Asianet Suvarna News Asianet Suvarna News

ನರಗುಂದದಲ್ಲಿ ದಿಢೀರ್‌ ಭೂ ಕುಸಿತ: ನಿದ್ದೇ ಮಾಡೋಕು ಭಯ ಪಡ್ತಿದ್ದಾರೆ ಜನ!

ನರ​ಗುಂದ ಜನ​ತೆಗೆ ಭೀತಿ ಹುಟ್ಟಿ​ಸಿದ ಭೂಕುಸಿತ| ಪಟ್ಟ​ಣದ ಹಲವು ಕಡೆ ಮನೆ​ಯೊ​ಳಗೂ ಭೂಕು​ಸಿ​ತ​ದಿಂದ ಕಾಡು​ತ್ತಿ​ರುವ ಭಯ| ಪಟ್ಟಣದ ಕಸಬಾ, ದಂಡಾಪೂರ, ಸೇರಿದಂತೆ ವಿವಿಧ ಕಡೆ 1 ತಿಂಗಳಿಂದ ಪದೇ ಪದೇ ಭೂಕುಸಿತ|  ರಾತ್ರಿ ಮನೆಯಲ್ಲಿ ಮಲಗಿ ನಿದ್ರೆ ಮಾಡಲು ಭಯ|

Landslide in Naragund in Gadag District
Author
Bengaluru, First Published Oct 30, 2019, 10:36 AM IST

ಎಸ್‌.ಜಿ. ತೆಗ್ಗಿನಮನಿ

ನರಗುಂದ[ಅ.30]: ಕಳೆದ ಮೂರು ತಿಂಗಳಿಂದ ಅತಿಯಾದ ಮಳೆಯ ಕಾರಣ ಪಟ್ಟ​ಣ​ದ ಹಲವಾರು ಬಡಾವಣೆಗಳಲ್ಲಿ ಭೂ ಕುಸಿತ ಸಂಭ​ವಿ​ಸುತ್ತಿದ್ದು, ಸಾರ್ವಜನಿಕರು ಜೀವ ಭಯದಲ್ಲಿ ಬದುಕುತ್ತಿದ್ದಾರೆ. ಇದ್ದ​ಕ್ಕಿ​ದ್ದಂತೆ ಪಟ್ಟ​ಣ​ದ ಹಲವು ಕಡೆ ಭೂಕು​ಸಿತವಾಗು​ತ್ತಿ​ರು​ವುದು ಜನ​ರಲ್ಲಿ ಮುಂದೇ​ನಾ​ಗು​ವುದೋ ಎಂಬ ಭೀತಿ​ ಹುಟ್ಟಿ​ಸಿದೆ.

ಪಟ್ಟಣದ ಕಸಬಾ ಓಣಿಯ ಡಿ.ಬಿ. ಪಾಟೀಲರ ಮನೆಯಲ್ಲಿ ರಾತ್ರಿ ನಿದ್ರೆಗೆ ಜಾರಿದಾ​ಗಲೇ ದಿಢೀರ್‌ ಭೂ ಕುಸಿತ ಸಂಭ​ವಿ​ಸಿದ್ದು, ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಭೂಕುಸಿತ ಸಪ್ಪಳ ಕೇಳಿ ಅಕ್ಕಪಕ್ಕದ ಮನೆಯವರು ಬಂದು ಡಿ.ಬಿ. ಪಾಟೀಲರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಸೇರಿಸಿದ್ದರು. ಅದೇ ರೀತಿ ಭಾನುವಾರ ವಕೀಲ ವಿಶ್ವನಾಥ ದೇಶಪಾಂಡೆಯವರ ಮನೆಯ ಹಿತ್ತಲಲ್ಲಿ, ಅವ​ರ ತಂದೆ ರತ್ನಾಕರ ದೇಶಪಾಂಡೆ ಹೂವು ಕೀಳುತ್ತಿದ್ದಾಗಲೇ ಅದೇ ಜಾಗ ಕುಸಿದು ಅವರು ಗುಂಡಿಯೊಳಗೆ ಸಿಲುಕಿದ್ದರು. ತಕ್ಷಣವೇ ಅಕ್ಕ ಪಕ್ಕದ ಜನತೆ ಹಗ್ಗದ ಹಾಗೂ ಏಣಿಯ ಸಹಾಯದಿಂದ ಅವರನ್ನು ಮೇಲೆಳೆದುಕೊಂಡು ರಕ್ಷಣೆ ಮಾಡಿದ ಘಟನೆ ಜರುಗಿದೆ.

