Asianet Suvarna News Asianet Suvarna News

ಸಕಲವನ್ನೂ ಮೀರಿದ ನಾಗಸಾಧುಗಳು ಭಂಗಿ ಸೇದುವುದ್ಯಾಕೆ?

ನಾಗಸಾಧುಗಳ ಬಗ್ಗೆ ಬಗೆದಷ್ಟೂ ಕುತೂಹಲಕಾರಿ ವಿಷಯಗಳು ತೆರೆದುಕೊಳ್ಳುತ್ತವೆ. ಎಲ್ಲವನ್ನೂ ಗೆದ್ದವರು ಅಂತ ಅನಿಸೋ ಇವರಿಗೆ ಕೋಪ ಬಂದ್ರೆ ತಮ್ಮನ್ನೇ ತಾವು ಕೊಂದು ಕೊಳ್ಳುತ್ತಾರಂತೆ? ಹಾಗಾದ್ರೆ ಅರಿಷಡ್ವರ್ಗಗಳನ್ನು ಗೆಲ್ಲೋದು ಅಂದ್ರೇನು?

Naga Sadhus Embracing Meditation and Pranayama to overcome Eight Natural Qualities of Human Beings
Author
First Published Jul 26, 2023, 5:54 PM IST

- ಸೌಮ್ಯಾ ಹೇಮಂತ್

ಸಾಧು ಅಂದ್ರೆ ಸಾಧನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವರು, ನಿರತನಾಗಿರುವವರು ಎಂದರ್ಥ. ಮನುಷ್ಯನಿಗೆ ಹೇಳಲ್ಪಟ್ಟಿರುವ ಅಂತಿಮ ಗುರಿ ಮುಕ್ತಿ ಪಡೆಯಲು ಹಲವು ರೀತಿಯ ದಾರಿಗಳಿವೆ. ಅದರಲ್ಲಿ ನಾಗಸಾಧುಗಳ ಆಚರಣೆ ವಿಶಿಷ್ಟ ಮತ್ತು ವಿಚಿತ್ರವಾದುದ್ದು. ನೋಡುಗರ ಮೈ ಜುಮ್ಮೆನಿಸುವಷ್ಟು ರೋಮಾಂಚನವಾದುದು ಹೌದು. ಮೈಗೆಲ್ಲ ಬೂದಿ ಬಳಿದುಕೊಂಡು, ಕೈಯಲ್ಲೊಂದು ಭಾಂಗ್ ಹಿಡಿದು ಸದಾ ಮತ್ತಿನ ಅವಸ್ಥೆಯಲ್ಲಿ ಇರುತ್ತಿದ್ದ ಇವರ ಬಗ್ಗೆ ಒಂದು ರೀತಿಯ ಕುತೂಹಲವಿದ್ರೆ ಇನ್ನೊಂದಿಡೆ ವಿಚಿತ್ರ ಭಯವೂ ಇತ್ತು. ಮೊದಲ ಬಾರಿಗೆ ನಾನು ನಾಗಸಾಧುವನ್ನು ಭೇಟಿಯಾಗಿದ್ದು ಕಾಶಿಯ ಘಾಟಿನಲ್ಲಿ. ಕುಂಭಮೇಳದ ಸಮಯವಾದ್ದರಿಂದ ಕಾಶಿಯಲೆಲ್ಲ ಸಾಧುಗಳದ್ದೆ ದರ್ಬಾರ್.
  
