ಸಮಾಜದಲ್ಲಿ ಜನತೆ ಧನವಂತರಾದಷ್ಟೇ ಸಾಲದು, ಧರ್ಮವಂತರೂ ಆಗಬೇಕು. ಈ ಮೂಲಕ ಸನಾತನ ಸಂಸ್ಕೃತಿ ಉಳಿಸಬೇಕು ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು. ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಚಾತುರ್ಮಾಸ ಕೈಗೊಂಡಿರುವ ಶ್ರೀಗಳು ಭಾನುವಾರ ಉಡುಪಿ, ಮಂಗಳೂರು ಉತ್ತರ, ದಕ್ಷಿಣ ಮತ್ತು ಮಧ್ಯ ವಲಯಗಳ ಶಿಷ್ಯರಿಂದ ಶ್ರೀಗುರುಭಿಕ್ಷಾ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.

ಗೋಕರ್ಣ (ಸೆ.18):  ಸಮಾಜದಲ್ಲಿ ಜನತೆ ಧನವಂತರಾದಷ್ಟೇ ಸಾಲದು, ಧರ್ಮವಂತರೂ ಆಗಬೇಕು. ಈ ಮೂಲಕ ಸನಾತನ ಸಂಸ್ಕೃತಿ ಉಳಿಸಬೇಕು ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಚಾತುರ್ಮಾಸ ಕೈಗೊಂಡಿರುವ ಶ್ರೀಗಳು ಭಾನುವಾರ ಉಡುಪಿ, ಮಂಗಳೂರು ಉತ್ತರ, ದಕ್ಷಿಣ ಮತ್ತು ಮಧ್ಯ ವಲಯಗಳ ಶಿಷ್ಯರಿಂದ ಶ್ರೀಗುರುಭಿಕ್ಷಾ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.

ಲಕ್ಷ್ಮಿ ಎಂದರೆ ಸಂಪತ್ತು, ನಾರಾಯಣ ಎಂದರೆ ಧರ್ಮ. ಧನದ ಜತೆ ಧರ್ಮ ಇದ್ದರೆ ಮಾತ್ರ ಅದು ಶ್ರೇಯಸ್ಕರ. ಧರ್ಮವಿಲ್ಲದೇ ಸಂಪತ್ತು ಇದ್ದರೆ ಅದು ನಿರರ್ಥಕ ಎಂದು ವಿಶ್ಲೇಷಿಸಿದರು.

ಯುವಕರ ಭವಿಷ್ಯಕ್ಕೆ ಮಠ ಬೇಕು: ರಾಘವೇಶ್ವರ ಭಾರತೀ ಸ್ವಾಮೀಜಿ

ನಮ್ಮದು ಸತ್ಯದ ಪರಂಪರೆ. ಎಷ್ಟೇ ಕಷ್ಟ ಬಂದರೂ ಒಪ್ಪಿಕೊಂಡದ್ದನ್ನು ಮಾಡಬೇಕು. ಇದಕ್ಕೆ ಶ್ರೀರಾಮ ನಮಗೆ ಆದರ್ಶ. ಸಮಾಜದಲ್ಲಿ ಧರ್ಮಸೇತು ನಿರ್ಮಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಸೂಚಿಸಿದರು. ಸಮಾಜದಲ್ಲಿ ಯಾವುದೇ ಸಾಧನೆ ಅಥವಾ ಸಂಕಷ್ಟ ಉಪೇಕ್ಷಿತವಾಗಬಾರದು. ಪ್ರೀತಿ, ಸೇವೆ ಮತ್ತು ಸ್ಪಂದನೆಯ ಮೂಲಕ ಸಮಾಜವನ್ನು ಗೆಲ್ಲಬೇಕು ಎಂದು ಕರೆ ನೀಡಿದರು.

