ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೂ ಮುನ್ನಾ ಶ್ರೀ ದೇಶಿಕೇಂದ್ರ ಸ್ವಾಮೀಜಿಯವರ ಆಶೀರ್ವಾದ ಪಡೆಯುತ್ತಿರುವುದು ನನ್ನ ಸೌಭಾಗ್ಯ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.

ಸುತ್ತೂರು (ಅ.15): ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೂ ಮುನ್ನಾ ಶ್ರೀ ದೇಶಿಕೇಂದ್ರ ಸ್ವಾಮೀಜಿಯವರ ಆಶೀರ್ವಾದ ಪಡೆಯುತ್ತಿರುವುದು ನನ್ನ ಸೌಭಾಗ್ಯ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು. ಶ್ರೀ ಸುತ್ತೂರು ಕ್ಷೇತ್ರಕ್ಕೆ ಶನಿವಾರ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಮೈಸೂರು ದಸರಾ ಮಹೋತ್ಸವವು ಕನ್ನಡಿಗರ ನಾಡು, ನುಡಿ ಸಂಸ್ಕೃತಿಯ ಸಂಕೇತವಾಗಿದೆ. ಸಮಸ್ತ ಕನ್ನಡಿಗರ ಪ್ರತಿನಿಧಿಯಾಗಿ ನಾನು ಈ ಮಹೋತ್ಸವವನ್ನು ಉದ್ಘಾಟಿಸುತ್ತಿದ್ದೇನೆ. ಒಬ್ಬ ಕಲಾವಿದನಾಗಿ ಉದ್ಘಾಟಿಸುತ್ತಿರುವುದು ನನಗೆ ಧನ್ಯತಾಭಾವ ಮೂಡಿಸುತ್ತಿದೆ ಎಂದರು.

Add Asianetnews Kannada as a Preferred SourcegooglePreferred

ರಂಗಭೂಮಿಯಿಂದ ಬಂದ ನಾನು ನಿಮ್ಮೆಲ್ಲರ ಆಶೀರ್ವಾದದಿಂದ ಇಂದು ಸಿನಿಮಾ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಸಂಗೀತವು ವಿಜ್ಞಾನದ ಗೆಳೆಯನೂ ಹೌದು, ಶ್ರದ್ಧೆ, ಭಕ್ತಿ ಮತ್ತು ಆಸಕ್ತಿಯಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಪ್ರತಿಭೆ ಇರುವವರಿಗೆ ಅನುಕೂಲವನ್ನು ಮಾಡಿಕೊಟ್ಟು ಅವರ ಸಾಧನೆಗೆ ಸಹಕರಿಸಬೇಕು ಎಂದು ಅವರು ಹೇಳಿದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಆಶೀರ್ವಚನ ನೀಡಿ, ಡಾ. ಹಂಸಲೇಖ ಅವರದು ಸಂಗೀತ ಕ್ಷೇತ್ರದಲ್ಲಿ ಅನನ್ಯ ಸೇವೆ. ಭಾರತದಲ್ಲಿ ಅನೇಕ ಉತ್ಸವಗಳು ನಡೆಯುತ್ತಿರುತ್ತವೆ.

ಪ್ರಧಾನಿಯೊಂದಿಗೆ ಮಾತನಾಡುವ ಶಕ್ತಿ ಕುಮಾರಸ್ವಾಮಿಗೆ ಮಾತ್ರ ಇರೋದು: ಜಿ.ಟಿ.ದೇವೆಗೌಡ

ಆದರೆ ವಿಶ್ವವಿಖ್ಯಾತ ಉತ್ಸವವೆಂದು ಮೈಸೂರು ದಸರಾ ಹೊರತುಪಡಿಸಿ ಯಾವುದನ್ನೂ ಕರೆಯುವುದಿಲ್ಲ. ಇಂತಹ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಅಪ್ಪಟ ದೇಸಿ ಪ್ರತಿಭೆ ಹಂಸಲೇಖ ಅವರು ಉದ್ಘಾಟಿಸುತ್ತಿರುವುದು ಅರ್ಥಪೂರ್ಣವಾಗಿದೆ. ಅವರು ಸಾಹಿತ್ಯ, ಸಂಗೀತ ಸಂಯೋಜಕರಾಗಿರುವುದು ನಾಡಿನ ಹೆಮ್ಮೆಯ ವಿಷಯ ಎಂದರು. ಇದೇ ಸಂದರ್ಭದಲ್ಲಿ ಹಂಸಲೇಖರವರ ಪರಿಕಲ್ಪನೆಯ ಹರಪ್ಪ ಹೆರಿಟೇಜ್ ಹಬ್ ಪ್ರಸ್ತಾವನೆಯ ವೀಡಿಯೋ ಅನ್ನು ಹಂಸಲೇಖರವರ ಕೋರಿಕೆಯಂತೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಅಮೃತ ಹಸ್ತದಿಂದ ಬಿಡುಗಡೆಗೊಳಿಸಲಾಯಿತು.

ಎಎಪಿ ರಾಜ್ಯದಲ್ಲಿ ಪರ್ಯಾಯ ಶಕ್ತಿಯಾಗಿ ಉದಯವಾಗಲಿದೆ: ಮುಖ್ಯಮಂತ್ರಿ ಚಂದ್ರು

ಖ್ಯಾತ ಅಂಕಣಕಾರ ಡಾ. ಗುಬ್ಬಿಗೂಡು ರಮೇಶ್ ಮಾತನಾಡಿ, ಡಾ. ಹಂಸಲೇಖರವರು ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. 3,500 ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳಿಗೆ ಸಾಹಿತ್ಯ ಮತ್ತು ಸಂಗೀತ ಸಂಯೋಜನೆ ಮಾಡಿದ್ದು, ಕನ್ನಡ ಭಾಷೆ ಅಲ್ಲದೆ ತಮಿಳು, ತೆಲುಗು, ಮಲೆಯಾಳಂ ಭಾಷಾ ಚಿತ್ರಗಳಿಗೂ ಸಂಗೀತ ಸಂಯೋಜನೆ ಮಾಡಿದ್ದು, ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಅಜರಾಮರವಾಗಿ ನೆಲೆಸಿದ್ದಾರೆ ಎಂದರು. ಮೈಸೂರಿನ ಉಪವಿಭಾಗಾಧಿಕಾರಿ ಕೆ.ಆರ್. ರಕ್ಷಿತ್, ತಹಸೀಲ್ದಾರ್ ಗಿರೀಶ್, ಜೆಎಸ್ ಎಸ್ ಮಹಾವಿದ್ಯಾಪೀಠದ ಅಧಿಕಾರಿಗಳು, ನೂರಾರು ಭಕ್ತರು ಇದ್ದರು. ಜೆಎಸ್ಎಸ್ ಸಂಸ್ಥೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಂಯೋಜನಾಧಿಕಾರಿ ಜಿ.ಎಲ್. ತ್ರಿಪುರಾಂತಕ ಸ್ವಾಗತಿಸಿ, ನಿರೂಪಿಸಿದರು.