'ರಾಮ್ ಲೀಲಾ' ಅದ್ಧೂರಿ ವಿವಾಹದ ಕಲರ್ಫುಲ್ ಫೋಟೋ ಆಲ್ಬಂ
ಸ್ಟಾರ್ಗಳು ಮದುವೆ ಆಗುವುದೂ ಅವರ ಸಿನಿಮಾ ರಿಲೀಸ್ ಆಗುವುದೂ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಮನರಂಜನೆ. ಇಟಲಿಯಲ್ಲಿ ಲಗ್ನವಾಗಿ, ಆರತಕ್ಷತೆಗೆ ಬೆಂಗಳೂರಿನ ಲೀಲಾ ಪ್ಯಾಲೇಸಿಗೆ ಬಂದಿರುವ ದೀಪಿಕಾ-ರಣವೀರ್ ಸಿಂಗ್ ಮದುವೆಯ ರಂಗುರಂಗಿನ ಆಲ್ಬಮ್ ಈಗ ಅವರ ಸಿನಿಮಾ ಸ್ಟಿಲ್ಗಳಿಗಿಂತಲೂ ಜನಪ್ರಿಯವಾಗಿವೆ. ಈ ‘ಅಭೂತಪೂರ್ವ’ ಸ್ವಯಂವರದ ಆಲ್ಬಮ್ ಇಲ್ಲಿದೆ. ವಧೂವರರ ಜೊತೆಗೆ ಅವರು ಧರಿಸಿರುವ ಆಭರಣ, ಉಟ್ಟಿರುವ ತೊಡುಗೆ, ತೊಟ್ಟಿರುವ ಉಡುಗೆ ಇವನ್ನೆಲ್ಲ ವಿವಾಹಪ್ರಿಯರು ನೋಡಿ ಸಂತೋಷಪಡಬಹುದು. ಅಂದ ಹಾಗೆ, ಇಂದು ಲೀಲಾ ಪ್ಯಾಲೇಸಿನಲ್ಲಿ ನಡೆಯುವ ಆರತಕ್ಷತೆಗೆ ಬಂದರೆ ಅರ್ಧ ಗಂಟೆ ಫೋಟೋ ದರ್ಶನ ಕೊಡುತ್ತೇನೆ. ಯಾವ ಕಾರಣಕ್ಕೂ ಮಾತಿಗೆ ಅವಕಾಶವಿಲ್ಲ ಎಂದು ‘ದೀರ’ ದಂಪತಿ ಮಾಧ್ಯಮಗಳಿಗೆ ಸುದ್ದಿ ಮುಟ್ಟಿಸಿದ್ದಾರೆ.
ದೀಪ್ವೀರ್: ಬಾಲಿವುಡ್ನ ಈ ಫೇವರಿಟ್ ಕಪಲ್ ಮದುವೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು.
ಕೊನೆಗೂ ಈ ಲವ್ಬರ್ಡ್ಸ್ ದೀರ್ಘ ಕಾಲದ ತಮ್ಮ ಗೆಳೆತನಕ್ಕೆ ಗುಡ್ ಬೈ ಹೇಳಿ, ಇಟಲಿಯಲ್ಲಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ತೀರಾ ಖಾಸಗಿಯಾಗಿ ನಡೆದ ಈ ವಿವಾಹ ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರು ಹಾಗೂ ಆತ್ಮೀಯರಷ್ಟೇ ಭಾಗಿಯಾಗಿದ್ದರು.
ನವೆಂಬರ್ 14 ರಂದು ಇಬ್ಬರೂ ಕೊಂಕಣಿ ಸಂಪ್ರದಾಯದಂತೆ ಮದುವೆಯಾಗಿದ್ದು, ಮರುದಿನ ಅಂದರೆ ನವೆಂಬರ್ 15 ರಂದು ಸಿಂಧಿ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.
ಮದುವೆ ಕಾರ್ಯಕ್ರಮದಲ್ಲಿ ಈ ಬಹುಕಾಲದ ಈ ಗೆಳೆಯರು ಎಲ್ಲಾ ವಿಧಿ ವಿಧಾನಗಳನ್ನೂ ಪೂರೈಸಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಮದುವೆ ಕಾರ್ಯಕ್ರಮ ಅದೆಷ್ಟು ಖಾಸಗಿಯಾಗಿತ್ತೆಂದರೆ, ದೀಪಿಕಾ ಹಾಗೂ ರಣವೀರ್ ಹಸೆಮಣೆ ಏರಿದ ಒಂದು ಫೋಟೋ ಕೂಡಾ ಲೀಕ್ ಆಗಿರಲಿಲ್ಲ.
