ಹಾವೇರಿಯ ದೇವರಗುಡ್ಡ ಕಾರ್ಣಿಕದ ವಿಶ್ಲೇಷಣೆಯಲ್ಲಿ ಒಂದು ಹೆಣ್ಣಿನ ಹಸ್ತಕ್ಷೇಪದಿಂದ ರಾಜ್ಯ ರಾಜಕೀಯದಲ್ಲಿ ಏರುಪೇರಾಗಲಿದೆ ಎಂದು ತಿಳಿದುಬಂದಿದೆ.

ಹಾವೇರಿ (ಅ.23): ಹಾವೇರಿಯ ದೇವರಗುಡ್ಡ ಕಾರ್ಣಿಕ 'ಮುಕ್ಕೋಟಿ ಚೆಲ್ಲೀತಲೇ ಕಲ್ಯಾಣ ಕಟ್ಟೀತಲೇ ಪರಾಕ್' ದೈವವಾಣಿಯನ್ನು ವಿಶ್ಲೇಷಣೆ ಮಾಡಲಾಗಿದ್ದು, ಅದರಲ್ಲಿ ಒಂದು ಹೆಣ್ಣಿನ ಹಸ್ತಕ್ಷೇಪದಿಂದ ರಾಜ್ಯ ರಾಜಕೀಯದಲ್ಲಿ ಏರುಪೇರಾಗಲಿದೆ ಎಂದು ತಿಳಿದುಬಂದಿದೆ. 

Add Asianetnews Kannada as a Preferred SourcegooglePreferred

ರಾಜ್ಯದ ಐತಿಹಾಸಿಕ ಶ್ರೀ ಕ್ಷೇತ್ರ ದೇವರಗುಡ್ಡದಲ್ಲಿ ದಸರಾ ಹಬ್ಬದ ವೇಳೆ ನಡೆಯುವ ಕಾರ್ಣಿಕೋತ್ಸವದಲ್ಲಿ ದೈವವಾಣಿ ನುಡಿಯುವ ಗೊರವಪ್ಪ 'ಮುಕ್ಕೋಟಿ ಚೆಲ್ಲೀತಲೇ ಕಲ್ಯಾಣ ಕಟ್ಟೀತಲೇ ಪರಾಕ್' ಎಂದು ಕಾರ್ಣಿಕ ನುಡಿದಿದ್ದಾರೆ. ಆದರೆ, ಇದನ್ನು ಒಂದು ಹೆಣ್ಣಿನ ಹಸ್ತಕ್ಷೇಪದಿಂದ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಕಂಟಕವಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ನಡೆದ ಮಾಲತೇಶ ದೇವರ ಕಾರ್ಣಿಕೋತ್ಸವ ನುಡಿಗೆ ಲಕ್ಷಾಂತರ ಜನ ಸಾಕ್ಷಿಯಾಗಿದ್ದಾರೆ. ವಿಜಯ ದಶಮಿಯ ಆಯುಧ ಪೂಜಾ ದಿನದಂದು ಐತಿಹಾಸಿಕ ಸುಕ್ಷೇತ್ರ ದೇವರಗುಡ್ಡದಲ್ಲಿ ಸೋಮವಾರ ಸಂಜೆ ನಾಗಪ್ಪಜ್ಜ ಉರ್ಮಿ ಕಾರ್ಣಿಕ ನುಡಿದಿದ್ದಾರೆ. 'ಮುಕ್ಕೋಟಿ ಚೆಲ್ಲೀತಲೇ ಕಲ್ಯಾಣ ಕಟ್ಟೀತಲೇ ಪರಾಕ್' ಎಂದು ದೇವರಗುಡ್ಡದಲ್ಲಿ ಬಿಲ್ಲನ್ನೇರಿ ಗೊರವಪ್ಪ ಕಾರ್ಣೀಕ ನುಡಿದು ಕೆಳಗೆ ಬಿದ್ದಿದ್ದಾರೆ.

