ರಾಷ್ಟ್ರ ಪ್ರಶಸ್ತಿ ವಿಜೇತ ತಮಿಳು ಚಿತ್ರ 'ವಿಸಾರಣೈ' 89ನೇ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ನಾಮನಿರ್ದೆಶನಗೊಂಡಿದೆ.
ತಮಿಳು ಚಿತ್ರ ಪ್ರಶಸ್ತಿ ಸೇರಿದಂತೆ ಮೂರು ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದುಕೊಂಡಿರುವ ವಿಸಾರಣೈ ಚಿತ್ರವು ವಿದೇಶಿ ಭಾಷೆಯ ಚಲನಚಿತ್ರ ವಿಭಾಗಕ್ಕೆ ಅಧಿಕೃತವಾಗಿ ನಾಮನಿರ್ದೇಶನಗೊಂಡಿದೆ.
ವಿಸಾರಣೈ ಚಿತ್ರವನ್ನು ಮೂರುಬಾರಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೆಶಕ ವೆಟ್ರಿಮರನ್ ನಿರ್ದೇಶಿಸಿದ್ದಾರೆ. ಧನುಷ್ ನಿರ್ಮಿಸಿರುವ ಈ ಚಿತ್ರವು 72ನೇ ವೇನಿಸ್ ಫಿಲ್ಮ್ ಫೆಸ್ಟಿವಲ್ ಪ್ರದರ್ಶನಗೊಂಡು 'ಅಮ್ನೆಸ್ಟಿ ಇಂಟರ್'ನ್ಯಾಶನಲ್ ಇಟಾಲಿಯ' ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
ಚಿತ್ರದ ಕುರಿತು:
ವಿಸಾರಣೈ (ವಿಚಾರಣೆ) 2015ರಲ್ಲಿ ತೆರೆಕಂಡ ಕ್ರೈಂ-ರೋಚಕತೆಯನ್ನೊಳಗೊಂಡ ಸಾಕ್ಷ್ಯಚಿತ್ರ ರೂಪದಲ್ಲಿ ನಿರ್ಮಿಸಲಾಗಿದೆ ತಮಿಳು ಚಿತ್ರ. ಎಂ. ಚಂದ್ರಶೇಖರ್ ಅವರು ರಚಿಸಿದ 'ಲಾಕ್ ಅಪ್' ಕಾದಂಬರಿಯಾಧಾರಿತ ಚಿತ್ರವಾಗಿದೆ. ಸಾಕಷ್ಟು ಸಿನಿಪ್ರಿಯರ ಮೆಚ್ಚುಗೆ ಗಳಿಸಿರುವ ಈ ಚಿತ್ರದಲ್ಲಿ ದಿನೇಶ್, ಆನಂದಿ ಹಾಗೂ ಅಂದುಕಲಮ್ ಮುರುಗದಾಸ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಪೊಲೀಸ್ ದೌರ್ಜನ್ಯ, ಭ್ರಷ್ಟಾಚಾರ, ಅನ್ಯಾಯವಾಗಿ ಬಲಿಯಾಗುವ ಅಮಾಯಕರ ಕಥೆಯನ್ನು ಈ ಚಿತ್ರವು ಒಳಗೊಂಡಿದೆ.
89ನೇ ಆಸ್ಕರ್ ಅಕಾಡಮಿ ಪ್ರಶಸ್ತಿಯು 2017ರ ಫೆಬ್ರವರಿಯಲ್ಲಿ ಲಾಸ್ ಏಂಜಲ್ಸ್'ನಲ್ಲಿ ನಡೆಯಲಿದೆ.
