ವಿಶ್ವಕಪ್ ಕಿರೀಟ ಗೆಲ್ಲಲು ಟೀಂ ಇಂಡಿಯಾ ರೆಡಿ: ಭಾರತ ತಂಡದ ಬಲಾಬಲವೇನು?
ಬೆಂಗಳೂರು(ಅ.04): ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ಇನ್ನೊಂದೇ ದಿನ ಬಾಕಿ. ಕೋಟ್ಯಾಂತರ ಅಭಿಮಾನಿಗಳ ನಿರೀಕ್ಷೆ ಭಾರ ಹೊತ್ತು ವಿಶ್ವಕಪ್ ಟ್ರೋಫಿ ಗೆಲುವಿಗಾಗಿ ಕಣಕ್ಕಿಳಿಯಲು ಭಾರತ ತಂಡ ಸಜ್ಜಾಗಿದೆ. ಕಳೆದೊಂದು ವರ್ಷದಿಂದ ಪ್ರಯೋಗಗಳ ಮೇಲೆ ಪ್ರಯೋಗ ನಡೆಸಿ, ಬಲಿಷ್ಠ ತಂಡವೊಂದನ್ನು ಸಿದ್ದಪಡಿಸಿಕೊಂಡಿರುವ ಟೀಂ ಇಂಡಿಯಾ, 2011ರ ಬಳಿಕ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಳ್ಳಲು ಹಪಹಪಿಸುತ್ತಿದೆ. ಕಳೆದೆರಡು ಆವೃತ್ತಿಗಳಲ್ಲಿ ಆತಿಥ್ಯ ವಹಿಸಿದ ರಾಷ್ಟ್ರಗಳೇ ಚಾಂಪಿಯನ್ ಆಗಿವೆ. ಈ ಬಾರಿ ವಿಶ್ವಕಪ್ ಆಡಲಿರುವ ಭಾರತ ತಂಡ ಹೇಗಿದೆ? ಆಟಗಾರರ ಬಲಾಬಲಗಳೇನು, ಅವರ ಆಯ್ಕೆಗೆ ಕಾರಣಗಳೇನು? ಇಲ್ಲಿದೆ ನೋಡಿ ಎಲ್ಲಾ ಮಾಹಿತಿ
1. ರೋಹಿತ್ ಶರ್ಮಾ(ನಾಯಕ), ಬ್ಯಾಟರ್
ವಿಶ್ವ ಸಮರದಲ್ಲಿ ಭಾರತವನ್ನು ಮುನ್ನಡೆಸುವ ಹೊಣೆಯನ್ನು ಈ ಬಾರಿ ರೋಹಿತ್ ಶರ್ಮಾಗೆ ನೀಡಲಾಗಿದೆ. ರೋಹಿತ್ ನಾಯಕತ್ವದ ಜೊತೆಗೆ ಆರಂಭಿಕನ ಜವಾಬ್ದಾರಿಯನ್ನೂ ನಿರ್ವಹಿಸಲಿದ್ದಾರೆ. 2023ರಲ್ಲಿ ರೋಹಿತ್ ಉತ್ತಮ ಲಯದಲ್ಲಿದ್ದು, ಆಡಿರುವ 16 ಪಂದ್ಯಗಳಲ್ಲಿ 658 ರನ್ ಕಲೆಹಾಕಿದ್ದು, 1 ಶತಕ 6 ಅರ್ಧಶತಕ ಸಹ ಸಿಡಿಸಿದ್ದಾರೆ. ರೋಹಿತ್ರ ಲಯ ವಿಶ್ವಕಪ್ನಲ್ಲಿ ತಂಡ ಸಾಗುವ ದಿಕ್ಕನ್ನು ನಿರ್ಧರಿಸಬಹುದು.
