Asianet Suvarna News Asianet Suvarna News

ಗದಗ: ಯಡಿಯೂರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್‌ ಪ್ರತಿಭಟನೆ

ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಮುಖಂಡರು|ಬಿಜೆಪಿ ಆಡಳಿತ ವೈಖರಿ ಪ್ರಜಾಪ್ರಭುತ್ವದ ಕಗ್ಗೊಲೆ ಹಾಗೂ ಸಂವಿಧಾನ ವಿರೋಧಿ ಕೃತ್ಯ| ಕಾಂಗ್ರೆಸ್‌ ಮುಕ್ತ ಎನ್ನುವ ಮೋದಿ, ಅಮಿತ್‌ ಷಾ ಅವರ ಘೋಷಣೆಯನ್ನು ಈಡೇರಿಸುವ ನಿಟ್ಟಿನಲ್ಲಿ ಎಲ್ಲೆಡೆ ಈ ರೀತಿಯಲ್ಲಿ ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆ|

Congress Demand to Yediyurappa Resign CM Post
Author
Bengaluru, First Published Nov 6, 2019, 8:27 AM IST

ಗದಗ[ನ.6]: ಹಣದ ಆಮಿಷವೊಡ್ಡಿ ಶಾಸಕರ ಖರೀದಿಸಿ, ವಾಮಮಾರ್ಗದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿರುವ ಸಿಎಂ ಬಿ.ಎಸ್‌. ಯಡಿಯೂರಪ್ಪ ಹಾಗೂ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ ಕೇಂದ್ರ ಗೃಹ ಸಚಿವ ಅಮಿತ್‌ ಷಾ ರಾಜೀನಾಮೆಗೆ ಆಗ್ರಹಿಸಿ ಜಿಲ್ಲಾ ಯುವ ಕಾಂಗ್ರೆಸ್‌ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಿ.ಎಸ್‌. ಪಾಟೀಲ, ಕಾಂಗ್ರೆಸ್‌, ಜೆಡಿಎಸ್‌ನ ಕೆಲ ಶಾಸಕರಿಗೆ ಹಣದ ಆಮಿಷ ವೊಡ್ಡಿ, ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿದ ಬಿಜೆಪಿ ಆಡಳಿತ ವೈಖರಿ ಪ್ರಜಾಪ್ರಭುತ್ವದ ಕಗ್ಗೊಲೆ ಹಾಗೂ ಸಂವಿಧಾನ ವಿರೋಧಿ ಕೃತ್ಯವಾಗಿದೆ. ಇದಕ್ಕೆ ಉತ್ತಮ ಸಾಕ್ಷಿ ಎನ್ನುವಂತೆ ಈಚೆಗೆ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕೋರ್‌ ಕಮೀಟಿ ಸಭೆಯಲ್ಲಿ ಸ್ವತಃ ಬಿ.ಎಸ್‌.ಯಡಿಯೂರಪ್ಪ ಮಾತನಾಡಿದ ಆಡಿಯೋ ಬಹಿರಂಗವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಆಡಿಯೋದಲ್ಲಿ ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದು, ಇದೆಲ್ಲಾ ಅಮಿತ್‌ ಷಾ ಅವರ ನಿರ್ದೇಶನದ ಮೂಲಕ ನಡೆದಿದೆ, ಆದರೆ ಶಾಸಕರಾದ ನೀವು ಇದಕ್ಕೆ ವ್ಯತಿರಿಕ್ತವಾಗಿ ಮಾತನಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದು ಗಮನಿಸಿದಾಗ, ಸರ್ಕಾರ ಪತನಗೊಳಿಸಿದ್ದು ಬಿಜೆಪಿಯವರೇ ಎನ್ನುವುದು ಖಚಿತವಾಗುತ್ತದೆ. ಅದಕ್ಕಾಗಿ ತಕ್ಷಣವೇ ಅವರ ಸರ್ಕಾರವನ್ನು ವಜಾಗೊಳಿಸಬೇಕು ಮತ್ತು ಅಮಿತ್‌ ಷಾ ರಾಜೀನಾಮೆ ಪಡೆಯಬೇಕು.

ಈಚೆಗೆ ನಡೆದ ಲೋಕಸಭಾ ಚುನಾವಣೆಗಳಲ್ಲಿ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕಾಗಿದ್ದ ಬಿಜೆಪಿ ನಾಯಕರು ಮತಯಂತ್ರಗಳನ್ನು ದುರುಪಯೋಗ ಪಡಿಸಿಕೊಂಡು ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ ಮುಕ್ತ ಎನ್ನುವ ಮೋದಿ, ಅಮಿತ್‌ ಷಾ ಅವರ ಘೋಷಣೆಯನ್ನು ಈಡೇರಿಸುವ ನಿಟ್ಟಿನಲ್ಲಿ ಎಲ್ಲೆಡೆ ಈ ರೀತಿಯಲ್ಲಿ ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಜಿಪಂ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ, ಜಿಪಂ ಸದಸ್ಯ ವಾಸಪ್ಪ ಕುರುಡಗಿ, ಫಕ್ಕೀರಪ್ಪ ಹೆಬಸೂರ, ವಿ.ಆರ್‌. ಗುಡಿಸಾಗರ, ವಿ.ಬಿ. ಸೋಮನಕಟ್ಟಿಮಠ, ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ, ನೀಲಮ್ಮ ಬೋಳನವರ, ನಾಗರತ್ನಾ ಮುಳಗುಂದ, ಐ.ಎಸ್‌. ಪಾಟೀಲ, ಬಿ.ಬಿ. ಅಸೂಟಿ, ವಿದ್ಯಾಧರ ದೊಡ್ಡಮನಿ, ಬಸವರಾಜ ಕಡೇಮನಿ, ಉಮರ್‌ಫಾರೂಕ್‌ ಹುಬ್ಬಳ್ಳಿ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಅಶೋಕ ಮಂದಾಲಿ ಮುಂತಾದವರು ಹಾಜರಿದ್ದರು.

Follow Us:
Download App:
  • android
  • ios