Asianet Suvarna News Asianet Suvarna News

ಶಬರಿಮಲೆ ಭಕ್ತರ ನಿರ್ವಹಣೆಯಲ್ಲಿ ಕೇರಳ ಸರ್ಕಾರ ವಿಫಲ: ಹೈಕೋರ್ಟ್ ತರಾಟೆ

ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಈ ಭಾರೀ ಪ್ರಮಾಣದಲ್ಲಿ ಭಕ್ತರು ಭೇಟಿ ನೀಡುತ್ತಿದ್ದು, ಭಕ್ತರ ನಿರ್ವಹಣೆಯಲ್ಲಿ ದೇಗುಲ ಆಡಳಿತ ಮಂಡಳಿ ಪೂರ್ಣ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ. 

Kerala govt failed to manage Sabarimala devotees Video of crying boy goes viral akb
Author
First Published Dec 13, 2023, 7:01 AM IST

ಕೊಚ್ಚಿ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಈ ಭಾರೀ ಪ್ರಮಾಣದಲ್ಲಿ ಭಕ್ತರು ಭೇಟಿ ನೀಡುತ್ತಿದ್ದು, ಭಕ್ತರ ನಿರ್ವಹಣೆಯಲ್ಲಿ ದೇಗುಲ ಆಡಳಿತ ಮಂಡಳಿ ಪೂರ್ಣ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ. ಪರಿಣಾಮ, ಕರ್ನಾಟಕ ಸೇರಿ ಹಲವು ರಾಜ್ಯಗಳ ಭಕ್ತರು ದೇವರ ದರ್ಶನ ಮಾಡದೇ ಮರಳುತ್ತಿರುವ ಘಟನೆಗಳು ವರದಿಯಾಗಿವೆ. ಮತ್ತೊಂದೆಡೆ ಅವ್ಯವಸ್ಥೆ ಪ್ರಶ್ನೆ ಮಾಡಿದ ಭಕ್ತರ ಮೇಲೆ ದೇಗುಲದ ಭದ್ರತಾ ಸಿಬ್ಬಂದಿ ಹಲ್ಲೆ ಮಾಡಿದ ಘಟನೆಗಳೂ ಕೂಡಾ ನಡೆದಿವೆ ಎನ್ನಲಾಗಿದೆ.

ಅದರ ನಡುವೆಯೇ ನೀಲಕ್ಕಲ್‌ನಲ್ಲಿ ತಂದೆಯಿಂದ ತಪ್ಪಿಸಿಕೊಂಡ ಪುಟ್ಟ ಬಾಲಕನೊಬ್ಬ ವಾಹನದಲ್ಲಿ ತಂದೆಯನ್ನು ಹುಡುಕಿಕೊಡುವಂತೆ ಕಣ್ಣೀರೀಟ್ಟು ಕೈಮುಗಿದು ಬೇಡಿಕೊಳ್ಳುತ್ತಿರುವ ವಿಡಿಯೋವೊಂದು (viral Video) ಜಾಲತಾಣದಲ್ಲಿ ವೈರಲ್‌ ಆಗಿದೆ. ಬಾಲಕ ಕಣ್ಣೀರಿಟ್ಟ ಕೆಲ ಹೊತ್ತಿನಲ್ಲೇ ಆತನ ತಂದೆ ವಾಹನದ ಬಳಿ ಪುತ್ರನನ್ನು ಸಂತೈಸಿದ್ದು ವಿಡಿಯೋದಲ್ಲಿ ಸೆರೆಯಾಗಿದೆ. ಜೊತೆಗೆ ಈ ವಿಡಿಯೋ, ಯಾತ್ರೆ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿರುವುದಕ್ಕೆ ಸಾಕ್ಷಿ ಎಂದು ವಿಪಕ್ಷಗಳು ಕಿಡಿಕಾರಿವೆ. ಹೈಕೋರ್ಟ್‌ ಕೂಡಾ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.

ತಂದೆಯಿಂದ ಬೇರ್ಪಟ್ಟು ಅಳುತ್ತಿರುವ ಬಾಲಕನ ವಿಡಿಯೋ ವೈರಲ್‌
ಕೊಚ್ಚಿ: ಶಬರಿಮಲೆ ದೇಗುಲದಲ್ಲಿ ಹೆಚ್ಚಿರುವ ಭಕ್ತರ ಕಾರಣದಿಂದಾಗಿ ಜನಸಂದಣಿಯಲ್ಲಿ ತಂದೆಯಿಂದ ಬೇರ್ಪಟ್ಟ ಬಾಲಕನೊಬ್ಬ ಅಳುತ್ತಿರುವ ವಿಡಿಯೋ ವೈರಲ್‌ ಆಗಿದೆ. ಈ ಘಟನೆ ನೀಲಕ್ಕಲ್‌ನಲ್ಲಿ ನಡೆದಿದ್ದು, ಬಾಲಕನೊಬ್ಬ ಅಪ್ಪಾ ಎಂದು ಕೂಗುತ್ತಾ ಅಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.  ನಂತರ ಬಾಲಕ ಮತ್ತೆ ತನ್ನ ತಂದೆಯನ್ನು ಸೇರಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಅಯ್ಯಪ್ಪ ದರ್ಶನ ಇಲ್ಲದೆ ಭಕ್ತರು ವಾಪಸ್‌

