- Home
- Sports
- Cricket
- Ind vs Aus: ಆಸೀಸ್ ಎದುರಿನ ಮೂರನೇ ಟೆಸ್ಟ್ ಸೋಲಿಗೆ ಕಾರಣವೇನು..? ಇಲ್ಲಿವೆ 3 ಇಂಟ್ರೆಸ್ಟಿಂಗ್ ಸಂಗತಿ
Ind vs Aus: ಆಸೀಸ್ ಎದುರಿನ ಮೂರನೇ ಟೆಸ್ಟ್ ಸೋಲಿಗೆ ಕಾರಣವೇನು..? ಇಲ್ಲಿವೆ 3 ಇಂಟ್ರೆಸ್ಟಿಂಗ್ ಸಂಗತಿ
ಇಂದೋರ್(ಮಾ.03): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಎದುರು ಪ್ರವಾಸಿ ಆಸ್ಟ್ರೇಲಿಯಾ ತಂಡವು 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡವು ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಲಗ್ಗೆಯಿಟ್ಟಿದೆ. ಗೆಲ್ಲಲು ಕೇವಲ 76 ರನ್ಗಳ ಸಾಧಾರಣ ಗುರಿ ಪಡೆದ ಸ್ಟೀವ್ ಸ್ಮಿತ್ ನೇತೃತ್ವದ ಆಸ್ಟ್ರೇಲಿಯಾ ತಂಡವು ಕೇವಲ ಒಂದು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಮೊದಲೆರಡು ಟೆಸ್ಟ್ ಪಂದ್ಯ ಗೆದ್ದು ಬೀಗಿದ್ದ ಟೀಂ ಇಂಡಿಯಾ, ಮೂರನೇ ಪಂದ್ಯ ಸೋತಿದ್ದು ಹೇಗೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ...

1. ಟೀಂ ಇಂಡಿಯಾ ಬ್ಯಾಟರ್ಗಳ ದಯನೀಯ ವೈಫಲ್ಯ:
ಮೊದಲೆರಡು ಟೆಸ್ಟ್ ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ್ದ ಟೀಂ ಇಂಡಿಯಾ ಬ್ಯಾಟರ್ಗಳು, ಮೂರನೇ ಟೆಸ್ಟ್ ಪಂದ್ಯದಲ್ಲಿ ಹೊಣೆಯರಿತ ಬ್ಯಾಟಿಂಗ್ ಮಾಡಲು ವಿಫಲವಾದರು.
ಚೇತೇಶ್ವರ್ ಪೂಜಾರ ಹೊರತುಪಡಿಸಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಶುಭ್ಮನ್ ಗಿಲ್, ಕೆ ಎಸ್ ಭರತ್ ಸೇರಿದಂತೆ ಯಾವೊಬ್ಬ ಬ್ಯಾಟರ್ ಕೂಡಾ ನೆಲಕಚ್ಚಿ ಆಡುವ ಯತ್ನ ನಡೆಸಲಿಲ್ಲ.
ಮೊದಲ ಇನಿಂಗ್ಸ್ನಲ್ಲಿ 109 ರನ್ ಗಳಿಸಿದ್ದ ಟೀಂ ಇಂಡಿಯಾ ಎರಡನೇ ಇನಿಂಗ್ಸ್ನಲ್ಲೂ 163 ರನ್ಗಳಿಗೆ ಸರ್ವಪತನ ಕಾಣುವ ಮೂಲಕ ತವರಿನಲ್ಲಿಯೇ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು, ತಂಡದ ಸೋಲಿಗೆ ಪ್ರಮುಖ ಕಾರಣ ಎನಿಸಿಕೊಂಡಿತು.
2. ಓರ್ವ ಬ್ಯಾಟರ್ ರೂಪದಲ್ಲಿ ಅಕ್ಷರ್ ಪಟೇಲ್ ಸರಿಯಾಗಿ ಬಳಸಿಕೊಳ್ಳಲು ಟೀಂ ಇಂಡಿಯಾ ವಿಫಲ:
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅಕ್ಷರ್ ಪಟೇಲ್, ಓರ್ವ ಬೌಲರ್ ಆಗಿ ಯಶಸ್ವಿಯಾಗಿದ್ದಕ್ಕಿಂತ, ಬ್ಯಾಟರ್ ಆಗಿ ಯಶಸ್ವಿಯಾಗಿದ್ದೇ ಹೆಚ್ಚು. ಮೊದಲೆರಡು ಟೆಸ್ಟ್ ಮಾತ್ರವಲ್ಲ, ಮೂರನೇ ಟೆಸ್ಟ್ನಲ್ಲೂ ಅಕ್ಷರ್ ಪಟೇಲ್, ಬ್ಯಾಟಿಂಗ್ನಲ್ಲಿ ತಂಡಕ್ಕೆ ನೆರವಾಗುವ ಯತ್ನ ನಡೆಸಿದ್ದರು.
ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಸಮಯೋಚಿತ ಅರ್ಧಶತಕ ಚಚ್ಚುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಕ್ಷರ್ ಪಟೇಲ್ ಅವರನ್ನು, ಮೂರನೇ ಟೆಸ್ಟ್ ಪಂದ್ಯದಲ್ಲಿ ಮಧ್ಯಮ ಕ್ರಮಾಂಕಕ್ಕೆ ಬಡ್ತಿ ನೀಡಿದ್ದರೇ, ತಂಡಕ್ಕೆ ಮತ್ತಷ್ಟು ಆಸರೆಯಾಗುತ್ತಿದ್ದರು.
ಮೂರನೇ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ ಅಕ್ಷರ್ ಪಟೇಲ್ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅಜೇಯ 12 ರನ್ ಬಾರಿಸಿದರು. ಇನ್ನು ಎರಡನೇ ಇನಿಂಗ್ಸ್ನಲ್ಲಿ ಕೂಡಾ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅಜೇಯ 15 ರನ್ ಬಾರಿಸಿದರು. ಅಕ್ಷರ್ಗೆ ಬ್ಯಾಟಿಂಗ್ ಬಡ್ತಿ ನೀಡಿದ್ದರೇ, ಇನ್ ಫಾರ್ಮ್ ಆಟಗಾರ ಬ್ಯಾಟಿಂಗ್ನಲ್ಲಿ ತಂಡಕ್ಕೆ ಇನ್ನಷ್ಟು ರನ್ ಕೊಡುಗೆ ನೀಡುತ್ತಿದ್ದರು.
3. ಆಸ್ಟ್ರೇಲಿಯಾಗೆ ಕೌಂಟರ್ ಅಟ್ಯಾಕ್ ಮಾಡಲು ಟೀಂ ಇಂಡಿಯಾ ವಿಫಲ:
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ, ಬ್ಯಾಟಿಂಗ್ನಲ್ಲಿ ಎರಡೂ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ಬೌಲರ್ಗಳ ಮೇಲೆ ಒತ್ತಡ ಹೇರಲು ವಿಫಲವಾದರು. ಇದರು ಟೆಸ್ಟ್ ಪಂದ್ಯ ಭಾರತದಿಂದ ಕೈಜಾರುವಂತೆ ಮಾಡಿತು.
ಟೀಂ ಇಂಡಿಯಾ ಆರಂಭಿಕರು, ದಿಟ್ಟವಾಗಿ ಎದುರಿಸುವ ಪ್ರಯತ್ನ ನಡೆಸಿದರಾದರೂ, ದೊಡ್ಡ ಮೊತ್ತದ ಜತೆಯಾಟವಾಡಲು ವಿಫಲವಾದರು. ಇನ್ನುಳಿದ ಬಹುತೇಕ ಬ್ಯಾಟರ್ಗಳು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗುವಂತೆ ಮಾಡಿದ್ದು ಕೂಡಾ ಹಿನ್ನಡೆಯಾಗಿ ಪರಿಣಮಿಸಿತು.
ಆಸ್ಟ್ರೇಲಿಯಾ ತಂಡವು 76 ರನ್ ಗುರಿ ಬೆನ್ನತ್ತಿದಾಗ ಎರಡನೇ ಎಸೆತದಲ್ಲೇ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿದರೂ ಸಹಾ, ಎರಡನೇ ವಿಕೆಟ್ಗೆ ಮಾರ್ನಸ್ ಲಬುಶೇನ್ ಹಾಗೂ ಟ್ರಾವಿಸ್ ಹೆಡ್ ದಿಟ್ಟ ಬ್ಯಾಟಿಂಗ್ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂತಹ ಪ್ರಯತ್ನ ಟೀಂ ಇಂಡಿಯಾ ಬ್ಯಾಟರ್ಗಳಿಂದ ಕಂಡು ಬರಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.