Asianet Suvarna News Asianet Suvarna News

Char Dham Yatra: ಮೋಕ್ಷದ ಹಾದಿ ಚಾರ್‌ಧಾಮ್ ಯಾತ್ರೆ

ವಿಷ್ಣುವು ರಾಮೇಶ್ವರಂನಲ್ಲಿ ಸ್ನಾನ ಮಾಡಿ, ಬದ್ರಿಯಲ್ಲಿ ಧ್ಯಾನ ಮಾಡಿ, ಪುರಿಯಲ್ಲಿ ಊಟ ಮಾಡಿ, ದ್ವಾರಕೆಯಲ್ಲಿ ವಿಶ್ರಾಂತಿ ಪಡೆಯುತ್ತಾನೆಂಬ ನಂಬಿಕೆಯಿದೆ. ವಿಷ್ಣುವಿನ ನೆಚ್ಚಿನ ಈ ಸ್ಥಳಗಳ ಯಾತ್ರೆಯೇ ಚಾರ್‌ಧಾಮ್ ಯಾತ್ರೆ. 

Why do people undertake Char Dham Yatra skr
Author
Bangalore, First Published Dec 10, 2021, 5:55 PM IST

ಯಾತ್ರೆಗಳು ವ್ಯಕ್ತಿಗೆ ಬದುಕಿನಲ್ಲಿ ಬಹಳಷ್ಟನ್ನು ಕಲಿಸುತ್ತವೆ. ಅದರಲ್ಲೂ ಆಧ್ಯಾತ್ಮವಾಗಿ ಕೈಗೊಳ್ಳುವ ಯಾತ್ರೆಯಿಂದಾಗಿ ಬದುಕು, ಹುಟ್ಟು, ಸಾವು, ಒಪ್ಪಿಕೊಳ್ಳುವಿಕೆ, ಸಾಮರಸ್ಯ ಮುಂತಾದ ವಿಷಯಗಳಲ್ಲಿ ಏಳುವ ಹಲವಾರು ಪ್ರಶ್ನೆಗಳಿಗೆ ಸಮಾಧಾನದ ಉತ್ತರ ಸಿಗುತ್ತದೆ. ಹಿಂದೂಗಳು ಕೈಗೊಳ್ಳುವ ಇಂಥದೊಂದು ವಿಶೇಷ ಯಾತ್ರೆಯೇ ಚಾರ್‌ಧಾಮ್ ಯಾತ್ರೆ. 

ಚಾರ್‌ಧಾಮ್ ಎಂದರೇನು?
'ಚಾರ್' ಎಂದರೆ ನಾಲ್ಕು ಎಂದೂ 'ಧಾಮ್' ಎಂದರೆ ಪವಿತ್ರ ದೇವಾಲಯಗಳೂ ಆಗಿವೆ. ಅಂದರೆ ನಾಲ್ಕು ಪ್ರಮುಖ ದೇವಾಲಯಗಳಿಗೆ ಕೈಗೊಳ್ಳುವ ಯಾತ್ರೆ ಇದಾಗಿದೆ. ವಿಷ್ಣುವಿನ ಅನುಯಾಯಿಗಳ ಪ್ರಕಾರ ಈ ಚಾರ್‌ಧಾಮ್ ಯಾತ್ರೆಯು ಮೋಕ್ಷಕ್ಕೆ ದಾರಿಯಾಗಿದೆ. ಈ ನಾಲ್ಕು ಧಾಮಗಳೆಂದರೆ ಬದ್ರಿನಾಥ್(Badrinath), ದ್ವಾರಕಾ(Dwaraka), ಪುರಿ(Puri) ಹಾಗೂ ರಾಮೇಶ್ವರಂ(Rameshwaram). ಪ್ರತಿ ಹಿಂದೂಗಳೂ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಈ ಚಾರ್‌ಧಾಮ್ ಯಾತ್ರೆ ಕೈಗೊಳ್ಳಬೇಕು ಎಂಬ ನಂಬಿಕೆಯಿದೆ. 