ಬೆಂಗಳೂರು ತಂಪು.. ತಂಪು.. ಕೂಲ್‌.. ಕೂಲ್‌: ದಶಕದ ಬಳಿಕ ದಾಖಲೆಯಾಯ್ತು ಅಕ್ಟೋಬರ್‌ ಚಳಿ

ಇನ್ನು ಕಾರ್ಣಿಕದ ದೈವನುಡಿಯನ್ನು ರಾಜಕೀಯವಾಗಿ ವಿಶ್ಲೇಷಣೆ ಮಾಡಿದ ದೇವರಗುಡ್ಡದ ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್ ಭಟ್ ಅವರು ಒಂದು ಹೆಣ್ಣಿನ ಹಸ್ತಕ್ಷೇಪದಿಂದ ಸರ್ಕಾರಕ್ಕೆ ಕಂಟಕ ಬರಲಿದೆ. ಒಂದು ಹೆಣ್ಣಿನ ಹಸ್ತಕ್ಷೇಪದಿಂದ ರಾಜ್ಯ ರಾಜಕಾರಣ ಸಂಪೂರ್ಣವಾಗಿ ಏರುಪೇರಾಗಲಿದೆ ಎಂದು ಹೇಳಿದ್ದಾರೆ. ಇದರಿಂದ ರಾಜಕೀಯವಾಗಿ ಭಾರಿ ದೊಡ್ಡಮಟ್ಟದ ಆತಂಕ ಶುರುವಾಗಿದೆ. ಇನ್ನು ಒಂದು ಹೆಣ್ಣು ಎಂದು ಮಾತ್ರ ವಿಶ್ಲೇಷಣೆ ಮಾಡಿದ್ದು, ಅವರು ರಾಜಕೀಯ ಹಿನ್ನೆಲೆಯುಳ್ಳಬವರೋ ಅಥವಾ ಬೇರೆ ಮಹಿಳೆಯೋ ಎಂಬುದನ್ನು ಕಾದು ನೋಡಬೇಕಿದೆ.

ಕಾರ್ಣಿಕದ ನುಡಿಯನ್ನು ಕೃಷಿ ಹಾಗೂ ರೈತರಿಗೆ ಹೋಲಿಕೆ ಮಾಡಿ ವಿಶ್ಲೇಷಣೆ ಮಾಡಿದಾಗ್ಯೂ ರೈತರಿಗೆ ಆತಂಕದ ಭವಿಷ್ಯವೇ ಹೊರಬಿದ್ದಿದೆ. ಮುಕ್ಕೋಟಿ ಚಲ್ಲಿತಲೇ ಅಂದರೆ ರೈತರು ಕೋಟ್ಯಂತರ ರೂ. ಭೂಮಿಗೆ ಹಾಕುತ್ತಾರೆ. ಕಲ್ಯಾಣ ಕಟ್ಟಿತಲೇ ಎಂದರೆ ರೈತರಿಗೆ ಲಾಭವಾಗುವ ನಿರೀಕ್ಷೆಗಳು ಕಡಿಮೆಯಾಗಿವೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಬರಗಾಲ ಆವರಿಸಿದ್ದು, ಬಿತ್ತನೆ ಮಾಡಿದ ಬೆಳೆಗಳು ಸಂಪೂರ್ಣವಾಗಿ ಒಣಗಿ ಹೋಗುತ್ತಿವೆ. ರೈತರು ಬೆಳೆಯನ್ನು ಉಳಿಸಿಕೊಳ್ಳಲಾಗದೇ ಮಳೆಗಾಗಿ ಎದುರು ನೋಡುತ್ತಿದ್ದಾರೆ. ಮತ್ತೊಂದೆಡೆ ರಾಜ್ಯದಲ್ಲಿ 216 ತಾಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಲಾಗಿದ್ದು, ರೈತರಿಗೆ ಬೆಳೆ ಸಿಗುವುದಿಲ್ಲವೆಂಬುದು ಖಚಿತವಾದಂತಿದೆ. 

ಹುಲಿ ಉಗುರು ಪೆಂಡೆಂಟ್‌ ಧರಿಸಿದ ನಟ ಜಗ್ಗೇಶ್, ದರ್ಶನ್‌ಗೆ ಅರಣ್ಯ ಇಲಾಖೆ ನೋಟಿಸ್‌: ನಿಖಿಲ್‌ ಕುಮಾರಸ್ವಾಮಿ ಬಚಾವ್‌!

ರಾಜ್ಯದಲ್ಲಿ ದಸರಾ ಹಬ್ಬದ ಸಮಯದಲ್ಲಿ ನಡೆಯುವ ಮಾಲತೇಶ ದೇವರ ಕಾರ್ಣಿಕೋತ್ಸವ ಬಹಳ ಪ್ರಸಿದ್ಧಿ ಪಡೆದಿದೆ. ವರ್ಷದ ಭವಿಷ್ಯ ವಾಣಿ ಅಂತಲೇ ಜನ‌ ಕಾರ್ಷಿಕೋತ್ಸವವನ್ನು ನಂಬುತ್ತಾರೆ. ಈ ಬಗ್ಗೆ ವಿಶ್ಲೇಷಣೆ ಮಾಡಲಾಗುತ್ತಿದ್ದು, ಕಾರ್ಣಿಕ ದೈವವಾಣಿಯನ್ನು ರಾಜಕೀಯ, ಕೃಷಿ ಹಾಗೂ ಆರ್ಥಿಕ ಬೆಳವಣಿಗೆಗೆ ಸಂಬಂಧಪಟ್ಟಂತೆ ಒಂದು ವರ್ಷದ ಭವಿಷ್ಯವೆಂದೇ ಹೇಳಲಾಗುತ್ತದೆ.