- Home
- Sports
- Cricket
- Rinku Singh "ಚಚ್ಚು, ತಲೆಕೆಡಿಸಿಕೊಳ್ಳಬೇಡ": ಉಮೇಶ್ ಯಾದವ್ ಸ್ಪೂರ್ತಿಯ ಮಾತು ಸ್ಮರಿಸಿದ ರಿಂಕು ಸಿಂಗ್..!
Rinku Singh "ಚಚ್ಚು, ತಲೆಕೆಡಿಸಿಕೊಳ್ಳಬೇಡ": ಉಮೇಶ್ ಯಾದವ್ ಸ್ಪೂರ್ತಿಯ ಮಾತು ಸ್ಮರಿಸಿದ ರಿಂಕು ಸಿಂಗ್..!
ಅಹಮದಾಬಾದ್(ಏ.10): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 13ನೇ ಪಂದ್ಯವು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಎದುರು ಕೋಲ್ಕತಾ ನೈಟ್ ರೈಡರ್ಸ್ 3 ವಿಕೆಟ್ ರೋಚಕ ಜಯ ಸಾಧಿಸಿತು. ಕೆಕೆಆರ್ ತಂಡದ ರಿಂಕು ಸಿಂಗ್ ಸತತ 5 ಸಿಕ್ಸರ್ ಸಿಡಿಸಿ, ಕೆಕೆಆರ್ಗೆ ಸ್ಮರಣೀಯ ಗೆಲುವು ತಂದಿತ್ತರು. ಕೊನೆಯ ಓವರ್ನಲ್ಲಿ ಉಮೇಶ್ ಯಾದವ್ ಹೇಳಿದ ಸ್ಪೂರ್ತಿಯ ಮಾತನ್ನು ರಿಂಕು ಸಿಂಗ್ ಸ್ಮರಿಸಿಕೊಂಡಿದ್ದಾರೆ.

ಭಾನುವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಎದುರು ಕೊನೆಯ ಓವರ್ನಲ್ಲಿ ಗೆಲ್ಲಲು ಕೋಲ್ಕತಾ ನೈಟ್ ರೈಡರ್ಸ್ಗೆ 29 ರನ್ ಅಗತ್ಯವಿತ್ತು. ರಿಂಕು ಸಿಂಗ್ ಎನ್ನುವ ಅಪ್ಪಟ ದೇಶಿ ಪ್ರತಿಭೆ ಅಸಾಧ್ಯವಾದದ್ದನ್ನು ಸಾಧ್ಯವನ್ನಾಗಿಸಿ ತೋರಿಸಿದ್ದಾರೆ.
ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಕೆಕೆಆರ್ ತಂಡದ ನಾಯಕ ನಿತೀಶ್ ರಾಣಾ, ರಿಂಕು ಸಿಂಗ್ 21 ಎಸೆತದಲ್ಲಿ ಅಜೇಯ 48 ರನ್ ಬಾರಿಸಿದ್ದು 100 ಪಂದ್ಯಗಳಲ್ಲಿ ಇಂತಹ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯ ಎಂದು ಬಣ್ಣಿಸಿದ್ದಾರೆ.
ಕೊನೆಯ ಓವರ್ನಲ್ಲಿ ಕೆಕೆಆರ್ ಗೆಲ್ಲಲು 29 ರನ್ ಅಗತ್ಯವಿತ್ತು. ಯಶ್ ದಯಾಳ್ ಬೌಲಿಂಗ್ನ ಮೊದಲ ಎಸೆತದಲ್ಲಿ ಸ್ಟ್ರೈಕ್ನಲ್ಲಿದ್ದ ಉಮೇಶ್ ಯಾದವ್ ಒಂದು ರನ್ ಗಳಿಸಿ, ರಿಂಕು ಸಿಂಗ್ಗೆ ಸ್ಟ್ರೈಕ್ ನೀಡಿದರು. ಕೊನೆಯ 5 ಎಸೆತಗಳಲ್ಲಿ ರಿಂಕು ಸಿಕ್ಸರ್ ಚಚ್ಚಿ ಕೆಕೆಆರ್ ತಂಡವನ್ನು ಅವಿಸ್ಮರಣೀಯವಾಗಿ ಗೆಲುವಿನ ದಡ ಸೇರಿಸಿದರು.
ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ರಿಂಕು ಸಿಂಗ್, "ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಹೆಚ್ಚಿಗೆ ಏನೂ ಚಿಂತಿಸಲು ಹೋಗಲಿಲ್ಲ. ಬೌಲಿಂಗ್ಗೆ ತಕ್ಕಂತೆ ಬ್ಯಾಟ್ ಬೀಸಿದೆ. ನಾನು 5 ಸಿಕ್ಸರ್ ಸಿಡಿಸುತ್ತೇನೆ ಎಂದು ಆಲೋಚನೆಯನ್ನೇ ಮಾಡಿರಲಿಲ್ಲ. ಆದರೆ ನನಗೆ 5 ಸಿಕ್ಸರ್ ಸಿಡಿಸಬಲ್ಲೇ ಎನ್ನುವ ಬಗ್ಗೆ ನಂಬಿಕೆಯಿತ್ತು. ಸಿಕ್ಸರ್ ಸಿಡಿಸಿ ಪಂದ್ಯವನ್ನು ಗೆದ್ದೆವು" ಎಂದು ರಿಂಕು ಹೇಳಿದ್ದಾರೆ
ರಿಂಕು ಸಿಂಗ್ ಕೇವಲ 21 ಎಸೆತಗಳನ್ನು ಎದುರಿಸಿ ಅಜೇಯ 48 ರನ್ ಬಾರಿಸಿದರು. ಈ ಪೈಕಿ 40 ರನ್ಗಳು ಕೊನೆಯ 7 ಎಸೆತಗಳಲ್ಲಿ ಬಂದಿದ್ದು ವಿಶೇಷ. ಇದಕ್ಕೂ ಮೊದಲು ರಿಂಕು ಮೊದಲ 14 ಎಸೆತಗಳಲ್ಲಿ ಕೇವಲ 8 ರನ್ ನಷ್ಟೇ ಬಾರಿಸಿದ್ದರು.
ನಾನು ಸಿಕ್ಸರ್ ಸಿಡಿಸಿ ತಂಡವನ್ನು ಗೆಲ್ಲಿಸಬಲ್ಲೇ ಎನ್ನುವ ವಿಶ್ವಾಸ ನನ್ನಲ್ಲಿತ್ತು. ಯಾಕೆಂದರೇ ಇದೇ ರೀತಿಯ ಇನಿಂಗ್ಸ್ ಅನ್ನು ಕಳೆದ ವರ್ಷ ಲಖನೌ ಸೂಪರ್ ಜೈಂಟ್ಸ್ ಎದುರು ಆಡಿದ್ದೆ. ಇನ್ನು ನಿತೀಶ್ ಅಣ್ಣ, ನಿನ್ನ ಮೇಲೆ ವಿಶ್ವಾಸ ಇಟ್ಟುಕೋ, ಕೊನೆಯ ತನಕ ಆಡು ಎಂದು ಹೇಳಿದ್ದರು ಎಂದು ರಿಂಕು ವಿವರಿಸಿದ್ದಾರೆ.
ಇನ್ನು ಇದೇ ರೀತಿಯ ಸಲಹೆಯನ್ನು ನಾನ್ಸ್ಟ್ರೈಕ್ನಲ್ಲಿದ್ದ ಉಮೇಶ್ ಯಾದವ್ ಕೂಡಾ ಹೇಳಿದ್ದರು. ಹೆಚ್ಚಿಗೆ ಆಲೋಚನೆ ಮಾಡಬೇಡ, ಸುಮ್ಮನೇ ಬಾರಿಸು ಎಂದು ಉಮೇಶ್ ಯಾದವ್ ಅಣ್ಣ ನನಗೆ ಧೈರ್ಯ ತುಂಬಿದರು ಎಂದು ಕೊನೆಯ ಕ್ಷಣವನ್ನು ರಿಂಕು ಸಿಂಗ್ ಮೆಲುಕು ಹಾಕಿದ್ದಾರೆ.