ಕಾಲ್ತುಳಿತದಿಂದ KSCAಗೆ ಶಾಕ್ ಕೊಟ್ಟ ಬಿಸಿಸಿಐ, ಬೆಂಗಳೂರು ಚಿನ್ನಸ್ವಾಮಿ ಪಂದ್ಯ ಸ್ಥಳಾಂತರ
ಆರ್ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಿಂದ ಕೆಎಸ್ಸಿಎ ತೀವ್ರ ಹಿನ್ನಡೆ ಅನುಭವಿಸಿದೆ. ಎಫ್ಐಆರ್ ಸಂಕಷ್ಟದ ನಡುವೆ ಇದೀಗ ಬಿಸಿಸಿಐ ಶಾಕ್ ಕೊಟ್ಟಿದೆ.

ಆರ್ಸಿಬಿ ಸಂಭ್ರಮಾಚರಣೆ ದುರಂತ ಘಟನೆ ನೋವು ಯಾವತ್ತೂ ಕಡಿಮೆಯಾಗಲ್ಲ. ಇತ್ತ ರಾಜ್ಯ ಸರ್ಕಾರ ಈ ಘಟನೆಯಿಂದ ತೀವ್ರ ಹಿನ್ನಡೆ ಅನುಭವಿಸಿದೆ. ತರಾತುರಿಯಲ್ಲಿ ಪ್ರಚಾರದ ತೆವಲಿಗೆ ಕಾರ್ಯಕ್ರಮ ಆಯೋಜಿಸಿ 11 ಮಂದಿಯ ಬಲಿಪಡೆದಿದೆ ಅನ್ನೋ ಆರೋಪ ಬಲವಾಗುತ್ತಿದೆ. ಇತ್ತ ಆರ್ಸಿಬಿ ಟೀಂ ಮ್ಯಾನೇಜ್ಮೆಂಟ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ಕೆಲವರ ಬಂಧನವಾಗಿದೆ. ಕಾಲ್ತುಳಿತ ಪ್ರಕರಣದಿಂದ ಆರ್ಸಿಬಿ ಹಾಗೂ ಕೆಎಸ್ಸಿಎ ತೀವ್ರ ಸಂಕಷ್ಟದಲ್ಲಿದೆ. ಇದರ ಬೆನ್ನಲ್ಲೇ ಬಿಸಿಸಿಐ ಶಾಕ್ ಕೊಟ್ಟಿದೆ.
ಬಿಸಿಸಿಐ ಇದೀಗ ಬೆಂಗಳೂರು ಸಹವಾಸವೇ ಬೇಡ ಅನ್ನೋ ನಿರ್ಧಾರಕ್ಕೆ ಬಂದಂತಿದೆ. ಕಾರಣ ಚಿನ್ನಸ್ವಾಮಿ ಕ್ರೀಡಾಂಗಣದ ಪಂದ್ಯಗಳನ್ನು ಬಿಸಿಸಿಐ ಸ್ಥಳಾಂತರಿಸಿದೆ. ಕಾಲ್ತುಳಿತ ಪ್ರಕರಣ, ಎಫ್ಐಆರ್, ಜನರ ಆಕ್ರೋಶ ಸೇರಿದಂತೆ ಹಲವು ಕಾರಣಗಳಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ ಪಂದ್ಯಗಳನ್ನು ಸ್ಥಳಾಂತರಿಸಿದೆ. ಹೌದು, ಭಾರತ ಎ ಹಾಗೂ ಸೌತ್ ಆಫ್ರಿಕಾ ಎ ನಡುವಿನ ಪಂದ್ಯವನ್ನು ಬಿಸಿಸಿಐ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಿಂದ ಸ್ಥಳಾಂತರಿಸಿದೆ.