ನಾಗಸಾಧುಗಳು ಪ್ರಾಚೀನ ಪರಂಪರೆಗೆ ಸೇರಿದವರು. ಸಾಮಾನ್ಯವಾಗಿ ವಸ್ತ್ರಾಧಾರಿಗಳಲ್ಲ. ಆದ್ರೆ ಇಂದು ನಗರಗಳಿಗೆ ಸಾಧುಗಳು ಭೇಟಿ ನೀಡುತ್ತಿರುವುದರಿಂದ ಮುಜುಗರ ಆಗದಂತೆ ಬಟ್ಟೆ ಹಾಕಿಕೊಳ್ಳುವ ಅಭ್ಯಾಸ ಮಾಡಿಕೊಂಡಿದ್ದಾರೆ. ನಾಗಸಾಧುವಾಗಲು ಅವರದ್ದೇ ಆದ ಕೆಲವು ಪ್ರಕ್ರಿಯೆಗಳಿವೆ. ಬಾಂಗ್, ಗಾಂಜಾ, ಇವರ ಸಾಮಾನ್ಯ ಸೇವನೆ. ಅನ್ನವನ್ನು ಅಷ್ಟೇನೂ ತಿನ್ನದ ಇವರಿಗೆ ಸದಾ ಚಾಯ್ ಇರಲೇಬೇಕು. ನಾಥ ಸಂಪ್ರದಾಯಕ್ಕೆ ಸೇರಿದ ನಾಗಸಾಧುಗಳು ಸದಾ ಅಗ್ನಿಯನ್ನು ಅರಾಧಿಸುತ್ತಾರೆ. ತಾವು ಇರುವಲ್ಲಿ ಎದುರಿಗೆ ಬೆಂಕಿ ಹಚ್ಚಿಕೊಳ್ಳುವುದಕ್ಕೆ, ಧುನಿ ಎನ್ನುತ್ತಾರೆ. ಸಾಮಾನ್ಯವಾಗಿ ಇವರ ಸಾಧನೆಗೆ ಆಯ್ಕೆ ಮಾಡಿಕೊಳ್ಳುವುದು ಸ್ಮಶಾನ. ಹಿಮಾಲಯದಂತಹದ ಎತ್ತರದ ಪ್ರದೇಶಗಳು ಈ ಸಾಧಕರಿಗೆ ಅಚ್ಚುಮೆಚ್ಚು.  ಜನರಿಂದ ಸದಾ ದೂರವಿರಲು ಬಯಸುವ ಇವರು, ನಿರ್ಜನ ಪ್ರದೇಶಗಳಲ್ಲಿ ತಮ್ಮ ಹೆಚ್ಚಿನ ತಾಂತ್ರಿಕ ಸಾಧನೆಗಳನ್ನ ವಿಭಿನ್ನ ಪ್ರಕ್ರಿಯೆ ಮೂಲಕ ಮಾಡ್ತಾರೆ. ಹಠ ಯೋಗ ಮತ್ತು ತಂತ್ರಕ್ಕೆ ಹೆಚ್ಚಿನ ಮಹತ್ವ ಕೊಡುವ ಇವರ ಆಚರಣೆ, ಅರಾಧನೆ ಬಹಳ ವಿಚಿತ್ರ. ಬಹಳ ನಿರ್ಭಿತಿ ಸ್ವಭಾವದವರಾಗಿದ್ದು, ಆರಾಧ್ಯ ದೈವ ಆದಿ ಯೋಗಿ ಶಿವ. ಆಧ್ಯಾತ್ಮ ಎನ್ನುವುದು ಒಂದು ರೀತಿಯ ಅಮಲು ಅಂತಾರೆ ನಾಗಸಾಧುಗಳು. ದೇಹದ ಮೋಹ ಬಿಡುವ ನಿಟ್ಟಿನಲ್ಲಿ ಅವರು ನಗ್ನರಾಗಿರಲು ಬಯಸುತ್ತಾರೆ. ಹಿಮಾಲಯದಂತಹ ಶೀತ ಪ್ರದೇಶಗಳಲ್ಲಿಯೂ ಯಾವುದೇ ಉಡುಗೆ ತೊಡದೆ, ದೇಹದ  ಶಾಖವನ್ನು ಕಾಪಾಡಿಕೊಳ್ಳಲು ಪೂರ್ತಿ ದೇಹಕ್ಕೆ ಭಸ್ಮ ಹಚ್ಚಿಕೊಳ್ತಾರೆ.  ಪ್ರಾಣಾಯಾಮಕ್ಕೆ ಹೆಚ್ಚಿನ ಮಹತ್ವ ನೀಡುವ ಇವರು ವಿಶೇಷ ಮತ್ತು ನಿರಂತರ ಪ್ರಾಣಾಯಾಮದ ಮೂಲಕವೇ ದೇಹ ಸ್ಥಿತಿ ಮೀರಿ ಹೋಗ್ತಾರೆ.

Naga Sadhu Facts: ನಾಗಾಸಾಧುಗಳು ಬೂದಿ ಬಳಿದುಕೊಂಡು ಬೆತ್ತಲೆ ತಿರುಗಲು ಕಾರಣವೇನು?

