ರಿಷಭ್ ಪಂತ್ ಚೇತರಿಸಿಕೊಳ್ಳುತ್ತಿರುವ ಬೆನ್ನಲ್ಲೇ ಆತನ ಕೆನ್ನೆಗೆ ಬಾರಿಸುತ್ತೇನೆಂದ ಮಾಜಿ ನಾಯಕ..!
ನವದೆಹಲಿ(ಫೆ.08): ಟೀಂ ಇಂಡಿಯಾ, ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಕಳೆದ ವರ್ಷದ ಕೊನೆಯಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿ, ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆ ಟೀಂ ಇಂಡಿಯಾ ಮಾಜಿ ನಾಯಕರೊಬ್ಬರು, ಪಂತ್ ಚೇತರಿಸಿಕೊಂಡ ಬಳಿಕ ಆತನ ಕೆನ್ನೆಗೆ ಬಾರಿಸುವುದಾಗಿ ಹೇಳಿದ್ದಾರೆ. ಅಷ್ಟಕ್ಕೂ ಯಾರು ಆ ನಾಯಕ? ಪಂತ್ ಕೆನ್ನೆಗೆ ಬಾರಿಸಲು ಕಾರಣವೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಡಿಸೆಂಬರ್ 29ರ ರಾತ್ರಿ ಗುರುವಾರ ತಮ್ಮ ಮರ್ಸಿಡೀಸ್ ಕಾರನ್ನು ತಾವೇ ಚಾಲನೆ ಮಾಡುತ್ತಾ ದೆಹಲಿಯಿಂದ ಉತ್ತರಾಖಂಡದ ರೂರ್ಕೀ ಎಂಬಲ್ಲಿರುವ ತಮ್ಮ ನಿವಾಸಕ್ಕೆ ಹೊರಟಿದ್ದ ಸಂದರ್ಭದಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು.
ಹೊಸ ವರ್ಷವನ್ನು ತಾಯಿಯ ಜೊತೆ ಆಚರಿಸಲು, ಅವರಿಗೆ ಅಚ್ಚರಿ ನೀಡಲು ತೆರಳುತ್ತಿದ್ದ ಸಂದರ್ಭದಲ್ಲಿ, ಬೆಳಗ್ಗಿನ ಜಾವ 5.30ರ ಸುಮಾರಿಗೆ ಮೊಹಮದ್ಪುರ ಎಂಬಲ್ಲಿ ಅಪಘಾತ ಸಂಭವಿಸಿದೆ. ಕ್ಷಣಾರ್ಧದಲ್ಲೇ ಕಾರಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿತ್ತು.
ಕಾರಿಗೆ ಬೆಂಕಿ ಹೊತ್ತಿಕೊಳ್ಳುವ ಮುನ್ನ ಕೂದಲೆಳೆ ಅಂತರದಲ್ಲಿ ಪಂತ್ ಕಾರಿನ ಗಾಜು ಒಡೆದು ಹೊರಬಂದಿದ್ದು, ಬಲುದೊಡ್ಡ ಅಪಾಯದಿಂದ ಪಾರಾಗಿದ್ದರು. ಈ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಬಸ್ ಚಾಲಕ ಹಾಗೂ ಕಂಡಕ್ಟರ್, ರಸ್ತೆಯ ಪಕ್ಕದಲ್ಲೇ ರಿಷಭ್ರನ್ನು ಮಲಗಿಸಿ ತಮ್ಮ ಹೊದಿಕೆಯನ್ನು ಅವರ ಮೈ ಮೇಲೆ ಹಾಕಿ, ಬಳಿಕ ಆ್ಯಂಬುಲೆನ್ಸ್ಗೆ ಕರೆ ಮಾಡಿ ನೆರವಾಗಿದ್ದರು.
ಮೊದಲಿಗೆ ರೂರ್ಕೀಯ ಸಕ್ಷಮ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಡೆಹರಾಡೂನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಡೆಹರಾಡೂನ್ ಬಳಿಕ ಇದೀಗ ರಿಷಭ್ ಪಂತ್ ಅವರನ್ನು ಮುಂಬೈಗೆ ಶಿಫ್ಟ್ ಮಾಡಲಾಗಿದ್ದು, ಅಲ್ಲಿ ಪಂತ್ಗೆ ಅಸ್ತಿಬಂಧಕ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಲಾಗಿದೆ. ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
ಇದೀಗ ರಿಷಭ್ ಪಂತ್ ಅವರ ಅಪಘಾತದ ಕುರಿತಂತೆ ಮತ್ತೊಮ್ಮೆ ತುಟಿ ಬಿಚ್ಚಿರುವ ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್, ಲಘು ದಾಟಿಯಲ್ಲಿಯೇ, ಗಾಯದಿಂದ ಸಂಪೂರ್ಣ ಚೇತರಿಸಿಕೊಂಡ ಬಳಿಕ ಆತನ ಕೆನ್ನೆಗೆ ಬಾರಿಸುವುದಾಗಿ ಹೇಳಿದ್ದಾರೆ.
