ರಾಜಮೌಳಿ ಮಾಡ್ತಿದ್ದಾರಾ ಉಪ್ಪಿ ಚಿತ್ರದ ಆಡಿಯೋ ರಿಲೀಸ್?
ಉಪೇಂದ್ರ ಅವರ ‘ಐ ಲವ್ ಯೂ’ ಚಿತ್ರದ ಆಡಿಯೋ ಬಿಡುಗಡೆಯನ್ನೇ ದೊಡ್ಡ ಮಟ್ಟದಲ್ಲಿ ಮಾಡುವುದಕ್ಕೆ ಹೊರಟಿರುವ ನಿರ್ದೇಶಕ ಆರ್. ಚಂದ್ರು, ದಾವಣಗೆರೆಯಲ್ಲಿ ಸಾವಿರಾರು ಮಂದಿ ಸಮ್ಮುಖದಲ್ಲಿ ಜ.12ರಂದು ಚಿತ್ರದ ಆಡಿಯೋ ಬಿಡುಗಡೆ ಮಾಡಲಿದ್ದಾರೆ.
ವಿಶೇಷ ಅಂದರೆ ಉಪ್ಪಿ ಚಿತ್ರದ ಆಡಿಯೋ ಬಿಡುಗಡೆ ಮಾಡುತ್ತಿರುವುದು ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ.
‘ನಾನೇ ನೇರವಾಗಿ ಚಿತ್ರದ ಆಡಿಯೋ ಬಿಡುಗಡೆಗೆ ರಾಜಮೌಳಿಯವರನ್ನು ಆಹ್ವಾನಿಸಿದೆ. ಆಗ ಅವರು ಬಳ್ಳಾರಿಯಲ್ಲಿ ಕಾರ್ಯಕ್ರಮ ಇಟ್ಟುಕೊಳ್ಳಿ ಎಂದು ಹೇಳಿದರು. ನಾನು ದಾವಣಗೆರೆಯಲ್ಲೇ ಮಾಡಬೇಕು ಎಂದಾಗ ಬರುತ್ತೇನೆಂದು ಒಪ್ಪಿಕೊಂಡಿದ್ದಾರೆ. ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ಐ ಲವ್ ಯೂ ಸಿನಿಮಾ ಬರುತ್ತಿದೆ. ಈ ಕಾರಣಕ್ಕೆ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನೇ ಬಹು ಭಾಷೆಗೆ ತಲುಪುವಂತೆ ಮಾಡುತ್ತಿದ್ದೇನೆ. ರಾಜಮೌಳಿ ಬರುವುದು ಖಚಿತವಾಗಿದೆ’ ಎನ್ನುತ್ತಾರೆ ನಿರ್ದೇಶಕ ಆರ್ ಚಂದ್ರು.
ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ರಜನಿಕಾಂತ್ ಅವರನ್ನೂ ಕರೆತರುವ ಪ್ಲಾನ್ ನಡೆಯುತ್ತಿದೆ. ಉಪೇಂದ್ರ ಅವರು ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಉಪ್ಪಿ ಸಿನಿಮಾ ಆಡಿಯೋ ಬಿಡುಗಡೆಯಾಗುತ್ತಿರುವುದು ಜ.14ಕ್ಕೆ. ಅದೇ ದಿನ ರಜನಿಕಾಂತ್ ಅವರ ‘ಪೆಟ್ಟಾ’ ಚಿತ್ರ ತೆರೆ ಕಾಣುತ್ತಿದೆ. ಹೀಗಾಗಿ ರಜನಿಕಾಂತ್ ಬರುವ ಬಗ್ಗೆ ಇನ್ನೂ ಖಚಿತಪಡಿಸಿಲ್ಲ. ಆದರೂ ಕರೆದುಕೊಂಡು ಬರುವ ಪ್ರಯತ್ನ ಮಾಡುತ್ತಿರುವುದಾಗಿ ಸ್ವತಃ ಉಪೇಂದ್ರ ಅವರೇ ಹೇಳುತ್ತಾರೆ.
ಸಿನಿಮಾದ ಟ್ರೇಲರ್ ಡಿ.30ರಂದು ಬಿಡುಗಡೆಯಾಗುತ್ತಿದೆ. ಫೆಬ್ರವರಿ 14ರಂದು ಸಿನಿಮಾ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಈಗಾಗಲೇ ಚಿತ್ರಕ್ಕೆ ಸಂಪೂರ್ಣವಾಗಿ ಶೂಟಿಂಗ್ ಮುಗಿದಿದ್ದು, ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆ. ಇದಕ್ಕಾಗಿ ದುಬೈನ ಮಸ್ಕಟ್ನಲ್ಲಿ ಹಾಡು ಚಿತ್ರೀಕರಣ ಮಾಡುವ ಪ್ಲಾನ್ ನಿರ್ದೇಶಕರದ್ದು.
ನನ್ನ ನಿರ್ದೇಶನದ ‘ಐ ಲವ್ ಯೂ’ ಚಿತ್ರದ ಆಡಿಯೋ ಬಿಡುಗಡೆಗೆ ನಿರ್ದೇಶಕ ರಾಜಮೌಳಿ ಬರುತ್ತಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅವರು ಬರವ ಸಾಧ್ಯತೆ ಇದೆ. ಆ ಬಗ್ಗೆ ಇನ್ನೂ ಖಚಿತವಾಗಿಲ್ಲ. ಉಪೇಂದ್ರ ಅವರೇ ಅವರೊಂದಿಗೆ ಮಾತನಾಡುತ್ತಿದ್ದಾರೆ- ಆರ್ ಚಂದ್ರು ನಿರ್ದೇಶಕ