Asianet Suvarna News Asianet Suvarna News

ಶರಣರ ವಚನಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ; ಡಾ. ಸಿದ್ದರಾಮ ಸ್ವಾಮೀಜಿ

ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದ ಅಂಗವಾಗಿ ತಿಂಗಳ ಪರ್ಯಂತ ಜರುಗಿದ ವಿಶ್ವಧರ್ಮ ಪ್ರವಚನ ಮುಕ್ತಾಯ ಸಮಾರಂಭದ ಸಾನಿಧ್ಯವಹಿಸಿ ಡಾ. ಸಿದ್ದರಾಮ ಸ್ವಾಮೀಜಿ ಮಾತನಾಡಿದರು.

You cannot put a price on the sharanara vachana says siddarama swamiji rav
Author
First Published Jul 17, 2023, 5:34 AM IST

ಮುಂಡರಗಿ (ಜು.17) :  ಶರಣರ ವಚನಗಳೆಂದರೆ ಅವು ಬಹಳ ಅಮೂಲ್ಯವಾದವುಗಳು. ಅವುಗಳಿಗೆ ಎಂದೂ ಬೆಲೆ ಕಟ್ಟಲು ಸಾಧ್ಯವಿಲ್ಲ. ವಚನಗಳಿಗೆ ಸಾಟಿ ವಚನಗಳೇ ಆಗಿವೆ. ವಚನಗಳನ್ನು ನಿರಂತರವಾಗಿ ಅಭ್ಯಾಸ ಮಾಡಿ ಅವುಗಳಲ್ಲಿನ ಸಾರವನ್ನು ಗ್ರಹಿಸಿ, ಆ ವಿಷಯವನ್ನು ತಮ್ಮೆಲ್ಲರ ಹೃದಯಕ್ಕೆ ತಲುಪಿಸುವ ಕಾರ್ಯವನ್ನು ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ನಾಡಿನಾದ್ಯಂತ ಅತ್ಯಂತ ಯಶಸ್ವಿಯಾಗಿ ಮಾಡುತ್ತಾ ಬಂದಿದ್ದಾರೆ ಎಂದು ಗದಗ ತೋಂಟದಾರ್ಯ ಮಠದ ಜ.ಡಾ. ಸಿದ್ದರಾಮ ಸ್ವಾಮೀಜಿ ಹೇಳಿದರು.

ಅವರು ಶನಿವಾರ ಸಂಜೆ ಮುಂಡರಗಿ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದ ಅಂಗವಾಗಿ ತಿಂಗಳ ಪರ್ಯಂತ ಜರುಗಿದ ವಿಶ್ವಧರ್ಮ ಪ್ರವಚನ ಮುಕ್ತಾಯ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು.

ಗುರಿ, ಗುರು ಇಲ್ಲದ ಜೀವನ ವ್ಯರ್ಥ: ರಂಭಾಪುರಿ ಶ್ರೀಗಳು

ಶಿವಶರಣರ ವಚನ ಸಾಹಿತ್ಯ ಶ್ರೇಷ್ಠವಾದ ಸಾಹಿತ್ಯ. ಅದರಲ್ಲಿ ಅನೇಕ ವಿಶ್ವಮಾನ್ಯ ಮೌಲ್ಯಗಳಿರುವುದರಿಂದ ಅದಕ್ಕೆ ವಿಶೇಷವಾಗಿರುವ ಮಹತ್ವ, ಘನತೆ ಬಂದಿರುವುದನ್ನು ಕಾಣಬಹುದು. ಕನ್ನಡ ಸಾಹಿತ್ಯಕ್ಕೆ ಒಂದು ರೀತಿಯ ಮೆರಗನ್ನು ತಂದು ಕೊಟ್ಟಿರುವ, ಕನ್ನಡ ಸಾಹಿತ್ಯದ ಸ್ಥಾನ, ಮಾನವನ್ನು ಹೆಚ್ಚಿಸಿದಂತ, ಕನ್ನಡ ಸಾಹಿತ್ಯವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಲು ಸಹಾಯಕವಾದ ಸಾಹಿತ್ಯ ಎಂದರೆ ವಚನ ಸಾಹಿತ್ಯ. ಅದರಲ್ಲಿ ಅದ್ಭುತವಾದ ಮೌಲ್ಯಗಳಿವೆ. ಅವು ಸಾಮಾಜಿಕ, ಸಾಂಸ್ಕೃತಿಕ ಅಥವಾ ಧಾರ್ಮಿಕ ಮೌಲ್ಯಗಳು ಎಂದರು.

