Dharmasthala Laksha Deepotsava: ಸಿರಿ ವಾನಳ್ಳಿಯವರ ಏಕ ವ್ಯಕ್ತಿ ನಾಟಕ, ರಸಮಂಜರಿಯ ರಸದೌತಣ
ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಿರಿ ವಾನಳ್ಳಿಯವರ ಏಕ ವ್ಯಕ್ತಿ ನಾಟಕ ಪ್ರೇಕ್ಷಕರನ್ನ ರಂಜಿಸಿತು. ಜೊತೆಗೆ ಜೀಕನ್ನಡ ವಾಹಿನಿಯ ಸರಿಗಮಪ ಖ್ಯಾತಿಯ ಅನ್ವಿತ್ ಹಾಗೂ ಕ್ಷಿತಿ ರೈ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು.
ಧರ್ಮಸ್ಥಳ (ನ.21): ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ನಡೆಯುತ್ತಿರುವ, ಲಕ್ಷ ದೀಪೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಿರಿ ವಾನಳ್ಳಿಯವರ ಏಕ ವ್ಯಕ್ತಿ ನಾಟಕ ಪ್ರೇಕ್ಷಕರನ್ನ ರಂಜಿಸಿತು. ಸುಮಾರು ಒಂದೂವರೆ ಘಂಟೆಗಳ ಅವಧಿಯಲ್ಲಿ ವೇದಿಕೆಯ ಮೇಲೆ ಏಕಾಂಗಿಯಾಗಿ, ಸ್ಪಷ್ಠವಾಗಿ, ನಿರರ್ಗಳವಾಗಿ, ಗಟ್ಟಿ ಧ್ವನಿಯಲ್ಲಿ ಸಂಭಾಷಣೆ ಮಾಡುವ ಮೂಲಕ ಪ್ರೇಕ್ಷಕರಿಗೆ ನವರಸ ಉಣಬಡಿಸುತ್ತಿದ್ದ ಸಿರಿ ವಾನಳ್ಳಿಯವರ ನಟನೆ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು. ಬಾಲ್ಯದಿಂದಲೇ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಸಿರಿ ಚಲನಚಿತ್ರಗಳಲ್ಲಿಯೂ ತೊಡಗಿಸಿಕೊಂಡು ನಟನೆಗಾಗಿ ರಾಜ್ಯಪ್ರಶಸ್ತಿಯನ್ನು ಪಡೆದುಕೊಂಡವರು. ಚಿತ್ರಕಲೆ, ಸಂಗೀತ, ಯಕ್ಷಗಾನದಲ್ಲೂ ಚತುರೆ. ಈಕೆ `ಆನಂದ ಭಾಮಿನಿ' ಏಕವ್ಯಕ್ತಿ ನಾಟಕದಲ್ಲಿ ಸಾವಿತ್ರಿ ಆಗಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
19ನೇ ಶತಮಾನದ `ಸಾವಿತ್ರಿ’ ಪ್ರೇಮ ಎಂಬುದು ಬಂಧನವಾಗದೆ ಬಿಡುಗಡೆಯ ಆಯಾಮವಾಗಲು ಪ್ರೇಮಿಗಳಿಗೆ ಇರಬೇಕಾದ ಎಲ್ಲಾ ಆದರ್ಶವನ್ನು ತನ್ನ ದೃಷ್ಠಿಕೋನದಲ್ಲಿ ಪ್ರಿಯಕರನ ಬಳಿ ಪ್ರಶ್ನಿಸುತ್ತಾ ಹೋಗುತ್ತಾಳೆ. ಆತನ ಪತ್ರವನ್ನು ಓದಿ ಅವನಿಗೆ ಪತ್ರವನ್ನು ಬರೆಯುತ್ತಾ ಆಕೆ ಮೆಲಕು ಹಾಕುವ ಸನ್ನಿವೇಶವೇ ಸುಂದರ ನಾಟಕವಾಗಿ ಹೊರಹೊಮ್ಮಿದೆ.