Marriage Horoscope 2022: ಈ ರಾಶಿಗಳಿಗೆ ಕೂಡಿ ಬರಲಿದೆ ಕಂಕಣ

ಶಂಕರಾಚಾರ್ಯರು ಹಾಕಿದ ತಳಹದಿ
ಆದಿ ಶಂಕರಾಚಾರ್ಯ(Adi Shankaracharya)ರು ಈ ನಾಲ್ಕು ದೇವಾಲಯಗಳ ಯಾತ್ರೆಗೆ ಬುನಾದಿ ಹಾಕಿದವರು. ಅವರೇ ಈ ಚಾರ್‌ಧಾಮ್‌ಗಳ ಸ್ಥಾಪನೆಗೆ ಅಡಿಗಲ್ಲು ಹಾಕಿದ್ದಾರೆ. ಈ ನಾಲ್ಕು ಧಾಮಗಳು ಭಾರತದ ನಾಲ್ಕು ಭಾಗಗಳಲ್ಲಿವೆ. ಬದ್ರಿನಾಥ ಉತ್ತರದಲ್ಲಿದ್ದರೆ, ರಾಮೇಶ್ವರಂ ದಕ್ಷಿಣದಲ್ಲಿದೆ. ಜಗನ್ನಾಥ್ ಪುರಿ ಪೂರ್ವದಲ್ಲಿದ್ದರೆ, ಪಶ್ಚಿಮದಲ್ಲಿ ದ್ವಾರಕಾ ಇದೆ. ಅಷ್ಟೇ ಅಲ್ಲ, ಈ ನಾಲ್ಕು ಧಾಮಗಳು ನಾಲ್ಕು ಯುಗಗಳಲ್ಲಿ ನಡೆದ ಕ್ರಿಯೆಗಳನ್ನು ಸೂಚಿಸುತ್ತವೆ. 
ಅಂದರೆ, ಸತ್ಯಯುಗದಲ್ಲಿ ಬದ್ರಿಯಲ್ಲಿ ನರ- ನಾರಾಯಣ ತಪಸ್ಸು ಮಾಡಿದರು. ತ್ರೇತಾಯುಗದಲ್ಲಿ ರಾಮನು ಲಂಕೆಗೆ ಸಮುದ್ರ ದಾಟುವ ಮುನ್ನ ಶಿವ(Shiva)ನನ್ನು ಪೂಜಿಸಿದ್ದು ರಾಮೇಶ್ವರದಲ್ಲಿ. ದ್ವಾಪರದಲ್ಲಿ ಕೃಷ್ಣನು ಜರಾಸಂಧನಿಂದ ತಪ್ಪಿಸಿಕೊಂಡು ಮಥುರಾ(Mathura)ದಿಂದ ದ್ವಾರಕೆಗೆ ಹೋದನು. ಪುರಿಯು ಕಲಿಯುಗದ ಕೂಸಾಗಿದೆ. 
ವಿಷ್ಣುವು ರಾಮೇಶ್ವರಂನಲ್ಲಿ ಸ್ನಾನ ಮಾಡಿ, ಬದ್ರಿಯಲ್ಲಿ ಧ್ಯಾನ ಮಾಡಿ, ಪುರಿಯಲ್ಲಿ ಊಟ ಮಾಡಿ, ದ್ವಾರಕೆಯಲ್ಲಿ ವಿಶ್ರಾಂತಿ ಪಡೆಯುತ್ತಾನೆಂಬ ನಂಬಿಕೆಯಿದೆ. 

Temple of Bangalore: ಬೆಂಗ್ಳೂರಲ್ಲೂ ಹಿಂಗೆಲ್ಲ ಇದ್ಯಾ ಅನ್ಸೋಂಥ ದೇವಾಲಯಗಳಿವು..

ಬದ್ರಿನಾಥ್
ಇದು ಉತ್ತರಾಖಂಡದ ಚಮೋಲಿ(Chamoli) ಜಿಲ್ಲೆಯಲ್ಲಿದೆ. ನರ-ನಾರಾಯಣ ಪರ್ವತ ಶ್ರೇಣಿಯ ನಡುವೆ ಇರುವ ಬದ್ರಿಯಲ್ಲಿ ವಿಷ್ಣುವು ಮನುಷ್ಯನ ರೂಪದಲ್ಲಿ ತಪಸ್ಸು ಮಾಡಿದ್ದನು ಎಂಬ ನಂಬಿಕೆ ಇದೆ. ದೇವಾಲಯದ ಪಕ್ಕದಲ್ಲಿ ಅಲಕಾನಂದ ನದಿ ಹರಿಯುತ್ತದೆ. ಶಂಕರಾಚಾರ್ಯರು ಮೋಕ್ಷ ಪಡೆದ ಸ್ಥಳವೂ ಇದಾಗಿದೆ. 