2. ಶುಭ್ಮನ್ ಗಿಲ್, ಬ್ಯಾಟರ್
ಈ ವರ್ಷ ಪ್ರಚಂಡ ಲಯದಲ್ಲಿರುವ ಆರಂಭಿಕ ಬ್ಯಾಟರ್ ಗಿಲ್, 1000 ರನ್ ದಾಟಿರುವ ಏಕೈಕ ಆಟಗಾರ ಕೂಡ ಹೌದು. 20 ಪಂದ್ಯಗಳಲ್ಲಿ 72.35ರ ಸರಾಸರಿಯಲ್ಲಿ ಬರೋಬ್ಬರಿ 1230 ರನ್ ಚಚ್ಚಿದ್ದಾರೆ. ತಲಾ 5 ಶತಕ, 5 ಅರ್ಧಶತಕ ಸಿಡಿಸಿರುವ ಗಿಲ್, ವಿಶ್ವಕಪ್ನಲ್ಲೂ ಲೀಲಾಜಾಲವಾಗಿ ಬ್ಯಾಟ್ ಬೀಸಲು ಕಾಯುತ್ತಿದ್ದಾರೆ. ಅಹಮದಾಬಾದ್ ಗಿಲ್ರ ನೆಚ್ಚಿನ ತಾಣವಾಗಿದ್ದು, ಪಾಕ್ ತಂಡಕ್ಕೆ ಈಗಾಗಲೇ ಭಯ ಶುರುವಾಗಿದ್ದರೂ ಅಚ್ಚರಿಯಿಲ್ಲ.
3. ವಿರಾಟ್ ಕೊಹ್ಲಿ, ಬ್ಯಾಟರ್
ಏಕದಿನ ಬ್ಯಾಟಿಂಗ್ಗೆ ಹೊಸ ಭಾಷ್ಯ ಬರೆದ ವಿರಾಟ್, ಬಹುತೇಕ ತಮ್ಮ ಕೊನೆಯ ವಿಶ್ವಕಪ್ ಆಡಲಿದ್ದಾರೆ. ಅವರ ಬ್ಯಾಟಿಂಗ್ ಸೊಗಸನ್ನು ಕಣ್ತುಂಬಿಕೊಂಡವರಿಗೇ ಗೊತ್ತು ಅದರ ಆನಂದ. ಕೊಹ್ಲಿಯ ಅಬ್ಬರಕ್ಕಾಗಿ ವಿಶ್ವಕಪ್ ಟೂರ್ನಿ ಕಾಯುತ್ತಿದ್ದು, ಭಾರತದ ಬ್ಯಾಟಿಂಗ್ ಆಧಾರಸ್ತಂಭವೆನಿಸಿರುವ ಈ ಆಟಗಾರ ಈ ವರ್ಷ 16 ಪಂದ್ಯಗಳಲ್ಲಿ 612 ರನ್ ಸಿಡಿಸಿ ಉತ್ತಮ ಲಯದಲ್ಲಿದ್ದಾರೆ. 3 ಶತಕವನ್ನೂ ಸಿಡಿಸಿರುವ ಕೊಹ್ಲಿಯಿಂದ ಮತ್ತಷ್ಟು ಶತಕ ನಿರೀಕ್ಷಿಸಲಾಗುತ್ತಿದೆ.
4. ಶ್ರೇಯಸ್ ಅಯ್ಯರ್, ಬ್ಯಾಟರ್
ಇತ್ತೀಚಿನ ವರ್ಷಗಳಲ್ಲಿ 4ನೇ ಕ್ರಮಾಂಕದಲ್ಲಿ ಸ್ಥಿರ ಪ್ರದರ್ಶನ ತೋರಿದ ಭಾರತದ ಬೆರಳೆಣಿಕೆಯಷ್ಟು ಆಟಗಾರರಲ್ಲಿ ಶ್ರೇಯಸ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವುದು ತಂಡದ ಆತಂಕ ಕಡಿಮೆ ಮಾಡಿರಲಿದೆ. ಮಧ್ಯ ಓವರ್ಗಳಲ್ಲಿ ಜೊತೆಯಾಟಗಳನ್ನು ಕಟ್ಟುವುದರಲ್ಲಿ ಶ್ರೇಯಸ್ ನಿರ್ಣಾಯಕ ಪಾತ್ರ ವಹಿಸಬೇಕಿದ್ದು, ಇವರ ಮೇಲೆ ಭಾರಿ ನಿರೀಕ್ಷೆ ಇದೆ.
