ಮತ್ತೆ ಕನ್ನಡಕ್ಕೆ ನಟಿ ಊರ್ವಶಿ
ನಟಿ ಊರ್ವಶಿ ಮತ್ತೆ ಬಂದಿದ್ದಾರೆ. ಹಾಗೆ ನೋಡಿದರೆ ಊರ್ವಶಿಗೆ ಕನ್ನಡ ಸಿನಿಮಾ ತೀರಾ ಅಪರಿಚಿತವೇನಲ್ಲ. ‘ರಾಮಾ ಶಾಮ ಭಾಮ’ದಲ್ಲಿ ಅವರ ಪೆದ್ದು ನಟನೆಯನ್ನು ಮರೆಯಲು ಸಾಧ್ಯವಿಲ.
ಕನ್ನಡದಲ್ಲೇ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ, ದಕ್ಷಿಣ ಭಾರತದ ಬಹುತೇಕ ಸ್ಟಾರ್ ನಟರ ಜತೆ ನಟಿಸಿರುವ ಮಲೆಯಾಳಂನ ಈ ಊರ್ವಶಿ ಸ್ಟಾರ್ ನಟರ ಅಭಿನಯದ ‘ಶಿವಲಿಂಗ’ ಹಾಗೂ ‘ಜಗ್ಗುದಾದಾ’ ಚಿತ್ರಗಳ ನಂತರ ಹೊಸಬರ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ವಿಶೇಷ.
ಚಿತ್ರದ ಹೆಸರು ‘ಸುರ್ ಸುರ್ ಬತ್ತಿ’. ಸದ್ದಿಲ್ಲದೆ ಚಿತ್ರೀಕರಣ ಮುಗಿಸಿರುವ ಈ ಸಿನಿಮಾ ಇದೇ ತಿಂಗಳು ನ.೧೬ಕ್ಕೆ ತೆರೆಗೆ ಬರುತ್ತಿದೆ. ಇಲ್ಲಿ ಊರ್ವಶಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಈ ಹಿಂದೆ ‘ಚತುರ್ಭುಜ’ ಚಿತ್ರದ ನಾಯಕನಾಗಿ ಪರಿಚಯವಾಗಿದ್ದ ಆರವ್ ಈ ಚಿತ್ರದ ನಾಯಕ. ಇನ್ನೂ ಸದ್ಯ ಕನ್ನಡದಲ್ಲಿ ಬೇಡಿಕೆಯಲ್ಲಿರುವ ವೈಷ್ಣವಿ ಮೆನನ್ ಚಿತ್ರದ ನಾಯಕಿ. ‘ಸುರ್ ಸುರ್ ಬತ್ತಿ’ ಚಿತ್ರದಲ್ಲಿ ವೈಷ್ಣವಿ ಮೆನನ್ ಲುಕ್ ನೋಡಿಯೇ ‘ನ್ಯೂರಾನ್’ ಎನ್ನುವ ಮತ್ತೊಂದು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.
ಈ ಚಿತ್ರಕ್ಕೆ ಕತೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶಿಸಿರುವುದು ಮುಗಿಲ್.