ಜನತೆ ಆತಂಕದಲ್ಲಿ:

ಪಟ್ಟಣದ ಕಸಬಾ, ದಂಡಾಪೂರ, ಸೇರಿದಂತೆ ವಿವಿಧ ಕಡೆ 1 ತಿಂಗಳಿಂದ ಪದೇ ಪದೇ ಭೂಕುಸಿತ ಆಗುತ್ತಿದ್ದರಿಂದ ಇಲ್ಲಿನ ನಿವಾಸಿಗಳು ಆತಂಕಕ್ಕೆ ಸಿಲುಕಿದ್ದಾರೆ. ಅದೇ ರೀತಿ ರಾತ್ರಿ ಮನೆಯಲ್ಲಿ ಮಲಗಿ ನಿದ್ರೆ ಮಾಡಲು ಭಯ ಪಡುತ್ತಿದ್ದಾರೆ.

ಸಚಿವರ ಭೇಟಿ:

ಇತ್ತೀ​ಚೆಗೆ ಪಟ್ಟ​ಣದ ನಿವಾಸಿ ದೇಶಪಾಂಡೆ ಅವರ ಹಿತ್ತಲದಲ್ಲಿ ಭೂಕುಸಿತ ಸಂಭ​ವಿ​ಸಿದ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ಪರಿಸರ ಖಾತೆ ಸಚಿವ ಸಿ.ಸಿ. ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿ, ಕಸಬಾ ಹಾಗೂ ಇನ್ನಿತರ ಪ್ರದೇಶದಲ್ಲಿ ಅಂತರ್ಜಲದಿಂದ ಭೂ ಕುಸಿತವಾಗಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳು ತಜ್ಞರ ತಂಡ ಕರೆಸಿ ಇದಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳು ಸೂಚಿಸಿದರು.

ಪಟ್ಟಣದ ಅನೇಕ ಕಡೆ ಕಳೆದ 1 ತಿಂಗಳಿಂದ ಸಾರ್ವಜನಿಕರು ಮನೆ ಮತ್ತು ಹಿತ್ತಲಗಳಲ್ಲಿ ಭೂಕುಸಿತ ಹೆಚ್ಚಾಗಿದ್ದರಿಂದ ಪಟ್ಟಣದ ಜನತೆ ಜೀವ ಭಯದಲ್ಲಿ ಬದುಕುತ್ತಿದ್ದಾರೆ. ಆದ್ದರಿಂದ ಪುರಸಭೆ ಅಧಿಕಾರಿಗಳು ಭೂ ವಿಜ್ಞಾನ ತಜ್ಞರನ್ನು ಕರೆಯಿಸಿ ಏಕೆ ಭೂಕುಸಿತ ಆಗುತ್ತದೆ ಎಂದು ಅಧ್ಯಯನ ಮಾಡಿಸಿ ಮುಂದಿನ ದಿನಗಳಲ್ಲಿ ಈ ರೀತಿ ಭೂಕುಸಿತ ಆಗದ ಹಾಗೆ ನೋಡಿಕೊಳ್ಳಬೇಕೆಂದು ಕನ್ನಡಪರ ಸಂಘಟನೆ ಮುಖಂಡ ಚನ್ನು ನಂದಿ ಆಗ್ರಹ ಮಾಡಿದರು.