ರಾಮೇಶ್ವರಂ
ತ್ರೇತಾಯುಗದಲ್ಲಿ ರಾಮನು ಇಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದನು. ರಾವಣನ ಹತ್ಯೆಯ ಬಳಿಕ ಹಿಂದಿರುಗುವಾಗ ಮತ್ತೆ ರಾಮೇಶ್ವರಂಗೆ ತೆರಳಿದ ರಾಮನು ಬ್ರಹ್ಮನ ಮೊಮ್ಮಗನಾದ ರಾವಣನನ್ನು ಕೊಂದ ಪಾಪ ಪರಿಹಾರಕ್ಕಾಗಿ ಇಲ್ಲಿ ಶಿವನ ಪೂಜೆ ನಡೆಸಿದ್ದ. ಇದು ತಮಿಳು ನಾಡಿನ ರಾಮನಾಥಪುರಂನಲ್ಲಿದೆ. 

ದ್ವಾರಕಾ
ಕೃಷ್ಣನು ದ್ವಾಪರ ಯುಗದಲ್ಲಿ ತನ್ನ ಹುಟ್ಟೂರನ್ನು ಬಿಟ್ಟು ಜೀವನಕ್ಕಾಗಿ ದ್ವಾರಕೆಯನ್ನು ಆಶ್ರಯಿಸಿದ ಕಾರಣಕ್ಕಾಗಿ ದ್ವಾರಕೆ ಖ್ಯಾತಿ ಪಡೆದಿದೆ. ಇದು ಗುಜರಾತ್‌(Gujarat)ನಲ್ಲಿದೆ. 

ಜಗನ್ನಾಥ್ ಪುರಿ
12ನೇ ಶತಮಾನದಲ್ಲಿ ರಾಜಾ ಅನಂತವರ್ಮನ್ ಚೋಡಗಂಗನು ಇಲ್ಲಿ ಜಗನ್ನಾಥನ ದೇವಾಲಯ ಕಟ್ಟಿಸಿದನು. ಒರಿಸ್ಸಾದ ಪುರಿಯಲ್ಲಿರುವ ಈ ದೇವಾಲಯದಲ್ಲಿ 14-18 ವರ್ಷಕ್ಕೊಮ್ಮೆ ಮರದ ವಿಗ್ರಹಗಳನ್ನು ಸುಡಲಾಗುತ್ತದೆ. 

ಛೋಟಾ ಚಾರ್‌ಧಾಮ್
ಮತ್ತೊಂದು ಸಣ್ಣ ಚಾರ್‌ಧಾಮ್ ಎನಿಸಿಕೊಂಡಿರುವುದು - ಬದ್ರಿನಾಥ್, ಕೇದಾರ್‌ನಾಥ್, ಗಂಗೋತ್ರಿ ಹಾಗೂ ಯಮುನೋತ್ರಿ. ಇವೆಲ್ಲವೂ ಉತ್ತರಾಖಂಡದಲ್ಲಿದೆ. ಈ ಛೋಟಾ ಚಾರ್‌ಧಾಮ್‌ ವೈಷ್ಣವ ದೇವಾಲಯ, ಶಿವ ದೇವಾಲಯ ಹಾಗೂ ಎರಡು ಶಕ್ತ ದೇವಾಲಯಗಳನ್ನು ಒಳಗೊಂಡಿದೆ. ಯಮುನೋತ್ರಿ ಯಮುನಾ ನದಿಯ ಉಗಮ ಸ್ಥಳವಾದರೆ, ಗಂಗೋತ್ರಿಯು ಗಂಗೆಯ ಮೂಲ. ಕೇದಾರನಾಥವು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದ್ದರೆ, ಬದ್ರಿನಾಥವು ವಿಷ್ಣುವು ಮನುಷ್ಯನ ರೂಪದಲ್ಲಿ ತಪಸ್ಸು ಮಾಡಿದ ತಾಣ. 

ಚಾರ್‌ಧಾಮ್‌ನ ಪ್ರಾಮುಖ್ಯತೆ
ಚಾರ್‌ಧಾಮ್ ಯಾತ್ರೆ ಕೈಗೊಳ್ಳುವುದರಿಂದ ಈ ಜೀವನದ್ದಷ್ಟೇ ಅಲ್ಲ, ಹಿಂದಿನ ಜನ್ಮದ ಪಾಪ(sins)ವನ್ನೂ ಕಳೆದುಕೊಳ್ಳಬಹುದಾಗಿದೆ. ಋಣಮುಕ್ತರಾಗಿ ಮೋಕ್ಷ ಸಾಧನೆ ಮಾಡಬಹುದು. ಈ ಯಾತ್ರೆಯಿಂದಾಗಿ ಯೋಚನೆಗಳು ಹರವಾಗುವುದರ ಜೊತೆಗೆ, ಹೃದಯ ಹಾಗೂ ಆತ್ಮ ಸ್ವಚ್ಛವಾಗುತ್ತದೆ. 
 

Follow Us:
Download App:
  • android
  • ios