ಮದುವೆ ಕಾರ್ಯಕ್ರಮಗಳು ಮುಗಿದ ಬಳಿಕ ದೀಪಿಕಾ ಹಾಗೂ ರಣವೀರ್ ತಮ್ಮ ಇನ್ಸ್ಟಾಗ್ರಾಂ ಅಕೌಂಟ್ಗಳಲ್ಲಿ ಫೋಟೋ ಶೇರ್ ಮಾಡಿದ ಬಳಿಕವಷ್ಟೇ ಮಾಧ್ಯಮಗಳಿಗೂ ಲಭ್ಯವಾಗಿದ್ದು.
ಮದುವೆ ಬಳಿಕ ದೀಪಿಕಾ ಧರಿಸಿದ್ದ ಮದುವೆ ಉಡುಪು, ಉಂಗುರ, ತಲೆಗೆ ಹಾಕಿಕೊಂಡಿದ್ದ ಚುನರಿ ಭಾರೀ ಸದ್ದು ಮಾಡಿತ್ತು.
ದೀಪಿಕಾರ ಮದುವೆ ಉಂಗುರದ ಬೆಲೆ ಬರೋಬ್ಬರಿ 2.5 ಕೋಟಿ ಅಂದಾಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಡಿಪ್ಪಿ ತಲೆಗೆ ಹಾಕಿಕೊಂಡಿದ್ದ ಚುನರಿಯಲ್ಲಿ 'ಸದಾ ಸೌಭಾಗ್ಯವತಿ ಭವಃ’ ಎಂದಿದ್ದ ಶ್ಲೋಕವೂ ಎಲ್ಲರ ಗಮನ ಸೆಳೆದಿತ್ತು.
ಈ ಮೊದಲು ದೀಪಿಕಾ ಧರಿಸಿದ್ದ ಮದುವೆ ಉಡುಪು ಪ್ರಖ್ಯಾತ ಡಿಸೈನರ್ ಸಬ್ಯಸಾಚಿ ಮಾಡಿದ್ದೆನ್ನಲಾಗಿತ್ತು. ಆದರೀಗ ಖುದ್ದು ಸಬ್ಯಸಾಚಿ ಸ್ಪಷ್ಟನೆ ನೀಡಿದ್ದು, ಕೊಂಕಣಿ ಸಂಪ್ರದಾಯದಂತೆ ನಡೆದ ಮದುವೆಗೆ ದೀಪಿಕಾರ ಅಮ್ಮನೇ ಬಟ್ಟೆ ಖರೀದಿಸಿದ್ದರು ಎಂದಿದ್ದಾರೆ.
ಸದ್ಯ ಈ ಬಾಲಿವುಡ್ ಕಪಲ್ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ.
ಬೆಂಗಳೂರಿನ ಲೀಲಾ ಪ್ಯಾಲೆಸ್ನಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ದೀಪಿಕಾರ ಕುಟುಂಬಸ್ಥರು ಸೇರಿ ದಕ್ಷಿಣ ಭಾರತದ ಸಿನಿಮಾ ನಟರನ್ನು ಆಹ್ವಾನಿಸಲಾಗಿದೆ.
ಬೆಂಗಳೂರಿನ ಕಾರ್ಯಕ್ರಮ ಮುಗಿಸಿದ ಬಳಿಕ ಮುಂಬೈಗೆ ತೆರಳಲಿರುವ ಈ ದಂಪತಿ ನವೆಂಬರ್ 28 ರಂದು ಆಯೋಜಿಸಿರುವ ಮತ್ತೊಂದು ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ.
ಮುಂಬೈನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಶಾರುಖ್ ಖಾನ್, ಫರಾ ಖಾನ್ ಸೇರಿದಂತೆ ಹಲವಾರು ಬಾಲಿವುಡ್ ದಿಗ್ಗಜರನ್ನು ಆಹ್ವಾನಿಸಲಾಗಿದೆ.
ಮುಂಬೈನ ಗ್ಯಾಂಡ್ ಹಟ್ನಲ್ಲಿ ನಡೆಯಲಿರುವ ಈ ರಿಸೆಪ್ಶನ್ನಲ್ಲಿ ರಣವೀರ್ ಕುಟುಂಬದ ಸದಸ್ಯರು ಪಾಲ್ಗೊಳ್ಳಲಿದ್ದಾರೆ.