ವಜ್ರ ಉದ್ಯಮಿಯ ಹತ್ಯೆ: ಪ್ರಸಿದ್ಧ ಕಿರುತೆರೆ ನಟಿ ಅರೆಸ್ಟ್!
ವಜ್ರ ಉದ್ಯಮಿ ರಾಜೇಶ್ವರ್ ಉದಾನೀ ನಿಗೂಢ ಹತ್ಯೆಯ ಬಳಿಕ ಮುಂಬೈ ಪೊಲೀಸರು ರಾಜಕಾರಣಿಯ ಆಪ್ತ ಸೇರಿದಂತೆ ಪ್ರಸಿದ್ಧ ಮಾಡೆಲ್ ಹಾಗೂ ಹಿಂದಿ ಕಿರುತೆರೆ ನಟಿಯನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ
ವಜ್ರ ಉದ್ಯಮಿ ರಾಜೇಶ್ವರ್ ಉದಾನೀ ನಿಗೂಢ ಹತ್ಯೆಯ ಬಳಿಕ ಮುಂಬೈ ಪೊಲೀಸರು ರಾಜಕಾರಣಿಯ ಆಪ್ತ ಸೇರಿದಂತೆ ಪ್ರಸಿದ್ಧ ಮಾಡೆಲ್ ಹಾಗೂ ಹಿಂದಿ ಕಿರುತೆರೆ ನಟಿಯನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ. ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಅಧಿಕಾರಿಗಳು ರಾಜಕಿಯ ನಾಯಕ ಸಚಿನ್ ಪವಾರ್ ಮೃತ ಉದ್ಯಮಿಯ ಆತ್ಮೀಯನಾಗಿದ್ದ ಎಂದಿದ್ದಾರೆ. ಇನ್ನು ಪ್ರಸಿದ್ಧ ಕಿರುತೆರೆ ನಟಿ ದೆವೋಲಿನಾ ಭಟ್ಟಾಚಾರ್ಯರನ್ನು ಬಂಧಿಸಿದ ಘಾಟ್ ಕೋಪರ್ ಪೊಲೀಸರು ವಿಚಾರಣೆ ನಡೆಸಿದ್ದಾರೆ. ನಾಪತ್ತೆಯಾಗಿದ್ದ ವಜ್ರ ಉದ್ಯಮಿಯ ಶವ ಮೂರು ದಿನಗಳ ಹಿಂದೆ ರಾಯ್ಘಡ ಜಿಲ್ಲೆಯ ಕಾಡಿನಲ್ಲಿ ಪತ್ತೆಯಾಗಿತ್ತು. ಪ್ರಕರಣದಲ್ಲಿ ಭಟ್ಟಾಚಾರ್ಯರ ಪತ್ರವೇನು ಎಂದು ಪೊಲೀಸರು ಈವರೆಗೂ ತಿಳಿಸಿಲ್ಲ. ಆದರೆ ಮನೋರಂಜನಾ ಕ್ಷೇತ್ರದ ಇನ್ನೂ ಹಲವಾರು ಸೆಲೆಬ್ರಿಟಿಗಳನ್ನು ವಿಚಾರಣೆಗೊಳಪಡಿಸುವ ಸುಳಿವು ನೀಡಿದ್ದಾರೆ.
ವಜ್ರ ಉದ್ಯಮಿ ಉದಾನಿ ನವೆಂಬರ್ 28 ರಂದು ತಮ್ಮ ಕಚೇರಿಯಿಂದ ನಾಪತ್ತೆಯಾಗಿದ್ದರು. ಮಿಸ್ಸಿಂಗ್ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಅವರ ಮೊಬೈಲ್ ಲೊಕೇಶನ್ ಮುಂಬೈನ ರಾಬಾಲೆ ಪ್ರದೇಶದಲ್ಲಿರುವುದಾಗಿ ತೋರಿಸುತ್ತಿತ್ತು. ಇದಾದ ಬಳಿಕ ಮೊಬೈಲ್ ಸಿಗ್ನಲ್ ನಿಂತಿತ್ತು. ಸರಿ ಸುಮಾರು ಒಂದು ವಾರದ ಬಳಿಕವೂ ಯಾವುದೇ ಸುಳಿವು ಲಭ್ಯವಾದ ಹಿನ್ನೆಲೆಯಲ್ಲಿ ಡಿಸೆಂಬರ್ 4 ರಂದು ಪೊಲೀಸರು ಕಿಡ್ನ್ಯಾಪ್ ಪ್ರಕರಣ ದಾಖಲಿಸಿದ್ದರು.
