ಕಾಲಜ್ಞಾನ ಗುರುಗಳು ನೂರಾರು ವರ್ಷಗಳ ಹಿಂದೆ ನುಡಿದಂತೆ 'ಕಟ್ಟಿಗೆ ಹಾಡ್ತದೆ, ಕಬ್ಬಿಣ ಓಡ್ತದೆ, ಗಾಳಿ ಮಾತನಾಡ್ತದೆ' ಎಂಬ ಭವಿಷ್ಯ ನಿಜವಾಗಿದೆ ಎಂದು ಕೋಡಿಮಠ ಸ್ವಾಮೀಜಿ ತಿಳಿಸಿದ್ದಾರೆ.

ದಾವಣಗೆರೆ (ಸೆ.14): ನೂರಾರು ವರ್ಷಗಳಲ್ಲಿ ಹೇಳಿದ್ದು ಸತ್ಯ ಕಾಲಜ್ಞಾನವೇ ಗುರುಗಳ ಸಂಪತ್ತಾಗಿದ್ದು, ಕಾಲಜ್ಞಾನದಲ್ಲಿ ಕಟ್ಟಿಗೆ ಹಾಡುತ್ತದೆ ಕಬ್ಬಿಣವು ಓಡುತ್ತದೆ, ಗಾಳಿ ಮಾತನಾಡುತ್ತದೆ ಎಂದು ನೂರಾರು ವರ್ಷಗಳಲ್ಲಿ ಹೇಳಲಾಗಿದ್ದು ಇದು ಸತ್ಯವಾಗಿದೆ. ಅದೇ ರೀತಿ ಕಲ್ಲಿನ ಕೋಳಿ ಮಾತನಾಡಿದೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

ಜಿಲ್ಲೆಯ ಹೊನ್ನಾಳಿ ಪಟ್ಟಣದ ಭಕ್ತರೊಬ್ಬರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಮಾವಾಸ್ಯೆ ಬಳಿಕ ಮಳೆ ಬರಲಿದೆ ಆತಂಕಪಡುವ ಅಗತ್ಯವಿಲ್ಲ.‌ ಆದರೆ, ಕಾರ್ತಿಕ, ಸಂಕ್ರಾಂತಿ ವೇಳೆಗೆ‌ ರಾಜ್ಯದಲ್ಲಿ ಕೆಲ ಅವಘಢಗಳು ನಡೆಯುವ ಸಾಧ್ಯತೆ ಇದೆ. ಮನುಷ್ಯ ಮಾಡಿದ ತಪ್ಪುಗಳಭಗವಂತ ಕ್ಷಮಿಸುತ್ತಾನೆ. ಆದರೆ ತಿಳಿದೂ ತಪ್ಪುಗಳನ್ನು ಮಾಡಿದಾಗ ಕ್ಷಮಿಸಲಾರ. ಇತ್ತೀಚಿನ ದಿನಗಳಲ್ಲಿ ಗೊತ್ತಿದ್ದೂ ಮನುಷ್ಯ ಪ್ರಕೃತಿ, ನೆಲ, ಜಲ ಇವುಗಳ ನಿರಂತರ ದುರುಪಯೋಗದ ಕಾರಣ ನಾವು ಅನೇಕ ರೀತಿಯ ಪ್ರಕೃತಿ ವಿಕೋಪ ಎದುರಿಸುವಂತಾಗಿದೆ ಎಂದರು.

ಲೋಕಸಭೆ ಚುನಾವಣೆ ಹಾದಿಯಲ್ಲಿ ರಾಜ್ಯ, ರಾಷ್ಟ್ರ ರಾಜಕಾರಣದ ಬಗ್ಗೆ ಕೋಡಿಮಠ ಸ್ವಾಮೀಜಿ ಸ್ಪೋಟಕ ಭವಿಷ್ಯ!

ಇನ್ನು ನಮ್ಮ ನಡುವೆ ಯಾವುದು ಮನುಷ್ಯನಿಗೆ, ಸಮಾಜಕ್ಕೆ ಶಾಂತಿ, ನೆಮ್ಮದಿ ನೀಡುತ್ತದೆಯೋ ಅದೇ ಧರ್ಮವಾಗಿದೆ. ನೂರಾರು ವರ್ಷಗಳಲ್ಲಿ ಹೇಳಿದ್ದು ಸತ್ಯ ಕಾಲಜ್ಞಾನವೇ ಗುರುಗಳ ಸಂಪತ್ತಾಗಿದೆ. ನೂರಾರು ವರ್ಷಗಳ ಹಿಂದೆ ಕಾಲಜ್ಞಾನದಲ್ಲಿ 'ಕಟ್ಟಿಗೆ ಹಾಡುತ್ತದೆ ಕಬ್ಬಿಣವು ಓಡುತ್ತದೆ, ಗಾಳಿ ಮಾತನಾಡುತ್ತದೆ ಎಂದು ಹೇಳಲಾಗಿದ್ದು, ಈಗ ಇದು ಸತ್ಯವಾಗಿದೆ. ಕಟ್ಟಿಗೆ ಮತ್ತು ಕಬ್ಬಿಣ ಅಂದರೆ ಇಂದು ರೈಲುಗಳು ಬಂದಿರುವ ಬಗ್ಗೆಯಾದರೆ, ಗಾಳಿ ಮಾತನಾಡುತ್ತದೆ ಎಂದರೆ ಮೊಬೈಲ್ ಬಂದಿರುವುದಕ್ಕೆ ಸಾಕ್ಷಿಯಾಗಿದೆ ಎಂದರು. 

