- Home
- Karnataka Districts
- Bengaluru Urban
- ಬೆಂಗಳೂರು ವಿಜಯನಗರದ 'ಹಾಂಟೆಡ್ ಬ್ಯಾಚುಲರ್ ರೂಮ್' ರಹಸ್ಯ, ಒಂದು ತಿಂಗಳೂ ಉಳಿಯಲಿಲ್ಲ ಬಾಡಿಗೆದಾರರು
ಬೆಂಗಳೂರು ವಿಜಯನಗರದ 'ಹಾಂಟೆಡ್ ಬ್ಯಾಚುಲರ್ ರೂಮ್' ರಹಸ್ಯ, ಒಂದು ತಿಂಗಳೂ ಉಳಿಯಲಿಲ್ಲ ಬಾಡಿಗೆದಾರರು
ನಗರದ ವಿಜಯನಗರದ ಒಂದು ಮೂರು ಮಹಡಿ ಕಟ್ಟಡದ ಮೂರನೇ ಮಹಡಿಯಲ್ಲಿರುವ ಸಣ್ಣ ಬ್ಯಾಚುಲರ್ ರೂಮ್ ಹಲವು ವರ್ಷಗಳಿಂದ ಸ್ಥಳೀಯರ ನಡುವೆ ವಿಚಿತ್ರ ಕಥೆಗಳಿಗೆ ಕಾರಣವಾಗಿದೆ ಎನ್ನಲಾಗಿದೆ. ಈ ಮನೆಯ ನಿಖರ ವಿಳಾಸವನ್ನು ಗೌಪ್ಯತೆ ಕಾರಣದಿಂದ ಬಹಿರಂಗಪಡಿಸಲಾಗುತ್ತಿಲ್ಲ.

ಬೆಂಗಳೂರು ವಿಜಯನಗರ ಹಾಂಟೆಡ್ ರೂಮ್
ನಗರದ ವಿಜಯನಗರದ ಒಂದು ಮೂರು ಮಹಡಿ ಕಟ್ಟಡದ ಮೂರನೇ ಮಹಡಿಯಲ್ಲಿರುವ ಸಣ್ಣ ಬ್ಯಾಚುಲರ್ ರೂಮ್ ಹಲವು ವರ್ಷಗಳಿಂದ ಸ್ಥಳೀಯರ ನಡುವೆ ವಿಚಿತ್ರ ಕಥೆಗಳಿಗೆ ಕಾರಣವಾಗಿದೆ ಎನ್ನಲಾಗಿದೆ. ಈ ಮನೆಯ ನಿಖರ ವಿಳಾಸವನ್ನು ಗೌಪ್ಯತೆ ಕಾರಣದಿಂದ ಬಹಿರಂಗಪಡಿಸಲಾಗುತ್ತಿಲ್ಲ. ಆದರೆ, ಆ ರೂಮ್ಗೆ ಬಾಡಿಗೆಗೆ ಬರುವವರು ಕೆಲವೇ ದಿನಗಳಲ್ಲಿ ಅಥವಾ ಗರಿಷ್ಠ ಒಂದು ತಿಂಗಳೊಳಗೆ ಮನೆ ಖಾಲಿ ಮಾಡುತ್ತಾರೆ ಎಂಬ ಮಾತುಗಳು ಸುತ್ತಮುತ್ತ ಹರಿದಾಡುತ್ತಿವೆ.
ರೂಮ್ನಲ್ಲಿ ವಿಚಿತ್ರ ಅನುಭವ
2024ರಲ್ಲಿ ಹಾಸನ ಮೂಲದ MBA ವಿದ್ಯಾರ್ಥಿ ರಘು ಇದೇ ರೂಮ್ಗೆ ಬಾಡಿಗೆಗೆ ಬಂದಿದ್ದಾನೆ ಎನ್ನಲಾಗುತ್ತದೆ. ಆರಂಭದಲ್ಲಿ ಎಲ್ಲವೂ ಸಹಜವಾಗಿದ್ದರೂ, ಕೆಲವೇ ದಿನಗಳಲ್ಲಿ ರಾತ್ರಿ ನಿದ್ರೆ ಬಾರದಿರುವುದು, ಓದಿನಲ್ಲಿ ಏಕಾಗ್ರತೆ ಕಳೆದುಕೊಳ್ಳುವುದು, ನಿರಂತರ ಖಿನ್ನತೆ, ಆತ್ಮಹತ್ಯೆಯಂತಹ ನಕಾರಾತ್ಮಕ ಆಲೋಚನೆಗಳು ಕಾಡುವುದು ಆರಂಭವಾಯಿತಂತೆ. ಒಂದು ತಿಂಗಳಲ್ಲೇ ಅವನ ಆರೋಗ್ಯ ಹದಗೆಟ್ಟು ದೇಹ ಸಂಪೂರ್ಣ ದುರ್ಬಲಗೊಂಡಿತ್ತೆಂದು ಹೇಳಲಾಗಿದೆ.
