ಈ ದೇವಸ್ಥಾನದಲ್ಲಿ ಎಲ್ಲ ಕಡೆಗಳಂತೆ ದೇವರಿಗೆ ಹಣ್ಣು, ಹೂವು, ಅನ್ನ, ಹಾಲು ಇಂಥವೇನನ್ನೂ ನೀಡೋದಿಲ್ಲ. ಈ ದೇವರಿಗೇನಿದ್ದರೂ ವಿಷ ಚೇಳುಗಳ ನೈವೇದ್ಯ..

ಸಾಮಾನ್ಯವಾಗಿ ದೇವಾಲಯಗಳಲ್ಲಿ ದೇವರಿಗೆ ನೈವೇದ್ಯಕ್ಕಾಗಿ ಕಾಯಿ ಒಡೆಯಲಾಗುತ್ತದೆ. ಇದರ ಹೊರತಾಗಿ ಹಣ್ಣುಹಂಪಲು, ಎಳನೀರು ನೀಡಲಾಗುತ್ತದೆ. ಇನ್ನೂ ಹೆಚ್ಚೆಂದರೆ ಮನೆಯಲ್ಲೇ ಮಡಿಯಲ್ಲಿ ತಯಾರಿಸಿದ ಆಹಾರ, ಹಾಲು, ಜೇನುತುಪ್ಪ ಇಂಥವುಗಳನ್ನು ನೈವೇದ್ಯಕ್ಕಾಗಿ ನೀಡಲಾಗುತ್ತದೆ. ಅದಕ್ಕಿಂತ ಮುಂದುವರಿದು ಕುರಿ, ಕೋಳಿ ಸೇರಿ ಇತರೆ ಪ್ರಾಣಿ ಬಲಿ ನೀಡುವುದನ್ನೂ ನೋಡಿರಬಹುದು. ಆದರೆ, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿನ ವಿಚಿತ್ರವಾದ ಪದ್ಧತಿಯನ್ನು ದೇಶದಲ್ಲಿ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು, ಕರ್ನೂಲ್ ಜಿಲ್ಲೆಯ ಕೋಡುಮೂರಿನ ಕೊಂಡಲ ರಾಯುಡು ದೇವಸ್ಥಾನದಲ್ಲಿ ಮಾತ್ರ ದೇವರಿಗಾಗಿ ಭಕ್ತರು ಮಿಜಿಗುಡುವ ಚೇಳುಗಳನ್ನು ನೈವೇದ್ಯವಾಗಿ ನೀಡುತ್ತಾರೆ. ಇದೊಂದು ವಿಚಿತ್ರ ಸಂಪ್ರದಾಯದಂತೆ ಕಂಡರೂ ಹಲವು ವರ್ಷಗಳಿಂದ ಈ ಪದ್ಧತಿಯನ್ನು ಬಳಸಲಾಗುತ್ತಿದೆ.

ಚೇಳು ಕಚ್ಚಿದ್ರೂ ಏನಾಗಲ್ಲ!
ಇಲ್ಲಿ ಕೇವಲ ದೊಡ್ಡವರಲ್ಲ, ಮಕ್ಕಳು ಕೂಡಾ ಕೊಂಚವೂ ಬೆದರದೆ, ನಿರ್ಭಯವಾಗಿ ಚೇಳುಗಳನ್ನು ಸಂಗ್ರಹಿಸಿ ದೇವರು ಮತ್ತು ದೇವಿಗೆ ಅರ್ಪಿಸುತ್ತಾರೆ. ದೊಡ್ಡದಾಗಿರಲಿ, ಸಣ್ಣದಾಗಿರಲಿ- ಚೇಳುಗಳನ್ನು ಹಿಡಿದು ಮೈ ತುಂಬಾ ಹರಿಯಲು ಬಿಟ್ಟು, ಭುಜದ ಮೇಲೆ, ಕೈಯ್ಯಲ್ಲಿ ಹರಿಸಿಕೊಂಡು, ಬಾಯಿಗೂ ಹಾಕಿಕೊಳ್ಳುವವರಿದ್ದಾರೆ. ಬಳಿಕ ಕೊಂಡರಾಯುಡು ಸ್ವಾಮಿಗೆ ಚೇಳುಗಳ ಅಭಿಷೇಕ ಮಾಡಲಾಗುತ್ತದೆ. ಇಲ್ಲಿ ಚೇಳು ಕೊಟ್ಟರೆ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಜನರು ದೃಢವಾಗಿ ನಂಬುತ್ತಾರೆ. ಅದರಲ್ಲೂ ಶ್ರಾವಣ ಸೋಮವಾರದಲ್ಲಿಯಂತೂ ಇಲ್ಲಿಯೂ ಭಕ್ತರು ಚೇಳುಗಳಂತೆ ಮಿಜಿಗುಡುತ್ತಾ, ಕೈಲಿ ಜೀವಂತ ಚೇಳುಗಳನ್ನು ಹಿಡಿದು ಬರುತ್ತಾರೆ. ಅದನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸುತ್ತಾರೆ. ಜನರು ಬರಿ ಕೈಗಳಿಂದ ಚೇಳನ್ನು ಹಿಡಿಯುತ್ತಾರೆ ಮತ್ತು ಅದನ್ನು ತಮ್ಮ ದೇಹದ ಮೇಲೆ ತೆವಳಲು ಬಿಡುತ್ತಾರೆ. ಅವರಿಗೆ ಕುಟುಕುವ ಭಯವಿಲ್ಲ.
ಚೇಳು ವಿಷಪೂರಿತವಾಗಿದ್ದರೂ ಮತ್ತು ಅದರ ಕುಟುಕಿನಿಂದ ಸಾವು ಸಂಭವಿಸುವುದಾದರೂ ಈ ದಿನ ಮಾತ್ರ ಚೇಳಿನಿಂದ ಯಾವುದೇ ಹಾನಿಯಾಗುವುದಿಲ್ಲ ಎನ್ನಲಾಗುತ್ತದೆ.. 