ತಡಯಲಾಗದ ಕೋಪ ಈ ಸಾಧುಗಳಿಗೆ:
ಹಲವು ಸಾಧನೆಗಳ ಮೂಲಕ ಎಲ್ಲವನ್ನೂ ಮೀರಿ ಹೋಗುವ ನಾಗಸಾಧುಗಳು, ದೇವರ ನಾಮಸ್ಮರಣೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತ, ಸಂತರಾಗಿ ಮಾರ್ಪಾಟಾಗಿರುವ ಎಷ್ಟೋ ಮಹಾತ್ಮರು ನಮ್ಮ ಮಧ್ಯೆ ಇದ್ದಾರೆ. ಕಾಶಿಯಲ್ಲಿ ಸಿಕ್ಕ ನಾಗಸಾಧುಗಳ ಜೊತೆ ಒಂದು ಪುಟ್ಟ ಮಾತುಕತೆ ನಡೆಸಿದೆ. ಹಲವು ದಿನಗಳಿಂದ ಕಾಡುತ್ತಿದ್ದ ಪ್ರಶ್ನೆಗಳಿಗೆ ಉತ್ತರ ಪಡೆಯುವ ಆತುರ ನನ್ನಲಿತ್ತು. ಯಾಕೆ ನೀವು ಈ ರೀತಿ ಭಂಗಿ ಸೇದುತ್ತೀರಾ? ಇದು ಒಂದು ಚಟವಲ್ಲವೇ? ಎಂಬ ಕೇಳಿದ ಪ್ರಶ್ನಗೆ ಅವರು ನೀಡಿದ ಉತ್ತರ ಮಾತ್ರ ಬಹಳ ಸ್ವಾರಸ್ಯಕರವಾಗಿತ್ತು. ಈ ಅಮಲು ನಮ್ಮನ್ನು ದೈವತ್ವದ ಕಡೆಗೆ ಕೊಂಡ್ಯೊಯುತ್ತೆ. ಭಂಗಿಗೆ ಉಪಯೋಗಿಸುವ ಕೆಲವು ವಸ್ತುಗಳು ಚಟದ ಅಮಲನ್ನು ಮೀರಿದ ಸ್ಥಿತಿಗೆ ಕರೆದುಕೊಂಡು ಹೋಗುತ್ತೆ ಅಂತಾರೆ. ನಾನು ಭೇಟಿ ಮಾಡಿದ ಸಾಧುಗಳ ಗುಂಪಿನಲ್ಲಿ ಕೆಲವು ನಾಗಸಾಧುಗಳು ರುದ್ರ ರೂಪ ಅಂದರೆ ಹೆಚ್ಚು ಕೋಪ ಮಾಡಿಕೊಳ್ಳುವ ಸ್ವಾಭಾವದವರಿದ್ರೆ, ಇನ್ನು ಕೆಲವರು ಬಹಳ ಶಾಂತ ಸ್ವಭಾವದವರೂ ಆಗಿದ್ದರು. ತಮ್ಮ ಕೋಪವನ್ನು ಸಹಿಸಲಾಗದಿದ್ದರೆ ತಮಗೆ ತಾವೇ ಶಿಕ್ಷೆ ಕೊಟ್ಟು ಕೊಳ್ಳುತ್ತಾರೆ. ಸಾಮಾನ್ಯವಾಗಿ ಆಧ್ಯಾತ್ಮಿಕ ಸಾಧನೆಯಿಂದ ನೀವು ಕೋಪ ಬಿಡುವಂತಾಗಬೇಕು ಅಲ್ವಾ, ಅಂತ ಕೇಳಿದ ನೇರ ಪ್ರಶ್ನೆಗೆ ನಾಗಸಾಧುಗಳ ಶಿಷ್ಯ ನನ್ನ ಮೇಲೆ ಉರಿದು ಬಿದ್ರು. ಅಕ್ಷರಶ: ಕೋಪಗೊಂಡು ನನ್ನೆಡೆಗೆ ರಕ್ತ ತುಂಬಿದ ಕೆಂಪು ಕಣ್ಣಿನಿಂದ ನೋಡಿದ ನೋಟಕ್ಕೆ ನಾನು ಭಸ್ಮವಾಗದಿದ್ದದ್ದೇ ಹೆಚ್ಚು. ಅಂತಹ ಭಯಂಕರ ನೋಟವದು. ಅವರ ಕೋಪ ಶಮನಕ್ಕೆ ಅವರ ಗುರುಗಳೇ ಬರಬೇಕಾಯ್ತು. ನಾಗಸಾಧುವಿನ ಗುರುಗಳು ಬಹಳ ಸಮಾಧಾನವಾಗೇ ನನ್ನೆಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿ ನಗುಮೊಗದಿಂದ ಅಶೀರ್ವಾದ ಮಾಡಿ ಬೀಳ್ಕೊಟ್ಟರು.

ಪ್ರತಿ ತಲೆ ಕೂದಲನ್ನೂ ಕೈಯಿಂದಲೇ ಕಿತ್ತುಕೊಳ್ಳುವ ಮಹಿಳಾ ನಾಗಾ ಸಾಧುಗಳು!
 
ಮೂಲತ: ಹೋರಾಟಗಾರರಾದ ಇವರು, ತಪಸ್ಸು, ಸದಾ ಭಜನೆ ಅಂದ್ರೆ ನಾಮಸ್ಮರಣೆಯಲ್ಲಿ (ನಮ್ಮಲ್ಲಿ ಭಜನೆ ಅಂದ್ರೆ ದೇವರ ನಾಮ ಹಾಡುವುದು) ಮಗ್ನರಾಗಿರುತ್ತಾರೆ. ದೀರ್ಘಾಯುಷ್ಯ ಇವರ ಸಾಧನೆಯ ಗುಟ್ಟು. ಜುನ್ನಾ ಮತ್ತು ದಶನಾಮಿ ಅಖಾಡದಲ್ಲಿ ಹೆಚ್ಚಿನ ನಾಗಸಾಧುಗಳಿದ್ದು, ಅವರ ಜೀವನ ಒಂದು ನಿಗೂಢ ಮತ್ತು ವಿಸ್ಮಯಭರಿತವಾದದ್ದು. ಇಂದೂ ಹಲವು ನಾಗಸಾಧುಗಳು ನಿರಂತರ ಸಾಧನೆಯಲ್ಲಿ ನಿರತರಾಗಿದ್ದು ಅವರ ದರ್ಶನ ಮಾತ್ರ ದುರ್ಲಭ..

Latest Videos
Follow Us:
Download App:
  • android
  • ios