ಕಲ್ಲಿನ ಕೋಳಿ ಕೂಗುತ್ತಿದೆ ಎಂಬುದು ಸತ್ಯವಾಗಿದೆ: ಇನ್ನು ಕಾಲಜ್ಞಾನಿಗಳು ಹೇಳಿದಂತೆ ಕಲ್ಲಿನ ಕೋಳಿ ಕೂಗುತ್ತದೆ ಎಂಬುದು ಕೂಡ ಸತ್ಯವಾಗಿದೆ. ಕಲ್ಲಿನ ಕೋಳಿ ಎಂದರೆ ಮೊಬೈಲ್‌ನಲ್ಲಿರುವ ಸಿಮ್‌ಗಳಾಗಿವೆ. ಕಲ್ಲಿನ ರೂಪದ ಖನಿಜಗಳಲ್ಲಿರುವ ಲೋಹವನ್ನು ಬಳಸಿ ಸಿಮ್‌ ಕಾರ್ಡ್‌ ಮಾಡಲಾಗಿದ್ದು, ಈಗ ಕಲ್ಲಿನ ಕೋಳಿ ಮಾತನಾಡುತ್ತಿದೆ ಎಂಬರ್ಥದಲ್ಲಿ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ವಿವರಿಸಿದರು.

ಸರ್ಕಾರ ಏನೇ ಯೋಜನೆ ಜಾರಿಗೊಳಿಸಿದರೂ ತೊಂದರೆಯಿಲ್ಲ: ಇನ್ನು ರಾಜ್ಯದಲ್ಲಿ ಅಪಾಯದ ಬಗ್ಗೆ ಮಾತನಾಡಿದ ಶ್ರೀಗಳು, ನೀರಿನ ಮೇಲೆ ದೊಣಿ ಇರಬೇಕೇ ಹೊರತು ದೋಣಿಯೊಳಗೆ ನೀರು ಬಂದರೆ ಆಪಾಯ ತಪ್ಪದು. ರಾಜಕಾರಣಿಗಳಾಗಲಿ, ಗುರುಗಳಾಗಲಿ ಯಾರೇ ಆದರೂ ಸಮಾಜದಲ್ಲಿ ಶಾಂತಿ ನಿರ್ಮಿಸುವ ಹೇಳಿಕೆ ನೀಡಬೇಕು. ಆಳುವ ಸರ್ಕಾರಗಳು ಏನೇ ಯೋಜನೆಗಳನ್ನು ಜಾರಿಗೆ ತಂದರೂ ತೊಂದರೆ ಇಲ್ಲ. ಕಾರಣ ನಮ್ಮ ಕರ್ನಾಟಕ ಪ್ರಾಕೃತಿಕವಾಗಿ ಎಲ್ಲಾ ರೀತಿಯಲ್ಲಿ ಸಮೃದ್ಧವಾಗಿದ್ದು, ಇದನ್ನು ಸಮರ್ಪಕವಾಗಿ ಬಳಿಸಿಕೊಂಡಾಗ ಯಾವುದೇ ತೊಂದರೆ ಆಗದು ಎಂದರು.

ಕರ್ನಾಟಕದಲ್ಲಿ ಮಹಿಳೆಗೆ ಮುಖ್ಯಮಂತ್ರಿಯಾಗುವ ಯೋಗವಿದೆ: ಕೋಡಿಶ್ರೀಗಳ ಭವಿಷ್ಯ

ಲೋಕಸಭೆಯಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರುತ್ತದೆ: ವಿಧಾನಸಭಾ ಚುನಾವಣೆಯಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ ಅಂತ ಹೇಳಿದ್ದೆ. ಅದರಂತೆ ಆಗಿದೆ. ಲೋಕಸಭಾ ಚುನಾವಣೆಯಲ್ಲೂ ಪಕ್ಷಾಂತರ ಹೆಚ್ಚಾದರೂ, ಒಂದೇ ಪಕ್ಷ ದೇಶದಲ್ಲಿ ಅಧಿಕಾರಕ್ಕೆ ಬರಲಿದೆ ಅಂತ ಹೇಳಿದ್ದಾರೆ. ಈ ಮೂಲಕ ದೇಶದ ರಾಜಕಾರಣದಲ್ಲಿ ಯಾವುದೇ ಅತಂತ್ರ ಸ್ಥಿತಿಗಳು ಉಂಟಾಗುವುದಿಲ್ಲ ಎಂಬ ಭವಿಷ್ಯವನ್ನು ನುಡಿದಿದ್ದಾರೆ. ಆದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಹಾಗೂ ಕಾಂಗ್ರೆಸ್‌ ನೇತೃತ್ವದ I.N.D.I.A ಒಕ್ಕೂಟದ ಬಗ್ಗೆ ಯಾವುದೇ ಭವಿಷ್ಯವನ್ನು ನುಡಿದಿಲ್ಲ.