Uncut ವಿಡಿಯೋದಲ್ಲಿ, ರಿಷಭ್ ಪಂತ್ ಇಲ್ಲದ ಟೀಂ ಇಂಡಿಯಾ, ಒಂದು ರೀತಿ ಜಾಳಾಗಿ(ಹರಿದು ಚಿಂದಿಯಾದಂತೆ) ಕಾಣುತ್ತಿದೆ. ಮಕ್ಕಳು ತಪ್ಪು ಮಾಡಿದಾಗ, ಪೋಷಕರು ಒಂದು ಪೆಟ್ಟು ಹೊಡೆಯುವಂತೆ ತಾವು, ಪಂತ್ ಕೆನ್ನೆಗೆ ಬಾರಿಸಬೇಕೆಂದಿದ್ದೇನೆ ಎಂದು ಕಪಿಲ್ ದೇವ್ ಹೇಳಿದ್ದಾರೆ.
"ನನಗೆ ಆತನ ಮೇಲೆ ತುಂಬಾ ಪ್ರೀತಿಯಿದೆ. ನಾನು ಆತ ಆದಷ್ಟು ಬೇಗ ಗುಣಮುಖವಾಗಲಿ ಎಂದು ಆಶಿಸುತ್ತೇನೆ. ಯಾಕೆಂದರೆ ನಾನು, ನಿನ್ನನ್ನು ನೀನು ನೋಡಿಕೋ ಎಂದು ಆತನ ಕೆನ್ನೆಗೆ ಬಾರಿಸಬೇಕೆಂದಿದ್ದೇನೆ. ನೀನು ಮಾಡಿಕೊಂಡ ಅಪಘಾತದಿಂದ ಇಡೀ ತಂಡವೇ ಚಿಂದಿಯಾಗಿ ಹೋಗಿದೆ.
ನನಗೆ ಆತನ ಮೇಲೆ ಪ್ರೀತಿಯಿದೆ ಹಾಗೂ ಅಷ್ಟೇ ಕೋಪ ಕೂಡಾ ಇದೆ. ಯುವಕರು ಇಂದಿನ ದಿನಗಳಲ್ಲಿ ಯಾಕೆ ಹೀಗೆ ಮಾಡುತ್ತಾರೋ ಅರ್ಥವಾಗುತ್ತಿಲ್ಲ. ಈ ಕಾರಣಕ್ಕಾಗಿ ನಾನು ಅವರಿಗೆ ಬಾರಿಸಬೇಕೆಂದಿದ್ದೇನೆ ಎಂದು ಕಪಿಲ್ ದೇವ್ ಹೇಳಿದ್ದಾರೆ.
ಆತನ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ನನ್ನದು ಹಾರೈಕೆಯಿದೆ. ಜಗತ್ತಿನಾದ್ಯಂತ ಆತನಿಗೆ ಪ್ರೀತಿ ಹಾಗೂ ಹಾರೈಕೆ ಸಿಕ್ಕಿದೆ. ದೇವರು ಆತನಿಗೆ ಒಳ್ಳೆಯ ಆರೋಗ್ಯ ಕರುಣಿಸಲಿ. ಎಲ್ಲಾ ಚೇತರಿಸಿಕೊಂಡ ಬಳಿಕ, ಒಂದು ವೇಳೆ ಮಕ್ಕಳು ತಪ್ಪು ಮಾಡಿದಾಗ, ಪೋಷಕರು ಒಂದು ಪೆಟ್ಟು ಕೊಡುವಂತೆ ನಾನು, ಪಂತ್ಗೆ ಒಂದು ಹೊಡೆತ ನೀಡಬೇಕು ಎಂದು ತಮಾಷೆಯಾಗಿಯೇ ಕಪಿಲ್ ದೇವ್ ಪ್ರತಿಕ್ರಿಯಿಸಿದ್ದಾರೆ.
ಅಪಘಾತದ ಬಳಿಕ ರಿಷಭ್ ಪಂತ್ ಹಲವಾರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಪಂತ್ ಸದ್ಯ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ, ಮುಂಬರುವ ಐಪಿಎಲ್ ಟೂರ್ನಿ ಸೇರಿದಂತೆ ಟೂರ್ನಿಗಳಿಂದ ಹೊರಗುಳಿಯಲಿದ್ದು, ಆದಷ್ಟು ಬೇಗ ಚೇತರಿಸಿಕೊಂಡು ಪಂತ್ ಕ್ರಿಕೆಟ್ ಮೈದಾನಕ್ಕಿಳಿಯಲಿ ಎನ್ನುವುದು ಅಭಿಮಾನಿಗಳ ಹಾರೈಕೆಯಾಗಿದೆ.