ದಾದಾ ಆಸ್ಪತ್ರೆಯಿಂದ ಡಿಸ್ಚಾರ್ಜ್; ನಿಮ್ಮ ಸೇವೆ ಜೀವನಪೂರ್ತಿ ಮರೆಯಲ್ಲ ಎಂದ ಗಂಗೂಲಿ
ಕೋಲ್ಕತ: ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇಲ್ಲಿನ ವುಡ್ಲ್ಯಾಂಡ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೆಲದಿನಗಳ ಹಿಂದಷ್ಟೇ ಲಘು ಹೃದಯಾಘಾತಕ್ಕೆ ತುತ್ತಾಗಿದ್ದ ದಾದಾ 5 ದಿನಗಳ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದಿದ್ದರು.
ಇದೀಗ ಇಂದು(ಜ.07) ಖಾಸಗಿ ಆಸ್ಪತ್ರೆಯಿಂದ ಸೌರವ್ ಗಂಗೂಲಿ ಡಿಸ್ಚಾರ್ಜ್ ಆಗಿದ್ದಾರೆ. ಈ ಸಂದರ್ಭದಲ್ಲಿ ಗಂಗೂಲಿ ಗೆಳೆಯನನ್ನು ನೆನಪಿಸಿಕೊಂಡಿದ್ದಾರೆ. ದಾದಾ ಏನಂದ್ರು ನೀವೇ ನೋಡಿ
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಜನವರಿ 02ರಂದು ವ್ಯಾಯಾಮ ಮಾಡುವ ವೇಳೆ ಲಘು ಹೃದಯಾಘಾತಕ್ಕೆ ಒಳಗಾಗಿದ್ದರು.
ತಕ್ಷಣವೇ ಟೀಂ ಇಂಡಿಯಾ ಮಾಜಿ ನಾಯಕ ಗಂಗೂಲಿಯನ್ನು ಕೋಲ್ಕತದ ವುಡ್ಲ್ಯಾಂಡ್ಸ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ಆಸ್ಪತ್ರೆಯಲ್ಲಿ ದಾದಾಗೆ ಆ್ಯಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ನಡೆಸಿ ಹೃದಯದಲ್ಲಿದ್ದ ಒಂದು ಬ್ಲಾಕೇಜ್ ತೆಗೆದು ಸ್ಟಂಟ್ ಅಳವಡಿಸಲಾಗಿತ್ತು.
ಕರ್ನಾಟಕದ ಖ್ಯಾತ ಹೃದ್ರೋಗ ತಜ್ಞ ಡಾ. ದೇವಿ ಶೆಟ್ಟಿ ಸಹ ಕೋಲ್ಕತದ ವುಡ್ಲ್ಯಾಂಡ್ಸ್ ಆಸ್ಪತ್ರೆಗೆ ಭೇಟಿ ನೀಡಿ ದಾದಾ ಆರೋಗ್ಯ ಸ್ಥಿತಿ ಪರಿಶೀಲನೆ ನಡೆಸಿದ್ದರು.
ವುಡ್ಲ್ಯಾಂಡ್ಸ್ ಆಸ್ಪತ್ರೆಯಲ್ಲಿ ಸೌರವ್ ಗಂಗೂಲಿ 5 ದಿನಗಳ ದಾಖಲಾಗಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಆಸ್ಪತ್ರೆಯಿಂದ ಬಿಡುಗಡೆಯಾದ ಬೆನ್ನಲ್ಲೇ ಬಹುಕಾಲದ ಗೆಳೆಯ ಹಾಗೂ ಬಂಗಾಳ ಕ್ರಿಕೆಟಿಗ ಜಾಯ್ದೀಪ್ ಮುಖರ್ಜಿಗೆ ಧನ್ಯವಾದವನ್ನು ಅರ್ಪಿಸಿದ್ದಾರೆ.
ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ ಜಾಯ್ದೀಪ್ ಮುಖರ್ಜಿ ಜತೆಗಿನ ಫೋಟೋ ಹಂಚಿಕೊಂಡಿದ್ದು, 5 ದಿನದಲ್ಲಿ ಗೆಳೆಯ ಮಾಡಿದ ಸೇವೆಯನ್ನು ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ಕಳೆದ 5 ದಿನಗಳಲ್ಲಿ ನೀವು ನನಗೇನು ಸೇವೆ ಮಾಡಿದ್ದೀರೋ ಅದನ್ನು ನಾನು ಜೀವನ ಪರ್ಯಂತ ಮರೆಯಲು ಸಾಧ್ಯವಿಲ್ಲ. 40 ವರ್ಷಗಳ ಸ್ನೇಹ ಸಂಬಂಧವಾದರೂ ನಿಮ್ಮ ಸೇವೆ ಅನನ್ಯ ಎಂದು ಗೆಳೆಯನನ್ನು ದಾದಾ ನೆನಪಿಸಿಕೊಂಡಿದ್ದಾರೆ.
ಇದೇ ವೇಳೆ ತಮಗೆ ಸೇವೆ ಸಲ್ಲಿಸಿದ ವೈದ್ಯರು, ದಾದಿಯರು ಹಾಗೂ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ ಅಭಿಮಾನಿಗಳಿಗೆ ಸೌರವ್ ಗಂಗೂಲಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.