ಕೊಚ್ಚಿ: ಅಯ್ಯಪ್ಪನ ದರ್ಶನಕ್ಕೆಂದೇ 48 ದಿನಗಳವರೆಗೂ ವ್ರತ ಆಚರಿಸಿ ಶಬರಿಮಲೆಗೆ ತೆರಳಿದ್ದ ಕರ್ನಾಟಕ ಸೇರಿ ಹಲವು ರಾಜ್ಯಗಳ ಭಕ್ತರು, ಅಯ್ಯಪ್ಪನ ದರ್ಶನ ಮಾಡಲಾಗದೆಯೇ ಮರಳುತ್ತಿರುವ ಕಳವಳಕಾರಿ ಘಟನೆ ಬೆಳಕಿಗೆ ಬಂದಿದೆ. ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಕಳೆದ ಕೆಲ ದಿನಗಳಿಂದ ಭಾರೀ ಪ್ರಮಾಣದ ಭಕ್ತರು ಆಗಮಿಸುತ್ತಿದ್ದಾರೆ. ಆದರೆ ಭಕ್ತರ ನಿರ್ವಹಣೆ, ಭಕ್ತರ ವಾಹನಗಳ ನಿರ್ವಹಣೆಯಲ್ಲಿ ಟ್ರಾವಂಕೂರು ದೇಗುಲ ಮಂಡಳಿ ಮತ್ತು ಪೊಲೀಸರು ಪೂರ್ಣ ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಆಡಳಿತ ಮಂಡಳಿ ವೈಫಲ್ಯದಿಂದಾಗಿ ದೇವರ ದರ್ಶನಕ್ಕೆ ಭಕ್ತರು ಹಲವು ಗಂಟೆಗಳ ಕಾಲ ಅನ್ನ, ನೀರು ಇಲ್ಲದೇ ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಜೊತೆಗೆ ಹಲವೆಡೆ ಅವ್ಯವಸ್ಥೆ ಪ್ರಶ್ನಿಸಿದ್ದಕ್ಕೆ ಪೊಲೀಸರು ಭಕ್ತರ ಮೇಲೆ ಹಲ್ಲೆ ನಡೆಸಿದ ಘಟನೆಗಳ ವಿಡಿಯೋ ಕೂಡಾ ಎಲ್ಲೆಡೆ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರ ಸೇರಿ ಹಲವು ರಾಜ್ಯಗಳ ಭಕ್ತರು ಪಂದಳಂನಿಂದಲೇ ಹಿಂದಿರುಗುತ್ತಿದ್ದಾರೆ ಎಂದು ಹಲವು ವರದಿಗಳು ತಿಳಿಸಿವೆ. ಇದು ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಗ್ವಾದ್ಧಕ್ಕೆ ಕಾರಣವಾಗಿದ್ದು, ವಿಪಕ್ಷ ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹೈಕೋರ್ಟ್‌ ಸೂಚನೆ:
ಇದರ ನಡುವೆಯೇ ಕೇರಳ ಹೈಕೋರ್ಟ್‌ ಸಹ ಕೇರಳ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಶಬರಿಮಲೆಗೆ ಭೇಟಿ ನೀಡುವವರಿಗೆ ಅಗತ್ಯ ಪಾರ್ಕಿಂಗ್‌ ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಸೂಚನೆ ನೀಡಿದೆ. 

ಸಿಎಂ ಸಭೆ: ಇದರ ಬೆನ್ನಲ್ಲೇ ಮುಖ್ಯಮಂತ್ರಿ ಪಿಣರಾಯ್‌ ವಿಜಯನ್‌ ಸಭೆ ನಡೆಸಿದ್ದು, ಸಮರ್ಪಕ ಕ್ರಮ ಕೈಗೊಳ್ಳುವಂತೆ ಪೊಲೀಸರು ಹಾಗೂ ದೇವಳದ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.
 

Latest Videos
Follow Us:
Download App:
  • android
  • ios