- Home
- Sports
- Cricket
- 'ಬ್ಯಾಗ್ ಪ್ಯಾಕ್ ಮಾಡಿ ರೆಡಿಯಾಗು': ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಹೀಗಂದಿದ್ದು ಯಾರಿಗೆ ಗೊತ್ತಾ?
'ಬ್ಯಾಗ್ ಪ್ಯಾಕ್ ಮಾಡಿ ರೆಡಿಯಾಗು': ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಹೀಗಂದಿದ್ದು ಯಾರಿಗೆ ಗೊತ್ತಾ?
ಮುಂಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಟೀಂ ಇಂಡಿಯಾ, ಯುಎಸ್ಎ ಎದುರು ಶುಭಾರಂಭ ಮಾಡಿದೆ. ಈ ಪಂದ್ಯಕ್ಕೂ ಮುನ್ನ ದಿನ ನಡೆದ ಘಟನೆಯೊಂದು ಇದೀಗ ವೈರಲ್ ಆಗಿದೆ. ಏನದು? ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಕಾಲ್ ಮಾಡಿದ್ದು ಯಾರಿಗೆ ನೋಡೋಣ ಬನ್ನಿ.

ಸಿರಾಜ್ ಅದೃಷ್ಟ ಬದಲಿಸಿದ ಆ ಕಾಲ್
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಟೀಂ ಇಂಡಿಯಾ ಯುಎಸ್ಎ ಎದುರು 29 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಪ್ರತಿಷ್ಠಿತ ಟೂರ್ನಿ ಆರಂಭಕ್ಕೂ ಮುನ್ನ ವೇಗಿ ಹರ್ಷಿತ್ ರಾಣಾ ಭಾರತ ತಂಡದಿಂದ ಹೊರಬಿದ್ದಿದ್ದರು. ಹೀಗಾಗಿ ಭಾರತ ತಂಡವು ಕೊಂಚ ಒತ್ತಡಕ್ಕೆ ಒಳಗಾಗಿತ್ತು.
ಆಗ ಟೀಂ ಇಂಡಿಯಾ ಹರ್ಷಿತ್ ರಾಣಾಗೆ ಪರ್ಯಾಯ ಆಟಗಾರನ ಹುಡುಕುವಾಗ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಕಣ್ಣಿಗೆ ಬಿದ್ದಿದ್ದೇ ಈ ಡಿಎಸ್ಪಿ ಮೊಹಮ್ಮದ್ ಸಿರಾಜ್. ಫುಟ್ಬಾಲ್ ಮ್ಯಾಚ್ ನೋಡಲು ಸ್ಪೇನ್ಗೆ ಹೋಗಲು ರೆಡಿಯಾಗಿದ್ದ ಸಿರಾಜ್ಗೆ ಬಂದ ಒಂದು ಕಾಲ್ ಅವರ ಅದೃಷ್ಟವನ್ನೇ ಬದಲಿಸಿಬಿಟ್ಟಿತು. ಎರಡು ದಿನಗಳ ಹಿಂದೆ ನಾನು ಟೀಂ ಇಂಡಿಯಾ ಪರ ಟಿ20 ವಿಶ್ವಕಪ್ ಆಡುತ್ತೇನೆ ಅಂದುಕೊಂಡಿರಲಿಲ್ಲ ಎಂದು ಯುಎಸ್ಎ ಎದುರು 3 ವಿಕೆಟ್ ಕಬಳಿಸಿ ಮಿಂಚಿದ ಸಿರಾಜ್ ಹೇಳಿದ್ದಾರೆ.
ಸೂರ್ಯಕುಮಾರ್ ಯಾದವ್ ಕಾಲ್ಗೆ ಸಿರಾಜ್ ಪ್ರತಿಕ್ರಿಯೆ
‘ಬ್ಯಾಗ್ ಪ್ಯಾಕ್ ಮಾಡಿ ಬೇಗ ಹೊರಡು’ ಎಂದು ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಹೇಳಿದರು. ಮೆಸೇಜ್ ನೋಡಿದ ತಕ್ಷಣ ಸಿರಾಜ್ಗೆ ಇದು ತಮಾಷೆ ಇರಬೇಕು ಎನಿಸಿತು. ಅವರು ತಕ್ಷಣ, 'ಈ ತರಹದ ವಿಷಯಗಳಲ್ಲಿ ತಮಾಷೆ ಮಾಡಬೇಡ' ಎಂದು ಸೂರ್ಯನಿಗೆ ಹೇಳಿದರು. ಆದರೆ ಸೂರ್ಯ, ಇದು ತಮಾಷೆಯಲ್ಲ, ತಕ್ಷಣ ತಂಡವನ್ನು ಸೇರಿಕೊಳ್ಳಬೇಕು, ಟಿ20 ವಿಶ್ವಕಪ್ಗೆ ಬುಲಾವ್ ಬಂದಿದೆ ಎಂದು ಸ್ಪಷ್ಟಪಡಿಸಿದರು.