ರಘು ಊರಿಗೆ ತೆರಳುವ ಮುನ್ನ ತನ್ನ ಸ್ನೇಹಿತ ಪ್ರಸಾದ್ಗೆ ರೂಮ್ ಕೀ ನೀಡಿ ಕೆಲ ದಿನ ಅಲ್ಲಿ ಉಳಿಯಲು ಅವಕಾಶ ನೀಡಿದ್ದ. ಆದರೆ ಮೊದಲ ದಿನದಿಂದಲೇ ಪ್ರಸಾದ್ಗೂ ಅದೇ ರೀತಿಯ ಅಸ್ವಸ್ಥತೆ, ಕೆಟ್ಟ ವಾಸನೆ, ಅಸಹಜ ಭಯ ಕಾಡತೊಡಗಿತಂತೆ. ರಾತ್ರಿ ಮಲಗಿದ್ದಾಗ, ಎದೆಯ ಮೇಲೆ ನಿಂತಿದ್ದ ಬಿಳಿ ಮುಖದ ಯುವತಿ ಹಾಗೂ ಕಣ್ಣಿನಿಂದ ರಕ್ತ ಹರಿಯುತ್ತಿದ್ದ ಭಯಾನಕ ದೃಶ್ಯ ಕನಸಿನಲ್ಲಿ ಕಂಡಿತ್ತೆಂದು ಆತ ಹೇಳಿಕೊಂಡಿದ್ದಾನೆ.
CCTV ಪರಿಶೀಲನೆ
ಮುಂದಿನ ದಿನ ಮನೆಗೆ ಮರಳಿದರೂ ವಿಚಿತ್ರ ಘಟನೆಗಳು ನಿಂತಿರಲಿಲ್ಲ. ಒಂದು ದಿನ ತಾನು ಹೇಗೆ ವಿಜಯನಗರದ ಆ ರೂಮ್ಗೆ ಮರಳಿ ಹೋಗಿ ಬಿರಿಯಾನಿ ತಿನ್ನುತ್ತಿದ್ದೇನೆ ಎಂಬುದೇ ಗೊತ್ತಾಗದೆ ಬೆಚ್ಚಿಬಿದ್ದಿದ್ದಾನೆ ಎನ್ನಲಾಗಿದೆ. ನಂತರ ಮನೆಯ CCTV ಪರಿಶೀಲಿಸಿದಾಗ, ಮಧ್ಯರಾತ್ರಿ ನಿದ್ದೆಯಲ್ಲೇ ಮನೆ ಬಿಟ್ಟು ಹೊರಟು ವಿಜಯನಗರದ ರೂಮ್ಗೆ ತೆರಳಿದ್ದ ದೃಶ್ಯ ದಾಖಲಾಗಿತ್ತೆಂದು ಕಥೆಯಲ್ಲಿ ಹೇಳಲಾಗಿದೆ.
ಭಯಗೊಂಡ ಕುಟುಂಬ ಪ್ರಸಾದ್ನನ್ನು ದೇವಸ್ಥಾನಕ್ಕೆ ಕರೆದೊಯ್ದು ವಿಶೇಷ ಪೂಜೆ, ತಾಯಿತ ಹಾಗೂ ಹನುಮಾನ್ ಚಾಲೀಸಾ ಪಾರಾಯಣ ಮಾಡಿಸಿದ್ದರ ಬಳಿಕ ಪರಿಸ್ಥಿತಿ ಸಹಜವಾಯಿತಂತೆ. ಬಳಿಕ ಪ್ರಸಾದ್ ಮತ್ತು ಅವನ ಸ್ನೇಹಿತರು ಆ ರೂಮ್ನ ಹಿನ್ನೆಲೆ ಹುಡುಕಿದಾಗ, ಐದು ವರ್ಷಗಳ ಹಿಂದೆ ಅದೇ ಕೋಣೆಯಲ್ಲಿ ಪ್ರೇಮದಲ್ಲಿ ಮೋಸಹೋಗಿದ್ದ ಐಟಿ ಉದ್ಯೋಗಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಮಾಹಿತಿ ಹಳೆಯ ನಿವಾಸಿಗಳಿಂದ ತಿಳಿದುಬಂದಿತ್ತೆಂದು ಹೇಳಲಾಗಿದೆ.
ಆರೋಪ ತಳ್ಳಿಹಾಕಿದ ಮಾಲಿಕ
ಸ್ಥಳೀಯರ ಪ್ರಕಾರ, ಆ ಘಟನೆಯ ಬಳಿಕವೂ ಅನೇಕ ಬ್ಯಾಚುಲರ್ಗಳು ಅಲ್ಲಿ ವಾಸಕ್ಕೆ ಬಂದರೂ ಹೆಚ್ಚು ದಿನ ಉಳಿಯಲಿಲ್ಲ ಎನ್ನಲಾಗಿದೆ. ಆದರೆ ಕಟ್ಟಡದ ಮಾಲೀಕರು ಈ ಎಲ್ಲ ಆರೋಪಗಳನ್ನು ತಳ್ಳಿಹಾಕಿದ್ದು, ಇಂತಹ ವದಂತಿಗಳನ್ನು ಹರಡಬಾರದು ಎಂದು ಎಚ್ಚರಿಕೆ ನೀಡಿರುವುದಾಗಿ ಹೇಳಲಾಗಿದೆ.
ಗಮನಿಸಿ: ಈ ಕಥೆ ಸಾಮಾಜಿಕ ಜಾಲತಾಣಗಳು ಹಾಗೂ ಜನಪ್ರಿಯವಾಗಿ ಹರಿದಾಡುತ್ತಿರುವ ಅನುಭವಗಳ ಆಧಾರಿತವಾಗಿದೆ. ಇದರ ಸತ್ಯಾಸತ್ಯತೆ ಅಥವಾ ವೈಜ್ಞಾನಿಕ ದೃಢೀಕರಣ ಲಭ್ಯವಿಲ್ಲ. ಇದನ್ನು ಕೇವಲ ಜನಪ್ರಿಯ ನಂಬಿಕೆ ಅಥವಾ ಮನರಂಜನಾ ಕಥೆಯಾಗಿ ಮಾತ್ರ ಪರಿಗಣಿಸಬೇಕು.