5. ಕೆ.ಎಲ್. ರಾಹುಲ್, ಬ್ಯಾಟರ್-ಕೀಪರ್
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಸಹ ಮಾಡಲಿರುವ ರಾಹುಲ್, ತಂಡದ ಅವಿಭಾಜ್ಯ ಅಂಗವೆನಿಸಿದ್ದಾರೆ. ಏಷ್ಯಾಕಪ್, ಆಸ್ಟ್ರೇಲಿಯಾ ವಿರುದ್ಧದ ಸರಣಿಗಳಲ್ಲಿ ತಮ್ಮ ಫಿಟ್ನೆಸ್ ಸಾಬೀತುಪಡಿಸಿದ್ದರೂ ಅವರ ಕೀಪಿಂಗ್ ಕೌಶಲ್ಯ ಸುಧಾರಿಸಬೇಕಿದೆ. ರಾಹುಲ್ 5ನೇ ಕ್ರಮಾಂಕದಲ್ಲಿ ಆಡಲಿದ್ದು, ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ತಮ್ಮ ಆಟ ಬದಲಿಸಿಕೊಳ್ಳಬೇಕಾದ ಒತ್ತಡ ಅವರ ಮೇಲಿರಲಿದೆ.
6. ಇಶಾನ್ ಕಿಶನ್, ಬ್ಯಾಟರ್-ಕೀಪರ್
ಮೀಸಲು ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿರುವ ಇಶಾನ್ ಕಿಶನ್, ತಜ್ಞ ಬ್ಯಾಟರ್ ಆಗಿ ಸಹ ಆಡಬಲ್ಲರು. ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿಯಾಗಿರುವ ಕಿಶನ್ ಈ ವರ್ಷ ಸಿಕ್ಕಿರುವ ಸೀಮಿತ ಅವಕಾಶಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ರಾಹುಲ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದು, 4ನೇ ಕ್ರಮಾಂಕಕ್ಕೆ ಶ್ರೇಯಸ್ಗೆ ಮೊದಲ ಆದ್ಯತೆ ಸಿಗಲಿರುವ ಕಾರಣ ಕಿಶನ್ಗೆ ಸ್ಥಾನ ಸಿಗುವುದು ಅನುಮಾನ.
7. ಸೂರ್ಯಕುಮಾರ್ ಯಾದವ್, ಬ್ಯಾಟರ್
ಏಕದಿನದಲ್ಲಿ ಸೂರ್ಯಕುಮಾರ್ರ ಅಂಕಿ-ಅಂಶ ಕಳಪೆಯಾಗಿದ್ದರೂ ಇಂಪ್ಯಾಕ್ಟ್ ಆಟಗಾರ ಎನ್ನುವ ಕಾರಣಕ್ಕೆ ವಿಶ್ವಕಪ್ಗೂ ಅವರನ್ನು ತಂಡದಲ್ಲಿ ಮುಂದುವರಿಸಲಾಗುತ್ತಿದೆ. ಏಕಾಂಗಿಯಾಗಿ ಪಂದ್ಯದ ಗತಿ ಬದಲಿಸಬಲ್ಲ ಸಾಮರ್ಥ್ಯ ಖಂಡಿತ ಇದೆ. ಆದರೆ ಸ್ಥಿರತೆ ಹಾಗೂ ಏಕದಿನ ಮಾದರಿಗೆ ಬೇಕಿರುವ ತಾಳ್ಮೆಯ ಕೊರತೆ ಇದೆ. ಸೂರ್ಯ ಸಹ ಮೀಸಲು ಆಟಗಾರನಾಗಿ ತಂಡದಲ್ಲಿದ್ದು, ಆಡುವ ಹನ್ನೊಂದರಲ್ಲಿ ಕಾಣಿಸಿಕೊಳ್ಳುವುದು ಕಷ್ಟ.