ಇದರ ನಂತರ ಯೋಚಿಸಲು ಸಮಯವೇ ಇರಲಿಲ್ಲ. ಬ್ಯಾಗ್ ಪ್ಯಾಕ್ ಆಯಿತು, ಟಿಕೆಟ್ ಬುಕ್ ಆಯಿತು, ಕೆಲವೇ ಗಂಟೆಗಳಲ್ಲಿ ಸಿರಾಜ್ ಪ್ರಯಾಣ ಆರಂಭಿಸಿದ್ದರು. ಸ್ವಲ್ಪ ಸಮಯದ ನಂತರ ಆಯ್ಕೆ ಸಮಿತಿ ಸದಸ್ಯ ಪ್ರಗ್ಯಾನ್ ಓಜಾ ಅವರ ಕರೆಯೂ ಬಂತು.
ರಾತ್ರಿ 3ಕ್ಕೆ ಮುಂಬೈ, ಬೆಳಗ್ಗೆ ಪ್ಲೇಯಿಂಗ್-11
ಸಿರಾಜ್ ರಾತ್ರಿ ಸುಮಾರು 3 ಗಂಟೆಗೆ ಮುಂಬೈ ತಲುಪಿದರು. ನಿದ್ದೆ ಪೂರ್ತಿಯಾಗಿರಲಿಲ್ಲ, ಆದರೆ ಜವಾಬ್ದಾರಿ ಸ್ಪಷ್ಟವಾಗಿತ್ತು. ಅದೇ ರಾತ್ರಿ ಅವರು ಎದುರಾಳಿ ತಂಡದ ಬಗ್ಗೆ ಸ್ವಲ್ಪ ಮಾಹಿತಿ ಪಡೆದು, ಸ್ವಲ್ಪ ತಯಾರಿ ನಡೆಸಿ, ಕೆಲ ಕಾಲ ನಿದ್ದೆ ಮಾಡಿದರು. ಬೆಳಗ್ಗೆ ಎದ್ದ ತಕ್ಷಣ, ಜಸ್ಪ್ರೀತ್ ಬುಮ್ರಾ ಫಿಟ್ ಇಲ್ಲದ ಕಾರಣ ಅಮೆರಿಕ ವಿರುದ್ಧದ ಮೊದಲ ಪಂದ್ಯದಲ್ಲೇ ಪ್ಲೇಯಿಂಗ್-11ರಲ್ಲಿ ತಮ್ಮ ಹೆಸರು ಇದೆ ಎಂಬ ಮೆಸೇಜ್ ಬಂತು ಎಂದು ಆ ಕ್ಷಣವನ್ನು ಸಿರಾಜ್ ನೆನಪಿಸಿಕೊಂಡಿದ್ದಾರೆ.
557 ದಿನಗಳ ನಂತರ ಟಿ20ಗೆ ಕಮ್ಬ್ಯಾಕ್
ಹೈದರಾಬಾದ್ ಮೂಲದ ವೇಗಿ ಮೊಹಮ್ಮದ್ ಸಿರಾಜ್ ಜುಲೈ 2024ರ ನಂತರ ಯಾವುದೇ ಟಿ20 ಅಂತರಾಷ್ಟ್ರೀಯ ಪಂದ್ಯವನ್ನು ಆಡಿರಲಿಲ್ಲ. ಇಷ್ಟು ದೀರ್ಘ ವಿರಾಮ. ಆದರೆ ಕೈಗೆ ಚೆಂಡು ಬಂದಾಗ, ಅವರು ಎಂದಿಗೂ ತಂಡದಿಂದ ದೂರ ಹೋಗಿರಲಿಲ್ಲವೇನೋ ಎನಿಸುವಂತೆ ಬೌಲಿಂಗ್ ಮಾಡಿದರು. ಮೊದಲ ಸ್ಪೆಲ್ನಲ್ಲೇ ಅವರು ಅರ್ಶದೀಪ್ ಸಿಂಗ್ ಜೊತೆಗೂಡಿ ಪಂದ್ಯದ ದಿಕ್ಕನ್ನೇ ಬದಲಿಸಿದರು. ಅಮೆರಿಕ ತಂಡ 13 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಸಿರಾಜ್ ದಾಳಿಗೆ ಯುಎಸ್ಎ ಆರಂಭಿಕರಿಬ್ಬರು ಆರಂಭದಲ್ಲೇ ಪೆವಿಲಿಯನ್ ಹಾದಿ ಹಿಡಿದರು.