ಉದ್ಯಮಿಯ ಚಾಲಕ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಉದಾನಿಯವರು ತನ್ನನ್ನು ಪಮತ್ ನಗರ್ ಬಳಿ ಇರುವ ಮಾರ್ಕೆಟ್ಗೆ ಡ್ರಾಪ್ ಮಾಡಲು ತಿಳಿಸಿದ್ದರು. ಅಲ್ಲಿ ಮತ್ತೊಂದು ಕಾರು ಬಂದಿತ್ತು. ಅವರು ಆ ಕಾರಿನಲ್ಲಿ ಕುಳಿತು ಹೋಗಿದ್ದರು ಎಂದಿದ್ದಾರೆ. ಆದರೆ ಡಿಸೆಂಬರ್ 5 ರಂದು ಕೊಳೆತ ಸ್ಥಿತಿಯಲ್ಲಿ ಉದಾನಿಯವರ ಮೃತದೇಹ ಪತ್ತೆಯಾಗಿತ್ತು. ಶವದ ಮೇಲೆ ಯಾವುದೇ ಗಾಯಗಳಿರಲಿಲ್ಲ. ಮೃತದೇಹ ಪತ್ತೆಹಚ್ಚಲು ಯಾವುದೇ ಕಾಗದವೂ ಸಿಕ್ಕಿರಲಿಲ್ಲ. ಆದರೆ ಉದಾನಿಯವರ ಮಗ ಮೃತದೇಹದ ಮೇಲಿದ್ದ ಬಟ್ಟೆ ಹಾಗೂ ಶೂಗಳಿಂದ ಗುರುತು ಹಚ್ಚಿದ್ದ.
ಇನ್ನು ಉದಾನಿಯವರನ್ನು ಅಪಹರಿಸಿದ ವ್ಯಕ್ತಿಗಳು ಅವರನ್ನು ಬೇರೆ ಸ್ಥಳದಲ್ಲಿ ಹತ್ಯೆಗೈದು ಕಾಡಿನಲ್ಲಿ ಎಸೆದು ಹೋಗಿರಬಹುದು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಪೊಲೀಸ್ ತನಿಖೆ ಹಾಗೂ ಕಾಲ್ ರೆಕಾರ್ಡ್ಗಳಿಂದ ಅವರು ನಿಯಮಿತವಾಗಿ ಕೆಲ ಬಾರ್ಗಳಿಗೆ ತೆರಳುತ್ತಿದ್ದರೆಂದು ತಿಳಿದು ಬಂದಿದೆ. ಅಲ್ಲದೇ ಸಚಿನ್ ಪವಾರ್ ಮೂಲಕ ಟಿವಿ ಕ್ಷೇತ್ರದ ಕೆಲ ಸೆಲೆಬ್ರಿಟಿಗಳು ಸೇರಿದಂತೆ ಹಲವಾರು ಮಹಿಳೆಯರ ಸಂಪರ್ಕದಲ್ಲಿದ್ದರೆಂಬ ಮಾಹಿತಿಯೂ ಲಭ್ಯವಾಗಿದೆ. ಪವಾರ್ ಮಹಾರಾಷ್ಟ್ರದ ಸಚಿವ ಪ್ರಕಾಶ್ ಮೆಹ್ತಾರವರ ಸಹಾಯಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಈಗಾಗಲೇ ಪೊಲೀಸರು ಹಲವಾರು ಮಂದಿಯನ್ನು ವಿಚಾರಣೆಗೊಳಪಡಿಸಿದ್ದಾರೆ. ಸದ್ಯ ಡ್ರೈವರ್ ತಿಳಿಸಿರುವ, ಉದಾನಿಯವರು ಕೊನೆಯ ಬಾರಿ ಕುಳಿತಿದ್ದರೆಂದು ಹೇಳಲಾದ ಆ ಕಾರಿನ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ವಿಚಾರಣೆಗೊಳಪಡಿಸಿರುವವರಲ್ಲಿ ಮಾಡೆಲ್ ಆಗಿರುವ ದೆವೋಲಿನಾ ಭಟ್ಟಾಚಾರ್ಯ ಹಲವಾರು ಪುರಸ್ಕಾರಗಳನ್ನು ಪಡೆದಿದ್ದಾರೆ. ಹಿಂದಿ ಕಿರುತೆರೆ ಹಾಗೂ ರಿಯಾಲಿಟಿ ಶೋಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ಇವುಗಳಲ್ಲಿ 'ಸಾಥ್ ನಿಭಾನಾ ಸಾಥಿಯಾ' ಧಾರವಾಹಿಯಲ್ಲಿ ನಟಿಸಿದ ಬಳಿಕ 'ಗೋಪಿ ಬಹು' ಎಂದೇ ಖ್ಯಾತಿ ಗಳಿಸಿದ್ದರು.