8.ಹಾರ್ದಿಕ್ ಪಾಂಡ್ಯ, ವೇಗದ ಬೌಲಿಂಗ್ ಆಲ್ರೌಂಡರ್
ತಂಡದಲ್ಲಿ ಹಾರ್ದಿಕ್ರ ಪಾತ್ರ ಎಷ್ಟು ದೊಡ್ಡದು ಎನ್ನುವುದು ಈಗಾಗಲೇ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ನೋಡಿದವರಿಗೆ ಗೊತ್ತಾಗಿರಲಿದೆ. ಬ್ಯಾಟಿಂಗ್ನಲ್ಲಿ ಫಿನಿಶರ್ ಆಗಿ ಅವರ ನಿರ್ವಹಿಸಬೇಕಿರುವ ಪಾತ್ರಕ್ಕಿಂತ ಹೆಚ್ಚಾಗಿ ಬೌಲಿಂಗ್ನಲ್ಲಿ ಅವರ ಕೊಡುಗೆ ತಂಡಕ್ಕೆ ಹೆಚ್ಚು ಅಗತ್ಯ. ಹೊಸ ಚೆಂಡಿನೊಂದಿಗೂ ದಾಳಿ ಆರಂಭಿಸಬಲ್ಲ ಹಾರ್ದಿಕ್, ಮಧ್ಯ ಓವರ್ಗಳಲ್ಲೂ ಪರಿಣಾಮಕಾರಿಯಾಗಬೇಕು. ಈ ವರ್ಷ 16 ವಿಕೆಟ್ ಕಿತ್ತಿರುವ ಪಾಂಡ್ಯ ಮೇಲೆ ಭಾರಿ ದೊಡ್ಡ ಹೊಣೆ ಇದೆ.
9. ಆರ್.ಅಶ್ವಿನ್, ಸ್ಪಿನ್ ಬೌಲಿಂಗ್ ಆಲ್ರೌಂಡರ್
ಅಕ್ಷರ್ ಪಟೇಲ್ ಗಾಯಗೊಂಡು ಹೊರಬಿದ್ದಿದ್ದರಿಂದ ಆರ್.ಅಶ್ವಿನ್ಗೆ ಅನಿರೀಕ್ಷಿತವಾಗಿ ವಿಶ್ವಕಪ್ ತಂಡ ಕೂಡಿಕೊಳ್ಳುವಂತೆ ಕರೆ ಬಂತು. ಅಶ್ವಿನ್ ತಾವೊಬ್ಬ ಮ್ಯಾಚ್ ವಿನ್ನರ್ ಎನ್ನುವುದನ್ನು ಅನೇಕ ಬಾರಿ ಸಾಬೀತುಪಡಿಸಿದ್ದು, ಕೆಲ ದಿನಗಳ ಹಿಂದಷ್ಟೇ ನಡೆದ ಆಸೀಸ್ ವಿರುದ್ಧದ ಸರಣಿಯಲ್ಲಿ ತಮ್ಮ ಬೌಲಿಂಗ್ ಗುಣಮಟ್ಟ ಇನ್ನೂ ಕ್ಷೀಣಿಸಿಲ್ಲ ಎನ್ನುವುದನ್ನು ತೋರಿಸಿದರು. ಬ್ಯಾಟಿಂಗ್ನಲ್ಲೂ ತಂಡಕ್ಕೆ ನೆರವಾಗಬಲ್ಲ ಆಟಗಾರ.
10. ರವೀಂದ್ರ ಜಡೇಜಾ, ಸ್ಪಿನ್ ಬೌಲಿಂಗ್ ಆಲ್ರೌಂಡರ್
ಅನಧಿಕೃತವಾಗಿ ‘ಸರ್’ ಎಂದೇ ಕರೆಸಿಕೊಳ್ಳುವ ಜಡೇಜಾ, ಭಾರತ ತಂಡದ ಅತಿ ಮುಖ್ಯ ಆಟಗಾರ. ಮಧ್ಯ ಓವರ್ಗಳಲ್ಲಿ ಜಡೇಜಾರಷ್ಟು ಪರಿಣಾಮಕಾರಿ ಬೌಲರ್ ಮತ್ತೊಬ್ಬರಿಲ್ಲ. ಅತಿವೇಗವಾಗಿ ಓವರ್ಗಳನ್ನು ಮುಗಿಸುವ ಜಡ್ಡು, ನಿಧಾನಗತಿ ಬೌಲಿಂಗ್ನಿಂದ ತಂಡ ಬವಾಚ್ವಾಗುವಂತೆಯೂ ಮಾಡುತ್ತಾರೆ. ಚುರುಕಾರ ಕ್ಷೇತ್ರರಕ್ಷಣೆಯಿಂದಲೇ ಕನಿಷ್ಠ 10-15 ರನ್ ಉಳಿಸುವ ಜಡೇಜಾ, ಬ್ಯಾಟಿಂಗ್ ಲಯಕ್ಕೆ ಮರಳಬೇಕಿದೆ.