ಅನುಭವಗಳು, ಬೆಳವಣಿಗೆ, ಬದಲಾವಣೆ, ಹೆಣ್ತನದಘನತೆಯ ಸೂಕ್ಷ್ಮತೆಗಳು, ನೈಜ ಪ್ರೇಮದ ಸ್ವರೂಪಗಳು, ಯುದ್ಧದ ತಲ್ಲಣಗಳು, ಶಾಂತಿಯ ಮಹತ್ವ ಮತ್ತು ಆಕೆ ಕೇಳುವ ಪ್ರಶ್ನೆಗಳಿಗೆ ಆಕೆಯೇಉತ್ತರವಾಗಿ ಸ್ತ್ರೀತನದ ವಿವಿಧ ಆಯಾಮಗಳನ್ನು ಎಳೆಎಳೆಯಾಗಿ ಬಿಚ್ಚಿಡುವ ಈ ಕೃತಿಯನ್ನು ಮರಾಠಿಯಿಂದಕನ್ನಡಕ್ಕೆಗಿರಿಜಾ ಶಾಸ್ತ್ರಿಯವರು ಅನುವಾದಿಸಿದ್ದಾರೆ. ರಂಗ ಸ್ವರೂಪವನ್ನು ಸುಧಾ ಆಡುಕಳ ನೀಡಿದ್ದಾರೆ.
ಸಿರಿ ವಾನಳ್ಳಿ ಅವರ ಅಭಿನಯ ವೇದಿಕೆಗೆ ಗಣೇಶ್ ಬೆಳಕು ಮತ್ತುರಂಗ ನಿರ್ವಹಣೆಯನ್ನು ಮಾಡಿದರೆ, ಸಿದ್ಧಾಂತ ಮೈಸೂರು ಸಂಗೀತವನ್ನು ನೀಡಿದರು. ಈ ಸಂದರ್ಭಕ್ಕೆ ಸಾಕಷ್ಟು ಕಲಾಭಿಮಾನಿಗಳು ಸೇರಿದಂತೆ ನೂರಾರುಜನರು ಸಾಕ್ಷಿಯಾದರು.
ಲಕ್ಷದೀಪೋತ್ಸವದಲ್ಲಿ ರಸಮಂಜರಿ, ಶ್ರದ್ಧಾಭಕ್ತಿಯೊಂದಿಗೆ ಮನರಂಜನೆಯ ರಸದೌತಣ
ದೇವರ ಕುರಿತಾದ ಶ್ರದ್ಧೆ ಹೆಚ್ಚಿಸುವ ಭಕ್ತಿಗೀತೆಗಳೊಂದಿಗೆ ಜನಪ್ರಿಯ ಸಿನಿಮಾದ ಹಾಡುಗಳನ್ನೂ ಒಟ್ಟೊಟ್ಟಿಗೆ ಕೇಳುವ ಅವಕಾಶ ಲಭಿಸಿದರೆ ಹೇಗಿರುತ್ತದೆ? ಒಂದಷ್ಟು ಭಕ್ತಿಭಾವ. ಜೊತೆಗೊಂದಿಷ್ಟು ಮನರಂಜನೆ ಮೇಳೈಸುತ್ತದೆ. ಇಂಥದ್ದೇ ಅನುಭವವನ್ನು ಲಕ್ಷದೀಪೋತ್ಸವದ ಪ್ರಯುಕ್ತ ಧರ್ಮಸ್ಥಳದ ವಸ್ತು ಪ್ರದರ್ಶನ ಭವನದಲ್ಲಿ ಗೋಣಿಕೊಪ್ಪದ ಶ್ರೀ ದುರ್ಗಾ ಮ್ಯೂಸಿಕ್ಸ್ ನಡೆಸಿಕೊಟ್ಟ ರಸಮಂಜರಿ ಕಾರ್ಯಕ್ರಮ ಹಲವು ಪ್ರೇಕ್ಷಕರಿಗೆ ಖುಷಿ ಕೊಟ್ಟಿತು. ಜೀಕನ್ನಡ ವಾಹಿನಿಯ ಸರಿಗಮಪ ಖ್ಯಾತಿಯ ಅನ್ವಿತ್ ಹಾಗೂ ಕ್ಷಿತಿ ರೈ ಅವರ ಕಂಠದಲ್ಲಿ ಮೂಡಿ ಬಂದ ಹಾಡುಗಳಿಗೆ ತಬಲ ವಾದಕ ಗಿರೀಶ್ ಪೆರ್ಲ, ಕೀ ಬೋರ್ಡ್ನಲ್ಲಿ ಅಶ್ವಿನ್ ಬಾಬಣ್ಣ, ರಿದಮ್ನಲ್ಲಿ ಸಚಿನ್ ಪುತ್ತೂರು, ಗಿಟಾರ್ನಲ್ಲಿ ಸಂಗೀತಾ ಪುತ್ತೂರು ತಮ್ಮ ಹಿನ್ನೆಲೆ ಸಂಗೀತದ ಮೂಲಕ ಕಾರ್ಯಕ್ರಮದ ಮೆರುಗನ್ನು ಇಮ್ಮಡಿಗೊಳಿಸಿದರು.