ಸರಳ ಜೀವನ, ತ್ಯಾಗದ ಮನೋಭಾವ ನಮ್ಮಲ್ಲಿ ಬೆಳೆಯಬೇಕು. ಸಂಸ್ಕೃತಿ ಸಂಪ್ರದಾಯಗಳ ರಕ್ಷಣೆಯಾಗಬೇಕು. ಶಿಕ್ಷಣವೇ ನಿಜವಾದ ಶಕ್ತಿ. ಮಗುವಿಗೆ ಬಾಲ್ಯದಿಂದಲೇ ಸಂಸ್ಕಾರಯುತ ಶಿಕ್ಷಣ ನೀಡಬೇಕು ಎಂಬ ಮಹದುದ್ದೇಶದಿಂದ ವಿವಿವಿ ತಲೆ ಎತ್ತಿದೆ. ಮುಂದಿನ ಭವ್ಯ ಭವಿಷ್ಯದ ಉದ್ದೇಶದಿಂದ ಸಮಾಜದ ಪ್ರತಿಯೊಂದು ಮಗು ನಮ್ಮ ಗುರುಕುಲ ವ್ಯವಸ್ಥೆಯಲ್ಲೇ ಶಿಕ್ಷಣ ಪಡೆಯುವಂತಾಗಬೇಕು ಎಂದು ಆಶಿಸಿದರು.

ಬದುಕಿಗೆ ಶಿಸ್ತು ಮತ್ತು ಸಂವಿಧಾನ ಬೇಕು. ನಮ್ಮ ಪಾರಂಪರಿಕ ಶಿಕ್ಷಣ ಇವೆರಡನ್ನೂ ನೀಡುತ್ತದೆ. ಸಂಸ್ಕಾರರಹಿತ ಶಿಕ್ಷಣ ಅಪಾಯಕಾರಿ. ನಮ್ಮತನವನ್ನು ನಾವು ಉಳಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಆತ್ಮಾಭಿಮಾನಕ್ಕೇ ಧಕ್ಕೆ ಉಂಟಾಗಬಹುದು ಎಂದು ಎಚ್ಚರಿಸಿದರು.

ಸಮಾಜ ಸಂಘಟನೆ ಬಲಗೊಳ್ಳಬೇಕು. ಸಮಷ್ಟಿ ಇದ್ದಾಗ ಉತ್ತಮ ಸೇವೆಗೆ ಪ್ರೇರಣೆ ಸಿಗುತ್ತದೆ. ಸಂಘಟನೆಯಿಂದ ನಮ್ಮ ಬದುಕು ಕೂಡಾ ವ್ಯವಸ್ಥಿತವಾಗುತ್ತದೆ. ನಾವು ಮಾಡಿದ ಸೇವೆಗೆ ಪುಣ್ಯ ಹಾಗೂ ನೆಮ್ಮದಿಯ ಪ್ರತಿಫಲ ದೊರಕುತ್ತದೆ. ಆದ್ದರಿಂದ ನಿಸ್ವಾರ್ಥ ಸೇವೆಯ ಮೂಲಕ ಸಮಾಜವನ್ನು ಗೆಲ್ಲಬೇಕು ಎಂದು ಸಲಹೆ ಮಾಡಿದರು. 

ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧ ಚಾರ್ಜ್‌ಶೀಟ್‌ ರದ್ದುಗೊಳಿಸಿದ ಹೈಕೋರ್ಟ್‌!

ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿದ್ಯಾರ್ಥಿ ಪ್ರಮುಖ ಈಶ್ವರ ಪ್ರಸಾದ್ ಕನ್ಯಾನ, ಮುಷ್ಟಿಭಿಕ್ಷೆ ಪ್ರಧಾನ ಹೇರಂಬ ಶಾಸ್ತ್ರಿ, ಮಂಗಳೂರು ಮಂಡಲ ಅಧ್ಯಕ್ಷ ಉದಯಶಂಕರ ನೀರ್ಪಾಜೆ, ಕಾರ್ಯದರ್ಶಿ ಸರವು ರಮೇಶ್ ಭಟ್, ನಿಕಟಪೂರ್ವ ಅಧ್ಯಕ್ಷ ಗಣೇಶ್ ಮೋಹನ ಕಾಶಿಮಠ, ಕಾರ್ಯದರ್ಶಿ ಶ್ರೀಕೃಷ್ಣ ಶರ್ಮ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ವಿನಾಯಕ ಭಟ್ ಮೂರೂರು ಅನುಗ್ರಹ ಮಂತ್ರಾಕ್ಷತೆ ಪಡೆದರು.