11. ಕುಲ್ದೀಪ್ ಯಾದವ್, ಸ್ಪಿನ್ನರ್
ತಮ್ಮ ತಾಳಕ್ಕೆ ತಕ್ಕಂತೆ ಎದುರಾಳಿ ಬ್ಯಾಟರ್ಗಳನ್ನು ಕುಣಿಸಬಲ್ಲ ‘ಚೈನಾಮನ್’ ಬೌಲರ್. 2023ರಲ್ಲಿ ಕುಲ್ದೀಪ್ ಭಾರಿ ಯಶಸ್ಸು ಸಾಧಿಸಿದ್ದು, ಇವರ ಪ್ರದರ್ಶನ ತಂಡದ ಮೇಲೆ ದೊಡ್ಡ ಪರಿಣಾಮ ಬೀರುವಂತದ್ದು. ಈ ವರ್ಷ 17 ಪಂದ್ಯಗಳಲ್ಲಿ ಕೇವಲ 16.03 ಸರಾಸರಿಯಲ್ಲಿ 33 ವಿಕೆಟ್ ಉರುಳಿಸಿರುವ ಕುಲ್ದೀಪ್, ಅತ್ಯಾಕರ್ಷಕ 4.72ರ ಎಕಾನಮಿ ರೇಟ್ ಸಹ ಹೊಂದಿದ್ದಾರೆ. ಕುಲ್ದೀಪ್ ಮೇಲೆ ತಂಡ ಹೆಚ್ಚು ಅವಲಂಬಿತಗೊಂಡಿದೆ.
12. ಜಸ್ಪ್ರೀತ್ ಬುಮ್ರಾ, ವೇಗದ ಬೌಲರ್
ಬುಮ್ರಾ ವಿಶ್ವಕಪ್ ವೇಳೆಗೆ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡು ತಂಡ ಕೂಡಿಕೊಂಡಿರುವುದು ತಂಡದ ಆಡಳಿತವನ್ನು ನಿರಾಳವಾಗಿಸಿದೆ. ಬುಮ್ರಾ ಈ ವರ್ಷ 6 ಪಂದ್ಯಗಳನ್ನಷ್ಟೇ ಆಡಿದ್ದರೂ 8 ವಿಕೆಟ್ ಕಬಳಿಸಿ ಲಯ ಕಂಡುಕೊಂಡಿದ್ದಾರೆ. 10 ಓವರ್ ಬೌಲ್ ಮಾಡುವಷ್ಟು ಫಿಟ್ ಆಗಿದ್ದಾರೆ ಎನ್ನುವುದು ತಂಡದ ಆತ್ಮವಿಶ್ವಾಸವನ್ನೂ ಹೆಚ್ಚಿಸಿದೆ. ಹೊಸ ಚೆಂಡಿನೊಂದಿಗೆ ಅಗತ್ಯವಿರುವ ಆರಂಭದ ಜೊತೆ ಬುಮ್ರಾ ಡೆತ್ ಓವರ್ಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಬೇಕಿದೆ.
