ಕೊಲ್ಲೂರಿನ ಮೂಕಾಂಬಿಕಾ ದೇವಾಲಯಕ್ಕೆ 1200 ವರ್ಷಗಳ ಇತಿಹಾಸವಿದೆ. ಇಲ್ಲಿನ ವಿಶೇಷಗಳೇನು ನೋಡೋಣ.

ಕೊಡಚಾದ್ರಿಯ ಪಾದತಳದಲ್ಲಿ ಹರಿವ ಸೌಪರ್ಣಿಕಾ ನದಿಯ ತೀರದಲ್ಲಿ ನಿಂತಿದ್ದಾಳೆ ತಾಯಿ ಮೂಕಾಂಬಿಕಾ ದೇವಿ. ಹಚ್ಚ ಹಸಿರಿನ ನಡುವಿನ ಶಾಂತತೆಯಲ್ಲಿ, ಸೌಪರ್ಣಿಕಾ ನದಿಯ ಜುಳುಜುಳು ನಾದ ಕೇಳಿಸಿಕೊಳ್ಳುತ್ತಾ ಠೀವಿಯಲ್ಲಿ ನಿಂತ ತಾಯಿಯನ್ನು ನೋಡುವುದೇ ಒಂದು ಅನನ್ಯ ಅನುಭವ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡಿ ತಾಯಿಯ ದರ್ಶನ ಮಾಡಿ ಪುನೀತರಾಗುತ್ತಾರೆ. ಈ ದೇವಾಲಯದ ವಿಶೇಷವೆಂದರೆ ಇದು ಮಲೆನಾಡು, ಕರಾವಳಿಯ ಮಧ್ಯದಲ್ಲಿದ್ದರೂ ಇಲ್ಲಿಗೆ ಕನ್ನಡಿಗರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೇರಳದಿಂದ ಭಕ್ತರು ಆಗಮಿಸುತ್ತಾರೆ. ಈ ದೇವಾಲಯದ ಇನ್ನಷ್ಟು ಆಸಕ್ತಿಕರ ವಿಷಯಗಳನ್ನು ನೋಡೋಣ. 

Add Asianetnews Kannada as a Preferred SourcegooglePreferred

ಆದಿ ಶಂಕರರಿಂದ ಪ್ರತಿಷ್ಠಾಪನೆ
ಮೂಕಾಂಬಿಕಾ ದೇವಿಯು ಆದಿ ಶಕ್ತಿಯ ಅವತಾರವಾಗಿದ್ದು, ಆಕೆಗೆ 3 ಕಣ್ಣುಗಳು, ನಾಲ್ಕು ಕೈಗಳು ಇವೆ. ಶಿವ ಹಾಗೂ ಶಕ್ತಿಯ ಸಂಯೋಜನೆಯ ಜ್ಯೋತಿರ್ಲಿಂಗದ ಸ್ವರೂಪದಲ್ಲಿ ಮೂಕಾಂಬಿಕೆ ಕಂಡು ಬರುತ್ತಾಳೆ. 
ಅತಿ ಶಕ್ತಿಶಾಲಿಯೆಂದು ಪರಿಗಣಿತವಾದ ಶ್ರೀಚಕ್ರದ ಮೇಲೆ ತಾಯಿಯ ಪಂಚಲೋಹದ ವಿಗ್ರಹವನ್ನು ಆದಿ ಶಂಕರಾಚಾರ್ಯರು ಈ ಸ್ಥಳಕ್ಕೆ ಭೇಟಿ ನೀಡಿದಾಗ ಪ್ರತಿಷ್ಠಾಪನೆ ಮಾಡಿದರು ಎನ್ನಲಾಗುತ್ತದೆ. ಆದಿಶಕ್ತಿಯನ್ನು ಉದ್ಭವ ಲಿಂಗವಾಗಿ ಪೂಜಿಸುವ ಅತಿ ಅಪರೂಪದ ದೇವಾಲಯ ಇದಾಗಿದೆ.

ಇತಿಹಾಸ
ಇಲ್ಲಿ ಕೋಲ ಮಹರ್ಷಿ ತಪಸ್ಸಿನಲ್ಲಿ ತೊಡಗಿದ್ದರು. ಅವರಿಗೆ ಕೌಮ್ಹಾಸುರ(Kaumhasura) ಎಂಬ ರಾಕ್ಷಸನ ಉಪಟಳ ಹೆಚ್ಚಾಗಿತ್ತು. ಈ ರಾಕ್ಷಸ ಕೂಡಾ ಶಿವನನ್ನು ಮೆಚ್ಚಿಸಲು ತಪಸ್ಸು ಮಾಡಲು ಕುಳಿತ. ಆದರೆ ಅವನು ಕೇಳಲು ಹೊರಟ ವರಗಳು ದುರುದ್ದೇಶಪೂರಿತವಾಗಿದ್ದವು. ಇದನ್ನು ತಿಳಿದ ಪಾರ್ವತಿಯು ಶಿವ ಪ್ರತ್ಯಕ್ಷನಾದಾಗ ಕೌಮ್ಹಾಸುರನಿಗೆ ಬಾಯಿ ಬಾರದಂತೆ ಮೂಗನನ್ನಾಗಿ ಮಾಡಿದಳು. ಶಿವ ಎದುರೇ ಇದ್ದರೂ ವರ ಕೇಳಲು ಕೌಮ್ಹಾಸುರನಿಗೆ ಸಾಧ್ಯವಾಗಲಿಲ್ಲ. ಅಂದಿನಿಂದ ಅವನ ಹೆಸರು ಮೂಕಾಸುರ ಎಂದಾಯಿತು. ನಂತರ ಶುಕ್ಲಾಚಾರ್ಯ(Shuklacharya)ರ ಆಶೀರ್ವಾದದಿಂದ ಅವನಿಗೆ ಮಾತು ಮರಳಿದರೂ ಎಲ್ಲ ಉತ್ತಮೋತ್ತಮ ಋಷಿಮುನಿಗಳನ್ನು ಕೊಲ್ಲಲು ತೊಡಗುತ್ತಾನೆ. ಆತನ ಪಾಪ ಕಾರ್ಯ ಮಿತಿ ಮೀರಿದಾಗ ತಾಯಿ ಪಾರ್ವತಿಯು ಶಕ್ತಿ ರೂಪವನ್ನು ತಾಳಿ ಮೂಕಾಸುರನ ವಧೆ ಮಾಡುತ್ತಾಳೆ. ತಾಯಿಯ ಈ ಅವತಾರಕ್ಕೇ ಮೂಕಾಂಬಿಕೆ ಎಂಬ ಹೆಸರು ಬಂದಿತು. 