ಇಂತಹ ಅನೇಕ ಮೌಲ್ಯಗಳಿಂದ ಕೂಡಿರುವ ಒಂದು ಸಾಹಿತ್ಯ ನಿಜಕ್ಕೂ ಅದು ಕನ್ನಡದ ಶಿವಶರಣ ಸಾಹಿತ್ಯ ಎನ್ನುವುದನ್ನು ನೆನಪಿಸಿಕೊಳ್ಳಬೇಕು. ಅಂತಹ ಶ್ರೇಷ್ಠ ಸಾಹಿತ್ಯವನ್ನು ಎಲ್ಲರೂ ಅಧ್ಯಯನ ಮಾಡುವುದು ಬಹಳ ಮುಖ್ಯ. ಇದಕ್ಕೆ ಕಾರಣ ವಚನಗಳಲ್ಲಿ ಸಮಾನತೆ ತತ್ವ, ಕಾಯಕ ತತ್ವ, ದಾಸೋಹ ತತ್ವಗಳ ಜತೆಗೆ ಸಾಮಾಜಿಕ ಅನಿಷ್ಟಗಳನ್ನು ದೂರ ಮಾಡುವ ಸಂದೇಶಗಳು ಇರುವುದರಿಂದ ಈ ಸಾಹಿತ್ಯ ಶ್ರೇಷ್ಠತರವಾದ ಸಾಹಿತ್ಯವಾಗಿದೆ ಎಂದರು.

ಪ್ರವಚನಕಾರ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯನ ಜೀವನದಲ್ಲಿ ಶ್ರದ್ಧೆ ಬಹಳ ಮುಖ್ಯ. ಪ್ರಸ್ತುತ ವರ್ಷದ ಪ್ರವಚನ ಕಮೀಟಿ ಹಾಗೂ ಸೇವಾ ಸಮಿತಿ, ಶ್ರೀಮಠದ ಗುರುಹಿರಿಯರು ಎಲ್ಲರೂ ಸಹ ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿದ್ದಕ್ಕಾಗಿ ಪ್ರವಚನ ಯಶಸ್ವಿಯಾಗಿದೆ. ಪಟ್ಟಣದ ಎಲ್ಲ ಮಹಾ ಜನತೆ ತನು, ಮನ, ಧನದಿಂದ ಸಹಾಯ ಸಹಕಾರ ನೀಡಿದ್ದಾರೆ. ನಿತ್ಯ ಸಂಜೆ ಎಲ್ಲರೂ ಶ್ರೀಮಠಕ್ಕೆ ಬಂದು ಪ್ರವಚನ ಆಲಿಸಿದ್ದಾರೆ. ನೆರೆಯ ಬೂದಿಹಾಳ ಗ್ರಾಮವೂ ಸೇರಿದಂತೆ ವಿವಿಧ ಗ್ರಾಮಗಳಿಂದ ನಿತ್ಯವೂ ಭಕ್ತರು ಆಗಮಿಸಿ ಪ್ರವಚನ ಆಲಿಸಿದ್ದಾರೆ. ಮಾಧ್ಯಮಗಳು ಹೆಚ್ಚು ಪ್ರಚಾರ ಮಾಡಿದ್ದರಿಂದಾಗಿ ಇಲ್ಲಿ ಬರಲಾರದವರು ನಾಡಿನ ತುಂಬೆಲ್ಲ ಮನೆಯಲ್ಲಿಯೇ ಕುಳಿತುಕೊಂಡು ನಮ್ಮ ನಿತ್ಯದ ಪ್ರವಚನದ ಸಾರವನ್ನು ಜನತೆ ಓದಿ ಆನಂದಿಸಿದ್ದಾರೆ. ಹೀಗಾಗಿ ಪ್ರವಚನ ಯಶಸ್ವಿಗೆ ಕಾರಣರಾದ ಎಲ್ಲರಿಗೂ ಶ್ರೀಮಠದ ಪರವಾಗಿ ಅಭಿನಂದಿಸುವೆ ಎಂದರು.