13. ಮೊಹಮದ್ ಸಿರಾಜ್, ವೇಗದ ಬೌಲರ್
ಕಳೆದ 3-4 ವರ್ಷಗಳಲ್ಲಿ ಅತಿಹೆಚ್ಚು ಸುಧಾರಿತ ವೇಗಿ ಎಂದರೆ ಅದು ಮೊಹಮದ್ ಸಿರಾಜ್. ಏಷ್ಯಾಕಪ್ನಲ್ಲಿ ಬೆಂಕಿಯುಂಡೆಗಳನ್ನು ಎಸೆದು ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟಿದ್ದ ಸಿರಾಜ್, ತಮ್ಮ ಆರಂಭಿಕ ಸ್ಪೆಲ್ಗಳ ಮೂಲಕ ಎದುರಾಳಿಗಳನ್ನು ನಡುಗಿಸಬಲ್ಲ ಸಾಹಸಿ. ಈ ವರ್ಷ 14 ಪಂದ್ಯಗಳಲ್ಲಿ 30 ವಿಕೆಟ್ ಕಬಳಿಸಿರುವ ಬಲಗೈ ವೇಗಿ 5.86ರ ಉತ್ತಮ ಎಕಾನಮಿ ರೇಟ್ ಸಹ ಹೊಂದಿದ್ದಾರೆ.
14. ಶಾರ್ದೂಲ್ ಠಾಕೂರ್, ವೇಗದ ಬೌಲಿಂಗ್ ಆಲ್ರೌಂಡರ್
ಕೆಳ ಕ್ರಮಾಂಕದಲ್ಲಿ ರನ್ ಕೊಡುಗೆ ನೀಡಬಲ್ಲರು ಎನ್ನುವ ಕಾರಣಕ್ಕೆ ಶಾರ್ದೂಲ್ಗೆ ತಂಡದಲ್ಲಿ ಸ್ಥಾನ ಸಿಕ್ಕಿದೆ. ಇತ್ತೀಚಿನ ದಿನಗಳಲ್ಲಿ ಬ್ಯಾಟಿಂಗ್ನಲ್ಲಿ ಹೇಳಿಕೊಳ್ಳದ ಪ್ರದರ್ಶನ ನೀಡಿಲ್ಲ. ಬೌಲಿಂಗ್ನಲ್ಲೂ ದುಬಾರಿಯಾಗುತ್ತಿರುವ ಶಾರ್ದೂಲ್ 2023ರಲ್ಲಿ ಆಡಿರುವ 13 ಪಂದ್ಯಗಳಲ್ಲಿ 6.35 ಎಕಾನಮಿ ರೇಟ್ನಲ್ಲಿ ರನ್ ಬಿಟ್ಟುಕೊಟ್ಟು 19 ವಿಕೆಟ್ ಕಬಳಿಸಿದ್ದಾರೆ. ನಿರ್ಣಾಯಕ ಹಂತಗಳಲ್ಲಿ ಜೊತೆಯಾಟ ಮುರಿಯುವುದು ಶಾರ್ದೂಲ್ರ ವಿಶೇಷತೆಗಳಲ್ಲೊಂದು.
15. ಮೊಹಮ್ಮದ್ ಶಮಿ:
ಟೀಂ ಇಂಡಿಯಾದ ಪ್ರಮುಖ ಸದಸ್ಯರಲ್ಲಿ ಅನುಭವಿ ವೇಗಿ ಮೊಹಮ್ಮದ್ ಶಮಿ ಕೂಡಾ ಒಬ್ಬರು. ಬುಮ್ರಾ, ಸಿರಾಜ್ ಮೊದಲ ಆಯ್ಕೆಯಾದರೂ ಟೂರ್ನಿ ಸಾಗಿದಂತೆ ಶಮಿಯ ಅವಶ್ಯಕತೆ ತಂಡಕ್ಕೆ ಎದುರಾಗಬಹುದು. ಈ ವರ್ಷ ಶಮಿಗೆ ಆಡಲು ಅವಕಾಶ ಸಿಕ್ಕಿದ್ದು ಕೇವಲ 12 ಪಂದ್ಯಗಳಲ್ಲಿ ಮಾತ್ರ. ಆದರೆ ಸಿಕ್ಕ ಸೀಮಿತ ಅವಕಾಶದಲ್ಲಿ ಶಮಿ 19 ವಿಕೆಟ್ ಕಬಳಿಸಿ ತಮ್ಮಲ್ಲಿನ್ನೂ ಆಟ ಬಾಕಿ ಇದೆ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.