Vastu Tips: ಕನ್ನಡಿಯಿಂದ ಮನೆಯ ಆಸ್ತಿ ಆರೋಗ್ಯ ಹೆಚ್ಚಿಸುವುದು ಹೀಗೆ..

ವಾಗ್ದೇವತೆ
ಕೊಲ್ಲೂರು ಮೂಕಾಂಬಿಕೆಯು ಮಾತು ಹಾಗೂ ಅಕ್ಷರಗಳ ತಾಯಿಯೆಂದೇ ಗುರುತಿಸಿಕೊಂಡಿದ್ದು, ಆಕೆಯನ್ನು ಎಲ್ಲರೂ ವಾಗ್ದೇವತೆ(Vagdevathe) ಎನ್ನುತ್ತಾರೆ. ಹಾಗಾಗಿ, ಇಲ್ಲಿಗೆ ಚಿಕ್ಕ ಮಕ್ಕಳನ್ನು ಅಕ್ಷರಾಬ್ಯಾಸಕ್ಕಾಗಿ ಕರೆ ತರುವ ಪೋಷಕರ ಸಂಖ್ಯೆ ಹೆಚ್ಚು. 

ತ್ರಿಕಾಲ ಪೂಜೆ
ದೇವಾಲಯದಲ್ಲಿ ಪ್ರತಿ ದಿನ ತ್ರಿಕಾಲ ಪೂಜೆ ಇರುತ್ತದೆ. ಬೆಳಗ್ಗೆ 5 ಗಂಟೆಗೆ ವಿಶೇಷವಾದ ನಿರ್ಮಾಲ್ಯ ಪೂಜೆ ಇರುತ್ತದೆ. ಈ ಸಂದರ್ಭದಲ್ಲಿ ಭಕ್ತರಿಗೆ ಸ್ವಯಂಭೂ ಲಿಂಗ ದರ್ಶನ ಮಾಡಲು ಅವಕಾಶ ನೀಡಲಾಗುತ್ತದೆ. ನವರಾತ್ರಿ ಸಂದರ್ಭದಲ್ಲಂತೂ ದೇವಾಲಯದ ಅಂದ ಎಷ್ಟು ನೋಡಿದರೂ ತಣಿಯದು. 

Children And Zodiacs: ರಾಶಿ ಪ್ರಕಾರ ನಿಮ್ಮ ಮಗುವಿನ ಅಗತ್ಯಗಳೇನು ತಿಳಿಯಿರಿ

ಕೇರಳದ ಭಕ್ತರು ಹೆಚ್ಚು
ಇಂದು ಮೂಕಾಂಬಿಕಾ ದೇವಾಲಯವು ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದ್ದು, ತಾಯಿಯ ದರ್ಶನಕ್ಕಾಗಿ ಎಲ್ಲೆಡೆಯಿಂದ ಭಕ್ತಗಣ ಆಗಮಿಸುತ್ತದೆ. ಹೀಗೆ ಬರುವವರಲ್ಲಿ ಶೇ.50ರಷ್ಟು ಭಕ್ತರು ಕೇರಳ(Kerala)ದವರಾಗಿದ್ದರೆ, ಉಳಿದ ಭಾಗ ತಮಿಳು ನಾಡು(Tamil Nadu) ಹಾಗೂ ಕರ್ನಾಟಕದವರಾಗಿರುತ್ತಾರೆ. 

ಮೋಕ್ಷಸ್ಥಳ
ಪರಶುರಾಮನು ಮೋಕ್ಷದ ಏಳು ಸ್ಥಳಗಳನ್ನು ಗುರುತಿಸಿದ್ದಾನೆ. ಅದರಲ್ಲೊಂದು ಕೊಲ್ಲೂರು ಮೂಕಾಂಬಿಕಾ ದೇವಾಲಯ. ಪರಶುರಾಮ ಗುರುತಸಿದ ಸಪ್ತ ಮುಕ್ತಿಸ್ಥಳದ ತೀರ್ಥಯಾತ್ರಾ ತಾಣಗಳು ಇಂತಿವೆ, ಕೊಲ್ಲೂರು, ಉಡುಪಿ, ಸುಬ್ರಮಣ್ಯ, ಕುಂಬಾಶಿ, ಕೋಟೇಶ್ವರ, ಶಂಕರನಾರಾಯಣ ಮತ್ತು ಗೋಕರ್ಣ.