ನವೆಂಬರ್ 13 ರಿಂದ 19ರ ವರೆಗೆ ಭಾರತ ಎ ಹಾಗೂ ಸೌತ್ ಆಫ್ರಿಕಾ ಎ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿತ್ತು. ಆದರೆ ಕಾಲ್ತುಳಿತ ಪ್ರಕರಣದಿಂದ ಇದೀಗ ಬಿಸಿಸಿಐ ಈ ಸರಣಿಯನ್ನು ಬೆಂಗಳೂರಿನಿಂದ ರಾಜ್ಕೋಟ್ಗೆ ಸ್ಥಳಾಂತರ ಮಾಡಿದೆ.ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಮೂರು ಏಕದಿನ ಪಂದ್ಯ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದೆ.
ಬೆಂಗಳೂರು ಪಂದ್ಯಗಳ ಸ್ಥಳಾಂತರಕ್ಕೆ ಕಾಲ್ತುಳಿತ ಪ್ರಕರಣ ಕಾರಣವಲ್ಲ ಎಂದು ಕೆಎಸ್ಸಿಎ ಅಧ್ಯಕ್ಷ ರುಘುರಾಮ್ ಭಟ್ ಹೇಳಿದ್ದಾರೆ. ಇತರ ಕಾರಣಗಳಿಂದ ಸ್ಥಳಾಂತರ ಮಾಡಲಾಗಿದೆ ಎಂದಿದ್ದಾರೆ. ಆದರೆ ಕಾಲ್ತುಳಿತ ಪ್ರಕರಣದ ಬಳಿಕ ಪಂದ್ಯ ಆಯೋಜಿಸಿದರೆ ಬಿಸಿಸಿಐ ಮೇಲಿನ ಟೀಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿಂದ ಪಂದ್ಯ ಸ್ಥಳಾಂರಿಸಲಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣವನ್ನು ಐಸಿಸಿ ಕೂಡ ಗಮನಿಸಿದೆ. ಇದೀಗ ಮಹಿಳಾ ವಿಶ್ವಕಪ್ ಟೂರ್ನಿಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಮುಖ್ಯ ಕ್ರೀಡಾಂಗಣವಾಗಿತ್ತು. ಆದರೆ ಕಾಲ್ತುಳಿತ ಪ್ರಕರಣದಿಂದ ಕೋರ್ಟ್, ಕೇಸ್, ಜನರ ಆಕ್ರೋಶ, ಮುಂದಿನ ದಿನದಳಲ್ಲಿ ಪೊಲೀಸರ ಭದ್ರತೆ ಸೇರಿದಂತೆ ಹಲವು ಕಾರಣಗಳು ಅಡ್ಡಿಯಾಗುವ ಸಾಧ್ಯತೆ ಇದೆ. ಹೀಗಾಗಿ ಮಹಿಳಾ ವಿಶ್ವಕಪ್ ಟೂರ್ನಿ ಪಂದ್ಯದ ಮುಖ್ಯ ಕ್ರೀಡಾಂಗಣ ಬೆಂಗಳೂರಿನಿಂದ ಬೇರೇಡೆಗೆ ಸ್ಥಳಾಂತರ ಮಾಡಲು ಐಸಿಸಿ ಚಿಂತನೆ ನಡೆಸುತ್ತಿದೆ.
ಬೆಂಗಳೂರು ಕಾಲ್ತುಳಿತ ಪ್ರಕರಣದಲ್ಲಿ 11 ಅಭಿಮಾನಿಗಳು ಮೃತಪಟ್ಟಿದ್ದಾರೆ. 56ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರಿಗೆ ರಾಜ್ಯ ಸರ್ಕಾರ 25 ಲಕ್ಷ ರೂಪಾಯಿ, ಆರ್ಸಿಬಿ ತಂಡ 10 ಲಕ್ಷ ರೂಪಾಯಿ, ರಾಜ್ಯ ಕ್ರಿಕೆಟ್ ಸಂಸ್ಥೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಇನ್ನು ಗಾಯಾಳುಗಳ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸಲಿದೆ. ಇತ್ತ ಆರ್ಸಿಬಿ ಕೂಡ ಕೇರ್ ಫಂಡ್ ಆರಂಭಿಸಿದೆ.