ಮೊಹರಂಗೆ ಹಿಂದೂ ವ್ಯಕ್ತಿ ಕೆಂಡದಾರತಿ: ಮುಸ್ಲಿಮರಿಂದ ರಕ್ತ ಅರ್ಪಣೆ..!
ಮೊಹರಂ ಕಡೆ ದಿನವಾದ ಶನಿವಾರ ಡೋಲಿ ಮತ್ತು ಪಂಜಾಗಳನ್ನು ಹೊತ್ತು ವಿವಿಧೆಡೆ ಮೆರವಣಿಗೆ ಮಾಡಲಾಯಿತು. ಹಬ್ಬದ ಅಂಗವಾಗಿ ಅಲಾಯಿ ದೇವರಿಗೆ ಶುಕ್ರವಾರ ಸಂಜೆ ಭಕ್ತರು ಸಕ್ಕರಿ, ಮಾದಲಿ ಅರ್ಪಿಸಿದರು. ಶನಿವಾರ ಸಂಜೆ ಜರುಗಿದ ಅಲಾಯಿ ದೇವರ ವಿಸರ್ಜನಾ ಕಾರ್ಯಕ್ರಮದಲ್ಲಿ ಹಲಗೆ ನಾದಕ್ಕೆ ಹೆಜ್ಜೆ ಹಾಕಿ ಕುಣಿಯುವ ಮೂಲಕ ಮೆರವಣಿಗೆಯ ಮೆರಗನ್ನು ಹೆಚ್ಚಿಸಿದರು. ಡೋಲಿ, ಅಲಾಯಿ ದೇವರು ಸಾಗುವ ರಸ್ತೆ ಬದಿಯಲ್ಲಿ ಜಮಾಯಿಸಿದ್ದ ಜನರು ಉತ್ತತ್ತಿ, ಶೇಂಗಾ, ಚುನಮರಿ ತೂರಿ ಅಲಾಯಿ ದೇವರುಗಳಿಗೆ ನಮಸ್ಕರಿಸಿದರು.
ಬೆಂಗಳೂರು(ಜು.30): ತ್ಯಾಗ, ಬಲಿದಾನದ ಸಂಕೇತವಾದ ಪವಿತ್ರ ಮೊಹರಂ ಹಬ್ಬವನ್ನು ರಾಜ್ಯಾದ್ಯಂತ ಶನಿವಾರ ಶ್ರದ್ಧಾ-ಭಕ್ತಿಯಿಂದ ಮುಸ್ಲಿಮರು ಆಚರಿಸಿದರು. ಮೊಹರಂ ಕಡೆ ದಿನವಾದ ಶನಿವಾರ ಡೋಲಿ ಮತ್ತು ಪಂಜಾಗಳನ್ನು ಹೊತ್ತು ವಿವಿಧೆಡೆ ಮೆರವಣಿಗೆ ಮಾಡಲಾಯಿತು. ಹಬ್ಬದ ಅಂಗವಾಗಿ ಅಲಾಯಿ ದೇವರಿಗೆ ಶುಕ್ರವಾರ ಸಂಜೆ ಭಕ್ತರು ಸಕ್ಕರಿ, ಮಾದಲಿ ಅರ್ಪಿಸಿದರು. ಶನಿವಾರ ಸಂಜೆ ಜರುಗಿದ ಅಲಾಯಿ ದೇವರ ವಿಸರ್ಜನಾ ಕಾರ್ಯಕ್ರಮದಲ್ಲಿ ಹಲಗೆ ನಾದಕ್ಕೆ ಹೆಜ್ಜೆ ಹಾಕಿ ಕುಣಿಯುವ ಮೂಲಕ ಮೆರವಣಿಗೆಯ ಮೆರಗನ್ನು ಹೆಚ್ಚಿಸಿದರು. ಡೋಲಿ, ಅಲಾಯಿ ದೇವರು ಸಾಗುವ ರಸ್ತೆ ಬದಿಯಲ್ಲಿ ಜಮಾಯಿಸಿದ್ದ ಜನರು ಉತ್ತತ್ತಿ, ಶೇಂಗಾ, ಚುನಮರಿ ತೂರಿ ಅಲಾಯಿ ದೇವರುಗಳಿಗೆ ನಮಸ್ಕರಿಸಿದರು.
