ಮೆಗಾ ಹರಾಜಿನಲ್ಲಿ ಕೆಕೆಆರ್ ಈ ಮೂವರನ್ನು ರೀಟೈನ್ ಮಾಡಿಕೊಳ್ಳಬೇಕು ಎಂದ ಆಕಾಶ್ ಚೋಪ್ರಾ
ನವದೆಹಲಿ: ಎರಡು ಬಾರಿಯ ಐಪಿಎಲ್ ಚಾಂಪಿಯನ್ ಕೋಲ್ಕತ ನೈಟ್ ರೈಡರ್ಸ್ ತಂಡವು 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿತ್ತು. ಇನ್ನು 2022ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಮೆಗಾ ಹರಾಜು ನಡೆಯಲಿದ್ದು, ಕೆಕೆಆರ್ ತಂಡ ಯಾವೆಲ್ಲಾ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲಿದೆ ಎನ್ನುವ ಕುತೂಹಲ ಜೋರಾಗಿದೆ.
ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಖ್ಯಾತ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಕೆಕೆಆರ್ ತಂಡವು ಈ ಮೂವರು ಆಟಗಾರರನ್ನು ಹರಾಜಿಗೂ ಮುನ್ನ ತಮ್ಮ ತಂಡದಲ್ಲೇ ಉಳಿಸಿಕೊಳ್ಳುವುದು ಬೆಸ್ಟ್ ಎನ್ನುವ ಸಲಹೆ ನೀಡಿದ್ದಾರೆ. ಅಷ್ಟಕ್ಕೂ ಯಾರು ಆ ಮೂವರು ಬ್ಯಾಟ್ಸ್ಮನ್ಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
1. ಆ್ಯಂಡ್ರೆ ರಸೆಲ್:
ಕೆಕೆಆರ್ ತಂಡವು ಮೊದಲ ಆಯ್ಕೆಯಾಗಿ ಆ್ಯಂಡ್ರೆ ರಸೆಲ್ ಅವರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ಒಂದು ವೇಳೆ ಆ್ಯಂಡ್ರೆ ರಸೆಲ್ ಅವರನ್ನು ತಂಡದಿಂದ ಕೈಬಿಟ್ಟರೆ ದುಬಾರಿ ಮೊತ್ತಕ್ಕೆ ಹರಾಜಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದರ ಜತೆಗೆ ರಸೆಲ್ ತಂಡದ ಪಾಲಿಗೆ ಆಲ್ರೌಂಡ್ ವಿಭಾಗದಲ್ಲಿ ಏಕಾಂಗಿಯಾಗಿ ಗೆಲುವು ದಕ್ಕಿಸಿಕೊಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎಂದು ಚೋಪ್ರಾ ಹೇಳಿದ್ದಾರೆ.
2. ಶುಭ್ಮನ್ ಗಿಲ್:
14ನೇ ಆವೃತ್ತಿಯ ಐಪಿಎಲ್ನಲ್ಲಿ ಗಿಲ್ ನಿರೀಕ್ಷಿತ ಪ್ರದರ್ಶನ ತೋರಿರದಿದ್ದರೂ, ಇನ್ನುಳಿದ ಐಪಿಎಲ್ ಪಂದ್ಯಗಳಲ್ಲಿ ಗಿಲ್ ಅಬ್ಬರಿಸುವ ಸಾಧ್ಯತೆಯಿದೆ ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ಮುಂಬರುವ ವರ್ಷಗಳಲ್ಲಿ ಗಿಲ್ ಅಬ್ಬರಿಸುವ ಸಾಮರ್ಥ್ಯ ಹೊಂದಿದ್ದು, ಕೆಕೆಆರ್ ಫ್ರಾಂಚೈಸಿ ಶುಭ್ಮನ್ ಗಿಲ್ ಅವರನ್ನು ರೀಟೈನ್ ಮಾಡಿಕೊಂಡರೆ ತಂಡದ ಪಾಲಿಗೆ ಆಸ್ತಿಯಾಗಬಲ್ಲರು ಎಂದಿದ್ದಾರೆ.
3. ವರುಣ್ ಚಕ್ರವರ್ತಿ
ಇನ್ನು ಹರಾಜಿನಲ್ಲಿ ಒಂದು ಆರ್ಟಿಎಂ(ರೈಟ್ ಟು ಮ್ಯಾಚ್) ಕಾರ್ಡ್ ಬಳಸುವ ಅವಕಾಶವಿದ್ದರೆ, ಕೆಕೆಆರ್ ಫ್ರಾಂಚೈಸಿ ವರುಣ್ ಚಕ್ರವರ್ತಿಗೆ ಮಣೆ ಹಾಕುವುದು ಬೆಸ್ಟ್ ಎಂದು ಚೋಪ್ರಾ ಹೇಳಿದ್ದಾರೆ.
ಮಿಸ್ಟ್ರಿ ಸ್ಪಿನ್ನರ್ ಖ್ಯಾತಿಯ ವರುಣ್ ಚಕ್ರವರ್ತಿ ತಂಡಕ್ಕೆ ಅಗತ್ಯವಿದ್ದಾಗ ಉಪಯುಕ್ತ 4 ಓವರ್ ಹಾಕುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ನರೈನ್, ಮಾರ್ಗನ್ ಬದಲಿಗೆ ವರುಣ್ ಚಕ್ರವರ್ತಿಯನ್ನು ತಂಡದಲ್ಲಿ ಉಳಿಸಿಕೊಳ್ಳುವುದು ಬೆಸ್ಟ್ ಎಂದಿದ್ದಾರೆ.