ನಿಮ್ಮ ರಾಶಿ ಬ್ರೇಕಪ್‌ ಮಾಡಿಕೊಳ್ಳಲೇನು ಕಾರಣ?

ಕೋದಂಡರಾಯುಡು
ಈ ದೇವಾಲಯವು ಬೆಟ್ಟದ ಮೇಲಿದೆ. ಇಲ್ಲಿರುವುದು ಕೋದಂಡರಾಯುಡು (ವೆಂಕಟೇಶ್ವರ ಸ್ವಾಮಿ). ಕೋಡುಮೂರು ಪಟ್ಟಣದಲ್ಲಿ 60 ವರ್ಷಗಳಿಂದ ಈ ಪದ್ಧತಿ ಜಾರಿಯಲ್ಲಿದೆ. ಪಟ್ಟಣದ ಬೆಟ್ಟದ ಮೇಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಚೇಳು ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಮತ್ತು ವಿಶೇಷವಾಗಿ ಈ ಹಬ್ಬವು ಪ್ರತಿ ವರ್ಷ ಶ್ರಾವಣ ಮಾಸದ ಮೂರನೇ ಸೋಮವಾರದಂದು ನಡೆಯುತ್ತದೆ. ಇತರ ದಿನಗಳಲ್ಲಿ ಪೈಶಾಚಿಕವಾಗಿರುವ ಚೇಳಿನ ಕುಟುಕು ಈ ದಿನ ಜನರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ವೆಂಕಟೇಶ್ವರ ಸ್ವಾಮಿಗೆ 'ಚೇಳು ನೈವೇದ್ಯಂ' ಅರ್ಪಿಸಲು ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಸೇರುತ್ತಾರೆ. ಮಕ್ಕಳಿಲ್ಲದ ದಂಪತಿ ಕೋದಂಡರಾಯುಡು ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ಚೇಳಿನ ಮಾಲೆಯನ್ನು ಹಾಕಿ ಆಶೀರ್ವಾದ ಪಡೆಯುತ್ತಾರೆ. ಜಿಲ್ಲೆಯ ಮೂಲೆ ಮೂಲೆಗಳಿಂದ ಮಾತ್ರವಲ್ಲದೆ, ಪಕ್ಕದ ರಾಜ್ಯಗಳು, ಕರ್ನಾಟಕ ಮತ್ತು ತೆಲಂಗಾಣದ ಇತರ ಭಾಗಗಳಿಂದ ಹಲವಾರು ಭಕ್ತರು ಈ ದಿನ ಭೇಟಿ ನೀಡಿ ಚೇಳು ಉತ್ಸವದಲ್ಲಿ ಭಾಗವಹಿಸುತ್ತಾರೆ.

Surya Gochar 2023: 3 ರಾಶಿಗಳಿಗೆ ಸರ್ಕಾರಿ ಕೆಲಸ ಸಿಗುವ ಸಂಭಾವ್ಯತೆ

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.