- Home
- Karnataka Districts
- Bengaluru Urban
- Bengaluru Rains: ಪದೇ ಪದೇ ಜಾಲವೃತಗೊಳ್ಳುವ 10 ಪ್ರದೇಶಗಳಲ್ಲಿ ಮಳೆ ನೀರು ನಿಲ್ಲದಂತೆ ಕ್ರಮ
Bengaluru Rains: ಪದೇ ಪದೇ ಜಾಲವೃತಗೊಳ್ಳುವ 10 ಪ್ರದೇಶಗಳಲ್ಲಿ ಮಳೆ ನೀರು ನಿಲ್ಲದಂತೆ ಕ್ರಮ
ಮಳೆಗಾಲದಲ್ಲಿ ಜಲಾವೃತವಾಗುವ 10 ಪ್ರಮುಖ ಪ್ರದೇಶಗಳಲ್ಲಿ ತಕ್ಷಣದಿಂದ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಪಾಲಿಕೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ತಡೆ ಬನ್ನೇರುಘಟ್ಟ ರಸ್ತೆಯ ಸಂಚಾರ ದಟ್ಟಣೆ ನಿಯಂತ್ರಣದ ಬಗ್ಗೆಯೂ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಬೆಂಗಳೂರು ಮಳೆ
ದಕ್ಷಿಣ ಪಾಲಿಕೆ ವಿಭಾಗದಲ್ಲಿ ಮಳೆಗಾಲದಲ್ಲಿ ಜಲಾವೃತವಾಗುವ 10 ಪ್ರದೇಶಗಳಲ್ಲಿ ನೀರು ನಿಲ್ಲದಂತೆ ತಕ್ಷಣದಿಂದ ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಯುಕ್ತ ಕೆ.ಎನ್.ರಮೇಶ್ ಅಧಿಕಾರಿಗಳಿಗೆ ತಿಳಿಸಿದರು. ಆಯುಕ್ತರು ಶುಕ್ರವಾರ ಸಂಚಾರ ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳ ಸಭೆ ನಡೆಸಿದರು.
ಜಲಾವೃತವಾಗುವ 10 ಪ್ರದೇಶಗಳು
ಮಳೆಗಾಲದಲ್ಲಿ ಜಲಾವೃತವಾಗುವ ಪ್ರದೇಶಗಳಾದ ಹುಳಿಮಾವು ಕೆರೆ ಜಂಕ್ಷನ್, ಸಾಗರ್ ಜಂಕ್ಷನ್ನಿಂದ ಸಾಗರ್ ಆಸ್ಪತ್ರೆ, ಹೆಚ್.ಎಸ್.ಆರ್ ಲೇಔಟ್ 14ನೇ ಮುಖ್ಯ ರಸ್ತೆ, ಸೋನಿ ವರ್ಲ್ಡ್ ಜಂಕ್ಷನ್, ಹೊರವರ್ತುಲ ರಸ್ತೆ, ಹೆಚ್.ಎಸ್.ಆರ್ ಲೇಔಟ್ 5ನೇ ಮುಖ್ಯ ರಸ್ತೆ, ಶ್ರೀ ರಂಗಂ ಜಂಕ್ಷನ್, ಬೆಳ್ಳಂದೂರು - ಇಬ್ಬಲೂರು ಜಂಕ್ಷನ್, ವಿಪ್ರೋ ಜಂಕ್ಷನ್-ಸರ್ಜಾಪುರ ರಸ್ತೆ, ರೂಪೇನ ಅಗ್ರಹಾರ, ಮಡಿವಾಳ ಅಯ್ಯಪ್ಪ ಜಂಕ್ಷನ್ಗಳಲ್ಲಿ ಮಳೆ ಸಂದರ್ಭದಲ್ಲಿ ತೀವ್ರ ನಿಗಾ ವಹಿಸಿ ತುರ್ತು ಪರಿಹಾರ ಕ್ರಮ ವಹಿಸುವಂತೆ ಎಂಜಿನಿಯರ್ಗಳಿಗೆ ತಿಳಿಸಿದರು.
ವಾಹನ ಪಾರ್ಕಿಂಗ್
ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಜಯನಗರಕ್ಕೆ ಮೂರು ವಾಹನ ಹಾಗೂ ಬಿಟಿಎಂ ಲೇಔಟ್, ಬೊಮ್ಮನಹಳ್ಳಿ ಮತ್ತು ಬೆಳ್ಳಂದೂರು ಭಾಗಕ್ಕೆ ಮೂರು ವಾಹನಗಳನ್ನು ಬಳಸಿಕೊಳ್ಳಬೇಕು, ಟೋಯಿಂಗ್ ಮಾಡಿದ ವಾಹನಗಳ ನಿಲುಗಡೆಗೆ ಮಲ್ಲಸಂದ್ರ ಮೈದಾನ ಹಾಗೂ ಎಜಿಎಸ್ ಲೇಔಟ್ ಮೈದಾನ ಬಳಸಿಕೊಳ್ಳಲು ಆಯುಕ್ತರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಲೂಪ್ ವ್ಯವಸ್ಥೆ
ಬನ್ನೇರುಘಟ್ಟ ಮುಖ್ಯರಸ್ತೆ ನೈಸ್ ಜಂಕ್ಷನ್ ನಲ್ಲಿ ಉಂಟಾಗುತ್ತಿರುವ ವಿಪರೀತ ಸಂಚಾರ ದಟ್ಟಣೆ ನಿಯಂತ್ರಿಸಲು ಮೈಸೂರು ರಸ್ತೆಯ ನೈಸ್ ಜಂಕ್ಷನ್ ಮಾದರಿಯಲ್ಲಿ ಬನ್ನೇರುಘಟ್ಟ ಮುಖ್ಯರಸ್ತೆ ನೈಸ್ ಜಂಕ್ಷನ್ ನಲ್ಲಿ ಲೂಪ್ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ತಿಳಿಸಿದರು.
ಕೊಣನಕುಂಟೆ - ಫೋರಂ ಮಾಲ್
ಕನಕಪುರ ಮುಖ್ಯ ರಸ್ತೆಯ ಕೊಣನಕುಂಟೆ - ಫೋರಂ ಮಾಲ್ ಹಾಗೂ ಸಾರಕ್ಕಿ ಜಂಕ್ಷನ್ ಬಳಿ ( ಮೆಟ್ರೋ ನಿಲ್ದಾಣ) ಎಡತಿರುವನ್ನು ಮುಕ್ತಗೊಳಿಸಿ ಸುಗಮ ಸಂಚಾರಕ್ಕಾಗಿ ಪೊಲೀಸರ ಕೋರಿಕೆ ಮೇರೆಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಪಾಲಿಕೆ ಹೆಚ್ಚುವರಿ ಆಯುಕ್ತ ಡಾ.ನವೀನ್ ಕುಮಾರ್ ರಾಜು, ದಕ್ಷಿಣ ಸಂಚಾರ ವಿಭಾಗದ ಡಿಸಿಪಿ ಗೋಪಾಲ್ ಎಂ. ಬ್ಯಾಕೋಡ್, ಮುಖ್ಯ ಎಂಜಿನಿಯರ್ ಬಸವರಾಜ್ ಕಬಾಡೆ ಉಪಸ್ಥಿತರಿದ್ದರು.