ಸಿಕ್ಸರ್ ಬಿದ್ದರೂ ಸಿರಾಜ್ ಧೈರ್ಯ ಕಳೆದುಕೊಳ್ಳಲಿಲ್ಲ
ಸಿರಾಜ್ ಅವರ ಎರಡನೇ ಎಸೆತದಲ್ಲೇ ಸಿಕ್ಸರ್ ಬಾರಿಸಿಕೊಂಡರು. ಆದರೆ ಅವರು ತಕ್ಷಣ ಲೆಂಥ್ ಬದಲಾಯಿಸಿ, ಮುಂದಿನ ಎಸೆತದಲ್ಲಿ ಎದುರಾಳಿ ಬ್ಯಾಟ್ಸ್ಮನ್ ಬಲಿ ಪಡೆದರು. ನಂತರದ ಓವರ್ನಲ್ಲಿ ಬ್ಯಾಕ್ ಆಫ್ ಲೆಂಥ್ ಮತ್ತು ಸರಿಯಾದ ಲೈನ್ನಲ್ಲಿ ಬೌಲ್ ಮಾಡಿ ಎರಡನೇ ವಿಕೆಟ್ ಕೂಡ ಪಡೆದರು. ಕೇವಲ 8 ಎಸೆತಗಳಲ್ಲಿ 2 ವಿಕೆಟ್ ಕಬಳಿಸಿ ಭರ್ಜರಿ ಕಮ್ಬ್ಯಾಕ್ ಮಾಡಿದರು. ಇನ್ನು ಕೊನೆಯಲ್ಲಿ ಮತ್ತೊಂದು ವಿಕೆಟ್ ಕಬಳಿಸಿ ಭಾರತ ಪರ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು.
ರಣಜಿ ಟ್ರೋಫಿ ಅನುಭವ ನೆರವಿಗೆ ಬಂತು ಎಂದು ಭಾವುಕರಾದ ಸಿರಾಜ್
ಪಂದ್ಯದ ನಂತರ ಮಾತನಾಡಿದ ಸಿರಾಜ್, ರಣಜಿ ಟ್ರೋಫಿ ಇಲ್ಲಿ ಬಹಳ ಸಹಾಯ ಮಾಡಿತು ಎಂದು ಹೇಳಿದರು. 'ರಣಜಿಯಿಂದ ನೇರವಾಗಿ ಇಲ್ಲಿಗೆ ಬಂದಿದ್ದೆ. ವಿಕೆಟ್ ನೋಡಿ ಹೊಸ ಚೆಂಡು ಸುಲಭವಾಗಿ ಬ್ಯಾಟ್ಗೆ ಬರುವುದಿಲ್ಲ ಎಂದು ಅರ್ಥವಾಯಿತು. ಅದಕ್ಕಾಗಿಯೇ ವಿಕೆಟ್ ಟು ವಿಕೆಟ್ ಬೌಲಿಂಗ್ ಮಾಡಲು ಪ್ಲ್ಯಾನ್ ಮಾಡಿದೆ' ಎಂದರು. ಇದೇ ಪ್ಲ್ಯಾನ್ ವರ್ಕ್ ಆಯಿತು. 'ದೇವರು 24 ಗಂಟೆಯಲ್ಲಿ ಅದೃಷ್ಟವನ್ನೇ ಬದಲಿಸಿದ' ಎಂದರು. 'ನಾನು ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದೆ. ಆಗ ಟ್ರೈನರ್ ಮೆಸೇಜ್ ಬಂತು. ನಾನು ತಮಾಷೆಯಾಗಿ, ಈಗ ಮೆಸೇಜ್ ಮಾಡಬೇಡಿ, ರೆಸ್ಟ್ ಮಾಡ್ತಿದ್ದೀನಿ ಅಂದೆ. ಆದರೆ ದೇವರು 24 ಗಂಟೆಗಳಲ್ಲಿ ಎಲ್ಲವನ್ನೂ ಬದಲಾಯಿಸಿದ' ಎಂದು ಹೇಳಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

