಮ್ಮದ್ ಶಮಿ ಅನುಪಸ್ಥಿತಿಯಲ್ಲಿ ಶಾರ್ದೂಲ್ ಠಾಕೂರ್ ಮಹತ್ವದ ಸಂದರ್ಭದಲ್ಲಿ ವಿಕೆಟ್ ಕಬಳಿಸುವ ಮೂಲಕ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಶಾರ್ದೂಲ್ ಠಾಕೂರ್ ಮೊದಲೆರಡು ಪಂದ್ಯಗಳಿಂದ 5 ವಿಕೆಟ್ ಕಬಳಿಸಿದ್ದು, ಸರಣಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದಾರೆ.
Image credit: Getty
10. ಮೊಹಮ್ಮದ್ ಸಿರಾಜ್
ಹೈದರಾಬಾದ್ ಮೂಲದ ಪ್ರತಿಭಾನ್ವಿತ ವೇಗಿ ಮೊಹಮ್ಮದ್ ಸಿರಾಜ್ ಶಿಸ್ತುಬದ್ದ ದಾಳಿ ನಡೆಸುವ ಮೂಲಕ ಗಮನ ಸೆಳೆದಿದ್ದು, ಮೂರನೇ ಪಂದ್ಯದಲ್ಲೂ ವಿಂಡೀಸ್ ಬ್ಯಾಟರ್ಗಳನ್ನು ಕಟ್ಟಿಹಾಕಲು ಸಜ್ಜಾಗಿದ್ದಾರೆ.
11. ಆರ್ಶದೀಪ್ ಸಿಂಗ್
ಕಳೆದ ಪಂದ್ಯದಲ್ಲಿ ಆವೇಶ್ ಖಾನ್ ಕೊಂಚ ದುಬಾರಿ ಎನಿಸಿಕೊಂಡಿದ್ದು, ಆವೇಶ್ ಖಾನ್ ಬದಲಿಗೆ ಆರ್ಶದೀಪ್ ಸಿಂಗ್ ಇಂದು ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.