ಹಿಂದೆ ಸಹ ಭೂಕು​ಸಿ​ತ:

ಈ ಹಿಂದೆ 2007 ಹಾಗೂ 2009ನೇ ಸಾಲಿನಲ್ಲಿ ತಾಲೂಕಿನಲ್ಲಿ ಅತಿಯಾದ ಮಳೆಯಾಗಿದ್ದರಿಂದ ಅಂದಿನ ಸಮಯದಲ್ಲಿ ಇದೇ ರೀತಿ ಪಟ್ಟಣದಲ್ಲಿ ಹಲವಾರು ಕಡೆ ಭೂಕುಸಿತವಾಗಿದ್ದರಿಂದ ಅಂದು ಸಚಿವರಾಗಿದ್ದ ಸಿ.ಸಿ. ಪಾಟೀಲರು ಭೂ ವಿಜ್ಞಾನಿಗಳಿಂದ ಅಧ್ಯಯನ ಮಾಡಿಸಿದ್ದರು. ಆಗ ಶೋಧ ನಡೆ​ಸಿದ್ದ ವಿಜ್ಞಾನಿಗಳು, ಅತಿಯಾದ ಮಳೆಯಾಗಿ ಅಂತರ್ಜಲ ಹೆಚ್ಚಾಗುವುದರಿಂದ ಭೂಕುಸಿತವಾಗುತ್ತದೆ ಎಂದು ಹೇಳಿದ್ದರು.

ನಂತರ ಕಳೆದ ನಾಲ್ಕು-ಐದು  ವರ್ಷದಿಂದ ತಾಲೂಕಿನಲ್ಲಿ ಭೀಕರ ಬರಗಾಲ ಬಿದ್ದಿರು​ವು​ದ​ರಿಂದ ಪಟ್ಟಣದಲ್ಲಿ ಯಾವುದೇ ರೀತಿ ಭೂಕುಸಿತ ಕಂಡು ಬಂದಿರಲಿಲ್ಲ. ಆದರೆ ಪ್ರಸಕ್ತ ವರ್ಷ ಆಗಸ್ಟ್‌ ತಿಂಗಳಿಂದ ಈ ಭಾಗದಲ್ಲಿ ಭಾರಿ ಮಳೆ ಸುರಿ​ಯು​ತ್ತಿ​ರು​ವು​ದ​ರಿಂದ ಪಟ್ಟಣದ ಕಸಬಾ, ದಂಡಾಪೂರ, ದೇಸಾಯಿ ಬಾವಿ ಓಣಿ ಸೇರಿದಂತೆ ಮುಂತಾದ ಕಡೆ ಕಳೆದ 1 ತಿಂಗಳಿಂದ ಭೂಕುಸಿತ ಆಗುತ್ತಿರುವು​ದ​ರಿಂದ ಪಟ್ಟಣದ ಜನತೆಗೆ ಏನೂ ತಿಳಿಯದಾಗಿದೆ.

ಈ ಬಗ್ಗೆ ಮಾತನಾಡಿದ ನರಗುಂದ ಪುರಸಭೆ ಸಹಾಯಕ ಎಂಜಿನಿಯರ್‌ ಬಿ.ಎ. ನದಾಫ್‌ ಅವರು, ಕಳೆದ 1 ತಿಂಗಳಿಂದ ಪಟ್ಟಣದಲ್ಲಿ ಹಲವಾರು ಕಡೆ ಭೂಕುಸಿತ ಸಂಭ​ವಿ​ಸು​ತ್ತಿದೆ. ಈ ಬಗ್ಗೆ ಶೀಘ್ರದಲ್ಲಿ ತಜ್ಞರನ್ನು ಕರೆಯಿಸಿ ಈ ರೀತಿ ಭೂಕುಸಿತ ಆಗುವುದಕ್ಕೆ ಕಾರಣ ತಿಳಿದುಕೊಂಡು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. 
 

Follow Us:
Download App:
  • android
  • ios