ಬೆಂಗಳೂರಿನ ಮಿರ್ಜಾ ಇಸ್ಮಾಯಿಲ್ ನಗರ, ಜಾನ್ಸನ್ ಮಾರ್ಕೆಟ್ ಮತ್ತಿತರ ಕಡೆ ಶಿಯಾ ಮುಸ್ಲಿಮರು ಹಬ್ಬದಂಗವಾಗಿ ಶೋಕಾಚರಣೆ ನಡೆಸಿದರು. ಬೆಳಗಾವಿ ಜಿಲ್ಲೆ ಬೈಲಹೊಂಗಲದ ಕಂಠಿ ಗಲ್ಲಿಯಲ್ಲಿ ಭಕ್ತರು ಕೆಂಡ ಹಾಯ್ದು ಹರಕೆ ತೀರಿಸಿದರು.
ಮೊಹರಂ ನಿಮಿತ್ಯ ಹಾಕಿದ ನಿಗಿನಿಗಿ ಕೆಂಡದಲ್ಲಿ ಕಂಬಳಿ ಹಾಸಿ ಕುಳಿತ ವ್ಯಕ್ತಿ!
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಅಮರಗೋಳದಲ್ಲಿ ಅಲಾಯಿ ದೇವರ ಎದುರಿಗೆ ಹಾಕಿದ ಕೆಂಡದಲ್ಲಿ ಹಿಂದೂ ವ್ಯಕ್ತಿ ಯಲ್ಲಾಲಿಂಗ ಎಂಬುವರು ಕಂಬಳಿ ಹಾಸಿ ಕುಳಿತು, ಬಳಿಕ, ಬರಿಗೈಯಲ್ಲಿ ಕೆಂಡ ಹಿಡಿದು, ಕೆಂಡದಾರತಿ ಮಾಡಿ, ಭಕ್ತಿ ಮೆರೆದಿದ್ದು ವಿಶಿಷ್ಟವಾಗಿತ್ತು. ಬೆಳಗಾವಿ ತಾಲೂಕಿನ ಮಾರಹಾಳದಲ್ಲಿ ಮೊಹರಂ ಆಚರಣೆಯ ವೇಳೆ ಕನ್ನಡ ಬಾವುಟಗಳ ಪ್ರದರ್ಶನ ನಡೆಯಿತು.
ಈ ಮಧ್ಯೆ, ಹುಬ್ಬಳ್ಳಿಯ ಕುರುಗೋಡು, ಬಾಗಲಕೋಟೆಯ ಬಂಡಿಗಣಿ, ಹುಬ್ಬಳ್ಳಿ, ಕಲಬುರಗಿ, ವಿಜಯಪುರ ಸೇರಿ ರಾಜ್ಯದ ಕೆಲವೆಡೆ ಹಿಂದೂ-ಮುಸ್ಲಿಮರು ಹುಲಿ, ಅಳ್ಳಳ್ಳಿಬವಾ ವೇಷಧಾರಿಗಳಾಗಿ ಹರಕೆ ತೀರಿಸುವ ಮೂಲಕ ಕೋಮು ಸಾಮರಸ್ಯ ಮೆರೆದರು. ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಕಡೆ ಬಿಗಿ ಪೊಲೀಸ್ ಬಂದೋಬಸ್್ತ ಕಲ್ಪಿಸಲಾಗಿತ್ತು.
ಇರಾನಿ ಆಚರಣೆ:
ಸಾಮಾನ್ಯ ಮುಸ್ಲಿಮರಂತೆ ಇರಾನಿ ಮುಸ್ಲಿಮರು ಈ ಹಬ್ಬವನ್ನು ಆಚರಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಧಾರವಾಡದ ಹೊಸಯಲ್ಲಾಪುರ, ಗದಗ, ವಿಜಯನಗರ ಸೇರಿ ರಾಜ್ಯದ ಹಲವೆಡೆ ಇರಾನಿ ಮುಸ್ಲಿಮರು ವಿಶಿಷ್ಟವಾಗಿ ಆಯುಧಗಳಿಂದ ಹೊಡೆದುಕೊಂಡು ಯಾ ಹುಸೇನ್.. ಯಾ ಹುಸೇನ್... ಎನ್ನುತ್ತಾ ದೇಹ ದಂಡಿಸಿ ಪಂಜಾಗಳ ಮೆರವಣಿಗೆ ಮಾಡಿದರು. ಎದೆ ಬಡಿಕೊಂಡು ರಕ್ತ ಅರ್ಪಣೆ ಮಾಡುವ ಮೂಲಕ ಹಬ್ಬ ಆಚರಿಸಿದರು.