ಈ ಸಂದರ್ಭದಲ್ಲಿ ಪ್ರವಚನ ಸಮಿತಿ ಎಲ್ಲ ಪದಾಧಿಕಾರಿಗಳಿಗೆ ಹಾಗೂ ದಾನಿಗಳಾದ ಬಸಯ್ಯ ಗಿಂಡಿಮಠ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಗೋಣಿ ರುದ್ರದೇವರು, ಮಾಜಿ ಸಚಿವ ಎಸ್‌.ಎಸ್‌. ಪಾಟೀಲ, ಪವನ್‌ ಚೋಪ್ರಾ, ಓಂಪ್ರಕಾಶ ಲಿಂಗಶೆಟ್ಟರ, ದೇವು ಹಡಪದ, ಶಿವಕುಮಾರ ಬೆಟಗೇರಿ, ವಿಶ್ವನಾಥ ಉಳ್ಳಾಗಡ್ಡಿ, ವೀರೇಂದ್ರ ಅಂಗಡಿ, ಎಚ್‌. ವಿರೂಪಾಕ್ಷಗೌಡ, ಬಸಯ್ಯ ಗಿಂಡಿಮಠ, ಕೆ.ಎಫ್‌. ಅಂಗಡಿ, ಅಶೋಕ ಹುಬ್ಬಳ್ಳಿ, ದೇವಪ್ಪ ರಾಮೇನಹಳ್ಳಿ, ಆನಂದಗೌಡ ಪಾಟೀಲ, ಗಿರೀಶಗೌಡ ಪಾಟೀಲ, ವೀರಣ್ಣ ತುಪ್ಪದ, ಪಾಲಾಕ್ಷಿ ಗಣದಿನ್ನಿ, ಮಹೇಶ ಅರಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕೊಟ್ರೇಶ ಅಂಗಡಿ ಸ್ವಾಗತಿಸಿ, ನಿರೂಪಿಸಿದರು.

ಗೋ ಹತ್ಯೆ, ಮತಾಂತರ ನಿಷೇಧ ಕಾನೂನು ರದ್ದು ಬೇಡ: ರಂಭಾಪುರಿ ಶ್ರೀ


ನಮ್ಮ ಶರಣರು ದೇವರಿಗಿಂತ ಕಾಯಕಕ್ಕೆ ಹೆಚ್ಚು ಮಹತ್ವ ಕೊಟ್ಟರು. ಶರಣರ ಕಾಯಕ ತತ್ವ, ದಾಸೋಹ ತತ್ವವನ್ನು ಜಗತ್ತಿನ ಎಲ್ಲ ದೇಶಗಳೂ ಆಚರಣೆಯಲ್ಲಿ ತಂದಿದ್ದರೆ ಖಂಡಿತವಾಗಿಯೂ ಈ ಜಗತ್ತಿನಲ್ಲಿ ಬಡತನ ಇರುತ್ತಿರಲಿಲ್ಲ. ಆದರೆ ಅದು ಆಚರಣೆಯಾಗುತ್ತಿಲ್ಲ.

ಜ.ಡಾ. ಸಿದ್ದರಾಮ ಸ್ವಾಮೀಜಿ
 

Follow Us:
Download App:
  • android
  • ios