ಅಶ್ವಿನ್ ‘ಮಹಪ್ರಾಣ ದೀಪಂ’ ಹಾಡಿನ ಮೂಲಕ ರಸಮಂಜರಿ ಕಾರ್ಯಕ್ರಮ ಶುಭಾರಂಭಗೊಳಿಸಿದರು. ಸಂದರ್ಭಕ್ಕೆ ಸೂಕ್ತವಾಗುವಂತೆ ಮೂಡಿಬಂದ ಮಂಜುನಾಥನ ಭಕ್ತಿ ಗೀತೆ ಪ್ರೇಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೆರೆಯುವಂತೆ ಮಾಡಿತ್ತು. ಇದರ ಬೆನ್ನಲ್ಲೆ ಕ್ಷಿತಿ ರೈ ಧನಿಯಲ್ಲಿ ಮೂಡಿ ಬಂದ ‘ಆನಂದ ಪರಮಾನಂದ’ ಹಾಡು ಭಾವತನ್ಮಯತೆಯನ್ನು ಸೃಷ್ಟಿಸಿತು. ವಾದ್ಯವೃಂದವು ಗಾಯಕರು ಹಾಡಿದ ಪ್ರತಿ ಹಾಡಿಗೂ ಜೀವ ತುಂಬಿತು.
Dharmasthala Laksha Deepotsava:ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು
ಕಾರ್ಯಕ್ರಮದಲ್ಲಿ ಗಾಯನದೊಂದಿಗೆ ನೃತ್ಯದ ಮೂಲಕವು ಜನರನ್ನು ಮನರಂಜಿಸಲಾಯಿತು. ಅನ್ವಿತ್ ಹಾಡಿದ ‘ನಟನ ವಿಶಾರದೆ ನಟಶೇಖರ’ ಹಾಡಿಗೆ ಸಿಂಚನ ಭರತ ನಾಟ್ಯಂ ಶೈಲಿಯಲ್ಲಿ ಹೆಜ್ಜೆ ಹಾಕಿದರು. ನವ ರಸಗಳನ್ನು ಒಳಗೊಂಡಂತಹ ನೃತ್ಯ ಶೈಲಿ ನೆರೆದಿದ್ದವರನ್ನು ಮೂಕವಿಸ್ಮಿತರನ್ನಾಗಿಸಿತ್ತು.
Dharmasthala Laksha Deepotsava: ಚಿತ್ರಗಳಲ್ಲಿ ನೋಡಿ, ಶಾಸ್ತ್ರೋಕ್ತವಾಗಿ ನಡೆದ ಕೆರೆಕಟ್ಟೆ ಉತ್ಸವ
ಕನ್ನಡ ಸೇರಿದಂತೆ ಹಿಂದಿ, ತುಳು ಭಾಷೆಯ ಹದಿನೈದು ಗೀತೆಗಳನ್ನು ವೇದಿಕೆಯ ಮೇಲೆ ಪ್ರ ಸ್ತುತ ಪಡಿಸಲಾಯಿತು. ಹಿನ್ನೆಲೆ ಸಂಗೀತಗಾರರು ಈ ಹಿಂದೆ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದರೂ ಕೂಡ ಶ್ರೀ ದುರ್ಗಾ ಮ್ಯೂಸಿಕಲ್ ತಂಡಕ್ಕೆ ಇದು ಮೊದಲ ರಸಮಂಜರಿ ಕಾರ್ಯಕ್ರಮ. ಮೊದಲ ಪ್ರಯತ್ನವಾದರೂ ಕೇವಲ ಸಿನಿಮಾ ಹಾಡುಗಳನ್ನಷ್ಟೇ ಕೇಂದ್ರವಾಗಿಟ್ಟುಕೊಳ್ಳದೆ ಭಕ್ತಿಗೀತೆ, ಜಾನಪದ ಗೀತೆಗಳನ್ನು ಹಾಡಿದ ರೀತಿ ತಂಡದ ಯಶಸ್ವಿ ಪ್ರದರ್ಶನಕ್ಕೆ ಕಾರಣವಾಯಿತು.
ವರದಿ: ಪ್ರಸೀದ್ ಭಟ್ ಮತ್ತು ಜ್ಯೋತಿ ಜಿ, ಎಸ್ಡಿಎಂ ಉಜಿರೆ
ಚಿತ್ರ ಕೃಪೆ: ವಿವೇಕ್ ಸಿ. ಪಿ ಮತ್ತು ವಿನೋಲ್ ಎಸ್ಡಿಎಂ ಉಜಿರೆ